Advertisement

ಶಾಂತಿಮಂತ್ರ ಹೇಳುವ ಸಂಸ್ಕಾರದ ಪಾಠ ಕೇಳಿಸಿಕೊಳ್ಳಿ…

04:54 PM Apr 21, 2019 | Hari Prasad |

ಯಾವಾಗ ಮನಸ್ಸು ಒಂದು ಶುಭಕರವಾದ ವಿಷಯವನ್ನು ಕೇಳಿಸಿಕೊಳ್ಳುವುದೋ ಆಗ, ಅದರ ವಿಚಾರ, ವಿಷಯಗಳಲ್ಲಿಯೇ ಆಸಕ್ತವಾಗುವುದು. ಅಮಂಗಳಕರವಾದ ಅಥವಾ ಕೆಟ್ಟ ವಿಚಾರವನ್ನು ಕೇಳಿದಾಗ ಮನಸ್ಸು ಕೂಡ ಅತ್ತ ಹೊರಳುವುದೇ ಹೆಚ್ಚು.

Advertisement

ಒಂದು ಶುಭಕಾರ್ಯ, ಒಂದು ಶುಭ ಸಮಾರಂಭ, ಒಂದು ದೇವತಾಕಾರ್ಯ ಮೊದಲಾದವುಗಳನ್ನು ಆರಂಭಿಸುವಾಗ ಶಾಂತಿಮಂತ್ರದಿಂದ ಆರಂಭಿಸಿ, ಅಂತ್ಯದಲ್ಲೂ ಶಾಂತಿಮಂತ್ರವನ್ನು ಹೇಳುವುದೇ ಸತ್ಸಂಪ್ರದಾಯ. ಇದು ಹಲವರಿಗೆ ತಿಳಿದಿರುವ ಸಂಗತಿ. ನಾಳೆ ಏನಾಗಬೇಕು? ಎಂದು ಕೇಳಿದರೆ ಉತ್ತರ, ಒಳ್ಳೆಯದಾಗಬೇಕಷ್ಟೆ ಎಂಬುದು.

ಈ ಒಳ್ಳೆಯದಾಗುವುದು ಎಂದರೆ ಏನು? ಕನಸಿನಲ್ಲಿ ಕಂಡ ಸಂಪತ್ತು ಮನೆ ಎದುರು ಬಂದು ಬೀಳುವುದೇ ಅಥವಾ ಬಯಸಿದ ಅಧಿಕಾರವೊಂದು ನಾಳೆ ಇದ್ದಕ್ಕಿದ್ದಂತೆ ದೊರೆಯುವುದೇ? ಏನೂ ಕಷ್ಟವೇ ಇಲ್ಲದೆ ಬದುಕುವುದೇ? ಇವ್ಯಾವುದೂ ಅಲ್ಲ. ಒಂದು ನೆಮ್ಮದಿಯ ಬದುಕು. ಒಳ್ಳೆಯ ಬದುಕಿಗೆ ಮನಸ್ಸೂ ಒಳ್ಳೆಯದಾಗಿರಬೇಕು. ಅಷ್ಟೇ ಅಲ್ಲದೆ, ಸುತ್ತಲಿನ ಸಮಾಜ-ಸಂಸ್ಕೃತಿ, ಪ್ರಕೃತಿ, ನುಡಿ-ನಡೆ ಎಲ್ಲವೂ ಒಳ್ಳೆಯದಾಗಿದ್ದರೆ ಮಾತ್ರ ನಾಳೆಗಳು ಒಳ್ಳೆಯ ದಿನಗಳಾಗುತ್ತವೆ. ಈ ಒಳ್ಳೆಯದು ಎಂಬುದೂ ವ್ಯಕ್ತಿಗತವೇ ಬಿಡಿ. ಹಾಗಾಗಿ, ಎಲ್ಲರಿಗೂ ಒಳ್ಳೆಯದಾದರೆ ಅಷ್ಟು ಸಾಕು.

ಶಾಂತಿ ನೆಮ್ಮದಿ
ಒಳ್ಳೆಯ ಸಂಸ್ಕಾರದಿಂದ ಒಳ್ಳೆಯ ಸಂಸ್ಕೃತಿ. ಒಳ್ಳೆಯ ಸಂಸ್ಕೃತಿಯಿಂದ ಎಲ್ಲ ನಡೆ-ನುಡಿಗಳೂ ಉತ್ತಮವೇ ಆಗಿ ಒಳ್ಳೆಯದೇ ಆಗುತ್ತದೆ. ಹಾಗಾಗಿಯೇ, ಶಾಂತಿಮಂತ್ರ ಯಾವಾಗಲೂ ಅಂತಹ ಒಳ್ಳೆಯ ಆಶಯವನ್ನು ಹೊಂದಿರುತ್ತದೆ. ಶಾಂತಿ ಎಂದರೆ ನೆಮ್ಮದಿ. ಶಾಂತಿಯುತವಾದ ಮನಸ್ಸು ಎಲ್ಲರದ್ದೂ ಆಗಿದ್ದಾಗ ಎಲ್ಲರಿಗೂ ನೆಮ್ಮದಿ. ಹೀಗೊಂದು ಶಾಂತಿ ಮಂತ್ರವಿದೆ.

ಓಂ ಭದ್ರಂ ಕರ್ಣೇಭಿಃ
ಶ್ರುಣುಯಾಮ ದೇವಾಃ |
ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ |
ಸ್ಥಿರೈರಂಗೈಸ್ತುಷ್ಟುವಾಂಸಸ್ತನೂಭಿವ್ಯìಶೇಮ
ದೇವಹಿತಂ ಯದಾಯುಃ||
ಓಂ ಶಾಂತಿಃ ಓಂ ಶಾಂತಿಃ ಓಂ ಶಾಂತಿಃ ||

Advertisement

ಈ ಶ್ಲೋಕದ ಅರ್ಥ ಹೀಗಿದೆ: ಹೇ ದೇವತೆಗಳೇ, ಮಂಗಳವಾದುದನ್ನು ಕಿವಿಗಳಿಂದ ಕೇಳ್ಳೋಣ. ಹೇ ಪೂಜಾರ್ಹರೇ, ಪವಿತ್ರವಾದುದನ್ನು ಕಣ್ಣುಗಳಿಂದ ನೋಡೋಣ. ದೃಢವಾದ ಅವಯವಗಳಿಂದಲೂ ಮತ್ತು ಶರೀರಗಳಿಂದಲೂ ಕೂಡಿ, ನಿಮ್ಮನ್ನು ಸ್ತುತಿಸುವವರಾಗಿ ದೇವನಿಂದ ವಿಧಿಸಲ್ಪಟ್ಟ ಆಯಸ್ಸನ್ನು ಹೊಂದೋಣ. ಮಗುವೊಂದು ಪ್ರತಿಯೊಂದನ್ನೂ ಮೊತ್ತಮೊದಲು ಕಲಿಯುವುದು ಕೇಳುವಿಕೆ ಮತ್ತು ನೋಡುವಿಕೆಯಿಂದಲೇ.

ಪ್ರತಿಯೊಬ್ಬ ಮನುಷ್ಯನಿಗೂ, ಬದುಕಿನ ಪ್ರತಿಹಂತದಲ್ಲೂ ಹೀಗೇಯೇ. ಒಂದು ಕಲ್ಪನೆಗೂ ಕೂಡ ವಾಸ್ತವದ ಯಾವುದೋ ಒಂದು ಎಳೆ ಬೇಕೇಬೇಕು. ಹಾಗೆಯೇ ಯೋಚನೆಯೊಂದು ನಮ್ಮನ್ನು ಆವರಿಸಲು ಅಥವಾ ಮನಸ್ಸಿನಲ್ಲಿ ಯೋಚನೆ ಹುಟ್ಟಲು ಕಾರಣವಾಗುವುದೇ ಈ ಕೇಳಿದ್ದು ಮತ್ತು ನೋಡಿದ ಪ್ರಸಂಗ.

ಹುಲಿಯೊಂದನ್ನು ನೋಡಿದವನಿಗೆ ಆತ ಸಿಂಹವನ್ನು ನೋಡದೇ ಹೋದರೂ ಅದು ಹೇಗಿರುತ್ತದೆ ಎಂಬುದರ ಅರಿವು ಮೂಡಿಸುವುದು ಸುಲಭ. ಯಾವಾಗ ಮನಸ್ಸು ಒಂದು ಶುಭಕರವಾದ ವಿಷಯವನ್ನು ಕೇಳಿಸಿಕೊಳ್ಳುವುದೋ ಆಗ, ಅದರ ವಿಚಾರ, ವಿಷಯಗಳಲ್ಲಿಯೇ ಆಸಕ್ತವಾಗುವುದು. ಅಮಂಗಳಕರವಾದ ಅಥವಾ ಕೆಟ್ಟ ವಿಚಾರವನ್ನು ಕೇಳಿದಾಗ ಮನಸ್ಸು ಕೂಡ ಅತ್ತ ಹೊರಳುವುದೇ ಹೆಚ್ಚು. ಹಾಗಾಗಿ, ಈ ಮಂತ್ರದಲ್ಲಿ ಮಂಗಳಕರವಾದದ್ದೇ ಕಿವಿಗೆ ಬೀಳಲಿ ಎಂಬ ಆಶಯವಿದೆ.
ನೋಡುವುದೂ ಕೂಡ ಪವಿತ್ರವಾದದ್ದೇ ಇರಲಿ ಎಂಬ ಮತ್ತೂಂದು ಸದಾಶಯ.

ಸಂಸ್ಕಾರಯುತವಾದ ಕಾರ್ಯಗಳು ಕಣ್ಣಿಗೆ ಬಿದ್ದಾಗ ಮನಸ್ಸು ಕೂಡ ಅದರ ಕಡೆಯೇ ಆಕರ್ಷಿತವಾಗಿ ದೇಹವನ್ನು ಅದರಲ್ಲಿ ತೊಡಗಿಸಲು ಅಣಿಯಾಗುತ್ತದೆ. ಅಂತೆಯೇ, ಕ್ರೌರ್ಯದಂತಹ ಸಂಸ್ಕಾರ ರಹಿತವಾದ ಸಂಗತಿಗಳನ್ನು, ಕಣ್ಣು ನೋಡುತ್ತಾ ಇದ್ದಾಗ ಮನಸ್ಸು ಅದಕ್ಕೇ ಒಗ್ಗಿಕೊಂಡು ಅದು ಕೆಟ್ಟದು ಎಂಬುದು ಅರಿವಾಗದೇ ಅಂತಹ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಮುಂದಾಗುವುದು ಸಹಜ. ಹಾಗಾಗಿಯೇ, ಉತ್ತಮವಾದದ್ದು ಮಾತ್ರ ನಮ್ಮ ಕಿವಿಯನ್ನು ಸೇರಬೇಕು, ಕಣ್ಣುಗಳು ಅದನ್ನಷ್ಟೇ ನೋಡಬೇಕು. ಒಂದು ಸುಸಂಸ್ಕೃತಿಯ ಮೂಲ ಹುಟ್ಟಿಗೆ ಕಾರಣವಾಗುವ ಅಂಶಗಳು ಈ ಶಾಂತಿ ಮಂತ್ರಗಳಲ್ಲಿ ಅಡಕವಾಗಿವೆ.

ಇಂತಹ ಶಾಂತಿಮಂತ್ರಗಳು ನಮ್ಮನ್ನು ಆಗಾಗ ಎಚ್ಚರಿಸುತ್ತ, ಸನ್ಮಾರ್ಗದಲ್ಲಿಯೇ ಬದುಕನ್ನು ನಿರ್ವಹಿಸಲು ಪ್ರೇರಕವಾಗಿವೆ. ಆಗಾಗ ಇವನ್ನು ಕೇಳುತ್ತಿರಬೇಕು ಮತ್ತು ಅದಕ್ಕೂ ಹೆಚ್ಚಾಗಿ ಅವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.

— ವಿಷ್ಣು ಭಟ್‌ ಹೊಸಮನೆ

Advertisement

Udayavani is now on Telegram. Click here to join our channel and stay updated with the latest news.

Next