Advertisement

ಭೂ ಸುಧಾರಣಾ ತಿದ್ದುಪಡಿ; ರಾಜ್ಯಪಾಲರ ಅಂಕಿತ ಬಾಕಿ

03:45 AM Mar 28, 2017 | |

ವಿಧಾನ ಪರಿಷತ್ತು: ರಾಜ್ಯದ 58 ಸಾವಿರ ದಾಖಲೆಯಿಲ್ಲದ ಜನ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಹಾಗೂ “ವಾಸಿಸುವವನಿಗೆ ಮನೆಯ ಒಡೆತನ’ ನೀಡುವ ಮಹತ್ವದ ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿಧೇಯಕ ಮೇಲ್ಮನೆಯಲ್ಲಿ ಸೋಮವಾರ ಅಂಗೀಕಾರಗೊಂಡಿತು.

Advertisement

ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ವಿಧೇಯಕಕ್ಕೆ ಮೇಲ್ಮನೆಯಲ್ಲೂ ಒಪ್ಪಿಗೆ ದೊರೆತಿರುವುದರಿಂದ ವಿಧೇಯಕವು ರಾಜ್ಯಪಾಲರಿಗೆ ಸಲ್ಲಿಕೆಯಾಗಲಿದೆ. ಅಲ್ಲಿ ಅಂಕಿತ ದೊರೆತ ಬಳಿಕ ಅಧಿಸೂಚನೆ ಹೊರಬೀಳುತ್ತಿದ್ದಂತೆ 58 ಸಾವಿರ ಗೊಲ್ಲರಹಟ್ಟಿ, ನಾಯಕರ ಹಟ್ಟಿ, ಮಜಾರೆ ಗ್ರಾಮ, ದೊಡ್ಡಿ, ಪಾಳ್ಯ, ಕ್ಯಾಂಪ್‌, ಗೌಳಿ ದೊಡ್ಡಿ, ಕಾಲನಿಯಂತಹ ದಾಖಲೆಗಳಿಲ್ಲದ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕಾರ್ಯಕ್ಕೆ ಚಾಲನೆ ಸಿಗಲಿದೆ.

ಕರ್ನಾಟಕ ಭೂಸುಧಾರಣೆ ಕಾಯ್ದೆ 1961ಕ್ಕೆ ತರಲಾದ ತಿದ್ದುಪಡಿ ವಿಧೇಯಕದ ಬಗ್ಗೆ ಸೋಮವಾರ ಗಂಭೀರ ಚರ್ಚೆ ನಡೆಯಿತು. ಸದಸ್ಯರು ಪಕ್ಷಾತೀತವಾಗಿ ವಿಧೇಯಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೂ, ಕೆಲ ಗೊಂದಲ ಬಗ್ಗೆ ಪ್ರಸ್ತಾಪಿಸಿದರು. ಇನ್ನೂ ಕೆಲವರು ಕಾಲಮಿತಿಯೊಳಗೆ ಸಕ್ರಮಗೊಳಿಸಲು ಗಮನ ಹರಿಸಬೇಕೆಂದು ಒತ್ತಾಯಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾಗೋಡು ತಿಮ್ಮಪ್ಪ, “ಉಳುವವನೇ ಹೊಲದೊಡೆಯ’ ತತ್ವದ ಪಾಲನೆಯಂತೆ “ದುಡಿಯುವವನೇ ನೆಲದೊಡೆಯ’ ಎಂಬ ತತ್ವದಡಿ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ. ವಾಸಕ್ಕಾಗಿ ನಿರ್ಮಿಸಿಕೊಂಡಿರುವ ಸ್ಥಳಕ್ಕೆ ಹಕ್ಕುಪತ್ರ ನೀಡಲು ವಿಧೇಯಕ ತರಲಾಗಿದೆ’ ಎಂದು ಹೇಳಿದರು.

ಬಳಿಕ ಚರ್ಚೆಯಲ್ಲಿ ಪಾಲ್ಗೊಂಡ ಬಿಜೆಪಿಯ ಕೋಟಾ ಶ್ರೀನಿವಾಸ ಪೂಜಾರಿ, “ಇದು ಕ್ರಾಂತಿಕಾರಿ ಆಲೋಚನೆಯಾಗಿದೆ. ಆದರೆ, ಮನೆ ನಿರ್ಮಿಸಿಕೊಂಡವರ ಪೈಕಿ ಎಷ್ಟು ಅಳತೆಯ ಮನೆಯನ್ನು ಸಕ್ರಮಗೊಳಿಸಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದರು.

Advertisement

ಅರ್ಹರಿಗೆ ಸಿಕ್ಕರಷ್ಟೇ ಉಪಯುಕ್ತ
ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ, “ಇದು ಉತ್ತಮ ವಿಧೇಯಕ. ಆದರೆ ಅರ್ಹರಿಗೆ ಸೌಲಭ್ಯ ಸಿಕ್ಕರಷ್ಟೇ ಉಪಯುಕ್ತವಾಗಲಿದೆ. ಕಂದಾಯ ಭೂಮಿಯಲ್ಲಿ ನಿರ್ಮಿಸಿಕೊಂಡ ಮನೆಗಳ ಸಕ್ರಮಕ್ಕೆ 94ಸಿ, 94ಸಿಸಿ ಅಡಿ ಅವಕಾಶ ಕಲ್ಪಿಸಿ ನಾಲ್ಕು ವರ್ಷ ಕಳೆದರೂ ಈವರೆಗೆ ಹಕ್ಕುಪತ್ರ ಸಿಕ್ಕಿಲ್ಲ. ಅರ್ಜಿ ಸಲ್ಲಿಕೆ, ಪರಿಶೀಲನೆ, ಹಕ್ಕುಪತ್ರ ವಿತರಣೆಗೆ ಕಾಲಮಿತಿ ನಿಗದಿಪಡಿಸಬೇಕು. ಘೋಷಣೆಗೆ ಸೀಮಿತವಾಗದೆ ಕಾರ್ಯಗತವಾಗಬೇಕು’ ಎಂದು ಹೇಳಿದರು.

ಬಿಜೆಪಿಯ ಭಾನುಪ್ರಕಾಶ್‌, ವಿಧೇಯಕವು ಕೃಷಿಕರ ಪರವಾಗಿದೆ. ಆದರೆ ಶುಲ್ಕದ ವಿವರವಿಲ್ಲ. ವಾಸದ ಕಟ್ಟಡದ ಜಾಗಕ್ಕೆ ಹಕ್ಕುಪತ್ರ ನೀಡಿದರೆ ಉಳಿದ ಭೂಮಿಗೆ ಸಂಬಂಧಪಟ್ಟಂತೆ ಯಾವ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಪ್ರಶ್ನಿಸಿದರು. ಜೆಡಿಎಸ್‌ನ ಕಾಂತರಾಜು, “ಕಾಲಮಿತಿಯೊಳಗೆ ತಹಶೀಲ್ದಾರ್‌ ಹಂತದಲ್ಲೇ ಹಕ್ಕುಪತ್ರ ವಿತರಿಸುವ ವ್ಯವಸ್ಥೆ ಆಗಬೇಕು’ ಎಂದು ಸಲಹೆ ನೀಡಿದರು.

ಬಿಜೆಪಿಯ ಕೆ.ಬಿ.ಶಾಮಣ್ಣ, “ಖಾಸಗಿ ಭೂಮಾಲೀಕರು ತಮ್ಮ ಕಾರ್ಮಿಕರಿಗೆ ನಿರ್ಮಿಸಿಕೊಟ್ಟಿರುವ ಮನೆಗಳಿಗೂ ಹಕ್ಕುಪತ್ರ ನೀಡುವಿರಾ’ ಎಂದು ಪ್ರಶ್ನಿಸಿದರು. ಬಿಜೆಪಿಯ ಕ್ಯಾ.ಗಣೇಶ್‌ ಕಾರ್ಣಿಕ್‌, ಕೃಷಿ ಕಾರ್ಮಿಕ ಪದದ ವ್ಯಾಖ್ಯಾನ ತಿಳಿಸಬೇಕು. ಇದಕ್ಕೆ ಕೂಲಿ ಕಾರ್ಮಿಕರು ಸೇರುತ್ತಾರೆಯೇ ಎಂಬುದನ್ನು ಸ್ಪಷ್ಪಪಡಿಸಬೇಕು. ಫ‌ಲಾನುಭವಿಗಳ ಆಯ್ಕೆ ವಿವರ ತಿಳಿಸಬೇಕೆಂದು ಒತ್ತಾಯಿಸಿದರು.

ಜೆಡಿಎಸ್‌ನ ಶ್ರೀಕಂಠೇಗೌಡ, ಹಕ್ಕುಪತ್ರ ಪಡೆಯಲು ಅರ್ಜಿ ಸಲ್ಲಿಕೆಯ ಅವಧಿಯನ್ನು ಒಂದು ವರ್ಷಕ್ಕೆ ಬದಲಾಗಿ ಆರು ತಿಂಗಳಿಗೆ ಇಳಿಸುವುದು ಸೂಕ್ತ’ ಎಂದು ಸಲಹೆ ನೀಡಿದರು. ಕಾಂಗ್ರೆಸ್‌ನ ಮೋಟಮ್ಮ, “ಖಾಸಗಿ ಭೂಮಿಯಲ್ಲಿರುವ ಪರಿಶಿಷ್ಟರ ಕಾಲನಿಗಳು ಇದರ ವ್ಯಾಪ್ತಿಗೆ ಒಳಪಡುವುದೇ, ಕಾಯ್ದೆ ಜಾರಿಯಾದರೆ ಅದನ್ನು ಪ್ರಶ್ನಿಸಿ ಭೂಮಾಲೀಕರು ನ್ಯಾಯಾಲಯದ ಮೊರೆ ಹೋಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪ, “ಅಂದು ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಕಂದಾಯ ಸಚಿವರಾಗಿದ್ದ ಹುಚ್ಚಮಾಸ್ತಿಗೌಡರು ಉಳುವವನೇ ಭೂಮಿ ಒಡೆಯ ಕಾಯ್ದೆ ಜಾರಿಗೊಳಿಸಿದರು. ಇಂದು ಸಿಎಂ ಸಿದ್ದರಾಮಯ್ಯ, ಕಂದಾಯ ಸಚಿವರಾಗಿರುವ ಕಾಗೋಡು ತಿಮ್ಮಪ್ಪ ಅವರು ವಾಸಿಸುವವನಿಗೆ ಮನೆಯ ಒಡೆತನ ಕಾಯ್ದೆ ಜಾರಿಗೊಳಿಸುತ್ತಿದ್ದಾರೆ. ಇದು ಪರಿಣಾಮಕಾರಿಯಾಗಿ ಜಾರಿಯಾದರೆ ಇಬ್ಬರ ಹೆಸರು ಇತಿಹಾಸದಲ್ಲಿ ಅಜರಾಮರವಾಗಲಿದೆ’ ಎಂದ ಅವರು ವಿಧೇಯಕದಲ್ಲಿನ ಕೆಲ ಗೊಂದಲಗಳ ಬಗ್ಗೆ ಬೆಳಕು ಚೆಲ್ಲಿದರು.

ನಂತರ ಬಿಜೆಪಿಯ ಎಂ.ಕೆ.ಪ್ರಾಣೇಶ್‌, “ಕಾಫಿ ಎಸ್ಟೇಟ್‌ಗಳಲ್ಲಿ ಮಾಲೀಕರೇ ಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಿಕೊಟ್ಟಿರುತ್ತಾರೆ. ಅಂತಹವರಿಗೂ ಹಕ್ಕುಪತ್ರ ನೀಡಿದರೆ ಒಂದು ತಲೆಮಾರಿನ ಬಳಿಕ ಅವರು ಕೆಲಸಕ್ಕೆ ಬಾರದಿದ್ದರೆ ಮುಂದೆ ಬೇರೆ ಕಾರ್ಮಿಕರನ್ನು ಕರೆತಂದರೆ ಅವರಿಗೂ ಮನೆ ನಿರ್ಮಿಸಿಕೊಡಬೇಕಾಗಬಹುದು. ಕ್ರಮೇಣ ಭೂ ಮಾಲೀಕರು ಆಸ್ತಿಯನ್ನೇ ಕಳೆದುಕೊಳ್ಳಬೇಕಾದ ಸ್ಥಿತಿ ಬರಬಹುದು. ಇಲ್ಲವೇ ಕಾಯ್ದೆ ಜಾರಿ ಹಿನ್ನೆಲೆಯಲ್ಲಿ ತಕ್ಷಣವೇ ಕಾರ್ಮಿಕರನ್ನು ಎತ್ತಂಗಡಿ ಮಾಡುವ ಅಪಾಯವೂ ಇದೆ’ ಎಂದರು.

ಬಳಿಕ ಮಾತನಾಡಿದ ಸಚಿವ ಕಾಗೋಡು ತಿಮ್ಮಪ್ಪ, ಸದಸ್ಯರು ನೀಡಿರುವ ಎಲ್ಲ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಸದ್ಯ ಕೃಷಿ ಕಾರ್ಮಿಕರಿಗೆ ಹಕ್ಕುಪತ್ರ ನೀಡುವ ಸಲುವಾಗಿ ತಿದ್ದುಪಡಿ ವಿಧೇಯಕ ಮಂಡಿಸಲಾಗಿದೆ. ಇದು ಖಾಸಗಿ ಜಮೀನಿನಲ್ಲಿ ಮನೆ ನಿರ್ಮಿಸಿದವರಿಗೆ ಅನ್ವಯಿಸಲಿದೆಯೇ ಹೊರತು ಕಂದಾಯ ಭೂಮಿಗೆ ಅನ್ವಯಿಸುವುದಿಲ್ಲ. ದಾಖಲೆಗಳಿಲ್ಲದ ಜನವಸತಿಯನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವುದು ಮೂಲ ಉದ್ದೇಶ’ ಎಂದು ಸದನಕ್ಕೆ ತಿಳಿಸಿದರು.

“ಖಾಸಗಿ ಭೂಮಿಯಲ್ಲಿ ಕೃಷಿ ಕಾರ್ಮಿಕರು ನಿರ್ಮಿಸಿಕೊಂಡ ಮನೆ ಸೇರಿ ಅದಕ್ಕೆ ಹೊಂದಿಕೊಂಡ ಪ್ರದೇಶವನ್ನೂ ಅವರಿಗೆ ನೀಡುವ ಉದ್ದೇಶವಿದೆ. ಆದರೆ ಇದು ದುರುಪಯೋಗವಾದಂತೆ ಎಚ್ಚರ ವಹಿಸಲಾಗುವುದು. ಕಾಲಮಿತಿಯನ್ನು ನಿಗದಿಪಡಿಸಲಾಗುವುದು. ಸದಸ್ಯರು ನೀಡಿರುವ ಸಲಹೆ, ಆತಂಕಗಳನ್ನು ಗಮನದಲ್ಲಿಟ್ಟುಕೊಂಡು ನಿಯಮಾವಳಿ ರೂಪಿಸಲಾಗುವುದು’ ಎಂದು ಭರವಸೆ ನೀಡಿದರು. ಬಳಿಕ ಧ್ವನಿಮತದ ಮೂಲಕ ವಿಧೇಯಕಕ್ಕೆ ಅನುಮೋದನೆ ನೀಡಲಾಯಿತು.

ಕಾಯ್ದೆ ವ್ಯಾಪ್ತಿಗೆ ಕಾಫಿ ಎಸ್ಟೇಟ್‌ ತರಲು ಸಿದ್ಧ
ತೆಂಗು, ಅಡಿಕೆ ಬೆಳೆ ಕೃಷಿಯಂತೆ ಕಾಫಿ ಕೂಡ ಕೃಷಿಯೇ. ಹಾಗಾಗಿ 1972ರಲ್ಲಿ ಭೂಸುಧಾರಣೆ ಕಾಯ್ದೆ ತಿದ್ದುಪಡಿ ವೇಳೆ ಕಾಫಿ ಎಸ್ಟೇಟ್‌ಗಳನ್ನು ಕಾಯ್ದೆಗೆ ವ್ಯಾಪ್ತಿಗೆ ತರಲು ಜಂಟಿ ಸದನ ಸಮಿತಿ ಸರ್ವಾನುಮತದಿಂದ ಒಪ್ಪಿಗೆ ನೀಡಿತ್ತು. ಆದರೆ ಪಟ್ಟಭದ್ರ ಹಿತಾಸಕ್ತಿಗಳ ಒತ್ತಾಯಕ್ಕೆ ಮಣಿದು ಕಾಫಿ ಎಸ್ಟೇಟ್‌ಗಳನ್ನು ಕಾಯ್ದೆ ವ್ಯಾಪ್ತಿಯಿಂದ ಹೊರಗಿಡಲಾಯಿತು. ನೀವು (ಉಗ್ರಪ್ಪ, ರೇವಣ್ಣರತ್ತ ಕೈ ತೋರುತ್ತಾ) ಅವರಿಗೆ (ಮುಖ್ಯಮಂತ್ರಿಗಳಿಗೆ) ಹೇಳಿ ಒಪ್ಪಿಸುವುದಾದರೆ ನಾನು ರೆಡಿ. ಈಗಲೂ ಕಾಫಿ ಎಸ್ಟೇಟ್‌ಗಳನ್ನು ಕಾಯ್ದೆ ವ್ಯಾಪ್ತಿಗೆ ತರಲು ಸಿದ್ಧ’ ಎಂದು ಸಚಿವ ಕಾಗೋಡು ತಿಮ್ಮಪ್ಪ ಮಾರ್ಮಿಕವಾಗಿ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next