Advertisement

ಇವನ್ಯಾರ ಮಗನೋ ಹಿಂಗವ್ನಲ್ಲ…

07:16 PM May 16, 2019 | mahesh |

ಸಾಮಾನ್ಯವಾಗಿ ಹೀರೋಗಳನ್ನ ಸಿನಿಮಾಗಳಲ್ಲಿ ಭರ್ಜರಿ ಬಿಲ್ಡಪ್‌ ಸೀನ್‌ಗಳ ಮೂಲಕ, ಅದ್ಧೂರಿ ಸಾಂಗ್ಸ್‌ ಮೂಲಕ ಇಂಟ್ರಡ್ನೂಸ್‌ ಮಾಡುವುದನ್ನು ನೀವೆಲ್ಲ ನೋಡಿರುತ್ತೀರಿ. ಆದರೆ ಇಲ್ಲೊಂದು ಚಿತ್ರತಂಡ ಚಿತ್ರ ಬಿಡುಗಡೆಗೂ ಮೊದಲೇ ಹೀರೋಗಾಗಿಯೇ ವಿಶೇಷ ಮ್ಯೂಸಿಕ್‌ ಅಲ್ಬಂ ಒಂದನ್ನು ಮಾಡಿ ಆ ಮೂಲಕ ಹೀರೋ ಇಂಟ್ರೋಡಕ್ಷನ್‌ ಕೊಟ್ಟು ಬಳಿಕ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದೆ.

Advertisement

ಅಂದಹಾಗೆ, ಆ ಮ್ಯೂಸಿಕ್‌ ಅಲ್ಬಂ ಹೆಸರು “ಏ ಸೋನಾ…’ ಹಲವು ವರ್ಷಗಳಿಂದ ಕನ್ನಡಪರ ಹೋರಾಟಗಳಲ್ಲಿ ಗುರುತಿಸಿಕೊಂಡಿರುವ ಬಸವರಾಜ್‌ ಪಡಕೋಟೆ ಈ ಮ್ಯೂಸಿಕ್‌ ಅಲ್ಬಂ ಅನ್ನು ನಿರ್ಮಿಸಿದ್ದು, ಈ ಅಲ್ಬಂ ಮೂಲಕ ತಮ್ಮ ಪುತ್ರ ರಘು ಪಡಕೋಟೆ ಅವರನ್ನು ಹೀರೋ ಆಗಿ ಪ್ರೇಕ್ಷಕರಿಗೆ ಪರಿಚಯಿಸಿದ್ದಾರೆ. “ಏ ಸೋನಾ…’ ಅಲ್ಬಂನ ಹಾಡಿನಲ್ಲಿ ರಘು ಪಡಕೋಟೆ ಅವರಿಗೆ ನಾಯಕಿಯಾಗಿ ಶಾಲಿನಿ ಗೌಡ ಹೆಜ್ಜೆ ಹಾಕಿದ್ದಾರೆ. ಸರಿಗಮಪ ಖ್ಯಾತಿಯ ಸುನೀಲ್‌, ಈ ಅಲ್ಬಂನ ಹಾಡಿಗೆ ಸಂಗೀತ ಸಂಯೋಜಿಸಿ, ಹಾಡಿಗೆ ಧ್ವನಿಯಾಗಿದ್ದಾರೆ. ಜೊತೆ ಹಾಡಿನಲ್ಲಿ ತೆರೆಮೇಲೆ ಕೂಡ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗೆ “ಏ ಸೋನಾ…’ ಮ್ಯೂಸಿಕ್‌ ಅಲ್ಬಂ ಅದ್ಧೂರಿಯಾಗಿ ಬಿಡುಗಡೆಯಾಯಿತು. ಕನ್ನಡಪರ ಹೋರಾಟಗಾರ ಟಿ. ಎ. ನಾರಾಯಣ ಗೌಡ, ಲಹರಿ ಸಂಸ್ಥೆಯ ಮುಖ್ಯಸ್ಥ ವೇಲು, ನಟ ರಾಮ್‌, ಗಣೇಶ್‌ ರಾವ್‌ ಕೇಸರ್ಕರ್‌ ಸೇರಿದಂತೆ ಚಿತ್ರರಂಗ ಮತ್ತು ರಾಜಕೀಯ ರಂಗದ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದು, “ಏ ಸೋನಾ…’ ಮ್ಯೂಸಿಕ್‌ ಅಲ್ಬಂ ಮತ್ತು ರಘು ಪಡಕೋಟೆ ನಾಯಕನಾಗಿ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ “ಯಾರ್‌ಮಗ’ ಚಿತ್ರದ ಟೈಟಲ್‌ ಪೋಸ್ಟರ್‌ ಅನ್ನು ಅನಾವರಣಗೊಳಿಸಿ, ಚಿತ್ರತಂಡಕ್ಕೆ ಶುಭ ಕೋರಿದರು. ಇದೇ ವೇಳೆ ಮಾತನಾಡಿದ ನವನಟ ರಘು ಪಡಕೋಟೆ, “ಬಾಲ್ಯದಿಂದಲೂ ಚಿತ್ರರಂಗದತ್ತ ಆಸಕ್ತಿ ಬೆಳೆಸಿಕೊಂಡಿರುವ ನಾನು ಇಲ್ಲೇ ಏನಾದರೂ ಸಾಧನೆ ಮಾಡಬೇಕು ಎಂಬ ಉದ್ದೇಶದಿಂದ ಇದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಚಿತ್ರರಂಗಕ್ಕೆ ಬರುವುದಕ್ಕೆ ಮುಂಚೆ ಬಹಳ ವರ್ಷಗಳಿಂದ ನೃತ್ಯ ಕಲಿಕೆ, ಅಭಿನಯದ ತರಬೇತಿ ಪಡೆದುಕೊಳ್ಳುತ್ತಿದ್ದೇನೆ. ಏ ಸೋನಾ… ಮ್ಯೂಸಿಕ್‌ ಅಲ್ಬಂ ಮೂಲಕ ನನ್ನ ಪ್ರತಿಭೆಯನ್ನು ಪ್ರೇಕ್ಷಕರಿಗೆ ಪರಿಚಯ ಮಾಡಿ ನಂತರ ಚಿತ್ರದಲ್ಲಿ ಅಭಿನಯಿಸುವ ನಿರ್ಧಾರಕ್ಕೆ ಬಂದೆ’ ಎಂದರು.

ಚಿತ್ರರಂಗ ಮತ್ತು ಅಭಿನಯದ ಕಡೆಗೆ ರಘು ಅವರಿಗಿದ್ದ ಆಸಕ್ತಿಯನ್ನು ನೋಡಿ ರಘು ಅವರ ತಂದೆ ಬಸವರಾಜ್‌ ಪಡಕೋಟೆ ತಮ್ಮ “ಪಡಕೋಟೆ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಚೊಚ್ಚಲ ಬಾರಿಗೆ “ಯಾರ್‌ಮಗ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸುರೇಶ್‌ ರಾಜು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಲೋಕಿ ಸಂಗೀತ ಸಂಯೋಜಿಸುತ್ತಿದ್ದು, ಚಿತ್ರಕ್ಕೆ ಸತೀಶ್‌ ಛಾಯಾಗ್ರಹಣವಿದೆ. ಯಾರ್‌ಮಗ’ ಚಿತ್ರದಲ್ಲಿ ನಾಯಕ ರಘು ಪಡಕೋಟೆಗೆ ನವನಟಿ ವಿದ್ಯಾ ಪ್ರಭು ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ಚಿತ್ರದಲ್ಲಿ ಹಲವು ಹಿರಿಯ, ಕಿರಿಯ ಕಲಾವಿದರ ತಾರಾಗಣ ಇರಲಿದೆ ಎಂದಿದೆ ಚಿತ್ರತಂಡ.

ಸದ್ಯ “ಯಾರ್‌ಮಗ’ ಚಿತ್ರದ ಚಿತ್ರೀಕರಣಕ್ಕೆ ಅಣಿಯಾಗಿರುವ ಚಿತ್ರತಂಡ, ಇದೇ ವರ್ಷಾಂತ್ಯಕ್ಕೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ. “ಯಾರ್‌ಮಗ’ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಲು ಸಿದ್ಧತೆ ಮಾಡಿಕೊಂಡಿರುವ ನವನಟ ರಘು ತೆರೆಮೇಲೆ ಎಷ್ಟರ ಮಟ್ಟಿಗೆ ಕಮಾಲ್‌ ಮಾಡಲಿದ್ದಾರೆ ಅನ್ನೋದಕ್ಕೆ ಚಿತ್ರ ತೆರೆಗೆ ಬಂದ ಮೇಲಷ್ಟೇ ಉತ್ತರ ಸಿಗಲಿದೆ.

Advertisement

ಜಿ.ಎಸ್‌.ಕೆ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next