Advertisement

ಜಾತಿವಾದಕ್ಕಿಲ್ಲ ಜನರ ಮತ

11:47 PM May 15, 2019 | Team Udayavani |

“ಮತದಾರರನ್ನು ಜಾತಿ-ಧರ್ಮದ ಹೆಸರಲ್ಲಿ ಪ್ರಚೋದಿಸಲು ಈಗ ಸಾಧ್ಯವಿಲ್ಲ’ ಎನ್ನುತ್ತಾರೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌. ತಮ್ಮ ತವರು ಕ್ಷೇತ್ರ ಗೋರಖ್‌ಪುರದಲ್ಲಿ ಪ್ರಚಾರದಲ್ಲಿ ಭಾಗವಹಿಸಿದ್ದ ಅವರು “ಈಗ ಜನರು ಜಾತಿ-ಧರ್ಮಕ್ಕಲ್ಲ, ವಿಕಾಸಕ್ಕೆ ಮತ ನೀಡುತ್ತಾರೆ’ ಎನ್ನುತ್ತಾರೆ. ಯೋಗಿ ಆದಿತ್ಯನಾಥ್‌ ಅವರು ಅಮರ್‌ ಉಜಾಲಾ ಪತ್ರಿಕೆಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ…

Advertisement

∙ ಎನ್‌ಡಿಎಗೆ ಈ ಬಾರಿ ಎಷ್ಟು ಸೀಟುಗಳು ಸಿಗಬಹುದು?
ಎನ್‌ಡಿಎಗೆ 400 ಸ್ಥಾನಗಳು ಸಿಗಲಿವೆ. ಬಿಜೆಪಿಯೊಂದೇ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ. ಉತ್ತರಪ್ರದೇಶದ 80 ಸ್ಥಾನಗಳಲ್ಲಿ 74ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದ್ದೇವೆ. ಈ ಬಾರಿ ಬೆಜಿಪಿಯು ಅಮೇಠಿ(ರಾಹುಲ್‌ ಕ್ಷೇತ್ರ), ಜಂಗಢ(ಅಖೀಲೇಶ್‌ ಯಾದವ್‌), ಕನೌ°ಜ್‌(ಡಿಂಪಲ್‌ ಯಾದವ್‌) ಕ್ಷೇತ್ರದಲ್ಲೂ ಗೆಲ್ಲಲಿದೆ.

∙ 6ನೇ ಹಂತದಲ್ಲಿ ಮತದಾನ ಪ್ರಮಾಣವು ಇಳಿಕೆಯಾಗಿದೆ. ಇದರಿಂದ ಯಾರಿಗೆ ಲುಕ್ಸಾನು ಆಗಲಿದೆ?
ಮತದಾನ ಪ್ರಮಾಣ ಅಜಮಾಸು 1 ಪ್ರತಿಶತ ಅಧಿಕವಾಗಿದೆ. ಸತ್ಯವೇನೆಂದರೆ, ಮತದಾರ ಪಟ್ಟಿಯಲ್ಲಿ ಈಗಲೂ ಗೊಂದಲಗಳಿವೆ. ಮತದಾರರ ಪಟ್ಟಿಯನ್ನು ನವೀಕರಿಸಿ ಅದನ್ನು ಆಧಾರ್‌ ಕಾರ್ಡ್‌ನೊಂದಿಗೆ ಜೋಡಿಸುವ ಅಗತ್ಯವಿದೆ. ಉತ್ತರ ಪ್ರದೇಶದಲ್ಲೂ ಈ ನಿಟ್ಟಿನಲ್ಲಿ ನಾವೂ ಉಪಕ್ರಮಗಳನ್ನು ಕೈಗೊಂಡಿದ್ದೆವು, ಆದರೆ ಚುನಾವಣಾ ಆಯೋಗ ಆಸಕ್ತಿ ತೋರಿಸಲಿಲ್ಲ. ಇನ್ನು ಪಾರದರ್ಶಕತೆಯನ್ನು ಬಯಸದ ಪಕ್ಷಗಳು, ಸಹಜವಾಗಿಯೇ ಆಧಾರ್‌ ಕಾರ್ಡ್‌ ಅನ್ನು ವಿರೋಧಿಸುತ್ತವೆ-ಇವಿಎಂ ಅನ್ನು ವಿರೋಧಿಸಿದಂತೆ.

∙ ಭಾರತೀಯ ಜನತಾ ಪಾರ್ಟಿಯು ಈ ಬಾರಿ ತ್ರಿವಳಿ ತಲಾಖ್‌ ವಿಷಯದ ಬಗ್ಗೆ ಮಾತನಾಡಿತು. ಇದರಿಂದ ಪಕ್ಷಕ್ಕೆ ಉಪಯೋಗ ಆಗಲಿದೆಯೇ?
ಬೆಳಗ್ಗೆಯಷ್ಟೇ ಈ ಊರಿನ(ಗೋರಖಪುರ) ಪ್ರತಿಷ್ಠಿತ ಮುಸ್ಲಿಂ ವ್ಯಕ್ತಿಯೊಬ್ಬರು ನನ್ನನ್ನು ಭೇಟಿಯಾಗಲು ಬಂದಿದ್ದರು. ನಿಮಗಾಗಿ ಕಾರ್ಯಕ್ರಮವೊಂದನ್ನು ಆಯೋಜಿಸಲು ಬಯಸಿದ್ದೇವೆ, ನೀವು ಬರಬೇಕು ಎಂದು ಆಹ್ವಾನಿಸಿದರು. ಏನು ಕಾರಣ ಎಂದು ನಾನು ಕೇಳಿದೆ. ತಮ್ಮ ಮೊಹಲ್ಲಾದ 150 ಕುಟುಂಬಗಳು ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಫ‌ಲಾನುಭವಿಗಳಾಗಿದ್ದಾರೆ(ವಸತಿ ಪಡೆದಿದ್ದಾರೆ) ಎಂದವರು ಹೇಳಿದರು. ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿಗೆ ಸರ್ಕಾರವೊಂದು ಗುಡಿಸಲುಗಳಲ್ಲಿರುವ ಮುಸಲ್ಮಾನರಿಗೆ ಶಾಶ್ವತ ಮನೆ ಕೊಡಲು ಯೋಚಿಸಿತು. ಅದೆಷ್ಟು ದಿನ ಮುಸಲ್ಮಾನರು ಕೇವಲ ವೋಟ್‌ ಬ್ಯಾಂಕ್‌ ಆಗಿ ಇರಬೇಕು ನೀವೇ ಹೇಳಿ? ಮುಸಲ್ಮಾನರೂ ಈ ವಿಚಾರದಲ್ಲಿ ಯೋಚಿಸಬೇಕು. ಇನ್ನು, ಅರ್ಧದಷ್ಟು ಮಹಿಳೆಯರಿಗೆ ನ್ಯಾಯ ಒದಗಿಸದೆಯೇ ದೇಶದಲ್ಲಿ ಮಹಿಳಾ ಸಶಕ್ತೀಕರಣ ಸಾಧ್ಯವಾಗುವುದಿಲ್ಲ. ತ್ರಿವಳಿ ತಲಾಖ್‌ ಮತ್ತು ಹಲಾಲಾದಂಥ ಪದ್ಧತಿಗಳು ನಿಲ್ಲಲೇಬೇಕು. ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟವರೆಂದರೆ ಪ್ರಧಾನಮಂತ್ರಿ ಮೋದಿ ಮಾತ್ರ. ಈ ಕಾರಣಕ್ಕಾಗಿಯೇ ಮುಸ್ಲಿಂ ಮಹಿಳೆಯರೂ ಮೋದಿ ಪರ ಇದ್ದಾರೆ.

∙ ಈಗ ಪೂರ್ವ ಉತ್ತರಪ್ರದೇಶದಲ್ಲಿ ಮಾತ್ರ ಮತದಾನ ಬಾಕಿ ಇದೆ. ಜಾತಿ ರಾಜಕೀಯದಿಂದಾಗಿ ಬಿಜೆಪಿಗೆ ಇಲ್ಲೆಲ್ಲ ಅಪಾಯ ಇಲ್ಲವೇನು?
ಸಾಮಾನ್ಯ ಜನರು ಪ್ರಧಾನಮಂತ್ರಿಗಳ ನಾಮ್‌(ಹೆಸರು) ಮತ್ತು ಕಾಮ್‌(ಕೆಲಸ) ನೋಡಿ ಮತದಾನ ಮಾಡುತ್ತಿದ್ದಾರೆ. ಪಾರ್ಟಿ ಮತ್ತು ಅಭ್ಯರ್ಥಿಗಳು ಗೌಣ. ವಸತಿ, ಶೌಚಾಲಯ, ಕಿಸಾನ್‌ ಸಮ್ಮಾನ ನಿಧಿ ಮತ್ತು ಆಯುಷ್ಮಾನ್‌ನಂಥ ಯೋಜನೆಗಳ ಲಾಭವನ್ನು ತಲುಪಿಸುವಾಗ ಮೋದೀಜಿಯವರು ಜಾತಿ, ಪಂಥ, ಕ್ಷೇತ್ರ ಅಥವಾ ಭಾಷಾ ಭೇದವನ್ನು ಮಾಡಲಿಲ್ಲ. ಈಗ ಜನರೂ ಕೂಡ ಈ ಎಲ್ಲಾ ಸಂಗತಿಗಳನ್ನು ಮೀರಿ ನಿಂತು ಮೋದಿಯವರಿಗೆ ಓಟ್‌ ನೀಡುತ್ತಿದ್ದಾರೆ. ವಿಕಾಸವು ಜಾತಿವಾದದ ಗೋಡೆಗಳನ್ನು ನಾಶ ಮಾಡಿಬಿಟ್ಟಿದೆ.

Advertisement

∙ ಗೋರಖ್‌ಪುರದ ಉಪಚುನಾವಣೆಯಲ್ಲಿ ಬಿಜೆಪಿ ಸೋತ್ತಿತ್ತು. ಆಗ ಮುರಿದುಬಿದ್ದ ಬಾಗಿಲಿನ ರಿಪೇರಿ ಮಾಡಿದ್ದೀರೇನು?
ಉಪಚುನಾವಣೆಯನ್ನು ನೋಡಿ ಮೌಲ್ಯಮಾಪನ ಮಾಡಬೇಡಿ. ಉಪಚುನಾವಣೆಗಳು, ಸಾರ್ವತ್ರಿಕ ಚುನಾವಣೆಗಳಿಗಿಂತ ಭಿನ್ನವಾಗಿ ಇರುತ್ತವೆ. ಈ ರೀತಿ ಹಿಂದೆಲ್ಲ ಅನೇಕ ಬಾರಿ ಆಗಿದೆ. 1970ರ ಉಪಚುನಾವಣೆಯಲ್ಲಿ ಖುದ್ದು ಉತ್ತರಪ್ರದೇಶದ ಮುಖ್ಯಮಂತ್ರಿಯೇ ಸೋತಿದ್ದರು. 1991ರ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಸೋತಿತ್ತು. ಸ್ಥಳೀಯ ಅಂಶಗಳದ್ದೇ ಮೇಲುಗೈ ಆಗುವುದರಿಂದ ಉಪಚುನಾವಣೆಗಳು ನಗರ ಅಥವಾ ಪಂಚಾಯತ್‌ ಚುನಾವಣೆಗಳಂತೆ ಬದಲಾಗುತ್ತವೆ. ಲೋಕಸಭೆ ಅಥವಾ ವಿಧಾನಸಭಾ ಚುನಾವಣೆಗಳಲ್ಲಿ ಜನತೆಯ ದೃಷ್ಟಿ ರಾಷ್ಟ್ರ ಮತ್ತು ರಾಜ್ಯದಲ್ಲಿ ರಚನೆಯಾಗುವ ಸರ್ಕಾರದ ಮೇಲೆ ಇರುತ್ತದೆ. ಹೀಗಾಗಿ ಅವುಗಳ ಫ‌ಲಿತಾಂಶವೂ ಭಿನ್ನವಾಗಿ ಇರುತ್ತದೆ.

– ಯೋಗಿ ಆದಿತ್ಯನಾಥ್‌, ಉ.ಪ್ರ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next