Advertisement

ವಿಧಾನಸೌಧದ ಮುಂದೆ ಇಂದು…

09:13 PM Jul 26, 2019 | mahesh |

ವಿಧಾನಸೌಧದ ಒಳಗೆ ಸರ್ಕಾರಗಳು ಉರುಳುತ್ತವೆ, ಅರಳುತ್ತವೆ. ಒಳಗಿದ್ದವರ ಬದುಕು ಹೇಗೆ ಬದಲಾಗಿದ್ದರೂ, ಹೊರಗೆ ಫೋಟೊ ಕ್ಲಿಕ್ಕಿಸುವವರ ಜೀವನ ಮಾತ್ರ ಸ್ಥಿರಚಿತ್ರದಂತೆ ಹಾಗೆಯೇ ಇದೆ. ಕಾಲ ಓಡಿದಂತೆ ಇವರ ಬದುಕಿನ ಚಿತ್ರ ಮಸುಕು ಮಸುಕಾಗುತ್ತಿರುವುದಂತೂ ಸುಳ್ಳಲ್ಲ. ವಿಧಾನಸೌಧದ ಮುಂದೆಯೇ ಬದುಕು ಕಳೆಯುತ್ತಿರುವ ಕೆಲ ಫೋಟೋಗ್ರಾಫ‌ರ್‌ಗಳನ್ನು ಮಾತಾಡಿಸಿದಾಗ, ಕಂಡ ಚಿತ್ರವೇ ಬೇರೆ…

Advertisement

“ಸರ್‌, ಈ ಮೊಬೈಲಿಂದ ನಮ್‌ ಫೋಟೋ ತೆಗೀತೀರಾ? ಪೂರಾ ವಿಧಾನಸೌಧ ಕಾಣಬೇಕು,
ಆಯ್ತಾ’- ಅಂದಳು, ಹುಡುಗಿ. ಆ ಮನುಷ್ಯ ಸ್ವಲ್ಪವೂ ಬೇಸರ ಪಟ್ಟುಕೊಳ್ಳಲಿಲ್ಲ. ತನ್ನ ಕೈಯಲ್ಲಿದ್ದ ತೂಕದ
ಕ್ಯಾಮೆರಾವನ್ನು ಬ್ಯಾಗ್‌ಗೆ ತೂರಿಸಿ, ಆಕೆಯ ಗುಂಪಿನ ನಾಲ್ಕೈದು ಫೋಟೋ ತೆಗೆದುಕೊಟ್ಟರು. ಆ ಹೊತ್ತಿಗಾಗಲೇ ವಿಧಾನಸೌಧದ ತಲೆಮೇಲೆ ಮೋಡ ಕಪ್ಪಿಟ್ಟಿತ್ತು. ಅದರ ಎದುರಿದ್ದ, ಫೋಟೋಗ್ರಾಫ‌ರ್‌ಗಳ ಮೊಗದಲ್ಲಿ ನಗುವಿನ ಚಿತ್ರಗಳಿದ್ದವು. ಮೊಬೈಲ್‌ ಬಂದಾದ ಮೇಲೆ, ಎಲ್ಲರ
ಜೇಬಿನಲ್ಲೂ ಸ್ಮಾರ್ಟ್‌ಫೋನ್‌ ಅತಿಥಿಯಾಗಿಬಿಟ್ಟ ಮೇಲೆ, ಈ ಫೋಟೋಗ್ರಾಫ‌ರ್‌ಗಳ ಬಗಲಲ್ಲಿ ತೂಗಿಬಿದ್ದ
ಕ್ಯಾಮೆರಾಗಳು ಹೆಚ್ಚು ಫ‌ಳಗುಡುತ್ತಲೇ ಇಲ್ಲ.

“ಹತ್ತು ವರ್ಷಗಳ ಹಿಂದೆ ಒಂದು ಕಾಪಿಗೆ 30 ರೂ.ನಂತೆ ಚಾರ್ಚ್‌ ಮಾಡುತ್ತಿದ್ದೆವು. ದಿನಕ್ಕೆ 800, 900 ರೂ. ದುಡಿಯುತ್ತಿದ್ದೆವು. ಇಂದು 300 ರೂ. ದುಡಿಯುವುದೂ ಕಷ್ಟವಾಗಿದೆ’ ಅಂದರು, ಜಗದೀಶ್‌. ಅವರು ಇಲ್ಲಿ 30 ವರುಷಗಳಿಂದ ಫೋಟೋಗ್ರಾಫ‌ರ್‌. ಬೆಂಡಿನ ಬಾಕ್ಸಿನಲ್ಲಿ ಪ್ರಿಂಟಿಂಗ್‌ ಮಿಶನ್‌ ಇಟ್ಟುಕೊಂಡು, ವಿಧಾನಸೌಧ, ಹೈಕೋರ್ಟ್‌, ಕಬ್ಬನ್‌ ಪಾರ್ಕ್‌ ಅನ್ನು ನೋಡಲು ಬರುವ ಪ್ರವಾಸಿಗರ ಲಕ್ಷಾಂತರ ಫೋಟೋ ತೆಗೆದವರು. ಈಗಂತೂ ಬಂದವರೆಲ್ಲ ಸ್ಮಾರ್ಟ್‌ ಫೋನ್‌ನಲ್ಲೇ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಸೆಲ್ಫಿ ಬಂದಾದ ಮೇಲಂತೂ ಕೇಳಬೇಕೇ? ಆದರೂ, ಕೆಲವು ಮಂದಿಗೆ ಕ್ಯಾಮೆರಾದಿಂದ ತೆಗೆದ ಚಿತ್ರಗಳೇ ಇಷ್ಟವಂತೆ. ಅಂಥವರು ಗ್ರೂಪ್‌ ಫೋಟೋ ತೆಗೆಸಿಕೊಂಡು, ಕೈಗೆ ನಾಲ್ಕು ಕಾಸು ಕೊಡುತ್ತಾರೆ. “ಇದ್ದುದರಲ್ಲಿಯೇ ತೃಪ್ತಿ ಹೊಂದುವುದನ್ನು ಈ ಕ್ಯಾಮೆರಾದ ಬದುಕು ಕಲಿಸಿದೆ.

ಹೊಟ್ಟೆಗೇನೂ ಮೋಸವಿಲ್ಲ’ ಎನ್ನುತ್ತಾರೆ, ಜಗದೀಶ್‌. ಅಂದ್ಯಾವತ್ತೋ ಕಪಿಲ್‌ ದೇವ್‌ ಬೆಂಗಳೂರಿಗೆ ಬಂದಾಗ, ಅವರೊಂದಿಗೆ ತೆಗೆಸಿಕೊಂಡ ಚಿತ್ರ; ರಾಜ್‌ಕುಮಾರ್‌, ದ್ವಾರಕೀಶ್‌ ಜತೆಗೆ ನಿಂತು ಕ್ಲಿಕ್ಕಿಸಿಕೊಂಡ ಫೋಟೋ, ಜಗದೀಶ್‌ರ ನೆನಪಿನ ಅತ್ಯಮೂಲ್ಯ ಆಸ್ತಿಗಳಂತೆ ತೋರಿತು. ನಿಕಾನ್‌ ಕ್ಯಾಮೆರಾ, ಇವರಿಗೆ ನಿತ್ಯದ ಅನ್ನಕ್ಕಂತೂ ಮೋಸ ಮಾಡುತ್ತಿಲ್ಲ. ಪ್ರವಾಸಿಗರು ದುಡ್ಡಿಲ್ಲ ಎಂದರೂ, ಕೊಟ್ಟಷ್ಟು ಪಡೆದು, ಸಂತೃಪ್ತಿಯ ನಗು ಬೀರುವ ಸಹೃದಯಿ ಈತ.

ವಿದೇಶಿ ಪ್ರವಾಸಿಗ ಮೆಚ್ಚಿದ ಕೃಷ್ಣಪ್ಪ
“ಬೇರೆ ಉದ್ಯೋಗ ಮಾಡಲು ವಯಸ್ಸಿಲ್ಲ, ಈ ಕೆಲಸ ಬಿಟ್ಟರೆ ಬೇರೇನೂ ಗೊತ್ತಿಲ್ಲ’ ಎನ್ನುತ್ತಾರೆ ಕೃಷ್ಣಪ್ಪ. ಅವರೂ ಇಲ್ಲಿ ಫೋಟೋಗ್ರಾಫ‌ರ್‌. ವಿದೇಶಿಗರೇನಾದರೂ ಬಂದರೆ, ಅವರೊಂದಿಗೆ ಆತ್ಮೀಯವಾಗಿ ಮಾತಾಡುತ್ತಾ, ನೆನಪಿನಲ್ಲಿ ಉಳಿಯುವಂಥ ಫೋಟೋ ತೆಗೆದುಕೊಡುವ ಚಾಣಾಕ್ಷ. ಹಾಗೆ ಪ್ರವಾಸಕ್ಕೆ ಬಂದ ವಿದೇಶಿಗರೊಬ್ಬರು, ಇವರನ್ನು ಜೊತೆಯಲ್ಲಿ ಕರೆದೊಯ್ದು, ಫೋಟೋಗ್ರಫಿ ಮಾಡಿಸಿಕೊಂಡಿದ್ದರಂತೆ. ದಾವಣಗೆರೆ ಮೂಲದ ಇವರು, ಅಲ್ಲಿನ ಕೂಲಿ ಸಾಕಾಗದೇ, ಇಲ್ಲಿ ಕ್ಯಾಮೆರಾ ಹಿಡಿದರಂತೆ.

Advertisement

ರೈತ, ಫೋಟೋಗ್ರಾಫ‌ರ್‌ ಆದ ಕತೆ…
ಅಂದಹಾಗೆ, ಈ ವಿಧಾನಸೌಧದ ಮುಂದೆ ಒಬ್ಬ ರೈತ ಕೂಡ ಫೋಟೋಗ್ರಫಿ ಮಾಡುತ್ತಾರೆ. ಅವರೇ
ತುರುವೇಕೆರೆಯ ಎನ್‌.ಡಿ. ಲೋಕೇಶ್‌. ಊರಿನಲ್ಲಿ ವ್ಯವಸಾಯ ಮಾಡಿಕೊಂಡು ಇದ್ದರಂತೆ. ಸಕಾಲಕ್ಕೆ
ಮಳೆಯಾಗದೇ, ನಷ್ಟವಾಗಿ, ಇಲ್ಲಿಗೆ ಬಂದು, 10 ವರ್ಷಗಳಿಂದ ಫೋಟೋ ತೆಗೆಯುತ್ತಿದ್ದಾರೆ. ಬೆಳಗ್ಗೆ
10ರಿಂದ ಸಂಜೆ 6ರವರೆಗೆ ಇಲ್ಲಿ ಡ್ನೂಟಿ. ಭಾನುವಾರ ಹಾಗೂ ವಿಶೇಷ ದಿನಗಳಲ್ಲಿ ವಿಧಾನಸೌಧಕ್ಕೆ ಲೈಟಿಂಗ್‌ ವ್ಯವಸ್ಥೆ ಮಾಡಿದಾಗ, ಫೋಟೋಗ್ರಫಿ ಬ್ಯುಸಿನೆಸ್‌ ಸ್ವಲ್ಪ ಲಾಭ ತಂದು ಕೊಡುತ್ತದೆ ಅಂತಾರೆ, ಇವರು.

ನಗೋದು ಹೇಗೆ ಗೊತ್ತಾ?
ದೂರದ ಹಳ್ಳಿಗಳಿಂದ ಬರುವ ಅನೇಕ ಪ್ರವಾಸಿಗರಿಗೆ, ಫೋಟೋಗೆ ಹೇಗೆ ಫೋಸ್‌ ಕೊಡಬೇಕು ಅಂತಲೇ
ತಿಳಿದಿರುವುದಿಲ್ಲ. ಆತಂಕದ ದೃಷ್ಟಿ ಬೀರುತ್ತಾ, ಅಟೆನನ್‌ ಸ್ಥಿತಿಯಲ್ಲಿ ನಿಂತುಕೊಳ್ಳುತ್ತಾರಂತೆ. ಅಂಥವರಿಗೆ ಇವರು, ಫೋಟೋಗೆ ಹೇಗೆ ನಿಲ್ಲಬೇಕು? ಯಾವ ರೀತಿ ಪೋಸು ಕೊಡಬೇಕು?- ಎನ್ನುವ ಪಾಠ ಮಾಡುತ್ತಾರಂತೆ. ಕೆಲವೊಮ್ಮೆ ಇದು ಸರ್ಕಸ್‌ ಆಗುವುದೂ ಉಂಟಂತೆ!

Advertisement

Udayavani is now on Telegram. Click here to join our channel and stay updated with the latest news.

Next