Advertisement

ಪಪಂ ಚುನಾವಣೆ ಎಲ್ಲರಿಗೆ ತಲೆಬಿಸಿ

04:21 PM May 04, 2019 | Team Udayavani |

ಹೊನ್ನಾವರ: 20 ವಾರ್ಡ್‌ಗಳನ್ನೊಳಗೊಂಡ ಹೊನ್ನಾವರ ಪಟ್ಟಣ ಪಂಚಾಯತಕ್ಕೆ ಚುನಾವಣೆ ಬಿರು ಬಿಸಿಲಿನಲ್ಲಿ ಎದುರಾಗಿದೆ. ಹಿಂದಿನವರು ಪುನಃ ಗೆಲ್ಲುವ ಗುರಿ ಇಟ್ಟು ಕೆಲಸ ಮಾಡಿದ್ದರು. ಈ ಬಾರಿ ವಾರ್ಡ್‌ಗಳು ಬದಲಾಗಿವೆ. ಕಾಂಗ್ರೆಸ್‌ನಲ್ಲೇ ಗುಂಪುಗಳಾಗಿ ಅವಿಶ್ವಾಸ ಮಂಡನೆಯಾಗಿ ವೈಯಕ್ತಿಕ ದ್ವೇಷಕ್ಕೆ ಕಾರಣವಾಗಿದೆ. ಹಿಂದೆ ಆಳಿದವರಿಗೆ ಮಾಮೂಲು ಕೆಲಸ ಮಾಡುವುದನ್ನು ಬಿಟ್ಟು ಇನ್ನೇನೂ ಮಾಡಲಾಗಿಲ್ಲ. ಕಾಂಗ್ರೆಸ್‌ ಆಳಿ ಮುಗಿಸಿದೆ. ಬಿಜೆಪಿ ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡಲಿಲ್ಲ. ಯಾರಿಗೆ ಮತ ಹಾಕಿದರೂ ಅಷ್ಟೇ ಎಂಬ ಮನೋಭಾವ ಜನರಲ್ಲಿ ಉಂಟಾಗಿದೆ.

Advertisement

ಕುಡಿಯುವ ನೀರಿನ ಬಹುಕೋಟಿ ರೂಪಾಯಿ ಯೋಜನೆ ವಿಳಂಬವಾಗಿದೆ. ಅರಣ್ಯ ಭೂಮಿ ಬಿಡುಗಡೆ ಆಗಬೇಕಿದೆ. ಅಲ್ಲಿಯವರೆಗೆ ಕುಡಿಯುವ ನೀರಿನ ಕೊರತೆ ತಪ್ಪಿದ್ದಲ್ಲ. ಕೊನೆ ಪಕ್ಷ ಸೊಳ್ಳೆ ನಾಶಮಾಡಲು ಇವರ ಕೈಲಿ ಆಗಲಿಲ್ಲ ಎಂದು ಜನ ಆಡಿಕೊಳ್ಳುತ್ತಿದ್ದಾರೆ. ನಗರದ ತುಂಬ ಗೂಡಂಗಡಿ, ಭೂ ಅತಿಕ್ರಮಣ ನಡೆದೇ ಇದೆ. ಪಪಂನ ನಿಯಮಾವಳಿ ಗಾಳಿಗೆ ತೂರಿರುವುದನ್ನು ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ.

ಚತುಷ್ಟಥ ನಗರದಲ್ಲಿ ಹಾದುಹೋಗುತ್ತಿದ್ದರೂ ಫ್ಲೈ ಓವರ್‌ ಇದೆಯೋ ಇಲ್ಲವೋ ಎಂಬುದು ಇನ್ನೂ ತಿಳಿದಿಲ್ಲ. ಒಳಚರಂಡಿ ಯೋಜನೆ ಕುಲಗೆಟ್ಟು ಕುಳಿತಿದೆ. ನಗರದಲ್ಲಿ ಎಲ್ಲೂ ವಾಹನ ನಿಲುಗಡೆಗೆ ಸ್ಥಳವಿಲ್ಲ. ಬಹುಮಹಡಿ ವ್ಯಾಪಾರ ಮಳಿಗೆ ಕಟ್ಟಿದವರು ಭೂ ಮಟ್ಟದಲ್ಲಿ ಪಾರ್ಕಿಂಗ್‌ ತೋರಿಸಿ, ಪರವಾನಗಿ ಸಿಕ್ಕ ಮೇಲೆ ಅದನ್ನೂ ಅಂಗಡಿ ಮಾಡಿ ಬಾಡಿಗೆ ಕೊಟ್ಟಿದ್ದಾರೆ. ವಾಹನಗಳು ಅರ್ಧ ರಸ್ತೆ ಆವರಿಸಿ ನಿಲ್ಲುತ್ತವೆ. ಪಾರ್ಕಿಂಗ್‌ ಇಲ್ಲ, ಪಾರ್ಕ್‌ ಇಲ್ಲ, ಆಟದ ಮೈದಾನವೂ ಇಲ್ಲ. ಸುಂದರ ಉದ್ಯಾನ ಸ್ಮಶಾನದಲ್ಲಿದೆ. ತ್ಯಾಜ್ಯವನ್ನು ಮಳೆಗಾಲದ ನೀರು ಹರಿಯುವ ಗಟಾರಿಗೆ ಬಿಡುವ ಸಂಪ್ರದಾಯ ಮುಂದುವರಿದಿದೆ.

ಹೀಗೆ ಗಂಭೀರ ಸಮಸ್ಯೆಗಳು ಹಲವು ಇದ್ದರೂ ಒಂದೊಂದಾಗಿ ನಿವಾರಿಸುವ ಪ್ರಯತ್ನವನ್ನು ಆಳಿದವರು ನಡೆಸಿಲ್ಲ. ಗಟಾರು ನವೀಕರಣ, ಬೀದಿ ದೀಪ ದುರಸ್ತಿ ಇಂತಹ ಕೆಲಸದಲ್ಲಿ ಮತ್ತು ಸಭೆ ಆರಂಭಕ್ಕೂ ಮುನ್ನ ಯಾವುದೋ ವಿಷಯಕ್ಕೆ ಏರುಧ್ವನಿಯಲ್ಲಿ ಮಾತನಾಡುತ್ತ ಸಭಾತ್ಯಾಗ ಮಾಡಿದ ದಾಖಲೆ ಇರುವ ಹಿಂದಿನವರು ಒಂದೇ ಒಂದು ದಿನ ಒಟ್ಟಾಗಿ ಕೂತು ಮೆದು ಧ್ವನಿಯಲ್ಲಿ ಚರ್ಚಿಸಿದ ದಾಖಲೆ ಇಲ್ಲ ಎಂಬುದಕ್ಕೆ ಪ್ರತಿಸಭೆಯಲ್ಲೂ ಕಿರಿಚಾಟ ಕೇಳಿದ ಮಾಧ್ಯಮದವರು ಸಾಕ್ಷಿ.

ಎರಡನೇ ಮಹಾಯುದ್ಧದ ಕಾಲದಲ್ಲಿ ಉತ್ತರ ಕನ್ನಡದ ಜನ ಊಟಕ್ಕೆ ಅಕ್ಕಿ ಇಲ್ಲದೆ ಉಪವಾಸ ಬಿದ್ದು ನರಳತೊಡಗಿದಾಗ ಆಗ ಕಲೆಕ್ಟರ್‌ ಆಗಿದ್ದ ಟಪ್ಪರ್‌ ಎನ್ನುವ ಮಹಾಶಯ ರಂಗೂನ್‌ನಿಂದ ಅಕ್ಕಿ ತರಿಸಿ ವಿತರಿಸಿದ್ದ. ಭಾರತೀಯರಿಗೆ ಉಪಕಾರ ಮಾಡಿದ್ದಕ್ಕಾಗಿ ಬ್ರಿಟಿಷ್‌ ಸರ್ಕಾರ ಆತನನ್ನು ಮನೆಗೆ ಕಳಿಸಿತ್ತು. ನಮ್ಮ ಜೀವ ಉಳಿಸಿದ ಎಂದು ಹೊನ್ನಾವರದ ವರ್ತಕರು ಟಪ್ಪರ್‌ ಮಹಾಶಯನ ಹೆಸರಿನಲ್ಲಿ ಕಟ್ಟಿಸಿದ ಕಟ್ಟಡದಲ್ಲಿ ನಡೆಯುತ್ತಿರುವ ಪಟ್ಟಣ ಪಂಚಾಯತದ ಸದಸ್ಯರಾಗುವವರು ಜನರ ಕಷ್ಟ ನಿವಾರಿಸುವ ನಿಷ್ಠೆಯಿಂದ ಬರಬೇಕು. ವಿದ್ಯಾವಂತರು, ಬುದ್ಧಿವಂತರು, ಹಣವಂತರು ಇರುವ ಪಟ್ಟಣ ಪಂಚಾಯತ ಪ್ರದೇಶದಲ್ಲಿ ಚುನಾವಣೆ ಬಂದಾಗ ಪಕ್ಷ ನೋಡದೆ, ಕೆಲಸ ಮಾಡುವ ವ್ಯಕ್ತಿಯನ್ನು ತಮ್ಮ ವಾರ್ಡ್‌ನಿಂದ ಗುರುತಿಸಿ, ಆತನನ್ನು ನಿಲ್ಲಿಸಿ ಗೆಲ್ಲಿಸಿದರೆ ಹೊನ್ನೂರು ತೊನ್ನೂರಾಗದೆ ಉಳಿದೀತು.

Advertisement
Advertisement

Udayavani is now on Telegram. Click here to join our channel and stay updated with the latest news.

Next