Advertisement

ಪಿಒಪಿ ಗಣಪನಿಗೆ ದಂಡ

09:48 AM Sep 03, 2019 | Lakshmi GovindaRaj |

ಗಣೇಶ ಹಬ್ಬದ ಆಚರಣೆಗೆ ಇಡೀ ನಗರ ಸಜ್ಜಾಗಿದೆ. ಒಂದೆಡೆ ಮಾರುಕಟ್ಟೆಯಲ್ಲಿ ಗಣೇಶನ ಮೂರ್ತಿಗಳು, ಹೂವು-ಹಣ್ಣುಗಳ ಖರೀದಿ ಭರಾಟೆ, ಮತ್ತೂಂದಡೆ ಸಂಜೆ ವಿಸರ್ಜನೆಗೆ ಅಗತ್ಯ ಇರುವ ಕಲ್ಯಾಣಿಗಳ ಸಿದ್ಧತೆ. ಈ ಮಧ್ಯೆ ಕಾನೂನು-ಸುವ್ಯವಸ್ಥೆ ದೃಷ್ಟಿಯಿಂದ ನಗರ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಪರಿಸರ ಸ್ನೇಹಿ ಗಣೇಶನನ್ನೇ ಖರೀದಿಸಿ ಎಂದು ಇನ್ನೊಂದು ಕಡೆ ಪರಿಸರ ವಾದಿಗಳಿಂದ ಕೊನೆಯ ಕಸರತ್ತು ನಡೆಯುತ್ತಿದೆ. ಆಚರಣೆಯ ಸಿದ್ಧತೆಯ ಸುತ್ತ ಒಂದು ನೋಟ ಇಲ್ಲಿದೆ.

Advertisement

ಬೆಂಗಳೂರು: ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿ ಮಾಡುವ ಉದ್ದೇಶದಿಂದ ಬಿಬಿಎಂಪಿ ಈ ಬಾರಿ ಪಿಒಪಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಸಂಪೂರ್ಣ ನಿಷೇಧ ವಿಧಿಸಿದೆ. ಮಣ್ಣಿನ ಗಣೇಶ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪನೆ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದು, ಒಂದು ವೇಳೆ ಪಿಒಪಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದರೆ 10 ಸಾವಿರ ದಂಡದ ಮತ್ತು ಜೈಲು ಶಿಕ್ಷೆಯನ್ನೂ ವಿಧಿಸಲಾಗುವುದು ಎಂದು ಎಚ್ಚರಿಸಿದೆ.

ನಿಷೇಧದ ನಡುವೆಯೂ ಪಿಒಪಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಕೆರೆ, ಕಲ್ಯಾಣಿ, ಮೊಬೈಲ್‌ ಟ್ಯಾಂಕರ್‌ಗಳಲ್ಲಿ ವಿಸರ್ಜಿಸಲು ಮುಂದಾಗುವವರಿಗೆ 10 ಸಾವಿರ ರೂ. ದಂಡ ವಿಧಿಸಲು ಬಿಬಿಎಂಪಿ ಮುಂದಾಗಿದೆ. ಜತೆಗೆ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯೂ ಇದೆ. ಬಿಬಿಎಂಪಿ ವತಿಯಿಂದ ಗಣೇಶ ಮೂರ್ತಿ ವಿಸರ್ಜನೆಗೆ 24 ಕೆರೆಗಳನ್ನು ಸಿದ್ಧಪಡಿಕೊಳ್ಳಲಾಗಿದೆ. ಕೆರೆಗಳ ಸುತ್ತ ಬ್ಯಾರಿಕೇಡ್‌ ಅಳವಡಿಕೆ, ಮುಳುಗು ತಜ್ಞರ ನೇಮಕ, ಕ್ರೇನ್‌ಗಳ ವ್ಯವಸ್ಥೆ, ಸಿಸಿ ಕ್ಯಾಮೆರಾ ಅಳವಡಿಸಿ ಸುರಕ್ಷತಾ ಕ್ರಮಕ್ಕೆ ಆದ್ಯತೆ ನೀಡಲಾಗಿದೆ. ಜತೆಗೆ ಮೂರ್ತಿಗಳ ವಿಸರ್ಜನೆಗೆ ಯಾವುದೇ ತಡೆ ಉಂಟಾಗದಂತೆ ಮಾಡಲಾಗಿದ್ದು, 400 ಮೊಬೈಲ್‌ ಟ್ಯಾಂಕರ್‌ಗಳು ಮತ್ತು 37 ತಾತ್ಕಾಲಿಕ ಹೊಂಡ ಮತ್ತು ಕಲ್ಯಾಣಿಗಳನ್ನು ಸ್ಥಾಪಿಸಲಾಗುತ್ತಿದೆ.

ಅನುಮತಿ ಕಡ್ಡಾಯ: ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವ ಆಯೋಜಿಸಲು ಬಿಬಿಎಂಪಿ, ಬೆಸ್ಕಾಂ, ಪೊಲೀಸ್‌ ಮತ್ತು ಅಗ್ನಿಶಾಮಕ ದಳದಿಂದ ಅನುಮತಿ ಪಡೆಯುವುದು ಕಡ್ಡಾಯ. ಇದಕ್ಕಾಗಿ ಪಾಲಿಕೆಯ 64 ಉಪವಿಭಾಗಗಳಲ್ಲಿ ಏಕಗವಾಕ್ಷಿ ಯೋಜನೆ ಅಡಿ ಅನುಮತಿ ನೀಡಲಾಗುತ್ತಿದ್ದು, ಬಿಬಿಎಂಪಿ, ಬೆಸ್ಕಾಂ, ಪೊಲೀಸ್‌ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು, ಒಂದೇ ಕಡೆ ಅನುಮತಿ ನೀಡಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಒಂದೊಮ್ಮೆ ಅನುಮತಿ ಪಡೆಯದೆ ಗಣೇಶೋತ್ಸವ ನಡೆಸಿದರೆ ಕ್ರಮ ತೆಗೆದುಕೊಳ್ಳಲು ಬಿಬಿಎಂಪಿ ಮುಂದಾಗಿದೆ.

ಕೆರೆಗಳ ವಿವರ: ಯಲಹಂಕ ಕೆರೆ, ಚಳ್ಳಕೆರೆ, ಮಲ್ಲತಹಳ್ಳಿ ಕೆರೆ, ಅಲ್ಲಾಳಸಂದ್ರ ಕೆರೆ, ಸ್ಯಾಂಕಿಟ್ಯಾಂಕ್‌, ಕೈಗೊಂಡನಹಳ್ಳಿ ಕೆರೆ, ಅಟ್ಟೂರು ಕೆರೆ, ಚೊಕ್ಕಸಂದ್ರ ಕೆರೆ, ಕಸವನಹಳ್ಳಿ ಕೆರೆ, ಕೋಗಿಲು ಕೆರೆ, ಸಾದರಮಂಗಳ ಕೆರೆ, ದೊಡ್ಡಕೋನೇನಹಳ್ಳಿ ಕೆರೆ, ರಾಚನಹಳ್ಳಿ ಕೆರೆ, ಹೇರೋಹಳ್ಳಿ ಕೆರೆ, ಮೇಸ್ತ್ರಿಪಾಳ್ಯ ಕೆರೆ, ಜಕ್ಕೂರು ಕೆರೆ (ಸಂಪಿಗೆಹಳ್ಳಿ ಕೆರೆ), ಮುನೇಕೊಳಲು ಕೆರೆ, ಯಡಿಯೂರು ಕೆರೆ, ಪಳನಹಳ್ಳಿ ಕೆರೆ, ಹಲಸೂರು ಕೆರೆ, ದೊರೆಕೆರೆ, ದೊಡ್ಡಬೊಮ್ಮಸಂದ್ರ ಕೆರೆ, ಉಳ್ಳಾಲ ಕೆರೆ ಮತ್ತು ಸಿಂಗ್ರಸಂದ್ರ ಕೆರೆ.

Advertisement

ಮೆರವಣಿಗೆ ನಿಯಮಗಳೇನು?: ಎಲ್ಲೆಡೆ ಗಣೇಶ ಮೂರ್ತಿ ಪ್ರತಿಷ್ಠಾಪನೆಗಿಂತಲೂ ವಿಸರ್ಜನೆ ಅದ್ಧೂರಿಯಾಗಿ ನಡೆಯುತ್ತದೆ. ಹಬ್ಬದ ಮೊದಲ ದಿನ , ಮೂರನೇ ದಿನ, ಐದನೇ ದಿನ ಹಾಗೂ ಒಂಬತ್ತನೆಯ ದಿನಗಳಂದು ನಗರದಲ್ಲಿ ಲಕ್ಷಾಂತರ ಗಣೇಶಗಳು ವಿಸರ್ಜನೆಯಾಗುತ್ತವೆ. ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆ ಮಾಡುವವರು ನಗರದಲ್ಲಿ ಮೆರವಣಿಗೆ ಮಾಡಿ ನಂತರವೇ ಮೂರ್ತಿ ವಿಸರ್ಜನೆ ಮಾಡುತ್ತಾರೆ. ಒಂದೇ ದಿನ ಸಾವಿರಾರು ಮಂದಿ ಮೂರ್ತಿ ವಿಸರ್ಜನಾ ಮೆರವಣಿಗೆ ಮಾಡುವುದರಿಂದ ಟ್ರಾಫಿಕ್‌, ಜತೆಗೆ ಗುಂಪು ಗಲಾಟೆಗಳು ಆಗಬಹುದು ಎಂದು ನಗರ ಪೊಲೀಸ್‌ ಇಲಾಖೆ ಮೆರವಣಿಗೆಗೆ ಒಂದಿಷ್ಟು ನಿಯಮ ವಿಧಿಸಿದೆ.

* ಠಾಣೆಯಿಂದ ಮೆರವಣಿಗೆ ಕಡ್ಡಾಯ ಒಪ್ಪಿಗೆ ಪಡೆಯಬೇಕು.
* ಪೊಲೀಸರು ನೀಡಿರುವ ರೂಟ್‌ ಮ್ಯಾಪ್‌ (ಸಂಚಾರಿ ಮಾರ್ಗ) ಪಾಲಿಸಬೇಕು. ಕೊನೆಯ ಕ್ಷಣದಲ್ಲಿ ಮಾರ್ಗ ಬದಲಾವಣೆ ಮಾಡಿದರೆ ಪೊಲೀಸ್‌ರಿಂದ ಅಗತ್ಯ ಕ್ರಮ.
* ರಾತ್ರಿ 10ರ ನಂತರ ಮೆರವಣಿಗೆ ಮಾಡುವಂತಿಲ್ಲ.
* ಡಿ.ಜೆ. ಅಥವಾ ಧ್ವನಿವರ್ಧಕ ಬಳಸುವಂತಿಲ್ಲ.
* ಆಯೋಜಕರು ರಸ್ತೆಯ ವಿದ್ಯುತ್‌ ತಂತಿ, ಕೇಬಲ್‌ ತಂತಿಗಳು ಕುರಿತು ಎಚ್ಚರ ವಹಿಸುವುದು, ಯಾವುದೇ ಅಪರಾಧ ಜರುಗದಂತೆ ಮೆರವಣಿಗೆ ವೇಳೆ ಜಾಗೃತರಾಗಿರಬೇಕು.
* ಮೆರವಣಿಗೆ ಸಮಯದಲ್ಲಿ ಆಯೋಜಕರು, ಸ್ವಯಂ ಸೇವಕರನ್ನು ಗುರುತಿಸಲು ಗುರುತಿನ ಚೀಟಿ, ಬ್ಯಾಡ್ಜ್, ಸಮವಸ್ತ್ರ, ಟೋಪಿಗಳನ್ನು ಬಳಕೆ ಕಡ್ಡಾಯ.

ಪಟಾಕಿ ನಿಷೇಧ: ವಾಯು ಹಾಗೂ ಶಬ್ದಮಾಲಿನ್ಯ ಉಂಟಾಗುತ್ತದೆ ಎಂಬ ಕಾರಣಕ್ಕೆ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ವೇಳೆ ಸಿಡಿಮದ್ದು, ಪಟಾಕಿಗಳನ್ನು ಸಿಡಿಸುವುದು ಹಾಗೂ ಧ್ವನಿ ವರ್ಧಕಗಳನ್ನು ಬಳಸುವುದನ್ನು ನಿಷಿದ್ಧ.

ಬಿಗಿ ಪೊಲೀಸ್‌ ಭದ್ರತೆ: ನಗರದ ವಿವಿಧೆಡೆ ಗಣೇಶ ಹಬ್ಬದ ಭದ್ರತೆಗೆಂದು ಇಬ್ಬರು ಹೆಚ್ಚುವರಿ ಪೊಲೀಸ್‌ ಆಯುಕ್ತರು, 25 ಕೆಎಸ್‌ಆರ್‌ಪಿ, 30 ಸಿಎಆರ್‌, 2 ಆರ್‌ಎಎಫ್ ತುಕಡಿಗಳು, 1500ಕ್ಕೂ ಹೆಚ್ಚು ಹೋಮ್‌ಗಾರ್ಡ್‌ ಭಾನುವಾರ ಸಂಜೆಯಿಂದಲೇ ನಿಯೋಜಿಸಲಾಗಿದೆ. 20 ರಿಂದ 22 ಸೂಕ್ಷ ಪ್ರದೇಶಗಳನ್ನು ಗುರುತಿಸಿದ್ದು, ಅಲ್ಲಿ ಸಿಸಿ ಟಿವಿ ವ್ಯವಸ್ಥೆ ಮಾಡಲಾಗಿದೆ. ಐದನೇ, ಒಂಭತ್ತನೇ ದಿನದ ವಿಸರ್ಜನೆಗೆ ಅಗತ್ಯಕ್ಕನುಗುಣವಾಗಿ ಭದ್ರತೆ ಕೈಗೊಳ್ಳಲಾಗುವುದು ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.

ಸೌಮ್ಯ ವರ್ತನೆಯ ಸ್ವಯಂ ಸೇವಕರಿರಲಿ: ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವವರು ಅಲ್ಲಿ ಭಕ್ತಾಧಿಗಳನ್ನು ನಿಯಂತ್ರಿಸಲು, ಭದ್ರತಾ ಕಾರ್ಯಕ್ರಗಳಿಗೆ, ಮೆರವಣಿಗೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಸಹಕರಿಸಲು ಸೌಮ್ಯ ವರ್ತನೆ ಮಾಡುವ ಸ್ವಯಂ ಸೇವಕರನ್ನು ನೇಮಿಸಬೇಕು. ಇದರಿಂದ ಯಾವುದೇ ಗಲಾಟೆಗಳು ಉಂಟಾಗದೆ ಶಾಂತವಾಗಿ ಹಬ್ಬ ನಡೆಯುತ್ತದೆ ಎಂದು ನಗರದ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ತಿಳಿಸಿದ್ದಾರೆ.

ಪ್ರಕೃತಿ ರಕ್ಷಣೆ ಮಾಡಿ: ನಾವು ಪ್ರಕೃತಿಯನ್ನು ರಕ್ಷಿಸಿದರೆ ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ. ಹೀಗಾಗಿ, ಪಿಒಪಿ (ಪ್ಲಾಸ್ಟರ್‌ ಆಫ್ ಪ್ಯಾರೀಸ್‌)ಬದಲು ಮಣ್ಣಿನಿಂದ ತಯಾರಿಸಿದ ಗಣಪತಿ ಮೂರ್ತಿಗಳನ್ನು ಬಳಕೆ ಮಾಡಿ ಎಂದು ಮೇಯರ್‌ ಗಂಗಾಂಬಿಕೆ ಮನವಿ ಮಾಡಿದರು. ಭಾನುವಾರ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮೇಯರ್‌, ನಮ್ಮ ಪೂರ್ವಜರು ಬಿಟ್ಟು ಹೋಗಿರುವ ಅಮೂಲ್ಯ ಪರಿಸರ ಸಂಪತ್ತುನ್ನು ನಾವು ಮುಂದಿನ ಪೀಳಿಗೆಗೆ ಉಳಿಸಬೇಕು. ಮುಂದಿನ ದಿನಗಳಲ್ಲಿ ಎಲ್ಲಾ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಮಣ್ಣಿನ ಗಣಪತಿ ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.

ಬಿಬಿಎಂಪಿ ಆಯುಕ್ತ ಬಿ. ಎಚ್‌ .ಅನಿಲ್‌ ಕುಮಾರ್‌ ಮಾತನಾಡಿ, ಗೌರಿ ಗಣೇಶ ಹಬ್ಬವನ್ನು ಪರಿಸರ ಪ್ರೇಮ ,ಪರಿಸರ ಸ್ನೇಹದಿಂದ ಆಚರಣೆ ಮಾಡಿಎಂದು ಹೇಳಿದರು. ಇದೇ ವೇಳೆ ಪರಿಸರ ರಕ್ಷಣೆ ಮತ್ತು ಪರಿಸರಸ್ನೇಹಿ ಗಣಪತಿ ಪ್ರತಿಷ್ಠಾನ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಹಡ್ಸನ್‌ ಸರ್ಕ್‌ ವೃತ್ತದಲ್ಲಿ ಗೆಜ್ಜೆಹೆಜ್ಜೆ ತಂಡದವರಿಂದ ಬೀದಿ ನಾಟಕ ಮತ್ತು ಪರಿಸರ ಜಾಗೃತಿಗಾಗಿ ರಸ್ತೆ ಓಟ, ಉಚಿತವಾಗಿ 501 ಮಣ್ಣಿನ ಗಣಪತಿ ವಿತರಣೆ ಮಾಡಲಾಯಿತು.

ನೀರಿಗೆ ಇಳಿಯುವಂತಿಲ್ಲ: ಸ್ಯಾಂಕಿಟ್ಯಾಂಕ್‌ನಲ್ಲಿ ಐದು ಅಡಿಗಿಂತ ಎತ್ತರವಿರುವ ಗಣೇಶಮೂರ್ತಿಗಳ ವಿಸರ್ಜನೆಗೆ ಅವಕಾಶವಿಲ್ಲ ಎಂದು ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಹೇಳಿದರು. ಸಾರ್ವಜನಿಕರು ಗಣೇಶ ಮೂರ್ತಿ ವಿಸರ್ಜನೆ ಮಾಡಲು ಹಲಸೂರು ಕೆರೆ ಹಾಗೂ ಸ್ಯಾಂಕಿಟ್ಯಾಂಕ್‌ನಲ್ಲಿ ಬಿಬಿಎಂಪಿ ನಡೆಸಿರುವ ಸಿದ್ಧತೆಗಳ ಬಗ್ಗೆ ಭಾನುವಾರ ತಪಾಸಣೆ ನಡೆಸಿದ ನಂತರ ಮಾತನಾಡಿದ ಅವರು, ಹಲಸೂರು ಕೆರೆಯಲ್ಲಿ ಪ್ರತಿ ವರ್ಷವೂ 1.50 ಲಕ್ಷ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗುತ್ತಿದ್ದು, ಈ ಬಾರಿ ಗಣೇಶ ಮೂರ್ತಿ ವಿಸರ್ಜನೆ ಮಾಡಲು ಎರಡು ಕ್ರೇನ್‌ ಗಳನ್ನು ಬಳಸಲಾಗುತ್ತಿದೆ ಎಂದರು.

ಎಲ್ಲಾ ಕೆರೆಗಳ ಬಳಿ ಬೀದಿ ದೀಪಗಳು, ಸಿಸಿ ಕ್ಯಾಮೆರಾ, ಕಲ್ಯಾಣಿಗಳ ಸುತ್ತಲೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಬ್ಯಾರಿಕೇಡ್‌ ಒಳಗಡೆ ಸಾರ್ವಜನಿಕರಿಗೆ ಅವಕಾಶವಿರುವುದಿಲ್ಲ. ಗಣೇಶ ವಿಸರ್ಜನೆಗಾಗಿಯೇ ಪಾಲಿಕೆಯಿಂದ 20 ಈಜುಗಾರರನ್ನು ನಿಯೋಜನೆ ಮಾಡಲಾಗಿದೆ. ನೀರಿನೊಳಗೆ ಗಣೇಶಮೂರ್ತಿ ವಿಸರ್ಜನೆ ಮಾಡಲು ಈಜುಗಾರರಿಗೆ ಮಾತ್ರ ಅವಕಾಶವಿದ್ದು, ಸಾರ್ವಜನಿಕರಿಗೆ ಅವಕಾಶವಿರುವುದಿಲ್ಲ. ರಾತ್ರಿ 11ಗಂಟೆಯೊಳಗಾಗಿ ಮಾತ್ರ ವಿಸರ್ಜನೆ ಮಾಡಲು ಅವಕಾಶವಿದೆ ಎಂದು ತಿಳಿಸಿದರು.

“ಉದಯವಾಣಿ’ಯೊಂದಿಗೆ ಆಚರಿಸಿ ಪರಿಸರ ಸ್ನೇಹಿ ಗಣೇಶೋತ್ಸವ: ನಿರ್ದಿಷ್ಟ ಅಳತೆಯ, ವಿಶೇಷತೆಯೊಳಗೊಂಡಿರುವ ಪರಿಸರ ಸ್ನೇಹಿ ಗಣೇಶನ ಮೂರ್ತಿಯನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡಿದ್ದಿರಾ? ಹಾಗಿದ್ದಲ್ಲಿ, ಗಣೇಶನ ಮೂರ್ತಿ ಫೋಟೋ ತೆಗೆದು, ಪರಸರ ಸ್ನೇಹಿ ಗಣಪನ ವಿಶೇಷತೆಯ ಸಂಕ್ಷಿಪ್ತ ಮಾಹಿತಿ, ಸಂಘ-ಸಂಸ್ಥೆಯ ವಿವರದೊಂದಿಗೆ “ಉದಯವಾಣಿ’ ವಾಟ್ಸ್‌ಆಪ್‌ ನಂಬರ್‌ 8861196369ಗೆ ಕೂಡಲೇ ಕಳುಹಿಸಿ. ಸೂಕ್ತ ಛಾಯಾಚಿತ್ರಗಳನ್ನು ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.

ಮಾಹಿತಿಗೆ ಸಂಪರ್ಕಿಸಿ: ತಾತ್ಕಾಲಿಕ ವಿಸರ್ಜನಾ ಸ್ಥಳಗಳು ಮತ್ತು ಸಂಚಾರಿ ಟ್ಯಾಂಕರ್‌ಗಳ ಮಾಹಿತಿಗೆ ವೆಬ್‌ಸೈಟ್‌: www.bbmp.gov.in ಅಥವಾ ದೂ: 080 22221188 ಸಂಪರ್ಕಿಸಬಹುದು.

ಮೊಬೈಲ್‌ ಟ್ಯಾಂಕರ್‌ ಮತ್ತು ತಾತ್ಕಾಲಿಕ ಕಲ್ಯಾಣಿಗಳ ವಿವರ
ವಲಯ ಮೊಬೈಲ್‌ ಟ್ಯಾಂಕರ್‌ ತಾತ್ಕಾಲಿಕ ಕಲ್ಯಾಣಿ
ಪೂರ್ವ 101 00
ಪಶ್ಚಿಮ 89 00
ದಕ್ಷಿಣ 33 04
ಮಹದೇವಪುರ 7 13
ಬೊಮ್ಮನಹಳ್ಳಿ 55 4
ದಾಸರಹಳ್ಳಿ 21 11
ಯಲಹಂಕ 00 05
ಆರ್‌.ಆರ್‌.ನಗರ 94 00
ಒಟ್ಟು 400 37

ಮಾಲಿನ್ಯ ನಿಯಂತ್ರಣ ಮಂಡಳಿ ಸಂಚಾರಿ ವಿಸರ್ಜನಾ ವ್ಯವಸ್ಥೆ
ಸ್ಥಳ ಸಮಯ ದೂರವಾಣಿ
-ಗಣಪತಿ ನಗರ (ಪೀಣ್ಯ) ಸಂಜೆ 4ರಿಂದ 6.15 9035664203
-ಪೀಣ್ಯ 2ನೇ ಹಂತ (ಬಸ್‌ ಸ್ಟಾಪ್‌ ಬಳಿ) ಸಂಜೆ 6.30ರಿಂದ ರಾತ್ರಿ 7.30 8088892920
-ಲಗ್ಗೆರೆ ಪಾರ್ಕ್‌ ಬಳಿ ರಾತ್ರಿ 7.45ರಿಂದ 8.30 8088892920
-ಕೆಐಎಡಿಬಿ ಕ್ವಾಟರ್ಸ್‌ ರಾತ್ರಿ 8.45 ರಿಂದ 10 8088892920
-ಮೀನಾಕ್ಷಿ ದೇವಸ್ಥಾನ ಬನ್ನೇರುಘಟ್ಟ ರಸ್ತೆ ಸಂಜೆ 7ರಿಂದ ರಾತ್ರಿ 8 9731066026
-ಎಚ್‌ಎಸ್‌ಆರ್‌ ಲೇಔಟ್‌ ಬಿಡಿಎ ಕಾಂಪ್ಲೆಕ್ಸ್‌ ರಾತ್ರಿ 9ರಿಂದ ರಾತ್ರಿ 10 ಗಂಟೆ 9035471530
-ಟಿ.ದಾಸರಹಳ್ಳಿ (ಬಿಬಿಎಂಪಿ, ಕಚೇರಿ ಎದುರು) ಸಂಜೆ 4.30 ರಿಂದ 5.30 9986196215
-ಎಂಇಐ ಕಾಲೊನಿ ಮೈದಾನ ಸಂಜೆ 5.45ರಿಂದ 6.30 9986196215
-ಮಲ್ಲಸಂದ್ರ ಸರ್ಕಾರಿ ಸ್ಕೂಲ್‌ ಸಂಜೆ 6.45ರಿಂದ 7.45 9986196215
-ನೆಲಗಂದರನಹಳ್ಳಿ ಸರ್ಕಲ್‌ ರಾತ್ರಿ 8ರಿಂದ 9 9986196215
-ಹೇರೋಹಳ್ಳಿ (ಬಿಬಿಎಂಪಿ ಕಚೇರಿ ) ಸಂಜೆ 4.30ರಿಂದ 5.30 8147588165
-ತಿಗಳರಪಾಳ್ಯ ಸರ್ಕಲ್‌ ಸಂಜೆ 5.45ರಿಂದ 6.30 8147588165
-ಹೆಗನಹಳ್ಳಿ ಬಸ್‌ ಸ್ಟಾಪ್‌ ಸಂಜೆ 6.45ರಿಂದ 7.45 8147588165
-ಪೀಣ್ಯ 2ನೇ ಹಂತ (ಬಸ್‌ ಸ್ಟಾಪ್‌) ರಾತ್ರಿ 8ರಿಂದ 9 8147588165
-ಜಯನಗರ 4ನೇ ಹಂತ (ಪೊಲೀಸ್‌ ಠಾಣೆ) ಸಂಜೆ 5ರಿಂದ 7 9945800675
-ಹನುಮಂತನಗರ (ಪೊಲೀಸ್‌ ಠಾಣೆ) ರಾತ್ರಿ 7.15ರಿಂದ 10 8884879071
-ಜೀವನ್‌ ಭೀಮಾನಗರ (ಪೊಲೀಸ್‌ ಠಾಣೆ ಎದುರು) ಸಂಜೆ 4ರಿಂದ 7.45 9886415886
-ಹಲಸೂರು ಠಾಣೆ ಎದುರು ರಾತ್ರಿ 8ರಿಂದ 10 9902772852
-ಬಸವೇಶ್ವರನಗರ (ಮಾಡರ್ನ್ ಸ್ವೀಟ್‌ ಅಂಗಡಿ) ಮಧ್ಯಾಹ್ನ 3.00 ರಿಂದ 5.00 8618628326
-ವಿಜಯನಗರ (ಬಸ್‌ ಸ್ಟಾಂಡ್‌ ಎದುರು) ಸಂಜೆ 5.30ರಿಂದ 7 8618628326
-ಮಾಗಡಿ ರೋಡ್‌ (ಬಸ್‌ ಸ್ಟಾಂಡ್‌ ) ರಾತ್ರಿ 7.30 ರಿಂದ 8.30 9739144797
-ಮಂಜುನಾಥನಗರ ವೆಂಕಟೇಶ್ವರಸ್ವಾಮಿ ದೇಗುಲ ರಾತ್ರಿ 9ರಿಂದ 10.30 9739144797
-ಮಲ್ಲೇಶ್ವರ ಠಾಣೆ ಹತ್ತಿರ ಮಧ್ಯಾಹ್ನ 3ರಿಂದ ಸಂಜೆ 5.30 7892927718
-18ನೇ ಕ್ರಾಸ್‌ ಬಸ್‌ ನಿಲ್ದಾಣ ಬಳಿ ಸಂಜೆ 6ರಿಂದ 7.30 7892927718
-ಬ್ರಿಗೇಡ್‌ ಅಪಾರ್ಟ್‌ಮೆಂಟ್‌ ರಾತ್ರಿ 8ರಿಂದ 9.15 7892927718
-ಯಶವಂತಪುರ ಪೊಲೀಸ್‌ ಠಾಣೆ ಎದುರು ರಾತ್ರಿ 9.30ರಿಂದ 10.30 7892927718
-ಯಲಹಂಕ ನ್ಯೂಟೌನ್‌ 4ನೇ ಹಂತ ಸಂಜೆ 5.30ರಿಂದ 6.00 9448168193
-ಎನ್‌ಇಎಸ್‌ ಕೇಂದ್ರ ಕಚೇರಿ ಸಂಜೆ 6.15 ರಿಂದ 6.45 9740023306
-ಯಲಹಂಕ ಹಳೇ ಪಟ್ಟಣ ಬಸ್‌ ನಿಲ್ದಾಣ ರಾತ್ರಿ 7.00 ರಿಂದ 8.00 9731387003
-ಸಹಕಾರನಗರ, ಗಣೇಶ ಮಂದಿರ ಹತ್ತಿರ ರಾತ್ರಿ 8.00 ರಿಂದ 10.00 9731387003
-ಬಿಇಎಂಎಲ್‌, ರಂಗಮಂದಿರ ಸಂಜೆ 5.00 ರಿಂದ 9.00 9880060975
-ನಿಮಿಷಾಂಬ ಮಂದಿರ ರಾತ್ರಿ 9.00 ರಿಂದ 10.00 9663389678
-ರಾಜರಾಜೇಶ್ವರಿ ರಾತ್ರಿ 9.00 ರಿಂದ 10.00 9341280950
-ರಾಮಮೂರ್ತಿನಗರ, ಪೊಲೀಸ್‌ ಠಾಣೆ ಹತ್ತಿರ ಸಂಜೆ 4.30 ರಿಂದ 5.30 9632397043
-ಮಹದೇವಪುರ, ಪೊಲೀಸ್‌ ಠಾಣೆ ಹತ್ತಿರ ಸಂಜೆ 5.45 ರಿಂದ 6.30 9632397043
-ಮಾರತ್‌ಹಳ್ಳಿ ಬ್ರಿಡ್ಜ್ ಸಂಜೆ 6.45 ರಿಂದ 7.30 9632397043
-ಎಇಸಿಎಸ್‌ ಲೇಔಟ್‌ ರಾತ್ರಿ 7.45 ರಿಂದ 8.30 7899357501
-ಎಚ್‌ಎಎಲ್‌ ವಿಮಾನ ನಿಲ್ದಾಣ ರಸ್ತೆ ರಾತ್ರಿ 8.45 ರಿಂದ 10.30 7899357501

Advertisement

Udayavani is now on Telegram. Click here to join our channel and stay updated with the latest news.

Next