Advertisement

ಶಿಥಿಲ ಕೊಠಡಿ ಕೆಡವಲು ಕೊನೆಗೂ ಅನುಮತಿ

09:27 PM Jul 14, 2019 | Sriram |

ಉಪ್ಪಿನಂಗಡಿ: ಅಪಾಯದ ಅಂಚಿನಲ್ಲಿದ್ದ, ಶಾಲಾ ಕಟ್ಟಡಕ್ಕೆ ತಾಗಿ ಕೊಂಡಿರುವ ಕೊಠಡಿಗಳನ್ನು ಕೆಡವಲು ಕೊನೆಗೂ ಜಿ.ಪಂ. ಎಂಜಿನಿಯರಿಂಗ್‌ ವಿಭಾಗ ಅನುಮತಿ ನೀಡಿದ್ದು, ಹೆತ್ತವರು ನಿಟ್ಟುಸಿರು ಬಿಡುವಂತಾಗಿದೆ.

Advertisement

ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಸರಕಾರಿ ಹಿರಿಯ ಮಾದರಿ ಶಾಲೆಯ ಕಟ್ಟಡದಲ್ಲಿ ಎರಡು ಕೊಠಡಿಗಳು ಸಂಪೂರ್ಣ ಬಿರುಕು ಬಿಟ್ಟು ಛಾವಣಿ ಕುಸಿ ಯುವ ಹಂತದಲ್ಲಿವೆ. ಈ ಕೊಠಡಿಗಳಿಗೆ ತಾಗಿಕೊಂಡಿದ್ದ ಮರವೊಂದು ಬೀಳುವ ಸ್ಥಿತಿಯಲ್ಲಿದ್ದು, “ಉದಯವಾಣಿ’ ಸುದಿನ ವರ್ಷದ ಹಿಂದೆಯೇ ಸುದೀರ್ಘ‌ ವರದಿಯನ್ನು ಪ್ರಕಟಿಸಿತ್ತು.

ಇದರ ಬೆನ್ನಲ್ಲೇ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಅಪಾಯದ ಅಂಚಿನಲ್ಲಿರುವ ತರಗತಿಗಳನ್ನು ಬದಲಿ ಕೊಠಡಿಗಳಿಗೆ ಸ್ಥಳಾಂತರಿಸುವ ಸೂಚನೆ ಯನ್ನು ಅನುಷ್ಠಾನಗೊಳಿಸಿದ್ದರು.

ಆದರೂ ಅಪಾಯದ ಅಂಚಿನ ಕೊಠಡಿ ತರಗತಿ ನಡೆಯುವ ಕಟ್ಟಡಕ್ಕೆ ತಾಗಿಕೊಂಡಿದ್ದು, ಅಪಾಯ ದೂರವಾಗಿ ರಲಿಲ್ಲ. ಒಂದು ವರ್ಷ ಕಾಲ ಕೊಠಡಿ ಕೆಡವಲು ಮೀನ-ಮೇಷ ಎಣಿಸಿದ ಅಧಿಕಾರಿಗಳು, ನೆಪಗಳನ್ನು ಹೇಳಿ ಜಾರಿಕೊಳ್ಳುತ್ತಿದ್ದರು.

ಇದನ್ನು ಅರಿತ ಗ್ರಾಮಸ್ಥರು ಗ್ರಾಮಸಭೆ ಯಲ್ಲಿ ವಿಷಯ ಪ್ರಸ್ತಾವಿಸಿ, ಶಿಕ್ಷಣ ಇಲಾಖೆ ಅಧಿಕಾರಿಗಳ ಮಕ್ಕಳನ್ನು ಈ ಶಾಲೆಗೆ ಕಳುಹಿಸಲಿ. ಒಂದೋ ಕೊಠಡಿಗಳನ್ನು ಕೆಡವಲು ಇಲಾಖೆ ಕ್ರಮ ಜರುಗಿಸಲಿ, ಇಲ್ಲವೇ ನಾವೇ ಕೆಡವಲು ಸಿದ್ಧ ಎಂದು ಸವಾಲು ಹಾಕಿದರು. ಇದರಿಂದ ಮುಜುಗರಕ್ಕೆ ಒಳಗಾದ ಶಿಕ್ಷಣ ಇಲಾಖೆ, ಈಗ ಎಂಜಿನಿಯರಿಂಗ್‌ ವಿಭಾಗದಿಂದ ಕೊಠಡಿಗಳನ್ನು ಕೆಡವಲು ಆದೇಶ ಪಡೆದಿದ್ದು, ಒಪ್ಪಂದವೂ ಸಿದ್ಧಗೊಂಡಿದೆ ಎಂದು ತಿಳಿದುಬಂದಿದೆ.

Advertisement

 ವರದಿ ಬಂದಿದೆ
ತಣ್ಣೀರುಪಂತ ಶಾಲೆಯ ಹಳೆಯ ಕೊಠಡಿಗಳನ್ನು ಪರಿಶೀಲಿಸಿದ್ದು, ಶಿಕ್ಷಣ ಇಲಾಖೆಯಿಂದ ಜಿ.ಪಂ. ಎಂಜಿನಿಯರಿಂಗ್‌ ವಿಭಾಗಕ್ಕೆ ವರದಿಯನ್ನು ಸಲ್ಲಿಸಲಾಗಿತ್ತು. ಕೆಡವಲು ಮಂಜೂರಾತಿ ಪಡೆಯುವುದು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿತ್ತು. ಈಗ ಜಿ.ಪಂ. ಎಂಜಿನಿಯರಿಂಗ್‌ ವಿಭಾಗವು ವರದಿ ನೀಡಿದ್ದು, ತಾ.ಪಂ. ಸಭೆಯಲ್ಲಿ ಚರ್ಚೆಯ ಬಳಿಕ ತ್ವರಿತವಾಗಿ ಕ್ರಮ ಕೈಗೊಳ್ಳಲಾಗುವುದು.
 -ಶರೀಫ್, ಕ್ಷೇತ್ರ ಶಿಕ್ಷಣ ಸಂಯೋಜಕ, ಬೆಳ್ತಂಗಡಿ

 ಶೀಘ್ರ ಕ್ರಮ
ತಣ್ಣೀರುಪಂತ ಶಾಲೆಯಲ್ಲಿ ಎರಡು ಹಳೆಯ ಕೊಠಡಿಗಳು ಹಾಗೂ ಅದಕ್ಕೆ ತಾಗಿಕೊಂಡು ಒಂದು ಮರ ಅಪಾಯದ ಸ್ಥಿತಿಯಲ್ಲಿರುವುದು ನಿಜ. ಈ ಕುರಿತು ಗ್ರಾಮಸಭೆಯಲ್ಲಿ ಗ್ರಾಮಸ್ಥರ ಕೋರಿಕೆಯ ಮೇರೆಗೆ ಇದೀಗ ಕಟ್ಟಡದ ಕೊಠಡಿಗಳನ್ನು ಕೆಡವಲು ಜಿ.ಪಂ. ಎಂಜಿನಿಯರಿಂಗ್‌ ವಿಭಾಗದಿಂದ ಮಂಜೂರಾತಿ ಸಿಕ್ಕಿದ್ದು, ತತ್‌ಕ್ಷಣವೇ ಕ್ರಮ ಕೈಗೊಳ್ಳಲಾಗುವುದು.
 -ಜಯವಿಕ್ರಮ್‌ ಕಲ್ಲಾಪು, ತಣ್ಣೀರುಪಂತ ಗ್ರಾ.ಪಂ. ಅಧ್ಯಕ್ಷ


Advertisement

Udayavani is now on Telegram. Click here to join our channel and stay updated with the latest news.

Next