Advertisement

ಭಾರೀ ಮಳೆಗೆ ತತ್ತರಿಸಿದ ಜನತೆ

01:47 PM Oct 12, 2017 | |

ನೆಲಮಂಗಲ: ತಾಲೂಕಿನಲ್ಲಿ ಮಂಗಳವಾರ ತಡ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಸಾಕಷ್ಟು ತೊಂದರೆ ಜೊತೆಗೆ ಅವಾಂತರ ಸೃಷಿಯಾಗಿದೆ. ಮಳೆಯಿಂದಾಗಿ ಪಟ್ಟಣದ ಸೇರಿದಂತೆ ಭಾರೀ ಮಳೆಯಾದ ಪರಿಣಾಮ ಕೆರೆ, ಕಟ್ಟೆಗಳು ತುಂಬಿ ಕೋಡಿ ನೀರು ಹರಿಯುತ್ತಿದೆ.

Advertisement

ಕಳೆದ ಹತ್ತು ವರ್ಷಗಳಿಂದಲೂ ಕಾಣದ ಮಹಾಮಳೆಯಿಂದ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಭಾರೀ ಅವಾಂತರ ಸೃಷ್ಟಿಸಿದೆ. ಮಳೆ ನೀರು ಹರಿಯಲು ರಾಜಕಾಲುವೆ ಗಳು ಬಲಾಡ್ಯರ ಪ್ರಭಾವಕ್ಕೆ ಪಾಲಾಗಿವೆ. ಕೆಲವೆಡೆಗಳಲ್ಲಿ ಮುಚ್ಚಿವೆ. ರಾಜಕಾಲುವೆ ಯಿದ್ದರೂ ಅದರ ಅಳತೆಯ ಪ್ರಮಾಣ ಕ್ಷೀಣಿಸಿ ಸಣ್ಣ ಪ್ರಮಾಣದ ಚರಂಡಿ ರೂಪ ಪಡೆದಿವೆ. ಮಳೆ ಎಲೆ ತೋಟದ ಜಮೀನು, ಮನೆಗಳಿಗೆ ನುಗ್ಗಿದ ನೀರು ನಂತರ ಪಟ್ಟಣದ ಹಲವು ಬಡಾವಣೆಗಳ ಮೂಲಕ ಹರಿವು ವೇಗಪಡೆದು ಭಿನ್ನಮಂಗಲ ಕೆರೆ ಸೇರಿದೆ. 

ಭಾರೀ ಅವಾಂತರ: ಪಟ್ಟಣದ ಕೆರೆಕೋಡಿ ಒಡೆದು ಹೊರನುಗ್ಗಿದ ನೀರು ಪಟ್ಟಣದ ಪ್ರಮುಖ ಬಡಾವಣೆಗಳತ್ತ ನುಗ್ಗುವ ಮೂಲಕ ಭಾರೀ ಅವಾಂತರವನ್ನೇ ಸೃಷ್ಟಿಸಿದೆ. ಯಾವುದೇ ಸಾವು ನೋವುಗಳಾಗಿಲ್ಲವಾದರೂ ಪುರಸಭಾ ವ್ಯಾಪ್ತಿಯ ಸುಭಾಷ್‌ ನಗರದ ವಾರ್ಡ್‌ 13 ಮತ್ತು 14 ರ ಎಂ.ಜಿ.ರಸ್ತೆ, ಗಜೇರಿಯಾ ಬಡಾವಣೆ, ಶ್ರೀಭೈರವೇಶ್ವರ ಬಡಾವಣೆ, ಶಾಸಕರ ಮನೆ ಸುತ್ತಮುತ್ತಲ ಪ್ರದೇಶದಲ್ಲಿನ ಮೋರಿ ಚರಂಡಿಗಳು ಕಿತ್ತು ಹರಿದು ಹೋಗಿವೆ.

ಮಳೆಯಿಂದ ಬಡಾವಣೆಗಳ ರಸ್ತೆಗಳು ಹಾಳಾಗಿವೆ. ಮನೆಗಳಿಗೂ ನೀರು ನುಗ್ಗಿದೆ. ಹಠಾತ್ತಾಗಿ ನುಗ್ಗಿದ ನೀರು ಬೈರವೇಶ್ವರ ನಗರ, ಗಜೇರಿಯಾ ಬಡಾವಣೆ, ವಾಜರಹಳ್ಳಿರಸ್ತೆ ಹಾಗೂ ಕೆರೆ ಏರಿ ಎಲೆ ತೋಟದಲ್ಲಿನ ಭಾಗದ ಜನತೆಯಲ್ಲಿ ಆತಂಕ ಸೃಷ್ಟಿಸಿದೆ.

ನೀರನ್ನು ಹೊರಹಾಕುವುದರಲ್ಲಿ ಹೈರಾಣು: ಮನೆ ಮುಂಭಾಗದಲ್ಲಿ ನಿಲ್ಲಿಸಿದ್ದ ಮಿನಿ ಬಸ್ಸು, ಲಾರಿ, ಕಾರು, ತ್ರಿಚಕ್ರ ಹಾಗೂ ದ್ವಿಚಕ್ರ ವಾಹನಗಳು ನೀರಿನಲ್ಲಿ ಮುಳುಗಿ ಹೋಗಿದ್ದವು. ಇತ್ತ ನಿದ್ದೆಗೆ ಜಾರಿದ್ದವರು ನಿದ್ರಾವಸ್ಥೆಯಿಂದ ಎಚ್ಚರಗೊಂಡಿದ್ದವರು ತಮ್ಮ ಮನೆಗಳಿಗೆ ನುಗ್ಗಿ ಬಂದಿದ್ದ ಕಲುಷಿತ ನೀರನ್ನು ಹೊರಹಾಕುವುದರಲ್ಲಿ ಹೈರಾಣಾಗಿದ್ದರು. ಚೋಳರ ಕೊನೆ ಸಂತತಿ ರಾಜ ಚೋಳದೊರೆ ನಿರ್ಮಿಸಿರುವ ಮುಕ್ತಿನಾಥೇ ಶ್ವರ ದೇಗುಲ ಮತ್ತು ಆವರಣವನ್ನು ಸೇರಿ ಸುಮಾರು 5 ರಿಂದ 6 ಅಡಿಗಳಷ್ಟು ನೀರು ತುಂಬಿದೆ. ಎಂದಿನಂತೆ ಈ ದೇಗುಲಕ್ಕೆ ಪೂಜೆಗಾಗಿ ಬಂದ ಭಕ್ತರು ಹಿಂತಿರುಗಬೇಕಾಯಿತು. ಅರ್ಚಕರೂ ನಿಂತಿರುವ ನೀರಿನ ಪ್ರಮಾಣ ಕಂಡು ದೇಗುಲ ಪ್ರವೇಶಿಸಲಾಗದೇ ಹಿಂತಿರುಗಿದರು.

Advertisement

ಜೆಸಿಬಿ ಯಂತ್ರಗಳ ಕಲರವ: ಪಟ್ಟಣದಲ್ಲಿ ಸಂಭವಿಸಿದ ಮಳೆ ಅವಾಂತರದಿಂದ ಬಡಾವಣೆ, ದೇಗುಲ ಮತ್ತು ಶಾಲಾ-ಕಾಲೇಜಿನ ಆವರಣಕ್ಕೆ ನೀರು ನುಗ್ಗಿತ್ತು. ಕಿರಿದಾದ ನೀರು ಹರಿವ ಚರಂಡಿ ಅಥವಾ ಮೋರಿ, ರಾಜಕಾಲುವೆಯನ್ನು ಅಗೆದು ಅಗಲಗೊಳಿಸಿ ನೀರು ಹೊರಹರಿಯಲು ಅನುವು ಮಾಡಿಕೊಡಲು ಜೆಸಿಬಿ ಯಂತ್ರಗಳನ್ನು ಕರೆಯಿಸಲಾಗಿತ್ತು.

ಸುಮಾರು 56 ಎಕರೆ ಪ್ರದೇಶದ ವಿಸ್ತೀರ್ಣವಿರುವ ಕೆರೆ ಮತ್ತು ಕೋಡಿಯನ್ನು ದುರಸ್ತಿಗೊಳಿಸಿಲ್ಲ. ಈ ಕೆರೆ ಒಡೆದಿರುವುದು
ಇದೇನು ಮೊದಲಲ್ಲ. ಸಣ್ಣನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆಸಕ್ತಿ ವಹಿಸಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕ ಭೇಟಿ: ನೆಲಮಂಗಲ ಪಟ್ಟಣದ ದೊಡ್ಡಕೆರೆ ಏರಿ ಒಡೆತದ ಸುದ್ದಿ ತಿಳಿದ ಶಾಸಕ ಡಾ.ಕೆ.ಶ್ರೀನಿವಾಸ್‌ ಮೂರ್ತಿ
ಮುಂಜಾನೆಯಿಂದಲೇ ಪರಿಶೀಲನೆ ನಡೆಸುವ ಮೂಲಕ ತ್ವರಿತ ಕ್ರಮಕೈಗೊಂಡಿದ್ದರಲ್ಲದೇ ಸಾರ್ವಜನಿಕರು ನಡೆಸಿದ ಪ್ರತಿಭಟನೆಯಲ್ಲೂ ಪಾಲ್ಗೊಂಡಿದ್ದರು.

ಹಾಲು, ಬ್ರೇಡ್‌, ವಿತರಣೆ: ಉಪಾಹಾರ ತಯಾರಿಸಲು ಅಸಾಧ್ಯ ಎಂಬುದನ್ನು ಅರಿತ ವಾಜರಹಳ್ಳಿ ಗ್ರಾಪಂ ಅಧ್ಯಕ್ಷೆ ಮಂಜಮ್ಮ ಜನರಿಗೆ ಹಾಲು, ಬ್ರೇಡ್‌, ಟೀ, ಕಾಫಿ, ತಿಂಡಿ ವಿತರಿಸಿ ಮಾನವೀಯತೆ ಮೆರೆದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಾಲಯ್ಯ, ತಹಶೀಲ್ದಾರ್‌ ರಮೇಶ್‌ ಸೇರಿದಂತೆ ಹಲವಾರು ಅಧಿಕಾರಿಗಳೂ ಸ್ಥಳ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪಾಲಯ್ಯ, ರಾಜಕಾಲುವೆ ಗಳು ಒತ್ತುವರಿಯಾಗಿ ರುವುದರಿಂದಲೇ ಈ ಅವಾಂತರ ಸೃಷ್ಟಿಯಾಗಿದೆ. ಇದರ ವರದಿ ಪಡೆದು ಸೂಕ್ತ ಕ್ರಮವಹಿ ಸುವುದಲ್ಲದೇ ಹಾನಿಯಾಗಿರು ವುದಕ್ಕೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು.

ಜನಾಕ್ರೋಶ: ಕೆರೆ ಸಂರಕ್ಷಣೆಯಲ್ಲಿ ನಿರಾಸಕ್ತಿ ಹೊಂದಿರುವ ಅಧಿಕಾರಿಗಳ ಕ್ರಮವನ್ನು ಜನರು ಆಕ್ಷೇಪಿಸಿದರು. ತ್ವರಿತ ಕ್ರಮಕೈ ಗೊಂಡು ಮನೆಗಳಿಗೆ ನೀರು ನುಗ್ಗಿರು ವುದರಿಂದ ಆಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ತಾಲೂಕಿನ ಸೊಂಪುರ ಹೋಬಳಿಯಲ್ಲಿ ಮಂಗಳವಾರ ರಾತ್ರಿ ಬಿದ್ದಂತಹ ಭಾರೀ ಮಳೆಗೆ ಹೋಬಳಿಯ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಹೋಬಳಿಯ ಬರಗೇನಹಳ್ಳಿ ಹಾಗೂ ಹೊನ್ನೇನಹಳ್ಳಿಯಲ್ಲಿ ಮನೆಗಳು ಕುಸಿತಗೊಂಡಿವೆ.

ಮನೆ ಕುಸಿತ: ಸೋಂಪುರ ಹೋಬಳಿಯ ಬರಗೇನಹಳ್ಳಿ ಗ್ರಾಮದ ಪುಟ್ಟಗಂಗಯ್ಯ, ತಿಮ್ಮೆಗೌಡ ಹಾಗೂ ಚಿಕ್ಕಹೊನ್ನಪ್ಪಸೇರಿದಂತೆ ಮೂರು ಮನೆಗಳು, ಹೊನ್ನೇನಹಳ್ಳಿ ರೇವಮ್ಮನವರ ಮನೆ ಕುಸಿತಗೊಂಡಿದ್ದು ಯಾವುದೇ ರೀತಿ ಅನಾಹುತಗಳು ಸಂಭವಿಸಿಲ್ಲ. ಕುಸಿದ ಮನೆ ಶಬ್ಧ ಕೇಳಿಸಿಕೊಂಡ ಮನೆಯವರು ತಕ್ಷಣ ಹೊರಬಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next