Advertisement

ಪಿಲಿಕುಳ ನಿಸರ್ಗಧಾಮದ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸಿ; ಕೈಗಾರಿಕೆಗಳಿಗೆ ಜಿಲ್ಲಾಡಳಿತ ಕೋರಿಕೆ

11:35 PM Sep 28, 2020 | mahesh |

ಮಂಗಳೂರು: ನಿರ್ವಹಣೆಗಾಗಿ ಸರಕಾರದಿಂದ ಅನುದಾನ ಪಡೆಯದಿರುವ ದೇಶದ ಏಕೈಕ ಮೃಗಾಲಯ ಮಂಗಳೂರಿನ ಪಿಲಿಕುಳ ನಿಸರ್ಗಧಾಮದ ಆರ್ಥಿಕ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ದ.ಕ. ಜಿಲ್ಲಾಡಳಿತವು ನೆರವಿಗಾಗಿ ಕರಾವಳಿಯ 13 ಬೃಹತ್‌ ಕೈಗಾರಿಕೆ, ಕಂಪೆನಿಯವರ ಜತೆಗೆ ಮಾತುಕತೆ ನಡೆಸಿದೆ.

Advertisement

“ಪಿಲಿಕುಳ ನಿಸರ್ಗಧಾಮಕ್ಕೆ ಅಳಿವಿನ ಭೀತಿ’ ಎಂಬ ಶೀರ್ಷಿಕೆಯಲ್ಲಿ ಆ. 25ರಂದು “ಉದಯವಾಣಿ’ಯು ಮೃಗಾಲಯದ ಆರ್ಥಿಕ ಸಂಕಷ್ಟದ ಬಗ್ಗೆ ವರದಿ ಪ್ರಕಟಿಸಿತ್ತು. ಒಂದು ವರ್ಷದಿಂದ ಎಂಆರ್‌ಪಿಎಲ್‌ ಸಂಸ್ಥೆಯು ಮೃಗಾಲಯದ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದು, ಮುಂದಿನ 2 ತಿಂಗಳವರೆಗೆ ಇದು ಜಾರಿಯಲ್ಲಿರುವ ಬಗ್ಗೆ ಉಲ್ಲೇಖೀಸಲಾಗಿತ್ತು. ಇದೀಗ ಒಂದು ತಿಂಗಳು ಪೂರ್ಣಗೊಂಡಿದ್ದು, ಇನ್ನು ಒಂದು ತಿಂಗಳು ಮಾತ್ರ ನಿರ್ವಹಣೆ ಹೊಣೆ ಎಂಆರ್‌ಪಿಎಲ್‌ಗಿದೆ. ಆ ಬಳಿಕ ಏನು ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ.

“ಉದಯವಾಣಿ’ಗೆ ಶುಕ್ರವಾರ ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು, “ಪಿಲಿಕುಳದ ಆರ್ಥಿಕ ಸಂಕಷ್ಟ ನಿವಾರಿಸುವ ನಿಟ್ಟಿನಲ್ಲಿ ಈಗಾಗಲೇ 13 ಕೈಗಾರಿಕೆ ಹಾಗೂ ಕಂಪೆನಿಯವರ ಜತೆಗೆ ಮಾತುಕತೆ ನಡೆಸಲಾಗಿದೆ. ಸಿಎಸ್‌ಆರ್‌ ನಿಧಿ ಯಡಿಯಲ್ಲಿ ಪ್ರಾಯೋಜಕತ್ವ ವಹಿಸುವಂತೆ ಮನವಿ ಮಾಡಿದ್ದೇವೆ. ಪೂರಕ ಸ್ಪಂದನೆ ಬಂದಿದೆ. ಕೆಲವೇ ದಿನಗಳಲ್ಲಿ ಇದು ಅಂತಿಮಗೊಳ್ಳಲಿದೆ. ಜತೆಗೆ ಸರಕಾರದಿಂದ ಕೂಡ ಪಿಲಿಕುಳಕ್ಕೆ ವಿಶೇಷ ಅನುದಾನ ನೀಡುವ ಸಲುವಾಗಿ ಪತ್ರ ಬರೆಯಲಾಗಿದೆ. ಮುಂದಿನ ವರ್ಷಕ್ಕೆ ಪ್ರತ್ಯೇಕ ಬಜೆಟ್‌ ನೀಡುವಂತೆ ಸರಕಾರವನ್ನು ಕೋರಲಾಗಿದ್ದು, ಅನುಮೋದನೆ ದೊರೆಯುವ ನಿರೀಕ್ಷೆ ಇದೆ’ ಎಂದರು.

ಮಾಸಿಕ 20 ಲ.ರೂ. ಅಗತ್ಯ
ಪಿಲಿಕುಳ ನಿಸರ್ಗಧಾಮದಲ್ಲಿ ವಿವಿಧ ಪ್ರಭೇದದ 1,200ಕ್ಕೂ ಅಧಿಕ ಪ್ರಾಣಿ, ಪಕ್ಷಿ ಹಾಗೂ ಉರಗಗಳಿವೆ. ಅವುಗಳ ಆಹಾರಕ್ಕೆ ಪ್ರತೀ ತಿಂಗಳು 12 ಲಕ್ಷ ರೂ.ಗಳಿಗೂ ಅಧಿಕ ವೆಚ್ಚ ಮಾಡಲಾಗುತ್ತದೆ. ಉಳಿದಂತೆ ಸಿಬಂದಿ ವೇತನ ಸೇರಿದಂತೆ ವಿವಿಧ ಕಾರಣಕ್ಕಾಗಿ ವೆಚ್ಚವಾಗುತ್ತಿದ್ದು, ಒಟ್ಟು ಸುಮಾರು 20 ಲಕ್ಷ ರೂ. ಪ್ರತೀ ತಿಂಗಳು ಅಗತ್ಯವಿದೆ. ಇಲ್ಲಿಯವರೆಗೆ ವಿವಿಧ ಕಂಪೆನಿಗಳ ಸಿಎಸ್‌ಆರ್‌ ನಿಧಿಯಿಂದ ಹಾಗೂ ಪ್ರವಾಸಿಗರಿಂದ ಸಂಗ್ರಹವಾಗುವ ಹಣದಿಂದ ಪಿಲಿಕುಳ ಮೃಗಾಲಯದ ನಿರ್ವಹಣೆ ಮಾಡಲಾಗುತ್ತಿತ್ತು. ಆದರೆ ಕೊರೊನಾ ಕಾರಣದಿಂದ ಪ್ರವಾಸಿಗರಿಲ್ಲದೆ ಪಿಲಿಕುಳದಲ್ಲಿ ಆರ್ಥಿಕ ಸಮಸ್ಯೆ ಎದುರಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next