Advertisement

ಪೇರಲಕಟ್ಟೆಯ ರಸ್ತೆಗೆ ಕಾಯಕಲ್ಪ ಅಗತ್ಯ

08:06 PM Aug 09, 2021 | Team Udayavani |

ಪಡುಮಾರ್ನಾಡು ಗ್ರಾಮ ಸಂಪರ್ಕಿಸುವ ರಸ್ತೆ ದುರ್ಗಮವಾಗಿದ್ದು, ತೀರಾ ಹದಗೆಟ್ಟಿದೆ. ಇದಕ್ಕೆ ಶೀಘ್ರವೇ ಮುಕ್ತಿ ನೀಡಬೇಕಿದೆ. ಅಸಮರ್ಪಕ ವಿದ್ಯುತ್‌ ಸಮಸ್ಯೆಗೆ ಪರಿಹಾರ ಒದಗಿಸಬೇಕಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನಸೆಳೆಯಲು ಪ್ರಯತ್ನ ಇಂದಿನ “ಉದಯವಾಣಿ ಸುದಿನ’ದ “ಒಂದು ಊರು-ಹಲವು ದೂರು’ ಸರಣಿಯಲ್ಲಿ ಮಾಡಲಾಗಿದೆ.

Advertisement

ಮೂಡುಬಿದಿರೆ: ಪಡುಮಾರ್ನಾಡು ಗ್ರಾ.ಪಂ.ನ ಪಡು ಮತ್ತು ಮೂಡುಮಾರ್ನಾಡು ಗ್ರಾಮ ಗಳ ಪೈಕಿ ಪಡುಮಾರ್ನಾಡು ಗ್ರಾಮದ ನಡುವೆಯೇ ರಾಷ್ಟ್ರೀಯ ಹೆದ್ದಾರಿ 169 ಹಾದು ಹೋಗುತ್ತದೆ. ಆದರೆ ಈ ಗ್ರಾಮದೊಳಗಿನ ರಸ್ತೆಗಳು ಇನ್ನೂ ಕಾಯಕಲ್ಪಕ್ಕಾಗಿ ಕಾಯುತ್ತಿವೆ.

ಇಂಥ ಒಂದು ರಸ್ತೆ ಪಡುಮಾರ್ನಾಡು ಗ್ರಾ.ಪಂ.ನ 2ನೇ ವಾರ್ಡ್‌ ವ್ಯಾಪ್ತಿಯ ಪೇರಲಕಟ್ಟೆ ಪ್ರದೇಶದ್ದಾಗಿದೆ. ಮೂಡುಬಿದಿರೆ ಪುರಸಭೆಯ ಗಡಿದಾಟಿದ ತತ್‌ಕ್ಷಣ ಇದಿರಾಗುವ ಅಮನೊಟ್ಟು ರಸ್ತೆಯಲ್ಲಿ ಸುಮಾರು ಒಂದು ಕಿ.ಮೀ. ಕ್ರಮಿಸಿದಾಗ ಸಿಗುವ ಆದರ್ಶನಗರದ ಫಲಕ ಕಾಣಿಸುವಲ್ಲಿಂದ ಬಲಕ್ಕೆ ತಿರುಗಿ ಅರ್ಧ ಕಿ.ಮೀ. ಮುಂದಕ್ಕೆ ಹೋಗಿ ಮತ್ತೆ ಎಡಕ್ಕೆ ಹೊರಳಿದರೆ ಸಿಗುವ ಪೇರಲಕಟ್ಟೆ ಸುಂದರ ಪರಿಸರ. ಕೃಷಿಯೇ ಇಲ್ಲಿನ ಜೀವಾಳ.

ಕೊರಕಲು ಬಿದ್ದಿರುವ ರಸ್ತೆ:

ಪೇರಲಕಟ್ಟೆಯ ರಸ್ತೆಯ ದುರವಸ್ಥೆಯಿಂದ ಕೂಡಿದ್ದು, ಆಟೋರಿಕ್ಷಾದವರೂ ಕೂಡ ಬರಲು ಹಿಂಜರಿಯುತ್ತಾರೆ. ಅಡುಗೆ ಅನಿಲದ ವಾಹನ ಇಲ್ಲೇ ಅನಿಲ ಜಾಡಿ ಇಳಿಸಿ ಹೋಗಿ ಬಿಡುತ್ತಾರೆ. ಇಲ್ಲಿಂದ ಮುಂದೆ ಅದನ್ನು ಹೊತ್ತುಕೊಂಡೇ ಹೋಗಬೇಕು. ವೃದ್ಧರು, ಅನಾರೋಗ್ಯ ಪೀಡಿತರು ಆಟೋ ರಿಕ್ಷಾ ಹಿಡಿಯಬೇಕಾದರೂ ಕನಿಷ್ಠ ಮುಕ್ಕಾಲು ಕಿ.ಮೀ. ನಡೆಯಬೇಕಿದೆ. ದ್ವಿಚಕ್ರ ವಾಹನಗಳಲ್ಲಿ ಸಾಗುವುದೂ ಬಹಳ ಕಷ್ಟದ ವಿಷಯ. ಮಳೆಗಾಲದಲ್ಲಂತೂ ಸಾಧ್ಯವೇ ಇಲ್ಲ. ಅಂಥ ಅಂಟುಮಣ್ಣು, ಅಡಿಗಡಿಗೆ ಸಿಗುವ ಮೊನಚಾದ ಕಲ್ಲುಗಳು.

Advertisement

ಈ ಮಣ್ಣಿನ ರಸ್ತೆಗೆ ಡಾಮರ್‌ ಇಲ್ಲವೇ ಕಾಂಕ್ರೀಟ್‌ ಹೊದೆಸಬೇಕೆಂಬ ಈ ಭಾಗದವರ ಹಲವು ದಶಕಗಳ ಕನಸು. ಮಳೆಗಾಲದಲ್ಲಿ ಗುಡ್ಡದ ಬದಿಯಿಂದ ನೀರ ಒರತೆ ಹರಿದುಬರುವ ಕಾರಣ ಇದಕ್ಕೆ ಕಾಂಕ್ರೀಟ್‌ ಹೊದೆಸುವುದೇ ಸೂಕ್ತ. ಆರಂಭದಲ್ಲಿ ಪ. ಜಾತಿ/ಪಂಗಡಗಳ ಮಂದಿ ವಾಸಿಸುವ ಕೆಲವು ಮನೆಗಳಿರುವುದರಿಂದ ನಾಲ್ಕು ವರ್ಷಗಳ ಹಿಂದೆ ಇಲ್ಲಿ ಒಂದಿಷ್ಟು ಭಾಗಕ್ಕೆ ಕಾಂಕ್ರೀಟ್‌ ಹೊದೆಸಲಾಗಿದೆ. ಪಂಚಾಯತ್‌ಗೆ ಈ ರಸ್ತೆಗೆ ಕಾಯಕಲ್ಪ ನೀಡುವಷ್ಟು ಆರ್ಥಿಕ ಬಲವಿಲ್ಲ.

ವಿದ್ಯುತ್‌ ಶಕ್ತಿಗೆ “ಬಲವಿಲ್ಲ’  :

ಕೃಷಿ ಪ್ರಧಾನವಾದ ಪೇರಲಕಟ್ಟೆ ಪರಿಸರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನೀರಾವರಿ ಪಂಪ್‌ಸೆಟ್‌ಗಳಿವೆ. ಆದರೆ ಇಲ್ಲಿಗೆ ಪೂರೈಕೆಯಾಗುವ ವಿದ್ಯುತ್‌ ಶಕ್ತಿಗೆ “ಬಲವಿಲ್ಲ’. ವೊಲ್ಟೇಜ್‌ ಸಮಸ್ಯೆಯಿಂದಾಗಿ ಕೃಷಿಕರಿಗೆ ತೊಂದರೆ ಯಾಗುತ್ತಿದೆ. ವೊಲ್ಟೆàಜ್‌ ಸಮಸ್ಯೆ ಪಂ. ವ್ಯಾಪ್ತಿಯ ಹಲವೆಡೆ ಕಂಡುಬಂದಿದ್ದು ಶೀಘ್ರ ಪರಿಹರಿ ಸಬೇಕಿದೆ. ಈ ಎರಡೂ ಸಮಸ್ಯೆಗಳ ಬಗ್ಗೆ ಶಾಸಕರ ಗಮನ ಸೆಳೆಯ ಲಾಗಿದೆ ಎನ್ನುತ್ತಾರೆ ಸ್ಥಳೀಯರು.

ಇತರ ಸಮಸ್ಯೆಗಳೇನು?

  • ಅಮನೊಟ್ಟು -ಗುತ್ತಬೈಲು-ಅಚ್ಚರಕಟ್ಟ ಮಾರ್ಗ ರಚನೆಗೆ ಸ್ಥಳೀಯರ ಬೇಡಿಕೆಯಿದೆ. ರಸ್ತೆಯಾದರೆ ಸುಮಾರು 8 ಕಿ.ಮೀ. ಸುತ್ತು ಬಳಸು ದಾರಿಯು ಕೇವಲ ಒಂದೂವರೆ ಕಿ.ಮೀ. ದೂರಕ್ಕೆ ಇಳಿಯಲಿದೆ.
  • ಇಡೀ ಪಂಚಾಯತ್‌ಗೆ ಒಂದೇ ಪಡಿತರ ಅಂಗಡಿ ಇರುವುದು ಮೂಡುಬಿದಿರೆ ಸರಹದ್ದಿನಲ್ಲಿ. ಗ್ರಾಮಾಂತರ ಮಂದಿ ಬಹಳ ತ್ರಾಸಪಡಬೇಕಾದ ಸ್ಥಿತಿ ಇದೆ. ಆಚ್ಚರಕಟ್ಟದಲ್ಲೂ ಒಂದು ಪಡಿತರ ಅಂಗಡಿಗೆ ವ್ಯವಸ್ಥೆ ಮಾಡುವುದು ಅಗತ್ಯ.
  • ಪಡುಮಾರ್ನಾಡು-ಬೆಳುವಾಯಿ ಪಂಚಾಯತ್‌ ಗಡಿ ಪ್ರದೇಶದಲ್ಲಿರುವ ಪೊಯ್ಯದ ಪಲ್ಕೆ ರಸ್ತೆ ತೀರ ಹದಗೆಟ್ಟು ಹೋಗಿದೆ; ತಡೆಗೋಡೆ ದುರ್ಬಲವಾಗಿದೆ.
  • ಪಡುಮಾರ್ನಾಡು ಅಮನೊಟ್ಟು ಮಹಾವೀರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ 8 ವರ್ಷಗಳಿಂದ ಅನುದಾನಿತ ಶಿಕ್ಷಕರ ಹುದ್ದೆಗಳೆಲ್ಲವೂ ತೆರವಾಗಿದ್ದು, ಯುವಕ ಮಂಡಲ ಮತ್ತು ಸ್ಥಳೀಯರ ಬೆಂಬಲದಿಂದ ಶಾಲೆ ಜೀವಂತವಾಗಿದೆ. ಶಿಕ್ಷಕರಿಲ್ಲದೆ ಮಕ್ಕಳ ಸಂಖ್ಯೆಯಲ್ಲೂ ಕೊರತೆ ಕಾಣಿಸುತ್ತಿದೆ. ಶಿಕ್ಷಕರ ಕೊರತೆ ನೀಗಿಸುವುದು ಅಗತ್ಯ.
  • ಮಾರ್ನಾಡ್‌ ಕ್ರಾಸ್‌- ಅಮನೊಟ್ಟು-ಆನೆಗುಡ್ಡೆ ರಸ್ತೆ ಸಮರ್ಪಕವಾಗಿ ರೂಪುಗೊಂಡರೆ, ಬಸ್‌ ಸಂಚಾರ ಸಾಧ್ಯ. ಇದರಿಂದ ಎರಡು ಕಿ.ಮೀ. ದೂರದ ನಡಿಗೆ ಮುಕ್ತಿ ಸಿಗಬಹುದು.
  • ವಸತಿ ರಹಿತರಿಗೆ ನೀಡಲು ಬೇಕಾದಷ್ಟು ಗೋಮಾಳ, ಕುಮ್ಕಿ ಜಾಗವಿದ್ದು, ಈ ಬಗ್ಗೆ ಪಂಚಾಯತ್‌ ಗಮನಹರಿಸಬಹುದಾಗಿದೆ.
  • ಇಲ್ಲಿನ ಹೆಚ್ಚಿನ ಮೊಬೈಲ್‌ ಸಂಪರ್ಕ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ದೂರಸಂಪರ್ಕ ಇಲಾಖೆ ಗಮನಹರಿಸಬೇಕಿದೆ.

 

-ಧನಂಜಯ ಮೂಡುಬಿದಿರೆ

 

Advertisement

Udayavani is now on Telegram. Click here to join our channel and stay updated with the latest news.

Next