Advertisement

ಫಲ-ಪುಷ್ಪ ಪ್ರದರ್ಶನದಲ್ಲಿಲ್ಲ ಜನದರ್ಶನ!

04:19 PM Mar 24, 2018 | |

ಚಿತ್ರದುರ್ಗ: ತೋಟಗಾರಿಕೆ ಇಲಾಖೆ ಶ್ರಮವಹಿಸಿ ಕೆಲಸ ಮಾಡದೆ ಬೇರೆ ಕಡೆಗಳಿಂದ ಹೂ, ಸ್ತಬ್ದ ಚಿತ್ರ ತರಿಸಿ ಜನಾಕರ್ಷಣೆಗೆ ಸರ್ಕಸ್‌ ಮಾಡಿದ್ದರೂ ಜನತೆಯಿಂದ ನೀರಸ ಪ್ರತಿಕ್ರಿಯೆ ಕಂಡು ಬಂದಿತು. ಪಿಯು ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮಯದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸುವ ಮೂಲಕ ಫಲಪುಷ್ಪಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ.

Advertisement

ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಪಂ ಅಧ್ಯಕ್ಷರು ಸೇರಿದಂತೆ ಯಾವೊಬ್ಬ ಜನಪ್ರತಿನಿಧಿಗಳು ಉದ್ಘಾಟನೆಯತ್ತ  ಸುಳಿಯದಿದ್ದರಿಂದ ಫಲಪುಷ್ಪ ಪ್ರದರ್ಶನ ಉದ್ಘಾಟನೆ ಭಾಗ್ಯವನ್ನೇ ಕಾಣಲಿಲ್ಲ. ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ, ಜಿಪಂ ಸಿಇಒ ಪಿ.ಎನ್‌.ರವೀಂದ್ರ ಸೇರಿದಂತೆ ಇಲಾಖೆ ಅಕಾರಿಗಳು ಮಾತ್ರ ಪಾಲ್ಗೊಂಡಿದ್ದರಿಂದ ಕಾರ್ಯಕ್ರಮವು ಉದ್ಘಾಟನೆಯಾಗಲಿಲ್ಲ.

ಜೋಡೆತ್ತುಗಳ ಬಂಡಿ: ಡಾ| ರಾಜ್‌ಕುಮಾರ್‌ ಜೋಡೆತ್ತುಗಳ ಬಂಡಿ ಹೊಡೆಯುತ್ತಿರುವುದು ಪ್ರಮುಖ ಆಕರ್ಷಣೆ. ಎತ್ತುಗಳು ಹಾಗೂ ಗಾಡಿಯು ವಿವಿಧ ಹೂ ಗಳಿಂದ ಅಲಂಕೃತಗೊಳಿಸಿದ್ದು, ರೈತರ ಹಿರಿಮೆ ತಿಳಿಸುವ ಚಿತ್ರಣ ರೂಪಗೊಂಡಿದೆ. ವಿವಿಧ ರೀತಿಯ ಹಣ್ಣು ಮತ್ತು ತರಕಾರಿ ಬಳಸಿ ಕನ್ನಡ ಬಂಡಿ ಅಲಂಕರಿಸಲಾಗಿದೆ.

ರೇಸಿಂಗ್‌ ಕಾರ್ಸ್‌: ರೈತರು ಬೆಳೆದಂತಹ ವಿವಿಧ ಪುಷ್ಪಗಳಿಂದ ಅಲಂಕೃತಗೊಂಡ ರೇಸಿಂಗ್‌ ಕಾರ್, ಮಾವು ಮತ್ತು ಕಿತ್ತಲೆ ಹಣ್ಣಿನ ಫೋಟೋ ಫ್ರೇಮ್‌ ಗಳು, ಹಣ್ಣು ಮತ್ತು ತರಕಾರಿಗಳಿಂದ ಜಿಂಕೆ ಮತ್ತು ಹುಲಿ ಹಾಗೂ ಮುಖ್ಯ ಆರ್ಕಷಣೆಯಾಗಿ ಊಟಿ ಪುಷ್ಪಗಳಿಂದ ಇಕ್ಕೆಬಾನ ಜೋಡಣೆ ಮಾಡಲಾಗಿದೆ. 

ಅಣಬೆ: ಆಹಾರ ಭದ್ರತೆ ಬಗ್ಗೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ಅಣಬೆ ಒಂದು ಪೌಷ್ಟಿಕ ಸಸ್ಯ ಆಹಾರವಾಗಿದೆ. ಸಾರ್ವಜನಿಕರಿಗೆ ಇದರ ಮಹತ್ವ ತಿಳಿಸಲು ಅಣಬೆ ಬೆಳೆಯ ಬೆಳೆಯುವ ವಿಧಾನವನ್ನು ಸ್ತಬ್ದಚಿತ್ರಗಳ ಮುಖಾಂತರ ಅನಾವರಣಗೊಳಿಸಲಾಗಿದೆ.

Advertisement

ಪುಷ್ಪಗಳ ಕಾರುಬಾರು: ವಿವಿಧ ಪುಷ್ಪ ಜೋಡಣೆಗಳಿಗೆ ಹಲವು ಬಗೆಯ ವಿಶೇಷ ಹೂಗಳನ್ನು ಬಳಸುತ್ತಿರುವುದರ ಜೊತೆಗೆ ಕುಂಡದಲ್ಲಿ ಬೆಳೆದ ಚಿತ್ತಾಕರ್ಷಕ ವರ್ಣಗಳಿಂದ ಕೂಡಿದ 50ಕ್ಕೂ ಹೆಚ್ಚು ಬಗೆಯ ವಿವಿಧ ಜಾತಿಯ ಆರ್ಕಿಡ್ಸ್‌, ಕಾರ್ನೆಶನ್‌, ಕಾಕ್ಸ್‌ ಕೂಂಬ್‌, ಸೆಲೋಶಿಯಾ, ಪ್ಲಾಕ್ಸ್‌, ಗಾಕ್ಸೀನಿಯ, ಕಲಂಚಾ, ಲಿಲ್ಲಿಸ್‌, ಇಂಪೇಷನ್ಸ್‌(ಮಿಕ್ಸ್‌ಡ್‌), ಡೇಲಿಯಾ(ಡ್ವಾರ್ಫ್‌), ಸಾಲ್ವಿಯಾ(ಕೆಂಪು, ನೀಲಿ ಕೇಸರಿ, ಬಿಳಿ) ಚೆಂಡು ಹೂ, ಚಿಂತಾಮಣಿ ಚೆಂಡು ಹೂ ಜಿನಿಯಾ, ಪೆಟೂನಿಯಾ, ಕಾಸ್‌ ಮಾಸ್‌, ಬಾಲ್ಸಂ, ಜಿರೇನಿಯಂ, ಹಾಲಿಹಾಕ್‌, ಆಂಟಿರಿನಮ್‌, ಡಯಾಂತಸ್‌, ಕ್ಯಾಲೊಂಡೋಲಾ, ಸೇವಂತಿಗೆ, ಪೆಂಟಾಸ್‌, ಫ್ಯಾನ್ಸಿ, ಇಪೋರ್ಬಿಯಮಿಲ್ಲಿ ಫ್ಯಾಂಸಿಟಿಯಾ ಇತ್ಯಾದಿ ಸುಮಾರು ಹತ್ತು ಸಾವಿರ ವಿವಿಧ ಪುಷ್ಪ ಸಸಿಗಳು, ನೂರಕ್ಕೂ ಹೆಚ್ಚು ಬಗೆಯ ತಳಿಗಳು, ಒಂದು ಲಕ್ಷಕ್ಕೂ ಹೆಚ್ಚು ಪುಷ್ಪ ಸಸಿಗಳನ್ನು
ಪ್ರದರ್ಶಿಸುವುದರೊಂದಿಗೆ ಪುಷ್ಪ ರಸಿಕರಿಗೆ ಪ್ರದರ್ಶನ ಮುದ ನೀಡುತ್ತಿದೆ.

ಪ್ರದರ್ಶನ: ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳ ಫಲಾನುಭವಿಗಳು ಹಾಗೂ ಇತರೆ ರೈತರು ಬೆಳೆದ ಹೂ, ತರಕಾರಿ, ಹಣ್ಣು ಹಾಗೂ ಇತರೆ ವಿಶೇಷವಾದ ತೋಟಗಾರಿಕೆ ಉತ್ಪನ್ನಗಳನ್ನು ಫಲ-ಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿದೆ.

ತಾರಸಿ ತೋಟ: ಹಣ್ಣು ಮತ್ತು ತರಕಾರಿಗಳು ಖನಿಜಾಂಶ, ಜೀವಸತ್ವಗಳು, ನಾರಿನಾಂಶ ಮತ್ತು ಸೂಕ್ಷ್ಮ ಪೋಷಕಾಂಶ ಹೊಂದಿದ್ದು, ಜೀವರಕ್ಷಕಗಳಾಗಿ ಕೆಲಸ ಮಾಡುತ್ತಿವೆ.ಯತೇಚ ಬಳಸಿದಲ್ಲಿ ವಿವಿಧ ಮಾರಕ ರೋಗ ಬರದಂತೆ ತಡೆಗಟ್ಟಬಹುದಾಗಿದೆ ಎಂದು ಡಬ್ಲ್ಯುಎಚ್‌ಒ ಮತ್ತು ಎಫ್‌ಎಒ ಸಂಸ್ಥೆಗಳಿಂದ ದೃಢಪಡಿಸಿವೆ. ಆಧುನಿಕ ಜೀವನ ಶೈಲಿಯಿಂದ ಹಣ್ಣು ಮತ್ತು ತರಕಾರಿಗಳ ಸೇವನೆ ಕಡಿಮೆಯಾಗುತ್ತಿದ್ದು, ಸಮತೋಲನ ಆಹಾರ ಕೊರತೆಯಿಂದ ಬಹಳಷ್ಟು ಜನ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಕೈತೋಟ ಮತ್ತು ತಾರಸಿ ತೋಟಗಳನ್ನು ಮಿತವಾಗಿ ನೀರನ್ನು ಬಳಸಿ ಅಭಿವೃದ್ಧಿಗೊಳಿಸಲು ಉತ್ತೇಜನ ನೀಡುವ ಸಲುವಾಗಿ ಕೈತೋಟಗಳ ಮತ್ತು ತಾರಸಿ ತೋಟಗಳ ಪ್ರಾತ್ಯಕ್ಷತೆ ಹಮ್ಮಿಕೊಳ್ಳಲಾಗಿದೆ. 

ಕೆತ್ತನೆ: ದೇಶಕ್ಕಾಗಿ ಪ್ರಾಣ ಮುಡಿಪಾಗಿಟ್ಟ ವೀರ ಸೈನಿಕರು, ಕನ್ನಡ ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳನ್ನು ಹಣ್ಣು ಮತ್ತು ತರಕಾರಿ ಬಳಸಿ ಸುಂದರವಾಗಿ ಪ್ರತಿಬಿಂಬಿಸಲಾಗಿದೆ.
 
ಲ್ಯಾಂಡ್‌ ಸ್ಕೇಪಿಂಗ್‌: ವಿವಿಧ ಜಾತಿ ಹೂವುಗಳಿಂದ ಸೂರ್ಯನಿಂದ ಹೊರಹೊಮ್ಮುವ ಕಿರಣಗಳನ್ನು ಬಿಂಬಿಸುವ ಉದ್ಯಾನವನ ತಯಾರಿಸಲಾಗಿದೆ. ಈ ಮೂಲಕ ವಿವಿಧ ಜಾತಿಯ ಹೂವುಗಳ ಪರಿಚಯವಾಗುತ್ತಿದೆ.
 
ಹೊಂಡ: ಗುಡ್ಡದ ಮೇಲಿನಿಂದ ನೀರು ಹರಿದು ಬಂದು ಹೊಂಡದಲ್ಲಿ ನಿಲ್ಲುವ ಪ್ರಕೃತಿ ಬಿಂಬಿಸುವ ಪ್ರದರ್ಶನವಿದೆ. ಹೊಂಡದಲ್ಲಿ ಜೀವಂತ ಬಾತುಕೋಳಿ, ಗುಡ್ಡದಲ್ಲಿ ಜೀವಂತ ಮೊಲ ಬಿಟ್ಟು ಮಕ್ಕಳಿಗೆ ಸಂತೋಷ ನೀಡುವುದರ ಜೊತೆಗೆ ಜಲಪಾತದ ಮನಮೋಹಕ ದೃಶ್ಯ ಮನಸೂರೆಗೊಳ್ಳುತ್ತಿದೆ.

ಕಾರಂಜಿ: ಚಿಕ್ಕ ಮತ್ತು ಚೊಕ್ಕದಾದ ನೀರಿನ ಕಾರಂಜಿ ಈ ಬಾರಿಯ ಫಲ-ಪುಷ್ಪ ಪ್ರದರ್ಶನದಲ್ಲಿ ಅನಾವರಣಗೊಂಡಿದೆ. 

ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next