Advertisement

ಮಂಗಳೂರಿನಲ್ಲಿ ಪ್ಲಾಸ್ಟಿಕ್‌ ಪಾರ್ಕ್‌: ಕೇಂದ್ರದಿಂದ ಅಂತಿಮ ಅನುಮೋದನೆ

01:58 AM Jan 22, 2022 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಹುನಿರೀಕ್ಷಿತ ಪ್ಲಾಸ್ಟಿಕ್‌ ಪಾರ್ಕ್‌ ನಿರ್ಮಾಣಕ್ಕೆ ಕೇಂದ್ರ ಸರಕಾರದ ರಾಸಾಯನಿಕ ಹಾಗೂ ಪೆಟ್ರೋಕೆಮಿಕಲ್ಸ್‌ ಸಚಿವಾಲಯ ಅಂತಿಮ ಒಪ್ಪಿಗೆ ನೀಡಿದೆ.

Advertisement

ಮಂಗಳೂರು ಹೊರವಲಯದ ಗಂಜೀಮಠದಲ್ಲಿ 62.77 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ಯೋಜನೆ ಶೇ. 50 ಕೇಂದ್ರ ಸರಕಾರ ಮತ್ತು ಉಳಿದ ಶೇ. 50 ಭಾಗವನ್ನು ಕೆಐಎಡಿಬಿ ಹೂಡಿಕೆಯೊಂದಿಗೆ ಅನುಷ್ಠಾನಗೊಳ್ಳಲಿದೆ.

ಇದರಂತೆ ಒಟ್ಟು ಯೋಜನಾ ಮೊತ್ತದ‌ಲ್ಲಿ ಕೇಂದ್ರ ಸರಕಾರ 31.38 ಕೋ.ರೂ. ಹಾಗೂ ಕೆಐಎಡಿಬಿ 31.38 ಕೋ.ರೂ. ಹೂಡಿಕೆ ಮಾಡಲಿವೆ. ಕೇಂದ್ರದ ಶೇ. 50 ಪಾಲು ಹಣ ಬಿಡುಗಡೆಗೆ ಅಂತಿಮ ಆದೇಶ ನೀಡಲಾಗಿದೆ. ಒಟ್ಟು ಮೊತ್ತದಲ್ಲಿ 29.82 ಕೋ.ರೂ. ಮೂಲಸೌಕರ್ಯಗಳಿಗೆ ಹಾಗೂ 30.95 ಕೋ.ರೂ. ಇತರ ಸೌಲಭ್ಯಗಳ ನಿರ್ಮಾಣಕ್ಕೆ ಮೀಸಲಿರಿಸಲಾಗಿದೆ.

ದೇಶದಲ್ಲಿ ಬಹುತೇಕ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಹೊರ ದೇಶಗಳಿಂದಲೇ ಆಮದು ಮಾಡಿಕೊಳ್ಳಬೇಕಾಗಿದೆ. ಇದನ್ನು ನಿವಾರಿಸುವುದಕ್ಕಾಗಿ ದೇಶದ ವಿವಿಧೆಡೆ ಪ್ಲಾಸ್ಟಿಕ್‌ ಪಾರ್ಕ್‌ಗಳ ಸ್ಥಾಪನೆಗೆ ಕೇಂದ್ರದ ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್‌ ಸಚಿವಾಲಯವು ಮುಂದಾಗಿತ್ತು. ಅದರಂತೆ ಮಂಗಳೂರಿನಲ್ಲೂ ಪ್ಲಾಸ್ಟಿಕ್‌ ಪಾರ್ಕ್‌ ಯೋಜನೆಗೆ ಸಚಿವಾಲಯದಿಂದ ತಾತ್ವಿಕ ಅನುಮೋದನೆ ಈ ಹಿಂದೆಯೇ ಲಭಿಸಿದ್ದು ಅಂತಿಮ ಅನುಮೋದನೆ ಬಾಕಿಯುಳಿದಿತ್ತು.

ಈಗ ಅಂತಿಮ ಅನುಮೋದನೆ ದೊರೆಯು ವುದರೊಂದಿಗೆ ಕಳೆದ ಹಲವು ವರ್ಷಗಳಿಂದ ನೆನೆಗುದಿಯಲ್ಲಿದ್ದ ಬಹುನಿರೀಕ್ಷಿತ “ಪ್ಲಾಸ್ಟಿಕ್‌ ಪಾರ್ಕ್‌’ ಯೋಜನೆ ಸಾಕಾರಕ್ಕೆ ಚಾಲನೆ ದೊರೆತಂತಾಗಿದೆ.

Advertisement

ಪ್ಲಾಸ್ಟಿಕ್‌ ತ್ಯಾಜ್ಯದ
ಸಮರ್ಪಕ ವಿಲೇವಾರಿ
ಎಂಆರ್‌ಪಿಎಲ್‌ನಿಂದ ಪಾಲಿ ಪ್ರೊಪಲಿನ್‌ ಘಟಕ ಆರಂಭವಾಗುತ್ತಿ ದ್ದಂತೆಯೇ ಕರಾವಳಿಯಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ನ ಬೇಡಿಕೆ ಗರಿಗೆದರಿತ್ತು. ಪಾರ್ಕ್‌ಗೆ ಸ್ಥಾಪಿಸುವಂತೆ ಕೆನರಾ ಪ್ಲಾಸ್ಟಿಕ್‌ ಮ್ಯಾನುಫ್ಯಾಕ್ಚರರ್ಸ್‌ ಆಂಡ್‌ ಟ್ರೇಡರ್ಸ್‌ ಅಸೋಸಿಯೇಶನ್‌ ವತಿಯಿಂದಲೂ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಪಾಲಿಪ್ರೊಪಲಿನ್‌ ಘಟಕದ ತ್ಯಾಜ್ಯವನ್ನು ಪ್ಲಾಸ್ಟಿಕ್‌ ಪಾರ್ಕ್‌ನ ಕಚ್ಚಾ ವಸ್ತುವಾಗಿ ಬಳಕೆ ಮಾಡಬಹುದಾಗಿದೆ. ಪ್ಲಾಸ್ಟಿಕ್‌ ಪಾರ್ಕ್‌ ಯೋಜನೆಯಲ್ಲಿ ಪ್ಲಾಸ್ಟಿಕ್‌ ತಯಾರಿಕೆಯ ಜತೆಗೆ, ಪ್ಲಾಸ್ಟಿಕ್‌ನ ಮರುಬಳಕೆ ತಂತ್ರಜ್ಞಾನಕ್ಕೂ ಹೆಚ್ಚಿನ ಒತ್ತು ನೀಡಲು ಉದ್ದೇಶಿಸಲಾಗಿದೆ. ಇದರಿಂದ ಪ್ಲಾಸ್ಟಿಕ್‌ ತ್ಯಾಜ್ಯದ ಸಮರ್ಪಕ ವಿಲೇವಾರಿ ಆಗಲಿದ್ದು, ಇನ್ನೊಂದೆಡೆ ದೇಶದಲ್ಲಿ ಬೇಡಿಕೆ ಇರುವ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ತಯಾರಿಸಲು ಸಾಧ್ಯವಾಗಲಿದೆ.

ನಳಿನ್‌ ಅಭಿನಂದನೆ
ಪ್ಲಾಸ್ಟಿಕ್‌ ಯೋಜನೆ ಕಾರ್ಯರೂಪಕ್ಕೆ ಬರಲು ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ, ಕೇಂದ್ರದ ರಾಸಾಯನಿಕ ಖಾತೆ ಸಚಿವ ಭಗವಂತ್‌ ಕೂಬಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯದ ಬೃಹತ್‌ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next