Advertisement

ವಯಸ್ಸಿನ ದೃಢೀಕರಣವಿಲ್ಲದೇ ಲಗ್ನಪತ್ರಿಕೆ ಮುದ್ರಿಸಿದರೆ ಶಿಕ್ಷೆ

06:00 AM Sep 10, 2018 | |

ಬಾಗಲಕೋಟೆ: ಬಾಲ್ಯ ವಿವಾಹ ತಡೆಗೆ ಜಿಲ್ಲಾಡಳಿತ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಇನ್ನು ಮುಂದೆ ಜಿಲ್ಲೆಯ ಮುದ್ರಣಕಾರರು, ಡಿಟಿಪಿ ಕೇಂದ್ರದವರು, ವಧು-ವರರ ವಯಸ್ಸಿನ ದೃಢೀಕರಣ ಇಲ್ಲದೇ ಮದುವೆ ಆಮಂತ್ರಣ ಪತ್ರಿಕೆ ಮುದ್ರಿಸಿಕೊಟ್ಟರೆ ಅಂತವರ ವಿರುದ್ಧವೂ ಪ್ರಕರಣ ದಾಖಲಿಸಲು ಬಾಲ್ಯ ವಿವಾಹ ತಡೆ ಜಿಲ್ಲಾಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿ ನಿರ್ಧರಿಸಿದೆ.

Advertisement

ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಕದ್ದುಮುಚ್ಚಿ ಬಾಲ್ಯ ವಿವಾಹ ನಡೆಯುತ್ತಲೇ ಇವೆ. ಹೀಗಾಗಿ ಮದುವೆ ಆಯೋಜಿಸುವ ಆರಂಭ ಹಂತದಲ್ಲೂ ಕಣ್ಗಾವಲಿಗೆ ಜಿಲ್ಲಾಡಳಿತ ಮುಂದಾಗಿದೆ. ಬಾಲ್ಯ ವಿವಾಹ ನಿಷೇಧ ಕರ್ನಾಟಕ ತಿದ್ದುಪಡಿ ಕಾಯ್ದೆ-2016ರ ಪ್ರಕಾರ ಮದುವೆ ಆಮಂತ್ರಣ ಮುದ್ರಣಕಾರರೂ ಅಪರಾಧಿಗಳಾಗುತ್ತಾರೆ. ಕಾನೂನು ಪ್ರಕಾರ ಅವರಿಗೆ ಕನಿಷ್ಠ 1, ಗರಿಷ್ಠ 2 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ.ವರೆಗೆ ದಂಡ ವಿಧಿಸಲು ಈ ತಿದ್ದುಪಡಿ ಕಾನೂನಿನಲ್ಲಿ ಅವಕಾಶಗಳಿವೆ.

ಜತೆಗೆ ಬಾಲ್ಯ ವಿವಾಹ ಆದಲ್ಲಿ ಕೇವಲ ಹುಡುಗ, ಹುಡುಗಿಯ ತಂದೆ-ತಾಯಿ ಅಷ್ಟೇ ಅಲ್ಲದೇ ಪೂಜಾರಿಗಳು, ಸಂಬಂಧಿಕರು, ಉತ್ತೇಜನ ನೀಡಿದವರು, ಬಾಲ್ಯ ವಿವಾಹ ತಡೆಯಲು ವಿಫಲರಾದವರು (ಸಂಬಂಧಿಸಿದ ಇಲಾಖೆ ಅಧಿಕಾರಿಗಳು) ಹಾಗೂ ಬಾಲ್ಯ ವಿವಾಹದಲ್ಲಿ ಭಾಗವಹಿಸಿದವರೂ ಅಪರಾಧಿಗಳಾಗುತ್ತಾರೆ. ಹೀಗಾಗಿ ಈ ಕಾನೂನು ಜಾಗೃತಿಗೊಳಿಸುವ ಜತೆಗೆ ಮದುವೆಗೆ ಮೂಲ ಆರಂಭವಾಗುವ ಮದುವೆ ಆಮಂತ್ರಣ ಪತ್ರಿಕೆ ಮುದ್ರಣದಿಂದಲೇ ಕಡಿವಾಣ ಹಾಕಲು ಹೊಸ ಪ್ರಯೋಗ ಜಾರಿಯಾಗಿದೆ. ಈ ನಿಟ್ಟಿನಲ್ಲಿ ಮುದ್ರಣಕಾರರು ವಯಸ್ಸಿನ ದೃಢೀಕರಣವಿಲ್ಲದೇ ಆಮಂತ್ರಣ ಪತ್ರಿಕೆ ಮುದ್ರಿಸುವಂತಿಲ್ಲ ಎಂಬ ಷರತ್ತು, ಜಿಲ್ಲೆಯ ಎಲ್ಲ ಮುದ್ರಣಕಾರರು, ಡಿಟಿಪಿ ಕೇಂದ್ರದ ಮಾಲೀಕರಿಗೆ ಹಾಕಲಾಗಿದೆ.

ದೃಢೀಕರಣ ಕಡ್ಡಾಯ:
ಯಾವುದೇ ವ್ಯಕ್ತಿ ಅಥವಾ ಕುಟುಂಬದವರು ಮದುವೆ ಆಮಂತ್ರಣ ಪತ್ರಿಕೆ ಮುದ್ರಿಸಲು ಬಂದರೆ ಅವರಿಂದ ವಯಸ್ಸಿನ ದೃಢೀಕರಣ ಪತ್ರ ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ಜನನ ಪ್ರಮಾಣ ಪತ್ರ, ಶಾಲಾ ವಯಸ್ಸಿನ ದೃಢೀಕರಣ ಪತ್ರ, ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಸರ್ಕಾರಿ ವೈದ್ಯರು ರೇಡಿಯೋಲಜಿ ಪರೀಕ್ಷೆ ನಡೆಸಿ ನೀಡಿದ ದೃಢೀಕರಣ ಪತ್ರ ಮುಂತಾದ ಯಾವುದಾದರೊಂದು ಪ್ರಮಾಣ ಪತ್ರ ಪಡೆದ ಬಳಿಕವೇ ಆಮಂತ್ರಣ ಪತ್ರಿಕೆ ಮುದ್ರಿಸಲು ಸೂಚಿಸಲಾಗಿದೆ.

ದಾಖಲೆ ಸಂಗ್ರಹ ಕಡ್ಡಾಯ :
ಜಿಲ್ಲೆಯ ಎಲ್ಲ ಮುದ್ರಣಕಾರರು, ಡಿಟಿಪಿ ಕೇಂದ್ರದವರು ತಾವು ಮುದ್ರಿಸುವ ಮದುವೆ ಆಮಂತ್ರಣ ಪತ್ರಿಕೆಗಳ ಒಂದು ಪ್ರತಿ, ಅದಕ್ಕೆ ಪಡೆದ ವಯಸ್ಸಿನ ದೃಢೀಕರಣ ಪತ್ರಗಳನ್ನು ಕಡ್ಡಾಯವಾಗಿ ಆಯಾ ಮುದ್ರಣಾಲಯದ ಕಡತಗಳಲ್ಲಿ ಕಾಯ್ದಿಟ್ಟಿರಬೇಕೆಂಬ ಸೂಚನೆಯಿದೆ.

Advertisement

ಸಮಿತಿ ಸಭೆಯಲ್ಲಿ ಚರ್ಚಿಸಿದ ಬಳಿಕ ಜಿಲ್ಲೆಯ ಎಲ್ಲ ಮುದ್ರಣಕಾರರು, ಡಿಟಿಪಿ ಕೇಂದ್ರಗಳಿಗೆ ವಿಶೇಷ ಸೂಚನಾ ಪತ್ರ ಹೊರಡಿಸಲಾಗಿದೆ. ಮದುವೆ ಆಮಂತ್ರಣ ಪತ್ರಿಕೆ ಮುದ್ರಿಸಲು ಹುಡುಗಿಗೆ 18, ಹುಡುಗನಿಗೆ 21 ವಯಸ್ಸಿನ ದೃಢೀಕರಣ ಪತ್ರ ಪಡೆಯುವುದು ಕಡ್ಡಾಯಗೊಳಿಸಲಾಗಿದೆ.
– ಕೆ.ಜಿ. ಶಾಂತಾರಾಮ್‌, ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷರು, ಬಾಲ್ಯ ವಿವಾಹ ತಡೆಯುವ ಜಿಲ್ಲಾ ಮಟ್ಟದ ಸಮನ್ವಯ ಮತ್ತು ಪರಿಶೀಲನೆ ಸಮಿತಿ

– ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next