Advertisement

ಬಂಜರು ಭೂಮಿ ಭತ್ತದ ಗದ್ದೆಯನ್ನಾಗಿಸಿ: ಪಿಣರಾಯಿ ವಿಜಯನ್‌

10:00 AM Mar 16, 2018 | Karthik A |

ಕಾಸರಗೋಡು: ಬಂಜರು ಭೂಮಿಯಲ್ಲಿ ಕೃಷಿ ಕಾರ್ಯಗಳನ್ನು ನಡೆಸಲು ಜನಪರ ಒಕ್ಕೂಟಗಳು ಮುಂದೆ ಬರಬೇಕು. ಕೃಷಿ ಕ್ಷೇತ್ರದಲ್ಲಿ  ಕೇರಳವು ಉತ್ತಮ ರೀತಿಯಲ್ಲಿ ಮುಂದುವರಿಯುತ್ತಿರುವುದಾಗಿ ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ. ಕಾಂಞಂಗಾಡಿನ ಬಂಜರು ಭೂಮಿ ಪ್ರದೇಶವಾದ ತುಳುಚ್ಚೇರಿಯನ್ನು ಭತ್ತದ ಗದ್ದೆಯಾಗಿ ಮಾರ್ಪಾಡುಗೊಳಿಸಿ ಅಲ್ಲಿ ಹಮ್ಮಿಕೊಳ್ಳಲಾಗಿದ್ದ ಭತ್ತದ ಕೃಷಿಯ ಕೊಯ್ಲು ಉತ್ಸವವನ್ನು ಕಟಾವು ನಡೆಸಿ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಮನೆಯಲ್ಲಿ ಸಣ್ಣ ಮಟ್ಟಿಗಾದರೂ ಕೃಷಿ ನಡೆಸಲು ಎಲ್ಲರೂ ತಯಾರಾಗಬೇಕು. ಕೃಷಿಯತ್ತ ಕೇರಳ ರಾಜ್ಯವು ಮರಳುತ್ತಿದೆ. ಇದರಲ್ಲಿ ಕೃಷಿ ಇಲಾಖೆಯ ನೇತೃತ್ವವು ಅತ್ಯಂತ ಮಹತ್ವ ಮತ್ತು ಅರ್ಥಪೂರ್ಣವಾಗಿದೆ. ಬಂಜರು ಪ್ರದೇಶದಲ್ಲಿ ಭ‌ತ್ತದ ಕೃಷಿ ಮಾಡಲು ಸಾಧ್ಯವಾಗದ ಸ್ಥಳಗಳಲ್ಲಿ ಇತರ ಕೃಷಿ ಮಾಡಬೇಕು. ಯಾವುದೇ ಸ್ಥಳ ಖಾಲಿ ಬಿಡದಂತೆ ಪ್ರಯತ್ನಿಸಬೇಕು ಎಂದರು.

ಕಂದಾಯ ಇಲಾಖೆ ಸಚಿವ ಇ. ಚಂದ್ರಶೇಖರನ್‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಸಿಪಿಸಿಆರ್‌ಐ ನಿರ್ದೇಶಕ ಡಾ| ಪಿ. ಚೌಡಪ್ಪ  ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾಂಞಂಗಾಡು ನಗರಸಭಾ ಅಧ್ಯಕ್ಷ  ವಿ.ವಿ. ರಮೇಶನ್‌, ಅಜಾನೂರು ಗ್ರಾಮ ಪಂಚಾಯತ್‌ ಅಧ್ಯಕ್ಷ  ಪಿ. ದಾಮೋದರನ್‌, ಪ್ರಿನ್ಸಿಪಲ್‌ ಕೃಷಿ ಅಧಿಕಾರಿ ಆರ್‌. ಉಷಾದೇವಿ, ಕಾಂಞಂಗಾಡು ನಗರಸಭೆಯ ಸ್ಥಾಯೀ ಸಮಿತಿಯ ಅಧ್ಯಕ್ಷರಾದ ಗಂಗಾ ರಾಧಾಕೃಷ್ಣನ್‌, ಅಜಾನೂರು ಗ್ರಾಮ ಪಂಚಾಯತ್‌ ಸ್ಥಾಯೀ ಸಮಿತಿಯ ಅಧ್ಯಕ್ಷ ಎಂ.ವಿ. ರಾಘವನ್‌, ಕೃಷಿ ವಿಜ್ಞಾನ ಕೇಂದ್ರದ ಪ್ರಿನ್ಸಿ ಪಲ್‌ ವಿಜ್ಞಾನಿ ಡಾ| ಟಿ.ಎಸ್‌. ಮನೋಜ್‌ ಕುಮಾರ್‌, ಕಣ್ಣೂರು ಕೃಷಿ ವಿಜ್ಞಾನ ಕೇಂದ್ರದ ಪ್ರೋಗ್ರಾಂ ಸಂಯೋಜಕ ಪ್ರೊ| ಡಾ| ಪಿ. ಜಯರಾಜ್‌, ಸಿ. ರಾಜನ್‌ ಪೆರಿಯ, ವೇಣುಗೋಪಾಲನ್‌ ನಂಬಿಯಾರ್‌, ಕಣ್ಣನ್‌ ಕುಂಞಿ, ಎನ್‌.ವಿ. ಅರವಿಂದಾಕ್ಷನ್‌ ನಾಯರ್‌, ವೇಣುಗೋಪಾಲನ್‌, ಸಿ.ವಿ. ಗಂಗಾಧರನ್‌, ಶಶಿಕುಮಾರ್‌ ಉಪಸ್ಥಿತರಿದ್ದರು. ಉತ್ಸವ ಸಮಿತಿಯ ಅಧ್ಯಕ್ಷ  ವೇಣುರಾಜ್‌ ಕೋಡೋತ್‌ ಸ್ವಾಗತಿಸಿ, ಸಂಚಾಲಕ ಕುಮಾರನ್‌ ಐಶ್ವರ್ಯ ವಂದಿಸಿದರು.

ರಾಜ್ಯ ಸರಕಾರದ ಬಂಜರು ಭೂಮಿ ಭತ್ತದ ಕೃಷಿ ಅಭಿವೃದ್ಧಿ ಯೋಜನೆಯ ಅಂಗವಾಗಿ 22 ವರ್ಷಗಳಿಂದ ಬಂಜರು ಭೂಮಿಯಾದ ತುಳುಚ್ಚೇರಿ ಭತ್ತದ ಗದ್ದೆಯಾದ 11 ಎಕ್ರೆಯಲ್ಲಿ  ಈ ವರ್ಷ ಜನರ ಸಹಭಾಗಿತ್ವದೊಂದಿಗೆ ಭತ್ತದ ಕೃಷಿ ನಡೆಸಲಾಗಿದೆ. ಕೃಷಿ ಭವನ, ಆಗ್ರೋ ಸೇವಾ ಕೇಂದ್ರ, ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ಉದ್ಯೋಗ ಖಾತರಿ ಯೋಜನೆ, ಕೋಟಚ್ಚೇರಿ, ಪಟ್ಟರೆ, ಕನ್ನಿರಾಶಿ ವಯನಾಟು ಕುಲವನ್‌ ತೈಯ್ಯಂ ಸಮಿತಿ ಮೊದಲಾದವುಗಳ ಕಠಿನ ಪರಿಶ್ರಮದ ಫಲವಾಗಿ ಈ ಭತ್ತದ ಕೃಷಿಯನ್ನು  ಯಶಸ್ವಿಯಾಗಿಸಲು ಸಾಧ್ಯವಾಗಿದೆ.

ಮಾಂಕೋಂಬ್‌ ಕೃಷಿ ವಿಜ್ಞಾನ ಕೇಂದ್ರ ಅಭಿವೃದ್ಧಿ ಪಡಿಸಿದ ಶ್ರೇಯಸ್‌ ಭತ್ತದ ತಳಿಯನ್ನು  ಇಲ್ಲಿ  ಕೃಷಿ ಮಾಡಲಾಗಿದೆ. ನೀರಿನ ಕೊರತೆ ಎದುರಿಸುತ್ತಿರುವ ಸಂದರ್ಭ ಸಮೀಪ ಪ್ರದೇಶದ ಮನೆಯವರ ಸಹಾಯದೊಂದಿಗೆ ನೀರಾವರಿ ವ್ಯವಸ್ಥೆ  ಕಲ್ಪಿಸಲಾಗಿದೆ. ಮಾತ್ರವಲ್ಲದೆ ಸಾವಯವ ವಿಧಾನದ ಮೂಲಕ ಮಿತ್ರ ಕೀಟಗಳನ್ನು  ಬೆಳೆಸಿ ಕೀಟಬಾಧೆ ತಡೆಗಟ್ಟಲಾಗಿದೆ.

Advertisement

ಬಹುತೇಕ ಯಂತ್ರಗಳ ಬಳಕೆ  
ಕಾಂಞಂಗಾಡು ತುಳುಚ್ಚೇರಿಯಲ್ಲಿ ಯಂತ್ರ ಸಹಾಯದೊಂದಿಗೆ ಕೊಯ್ಲು ಮೊದಲಾದ ಕೆಲಸಗಳನ್ನು ನಡೆಸಲಾಗುತ್ತಿದೆ. ಇಲ್ಲಿ  ಹೆಚ್ಚಿನ ಕೃಷಿ ಕಾರ್ಯಗಳಿಗೂ ಯಂತ್ರಗಳನ್ನೇ ಉಪಯೋಗಿಸಲಾಗುತ್ತಿದೆ. ಕೃಷಿ ಅಭಿವೃದ್ಧಿ ಇಲಾಖೆಯ ನೇತೃತ್ವದಲ್ಲಿ ಬಂಜರು ಭೂಮಿ ಕೃಷಿ ಯೋಜನೆಯ ಪ್ರಕಾರ ಅನುದಾನ ಕೃಷಿ ಭವನದ ಮೂಲಕ ಕಲ್ಪಿಸಲಾಗುವುದು. 22 ಎಕ್ರೆ ಭತ್ತದ ಕೃಷಿಗೆ ಸಬ್ಸಿಡಿ ರೂಪದಲ್ಲಿ ಕುಮ್ಮಾಯ ವಿತರಿಸಲಾಗುವುದು. ಪರಿಸರ ಎಂಜಿನಿಯರಿಂಗ್‌ ಡೆಮೊನ್‌ಸ್ಟ್ರೇಶನ್‌ ಯೋಜನೆಯಂತೆ ಆತ್ಮ ನಿಧಿಯಿಂದ 6,000 ರೂ. ಗಳನ್ನು ಒದಗಿಸಲಾಗಿತ್ತು. ಈ ಬಾರಿ ತೈಯ್ಯಂ ಮಹೋತ್ಸವಕ್ಕೆ ಬರುವ ಸುಮಾರು ಮೂರು ಲಕ್ಷ  ಮಂದಿ ಭಕ್ತರ ಭೋಜನಕ್ಕೆ ಅಕ್ಕಿ, ತರಕಾರಿ ಇತ್ಯಾದಿಗಳನ್ನು ದೊರಕಿಸಲು ಕೃಷಿ ಇಲಾಖೆ, ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ, ಕೃಷಿ ವಿಜ್ಞಾನ ಕೇಂದ್ರ ಮೊದಲಾದವುಗಳ ಸಹಕಾರದೊಂದಿಗೆ ಈ ಪ್ರದೇಶದಲ್ಲಿ  ಕೃಷಿ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next