Advertisement

ಪಿಂಪ್ರಿ-ಚಿಂಚ್ವಾಡ್‌ ಬಿಲ್ಲವ ಸಂಘದಿಂದ ಕನ್ನಡಿಗರ ಸೇವೆ

07:05 PM Oct 10, 2020 | Suhan S |

ಪುಣೆ, ಅ. 9: ಪುಣೆ ಮಹಾನಗರದಲ್ಲಿ ಕನ್ನಡಪರ ಚಟುವಟಿಕೆಗಳು ನಡೆಯಲು ಪ್ರಾರಂಭವಾಗಿ ಶತಮಾನವೇ ಕಳೆದು ಹೋಗಿದೆ. ಇಲ್ಲಿನ ಕನ್ನಡಪರ ಸಂಘಟನೆಗಳು ಮತ್ತು ಜಾತೀಯ ಸಂಘಟನೆಗಳು ನಾಡು-ನುಡಿಯೊಂದಿಗೆ, ಸಮಾಜ ಬಾಂಧವರ ಆಶೋತ್ತರಗಳಿಗೆ ಸದಾ ಸ್ಪಂದಿಸುತ್ತಿವೆ. ಅದರಲ್ಲೂ ಕೋವಿಡ್ ಮಹಾಮಾರಿ ಮತ್ತು ಲಾಕ್‌ಡೌನ್‌  ಸಂದರ್ಭದಲ್ಲಿ ಪಿಂಪ್ರಿ-ಚಿಂಚಾÌಡ್‌ ಪ್ರದೇಶದಲ್ಲಿ ಸದ್ದಿಲ್ಲದೆ ಜನಸೇವೆಯಲ್ಲಿ ತೊಡಗಿದ್ದ ಪಿಂಪ್ರಿ – ಚಿಂಚ್ವಾಡ್‌ ಬಿಲ್ಲವ ಸಂಘವು ಆರ್ಥಿಕ ಸಂಕಷ್ಟಕ್ಕೊಳಗಾದವರ ಬದುಕಿಗೆ ಆಶಾಕಿರಣ ವಾಗಿ ಮೂಡಿ ಬಂದಿದೆ.

Advertisement

ಲಾಕ್‌ಡೌನ್‌ನಿಂದಾಗಿ ಪಿಂಪ್ರಿ – ಚಿಂಚ್ವಾಡ್‌ನ‌ ಪ್ರಮುಖ ನಗರಗಳೊಂದಿಗೆ ಗ್ರಾಮೀಣ ಪ್ರದೇಶ ಗಳು ಕೂಡ ಸ್ತಬ್ಧವಾಗಿದ್ದವು. ಒಂದೆಡೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದರೆ ಮತ್ತೂಂದೆಡೆಯಿಂದ ಜನರು ಮನೆಯಿಂದ ಹೊರ ಬರಲಾರದೆ ದಿನನಿತ್ಯದ ಆಹಾರ ಪದಾರ್ಥಗಳಿಗಾಗಿ ಪರದಾಡುವ ಸ್ಥಿತಿ ಒದಗಿ ಬಂದಿತ್ತು. ಅದರಲ್ಲೂ ದಿನಕೂಲಿ ಕಾರ್ಮಿಕರು, ಹೊಟೇಲ್‌ ಉದ್ಯೋಗಿಗಳ ಸ್ಥಿತಿಯಂತು ಶೋಚನೀಯವಾಗಿತ್ತು. ಇದನ್ನು ಮನಗಂಡ ಪಿಂಪ್ರಿ-ಚಿಂಚ್ವಾಡ್‌ ಬಿಲ್ಲವ ಸಂಘವು ಸಮಾಜದಲ್ಲಿ ಆರ್ಥಿಕವಾಗಿ ಸಂಕಷ್ಟಕ್ಕೊಳಗಾದವರ ನೆರವಿಗೆ ಧಾವಿಸಿತು.

ಸಮಯೋಚಿತ ಕಾರ್ಯ : ಸಾಮಾಜಿಕ  ಸಮಾಜ ಸೇವಾ ಸಂಸ್ಥೆಗಳು, ಜಾತಿ ಸಂಸ್ಥೆಗಳು, ಟ್ರಸ್ಟ್‌ಗಳು ಆಯಾಯ ಪ್ರದೇಶಗಳಲ್ಲಿ ಕಷ್ಟದಲ್ಲಿರುವವರ ಸಹಾಯಕ್ಕೆ ನಿಂತ ಸಂದರ್ಭದಲ್ಲಿ ಪಿಂಪ್ರಿ-ಚಿಂಚ್ವಾಡ್‌ ಬಿಲ್ಲವ ಸಂಘ ಕೂಡಾ ಲಾಕ್‌ಡೌನ್‌ ಸಮಯದಲ್ಲಿ  ಪರಿಸರದ  ಬಿಲ್ಲವ ಸಮಾಜದಲ್ಲಿನ ಬಡ ಕುಟುಂಬಗಳಿಗೆ ಸಹಾಯ ಹಸ್ತ ನೀಡಲು ಮುಂದಾಯಿತು. ಸಂಘದ ಅಧ್ಯಕ್ಷರು, ಕಾರ್ಯಕಾರಿ ಸಮಿತಿಯು  ಕಾರ್ಯಯೋಜನೆಯನ್ನು ರೂಪಿಸಿ, ಸಂಕಷ್ಟದಲ್ಲಿರುವವರ ಕುಟುಂಬಗಳ ಮಾಹಿತಿಯನ್ನು ಕಲೆ ಹಾಕತೊಡಗಿತು. ಗ್ರಾಮೀಣ ಭಾಗದಲ್ಲಿರುವ ಕುಟುಂಬಗಳಿಗೂ ಹೆಚ್ಚಿನ ಆದ್ಯತೆಯನ್ನು ನೀಡಿ ಅವರ ನೆರವು ನೀಡಿದೆ.

ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿಯ ಸಹಕಾರ  : ಪಿಂಪ್ರಿ-ಚಿಂಚ್ವಾಡ್‌ ಬಿಲ್ಲವ ಸಂಘ, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿಯ ವತಿ ಯಿಂದ ಲಾಕ್‌ಡೌನ್‌ನ ಆರು ತಿಂಗಳುಗಳ ಸಂದರ್ಭದಲ್ಲಿ ಹಲವಾರು ಶ್ಲಾಘನಾರ್ಹ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಮಾಜ ಬಾಂಧವರಿಗೆ ದೂರವಾಣಿ ಕರೆ ಮಾಡಿ ಅವರ ಯೋಗಕ್ಷೇಮ ವಿಚಾರಿಸುವುದರೊಂದಿಗೆ ಸಂತ್ರಸ್ತರಿಗೆ ಆಹಾರ ಧಾನ್ಯ ಇನ್ನಿತರ ದಿನೋಪಯೋಗಿ ವಸ್ತುಗಳನ್ನು ವಿತರಿಸಿದೆ. ಸಮಾಜ ಬಾಂಧವರಿಗೆ ಮಾತ್ರವಲ್ಲದೆ ಇತರ ಸಮಾಜಗಳ ಬಂಧುಗಳಿಗೆ ಸಂಘವು ನೆರವಿನ ಹಸ್ತ ಚಾಚಿದೆ.

25 ಸದಸ್ಯರ ತಂಡದಿಂದ ಸಹಾಯದ ನೆರವು : 

Advertisement

ಸಂಘದ ಆಡಳಿತ ಸಮಿತಿಯ 25 ಮಂದಿ ಸದಸ್ಯರನ್ನು ಒಳಗೊಂಡ ತಂಡವನ್ನು  ಪ್ರದೇಶಾನುಸಾರವಾಗಿ  9 ತಂಡಗಳನ್ನಾಗಿ ವಿಗಂಡಣೆಗೊಳಿಸಲಾಯಿತು. ಈ ತಂಡಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ಸಮಿತಿಯ ಎಲ್ಲ ಬಂಧುಗಳ ಕುಟುಂಬಗಳನ್ನು ನೇರವಾಗಿ ಸಂಪರ್ಕಿಸಿ, ಕುಟುಂಬದ ಸದಸ್ಯರೆಲ್ಲರ ಆರೋಗ್ಯದ ಬಗ್ಗೆ ವಿಚಾರಿಸಿ ಅಗತ್ಯ ಕ್ರಮಗಳನ್ನು ಕೈಗೊಂಡಿತು. ಸಮಿತಿಯು ಸಮಾಜ ಬಂಧುಗಳ ನೆರವಿಗಾಗಿ ಹಮ್ಮಿ ಕೊಂಡಿರುವ ಆಹಾರ ಧಾನ್ಯ ವಿತರಣೆ ಬಗ್ಗೆಯೂ ವಿವರಿಸಿತು. ಮೇ 7ರಿಂದ ಸಮಿತಿಯ ಅಧ್ಯಕ್ಷ ಶರತ್‌ ಕೋಟ್ಯಾನ್‌ ಅವರ ಮುಂದಾಳತ್ವದಲ್ಲಿ ಈ ಸೇವಾ ಕಾರ್ಯವು ನಿರಂತರವಾಗಿ ನಡೆಯುತ್ತಾ ಬಂದಿದೆ.

60 ಕುಟುಂಬಗಳಿಗೆ ನಿರಂತರ  ಆಹಾರ ಧಾನ್ಯ ಪೂರೈಕೆ  :

ಕೋವಿಡ್ ಸೋಂಕು ತಡೆಗೆ ಲಾಕ್‌ಡೌನ್‌ ವಿಸ್ತರಣೆಗೊಂಡ ಬಳಿಕ ಬಿಲ್ಲವ ಸಂಘದ  ಸಮಿತಿಯ ಆಡಳಿತ ವರ್ಗವು ಮತ್ತೆ ಚರ್ಚಿಸಿ, ತಮ್ಮ  ಸಮುದಾಯದ ಸದಸ್ಯರ ಸಮಸ್ಯೆಗಳ ಬಗ್ಗೆ ಮತ್ತೆ ವಿಚಾರಿಸಿ, ಆ. 2ರಂದು ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ಕುಟುಂಬಗಳಿಗಾಗಿ ಎರಡನೇ ಹಂತದಲ್ಲಿ ಆಹಾರಧಾನ್ಯಗಳನ್ನು ವಿತರಿಸಿತು. ಒಟ್ಟು 60 ಕುಟುಂಬಗಳು ಸಮಿತಿಯ ಆಹಾರಧಾನ್ಯ ವಿತರಣೆಯ ಪ್ರಯೋಜನವನ್ನು ಪಡೆದುಕೊಂಡಿವೆ.

ಸಮಾಜ ಬಾಂಧವರಿಗೆ ಕೋವಿಡ್‌ ವಾರಿಯರ್ ಆದ ಸದಸ್ಯರು :   ಸಮಾಜ ಬಾಂಧವರು ಕಷ್ಟದಲ್ಲಿದ್ದಾರೆ ಎಂಬ ಮಾಹಿತಿ ತಿಳಿದಾಕ್ಷಣ ಸಮಿತಿಯ 25 ಮಂದಿ ಸದಸ್ಯರು  ಕೋವಿಡ್‌ ವಾರಿಯರ್ ಮಾದರಿಯಲ್ಲಿ  ಸೇವೆ ಸಲ್ಲಿಸಿದ್ದಾರೆ. ಅಪಾಯಕಾರಿ ಸಾಂಕ್ರಾಮಿಕ ಪಿಡುಗಿನ ಪರಿಣಾಮವನ್ನರಿತು ಸರಕಾರದ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಸಂಕಷ್ಟದಲ್ಲಿದ್ದವರಿಗೆ,  ಅನಾರೋಗ್ಯ ಪೀಡಿತರಿಗೆ ಮತ್ತು ಅಸಹಾಯಕ ಪರಿಸ್ಥಿತಿಯಲ್ಲಿ ಇದ್ದವರಿಗೆ ವೈದ್ಯಕೀಯವಾಗಿ, ಆರ್ಥಿಕವಾಗಿ ಸಹಾಯ ಮಾಡುವಲ್ಲಿ  ಮುಂಚೂಣಿಯ ಯೋಧರಂತೆ ಸಹಕರಿಸಿದ್ದರು. ನಿಸ್ವಾರ್ಥ ಸೇವೆಗೈದ ಸದಸ್ಯರೊಂದಿಗೆ ಸಮಾಜದ ದಾನಿಗಳು ಕೈಜೋಡಿಸಿದ್ದರು.

ಕೋವಿಡ್ ಮಧ್ಯೆ ಗುರುಜಯಂತಿ ಆಚರಣೆ  : ಸಂಘವು ಬ್ರಹ್ಮಶ್ರೀ ನಾರಾಯಣಗುರುಗಳ ತತ್ತಾÌದರ್ಶಗಳ ಅಡಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿದ್ದು, ಗುರುಗಳ ಜಯಂತಿಯನ್ನು ಕೋವಿಡ್ ಮಹಾಮಾರಿಯ ಪರಿಸ್ಥಿತಿಯಲ್ಲೂ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಅಚ್ಚುಕಟ್ಟಾಗಿ ಆಯೋಜಿಸಿತ್ತು. ಸರಕಾರದ ಮಾರ್ಗಸೂಚಿಗಳಾದ ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ ಇನ್ನಿತರ ನಿಯಮಗಳನ್ನು ಈ ವೇಳೆ ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು. ಈ ಸಂದರ್ಭದಲ್ಲಿ ಸದಸ್ಯರಿಂದ ಭಜನೆ, ಮಂಗಳಾರತಿ, ಪ್ರಸಾದ ವಿತರಣೆ  ನಡೆಯಿತು. ಆನ್‌ಲೈನ್‌ ಮುಖಾಂತರ ಸಮಾಜದ ಮಕ್ಕಳಿಗೆ ತುಳು ಮಾತನಾಡುವ ಸ್ಪರ್ಧೆ ಮತ್ತು ಸಮಾಜದ ಮಹಿಳೆಯರಿಗೆ ಆನ್‌ಲೈನ್‌ ವೀಡಿಯೋ ಮೂಲಕ ಆಹಾರ ಪದಾರ್ಥಗಳ ಸ್ಪರ್ಧೆಯನ್ನು ನಡೆಸಿ ಮನೋರಂಜನೆ ನೀಡಲಾಯಿತು.

ಕೂಲಿ ಕಾರ್ಮಿಕರಿಗೆ ಆಹಾರ ವಿತರಣೆ  : ಸಂಘದ ವತಿಯಿಂದ ಎಪ್ರಿಲ್‌ನಲ್ಲಿ  ರಾಮ ನವಮಿಯನ್ನು ಸಂಘದ ಕಚೇರಿಯಲ್ಲಿ ಆಚರಿಸಲಾಯಿತು. ಈ ಬಾರಿ ಹೆಚ್ಚು ಜನ ಸೇರಲು ಅವಕಾಶ ಇಲ್ಲದ ಕಾರಣ ಸಾರ್ವಜನಿಕ ಅನ್ನ ಸಂತರ್ಪಣೆಯನ್ನು ರದ್ದುಗೊಳಿಸಿ ವಲ್ಲಭ್‌ ನಗರದ ಯುನಿಟಿ ಸೋಶಿಯಲ್‌ ಆ್ಯಂಡ್‌ ನ್ಪೋರ್ಟ್ಸ್ ಫೌಂಡೇಷನ್ಸ್‌ ಸಹಕಾರದೊಂದಿಗೆ ದಿನಕೂಲಿ ಕಾರ್ಮಿಕರಿಗೆ ಆಹಾರ ಧಾನ್ಯಗಳನ್ನು  ವಿತರಿಸಲಾಯಿತು.  ಸಾವಿರಾರು ಮಂದಿ ಇದರ ಸದುಪಯೋಗವನ್ನು ಪಡೆದಿದ್ದರು.

ಅನಿರೀಕ್ಷಿತವಾಗಿ ಬಂದೊದಗಿದ ಈ ವಿಪತ್ತಿನಿಂದ ಸಂಕಷ್ಟಗೊಳಗಾದ ಸಮಾಜದ ಬಡ ಬಂಧುಗಳಿಗೆ ಸಂಘದಿಂದ ಸಹಾಯ ಹಸ್ತ ನೀಡುವುದು ನಮ್ಮ ಕರ್ತವ್ಯ ಎಂಬುದನ್ನು ಅರಿತು ಈ ರೀತಿಯ ಸೇವೆಯ  ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಸಮಿತಿಯ ಗೌರವ ಕಾರ್ಯದರ್ಶಿ ಪ್ರವೀಣ್‌ ಕುಮಾರ್‌ ಅಂಚನ್‌,  ಕೋಶಾಧಿಕಾರಿ ಶೇಖರ್‌ ಜತ್ತನ್‌ ಮತ್ತು ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಮಾನವೀಯ ನೆಲೆಯಲ್ಲಿ ಸಹಕರಿಸಿದ್ದಾರೆ.  ಪರಿಕಲ್ಪನೆಯ ಆರಂಭ, ಯೋಜನೆ, ಚರ್ಚೆ ಹಾಗೂ ಕಾರ್ಯಗತಗೊಳಿಸುವ ಎಲ್ಲ ಹಂತಗಳಲ್ಲಿಯೂ ಸಾಮಾಜಿಕ ಅಂತರ, ಆಡಳಿತಾತ್ಮಕ ಮಾರ್ಗಸೂಚಿಯನ್ನು ಅನುಸರಿಸಲಾಯಿತು. ಪಿಪಿಇ ಕಿಟ್‌ ಉಪಯೋಗಿಸಿ ನಮ್ಮ ಕಾರ್ಯ ಪಡೆಯ ಆರೋಗ್ಯವನ್ನು ಕಾಪಾಡುವಲ್ಲಿ  ಮುಂಜಾಗ್ರತೆಯನ್ನು ವಹಿಸಿತು. ನಮ್ಮ ಸೇವೆ ಯಿಂದ ನಮಗೆ ಅತ್ಮತೃಪ್ತಿಯ ಜತೆಯಲ್ಲಿ ಬಡವರ ಸೇವೆಯನ್ನು ನಿರಂತರವಾಗಿ ಮಾಡುವ ಹುಮ್ಮಸ್ಸು ಮೂಡಿದೆ. ಸಮಿತಿಯ ಇಂತಹ ಹಲವಾರು ಸಾಮಾಜಿಕ ಕಳಕಳಿಯ ಮತ್ತು ಸೃಜನಾತ್ಮಕ ಕಾರ್ಯಕ್ರಮಗಳಿಂದಾಗಿ  ಪಿಂಪ್ರಿ-ಚಿಂಚ್ವಾಡ್‌ ಪರಿಸರದಲ್ಲಿ ಒಂದು ಉತ್ತಮ, ಜವಾಬ್ದಾರಿಯುತ ಹಾಗೂ ಇತರ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿದೆ. -ಶರತ್‌ ಕೋಟ್ಯಾನ್‌, ಅಧ್ಯಕ್ಷರು ಬಿಲ್ಲವ ಸಂಘ ಪಿಂಪ್ರಿ  ಮತ್ತು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ಪಿಂಪ್ರಿ

Advertisement

Udayavani is now on Telegram. Click here to join our channel and stay updated with the latest news.

Next