Advertisement

ಆಸ್ತಿ ಮರಳಿಸಲು ಬಾಕಿ ಕೆಲಸ ಅಡ್ಡಿ

12:33 PM Aug 09, 2020 | Suhan S |

ಹುಬ್ಬಳ್ಳಿ: ತ್ವರಿತ ಸಾರಿಗೆ ವ್ಯವಸ್ಥೆ (ಬಿಆರ್‌ಟಿಎಸ್‌) ಕಲ್ಪಿಸಲು ವಾಯವ್ಯ ಸಾರಿಗೆ ಸಂಸ್ಥೆ ಹಸ್ತಾಂತರಿಸಿದ್ದ ಆಸ್ತಿ ಮರಳಿಸಲು ಬಾಕಿ ಉಳಿಸಿಕೊಂಡಿರುವ ಕಾಮಗಾರಿಗಳೇ ಅಡ್ಡಿಯಾಗಿದ್ದು, ಆಸ್ತಿ ಮರಳಿಸಲು ಮಾಡಿಕೊಂಡಿದ್ದ ಒಪ್ಪಂದ ಮುಗಿದು ಎರಡು ವರ್ಷ ಪೂರ್ಣಗೊಳ್ಳುತ್ತಿದ್ದರೂ ವಾಯವ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ದಿವ್ಯ ಮೌನಕ್ಕೆ ಶರಣಾಗಿದ್ದಾರೆ.

Advertisement

ಮಹಾನಗರ ಜನತೆಗೆ ತ್ವರಿತ ಸಾರಿಗೆ ಸೇವೆ ನೀಡಲು ವಾಯವ್ಯ ಸಾರಿಗೆ ಸಂಸ್ಥೆ ಸುಮಾರು 34 ಎಕರೆ ಆಸ್ತಿಯನ್ನು ಬಿಆರ್‌ಟಿಎಸ್‌ ಕಂಪನಿಗೆ ಹಸ್ತಾಂತರಿಸಿ 2013 ಅಕ್ಟೋಬರ್‌ ತಿಂಗಳಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಎಲ್ಲಾ ಕಾಮಗಾರಿಗಳು ಪೂರ್ಣಗೊಂಡ ನಂತರ 2018 ಅಕ್ಟೋಬರ್‌ ತಿಂಗಳಲ್ಲಿ ಹಸ್ತಾಂತರಿಸಿದ ಆಸ್ತಿಯನ್ನು ಮರಳಿಸಬೇಕು ಎನ್ನುವುದು ಒಪ್ಪಂದವಾಗಿತ್ತು. ಒಪ್ಪಂದ ಪೂರ್ಣಗೊಂಡು ಎರಡು ವರ್ಷ ಕಳೆದಿದೆ. ಇದೀಗ ಬಹುತೇಕ ಕಟ್ಟಡಗಳನ್ನು ವಾಯವ್ಯ ಸಾರಿಗೆ ಸಂಸ್ಥೆ ಬಳಕೆ ಮಾಡಿಕೊಳ್ಳುತ್ತಿದೆ. ಆದರೆ ನಿರ್ವಹಣೆ ವಿಚಾರಕ್ಕೆ ಬಂದರೆ ಯಾರು ಮಾಡಬೇಕು ಎಂಬುದು ಪ್ರಶ್ನೆಯಾಗಿದೆ. ವಿಪರ್ಯಾಸವೆಂದರೆ ಒಪ್ಪಂದ ಪ್ರಕಾರ ಬಿಆರ್‌ ಟಿಎಸ್‌ ಸಂಸ್ಥೆ ಅಭಿವೃದ್ಧಿಗಾಗಿ ಪಡೆದ ಆಸ್ತಿ ಮರಳಿಸುವ ದಾಖಲೀಕರಣ ಆಗಬೇಕಿತ್ತು. ಆದರೆ ಇನ್ನೊಂದಿಷ್ಟು ಕಾಮಗಾರಿಗಳು ಬಾಕಿ ಉಳಿದಿರುವ ಕಾರಣ ಈ ಪ್ರಕ್ರಿಯೆ ನಡೆಯುತ್ತಿಲ್ಲ ಎನ್ನಲಾಗಿದೆ.

ಬಾಕಿ ಉಳಿದಿರುವ ಕಾಮಗಾರಿ: ಕಟ್ಟಡ ನಿರ್ಮಾಣಕ್ಕೆ ನೀಡಿದ ಒತ್ತು ಕೊನೆಯ ಹಂತದ ಸಣ್ಣಪುಟ್ಟ ಕಾಮಗಾರಿಗಳಿಗೆ ನೀಡದಿರುವುದು ಹಸ್ತಾಂತರಕ್ಕೆ ಕಗ್ಗಂಟಾಗಿ ಪರಿಣಮಿಸಿದೆ. 2018 ಹಾಗೂ 2019ರಲ್ಲಿ ಸುರಿದ ಮಳೆ ಬಿಆರ್‌ ಟಿಎಸ್‌ ಕಂಪನಿಯ ಕಾಮಗಾರಿಗಳ ಗುಣಮಟ್ಟ ಬಟಾಬಯಲಾಗಿತ್ತು. ವಿಭಾಗೀಯ ಕಾರ್ಯಾಗಾರದಲ್ಲಿ ನೀರು ನಿಲ್ಲುವುದು, ಕೆಳ ಅಂತಸ್ತಿನಲ್ಲಿ ವಿದ್ಯುತ್‌ ಪ್ಯಾನೆಲ್‌ ಬೋರ್ಡ್‌ ಸಹಿತ ಕೇಬಲ್‌ಗ‌ಳು ಮಳೆ ನೀರಿನಲ್ಲಿ ನಿಂತಿವೆ. ಡಿಪೋಗಳಲ್ಲಿನ ರ್‍ಯಾಂಪ್‌ಗ್ಳಲ್ಲಿ ಮಳೆ ನೀರು ಸಂಗ್ರಹ, ಅವೈಜ್ಞಾನಿಕವಾಗಿರುವ ಒಳಚರಂಡಿ ಸೇರಿದಂತೆ ಹಲವೆಡೆ ಇನ್ನೂ ಕೆಲಸಗಳು ಬಾಕಿ ಉಳಿದಿವೆ.

ವಾಸ್ತವಕ್ಕೆ ಅಧಿಕಾರಿಗಳ ಹಿಂದೇಟು : ಬಾಕಿ ಉಳಿದಿರುವ ಹಾಗೂ ಸಮರ್ಪಕವಾಗಿ ನೆರವೇರದ ಕಾಮಗಾರಿಗಳ ಕುರಿತು ಬಿಆರ್‌ಟಿಎಸ್‌ ಹಾಗೂ ವಾಯವ್ಯ ಸಾರಿಗೆ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದಾರೆಯೇ ವಿನಃ ಕಾರ್ಯಗತಗೊಂಡಿಲ್ಲ. ಆಗಿರುವ ಅವಾಂತರ ಸರಿಪಡಿಸಿಕೊಳ್ಳುವ ಕೆಲಸ ವಾಯವ್ಯ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯ ಕಾಮಗಾರಿ ಇಲಾಖೆಯಿಂದ ಆಗಲಿಲ್ಲ. ಎರಡಕ್ಕೂ ಒಬ್ಬರೇ ವ್ಯವಸ್ಥಾಪಕ ನಿರ್ದೇಶಕರಿದ್ದರೂ ಯಾರೊಬ್ಬರು ಬಾಕಿ ಉಳಿದಿರುವ ಕಾಮಗಾರಿಗಳ ಬಗ್ಗೆ ಹೇಳುವ ಧೈರ್ಯ ಮಾಡಲಿಲ್ಲ. ನಮಗ್ಯಾಕೆ ಉಸಾಬರಿ ಎಂದು ನಿರ್ಲಕ್ಷ್ಯ ತೋರಿರುವುದು ಗೌಪ್ಯವಾಗಿ ಉಳಿದಿಲ್ಲ.

ನಿರ್ಲಕ್ಷ್ಯದ ಪರಮಾವಧಿ :ಪ್ರತಿಯೊಂದು ಕಾಮಗಾರಿ ಮೇಲ್ವಿಚಾರಣೆಗಾಗಿ ವಾಯವ್ಯ ಸಾರಿಗೆ ಅಧಿಕಾರಿಗಳನ್ನೊಳಗೊಂಡ ಜಂಟಿ ಸಮಿತಿ ರಚಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ಈ ಸಮಿತಿ ಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದರೆ ಇಂತಹ ದುಸ್ಥಿತಿ ಬರುತ್ತಿರಲಿಲ್ಲ. ಈ ಸಮಿತಿಗೆ ತಮ್ಮಂತೆ ಕುಣಿಯುವ ಅಧಿಕಾರಿಗಳಿಗೆ ಮಣೆ ಹಾಕಿರುವುದು ಕೂಡ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಆಗಿರುವ ಲೋಪಗಳನ್ನು ಸರಿಪಡಿಸುವಂತೆ ಕೆಲ ಅಧಿಕಾರಿಗಳು ಪ್ರಶ್ನಿಸಿದರೆ, ಇಷ್ಟೆಲ್ಲಾ ಕಟ್ಟಡಗಳನ್ನು ನಿರ್ಮಿಸಿಕೊಟ್ಟಿದ್ದೇವೆ. ಉಳಿದವುಗಳನ್ನು ನೀವೇ ಮಾಡಿಕೊಳ್ಳಿ ಎಂದು ತಳ್ಳಿ ಹಾಕುತ್ತಿರುವುದು ನುಂಗಲಾರದ ತುತ್ತಾಗಿದೆ.

Advertisement

ನಿರ್ವಹಣೆಗೆ ಅಡ್ಡಿ : ಕಟ್ಟಡಗಳು ನಿರ್ಮಾಣವಾಗಿ ನಾಲ್ಕೈದು ವರ್ಷ ಪೂರ್ಣಗೊಂಡಿಲ್ಲ. ಈಗಾಗಲೇ ಅಲ್ಲಲ್ಲಿ ಬಿರುಕು, ಬಾಗಿಲುಗಳ ಚೌಕಟ್ಟು ಕಿತ್ತೋಗಿವೆ. ಕಿಟಕಿಗಳಿಗೆ ಗಾಜಿನ ಬಾಗಿಲಿವೆ, ಗ್ರಿಲ್‌ಗ‌ಳಿಲ್ಲ. ಆಸ್ತಿ ಇನ್ನೂ ಬಿಆರ್‌ಟಿಎಸ್‌ ಅಧೀನದಲ್ಲಿದೆ ಎನ್ನುವ ತಾಂತ್ರಿಕ ಕಾರಣದಿಂದ ಈ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ವಾಯವ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಗೋಕುಲ ರಸ್ತೆಯಲ್ಲಿ ನಿರ್ಮಾಣವಾಗಿರುವ ಕಾರ್ಯಾಗಾರದ ಕೆಳ ಅಂತಸ್ತಿನಲ್ಲಿ ಮಳೆಗಾಲದಲ್ಲಿ ಸಾಕಷ್ಟು ನೀರು ಸಂಗ್ರಹವಾಗುತ್ತಿದ್ದು, ವಿದ್ಯುತ್‌ ಕೇಬಲ್‌, ಬೋರ್ಡ್‌, ನೂರಾರು ಕಾರ್ಮಿಕರು ಜೊತೆಗೆ ನಗರ ವಿಭಾಗ ಕಚೇರಿಯೂ ಇದ್ದು, ಅವಘಡಕ್ಕೆ ಕಾದು ಕುಳಿತಂತಿದೆ. ದುರಸ್ತಿಗೆ ಮುಂದಾದರೆ ಆಡಿಟ್‌ನಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ಎನ್ನುವ ಕಾರಣಕ್ಕೆ ಹಾಗೆಯೇ ಬಿಡಲಾಗಿದೆ ಎನ್ನಲಾಗುತ್ತಿದೆ.

ಪರವಾನಗಿ, ಸಿಸಿ ಇಲ್ಲ! : ಅಭಿವೃದ್ಧಿಗಾಗಿ ಪಡೆದ ಬಿಆರ್‌ಟಿಎಸ್‌ ಕಂಪನಿ ಕಟ್ಟಡ ನಿಮಾಣಕ್ಕೆ ಪಾಲಿಕೆಯಿಂದ ಪರವಾನಗಿ ಪಡೆದಿಲ್ಲ. ಮುಕ್ತಾಯದ ನಂತರ ಸಿಸಿ ಕೂಡ ಪಡೆದಿಲ್ಲ. ಹಸ್ತಾಂತರಕ್ಕೆ ಇದು ಕೂಡ ದೊಡ್ಡ ಕಗ್ಗಂಟಾಗಿದ್ದು, ಇದೀಗ ಈ ಎರಡು ಕಾರ್ಯಗಳನ್ನು ವಾಯವ್ಯ ಸಾರಿಗೆ ಸಂಸ್ಥೆಯ ಜವಾಬ್ದಾರಿ ಎಂದು ಬಿಆರ್‌ಟಿಎಸ್‌ ಅಧಿಕಾರಿಗಳು ಕೈ ಎತ್ತಿದ್ದಾರೆ. ದುಡಿಯುವ ಸಿಬ್ಬಂದಿಗೆ ಸಂಬಳ ನೀಡದ ಪರಿಸ್ಥಿತಿ ಉಂಟಾಗಿರುವ ಸಂದರ್ಭದಲ್ಲಿ ಪರವಾನಗಿ, ಸಿಸಿಗಾಗಿ 40-50 ಲಕ್ಷ ರೂ. ಪಾವತಿ ಮಾಡುವುದಾದರೂ ಹೇಗೆ ಎನ್ನುವಂತಾಗಿದೆ. ಇನ್ನೂ ಪರವಾನಗಿ ಹಾಗೂ ಸಿಸಿ ಪಡೆಯದಿರುವುದರಿಂದ ಅಗತ್ಯ ಸೌಲಭ್ಯ ಪಡೆಯಲು ತಾಂತ್ರಿಕ ತೊಂದರೆ ಅನುಭವಿಸುವಂತಾಗಿದ್ದು, ಆಗುತ್ತಿರುವ ಸಮಸ್ಯೆಗಳ ಕುರಿತು ಅಧಿಕಾರಿಗಳು ತುಟಿ ಬಿಚ್ಚುತ್ತಿಲ್ಲ

ಸಂಸ್ಥೆಯ ಆಸ್ತಿ ಹಸ್ತಾಂತರ ಕಾರ್ಯ ಇಷ್ಟೊತ್ತಿಗಾಗಲೇ ಆಗಬೇಕಿತ್ತು. ಸಣ್ಣಪುಟ್ಟ ಕೆಲಸಗಳು ಬಾಕಿ ಇವೆ. ಇವೆಲ್ಲಾ ಮುಗಿದ ನಂತರ ಹಸ್ತಾಂತರ ಮಾಡಿದರಾಯಿತು ಎಂದು ಹಿಂದಿನ ಎಂಡಿ ಹೇಳಿದ್ದರು. ನನಗಿರುವ ಮಾಹಿತಿ ಪ್ರಕಾರ ಉಳಿದ ಕೆಲಸಗಳು ಆಗಿಲ್ಲ. ಹಸ್ತಾಂತರ ಕುರಿತು ಸಾರಿಗೆ ಸಚಿವರ ಗಮನಕ್ಕೆ ತಂದಿದ್ದೇನೆ. ಆಗಿರುವ ಹಾಗೂ ಉಳಿದಿರುವ ಕಾಮಗಾರಿ ಪರಿಶೀಲಿಸಿ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ. –ವಿ.ಎಸ್‌. ಪಾಟೀಲ, ಅಧ್ಯಕ್ಷ, ವಾಕರಸಾ ಸಂಸ್ಥೆ

 

-ಹೇಮರಡ್ಡಿ ಸೈದಾಪುರ

 

Advertisement

Udayavani is now on Telegram. Click here to join our channel and stay updated with the latest news.

Next