Advertisement

ಪಾರ್ಕಿಂಗ್‌ ತಾಣಗಳು ಖಾಲಿ; ರಸ್ತೆಗಳು ಭರ್ತಿ!

11:45 AM Nov 23, 2019 | Team Udayavani |

ಬೆಂಗಳೂರು: ನಗರದ ಹೃದಯಭಾಗದ ರಸ್ತೆಯ ಪಕ್ಕದಲ್ಲಿ ನಿಂತು, ವಾಹನಗಳು ಟ್ರಾಫಿಕ್‌ ಕಿರಿಕಿರಿ ಉಂಟುಮಾಡುತ್ತವೆ. ಆದರೆ, ಅವುಗಳ ನಿಲುಗಡೆಗಾಗಿಯೇ ನಿರ್ಮಿಸಿದ ತಾಣಗಳು ಮಾತ್ರ ವಾಹನಗಳಿಲ್ಲದೆ ಬಿಕೋ ಎನ್ನುತ್ತಿರುತ್ತವೆ. ಇದರಿಂದ ಭೂತದ ಬಂಗಲೆಗಳಂತೆ ಗೋಚರಿಸುತ್ತವೆ!

Advertisement

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಹತ್ತು ಟಿಟಿಎಂಸಿಗಳು ಸೇರಿದಂತೆ ನಗರದಾದ್ಯಂತ 20ಕ್ಕೂ ಅಧಿಕ ಬಹುಮಹಡಿ ವಾಹನಗಳ ನಿಲುಗಡೆ ತಾಣಗಳಿವೆ. ಅದರಲ್ಲಿ ಕೆಲವು ಸಮರ್ಪಕ ಬಳಕೆ ಆಗುತ್ತಿಲ್ಲ. ಬದಲಿಗೆ ರಸ್ತೆ, ಫ‌ುಟ್‌ ಪಾತ್‌ ಹೀಗೆ ಎಲ್ಲೆಂದರಲ್ಲಿ ನಿಲುಗಡೆ ಮಾಡಲಾಗುತ್ತಿದೆ. ಆದ್ದರಿಂದ ಸಾರ್ವಜನಿಕ ವಾಹನ ನಿಲುಗಡೆ ತಾಣಗಳ ಸುತ್ತಲಿನ 500 ಮೀಟರ್‌ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಆದರೂ ವಾಹನ ಸವಾರರು ಅತ್ತ ಮುಖಮಾಡದಿರುವುದು ಸ್ಥಳೀಯ ಸಂಸ್ಥೆಗಳಿಗೆ ತಲೆನೋವಾಗಿ ಪರಿಣಮಿಸಿದೆ. ನಗರದಲ್ಲಿ ಚದರಡಿ ಜಾಗವೂ ಸಾವಿರಾರು ರೂಪಾಯಿ ಬೆಲೆಬಾಳುತ್ತದೆ. ಆದರೆ, ದಿನವಿಡೀ ಎಲ್ಲೆಂದರಲ್ಲಿ ನಿಲುಗಡೆಯಾಗುವ ವಾಹನಗಳು ಸಾಕಷ್ಟು ಜಾಗ ಕಬಳಿಸುತ್ತಿವೆ. ಬಿಎಂಟಿಸಿ ವ್ಯಾಪ್ತಿಯಲ್ಲೇ ಹತ್ತು ಟಿಟಿಎಂಸಿಗಳಲ್ಲಿ ಎರಡು ಲಕ್ಷ ಚದರಡಿ ಜಾಗ ಇದೆ. ಅವುಗಳನ್ನು ವಿವಿಧ ಏಜೆನ್ಸಿಗಳಿಗೆ ಗುತ್ತಿಗೆ ನೀಡಲಾಗಿದೆ.

ಈ ಪೈಕಿ ಕೆಲವು ಸಂಪೂರ್ಣವಾಗಿ ಭರ್ತಿ ಆಗಿರುವುದಿಲ್ಲ. ಇದಕ್ಕೆ ಪ್ರತಿಯಾಗಿ ಅಕ್ಕಪಕ್ಕದ ರಸ್ತೆಗಳಲ್ಲಿ ವಾಹನ ನಿಲುಗಡೆ ಆಗಿರುತ್ತವೆ. ಒಂದೆಡೆ ಇದು ಅಶಿಸ್ತು ಮತ್ತು ಪಾದಚಾರಿಗಳಿಗೆ ಕಿರಿಕಿರಿ ಉಂಟುಮಾಡಿದರೆ, ಮತ್ತೂಂದೆಡೆ ಸಂಚಾರದಟ್ಟಣೆಗೂ ಕಾರಣವಾಗುತ್ತಿದೆ. ಆದ್ದರಿಂದ ಅಲ್ಲೆಲ್ಲಾ “ನೋ ಪಾರ್ಕಿಂಗ್‌’ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಇದಲ್ಲದೆ, ಜೆಸಿ ರಸ್ತೆ, ಬಿವಿಕೆ ಅಯ್ಯಂಗಾರ್‌ ರಸ್ತೆ, ಜಯನಗರ ಶಾಪಿಂಗ್‌ ಕಾಂಪ್ಲೆಕ್ಸ್‌, ಯುಟಿಲಿಟಿ ಬಿಲ್ಡಿಂಗ್‌, ಕೆ.ಆರ್‌. ಮಾರುಕಟ್ಟೆ ಸೇರಿದಂತೆ ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ಬಿಬಿಎಂಪಿಗೆ ಸೇರಿದ (ಕೆಲವು ಖಾಸಗಿ ಸಹಭಾಗಿತ್ವದಲ್ಲಿವೆ) ಪಾರ್ಕಿಂಗ್‌ ತಾಣಗಳನ್ನು ನಿರ್ಮಿಸಲಾಗಿದೆ. ಗಂಟೆಗೆ ದ್ವಿಚಕ್ರ ವಾಹನಗಳಿಗೆ 10 ರೂ. ಹಾಗೂ ನಾಲ್ಕು ಚಕ್ರದ ವಾಹನಗಳಿಗೆ 30 ರೂ. ಶುಲ್ಕ ನಿಗದಿಪಡಿಸಲಾಗಿದೆ.

Advertisement

ಈ ಬಹುಮಹಡಿ ಪಾರ್ಕಿಂಗ್‌ ತಾಣಗಳು ವಾಣಿಜ್ಯ ಚಟುವಟಿಕೆಗಳು ಹೆಚ್ಚಿರುವ ಕಡೆಗಳಲ್ಲೇ ನಿರ್ಮಿಸಲಾಗಿದೆ. ಇದರಿಂದ ವ್ಯಾಪಾರಿಗಳು, ಗ್ರಾಹಕರಿಗೆ ಅನುಕೂಲ ಆಗುತ್ತದೆ. ಅಷ್ಟೇ ಅಲ್ಲ, ಲಾಸ್ಟ್‌ಮೈಲ್‌ ಕನೆಕ್ಟಿವಿಟಿ ಕೂಡ ಇದೆ. ಬಹುತೇಕ ಕಡೆಗಳಲ್ಲಿ ಲಭ್ಯವಿರುವ ಜಾಗದಲ್ಲಿ ಶೇ. 60-70ರಷ್ಟೂ ಬಳಕೆ ಆಗುತ್ತಿಲ್ಲ. ಈ ತಾಣಗಳ ಸುತ್ತ “ನೋ ಪಾರ್ಕಿಂಗ್‌’ ಫ‌ಲಕಗಳ ಅಳವಡಿಕೆ ಜತೆಗೆ ಬೆಂಗಳೂರು ಸಂಚಾರ ಪೊಲೀಸರು, ಉದ್ದೇಶಿತ ತಾಣಗಳ ಆಸುಪಾಸು ಬೇಕಾಬಿಟ್ಟಿ ವಾಹನಗಳ ನಿಲುಗಡೆ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸಬೇಕು. ನಿಯಮ ಉಲ್ಲಂಘಿಸುವವರಿಗೆ ಭಾರಿ ಪ್ರಮಾಣದ ದಂಡ ವಿಧಿಸಬೇಕು ಎಂದು ಈಚೆಗೆ ನಡೆದ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಸವಾರರಲ್ಲೂ ಬೇಕಿದೆ ಜಾಗೃತಿ: ಈಗಾಗಲೇ ಬಿವಿಕೆ ಅಯ್ಯಂಗಾರ್‌ ರಸ್ತೆಯಲ್ಲಿರುವ ಮಹಾರಾಜ ಕೆಂಪೇಗೌಡ ಮಲ್ಟಿಲೆವೆಲ್‌ ಪಾರ್ಕಿಂಗ್‌ ಸುತ್ತ ಸೈನೇಜ್‌ ಗಳನ್ನು ಅಳವಡಿಸಲಾಗಿದೆ. ಉಳಿದ ಕಡೆಗಳಲ್ಲೂ ಇದೇ ಮಾದರಿಯಲ್ಲಿ ವಾಹನ ಸವಾರರಿಗೆ ಅನುಕೂಲವಾಗುವಂತೆ ಸಂಕೇತಗಳನ್ನು ಅಳವಡಿಸುವ ಕಾರ್ಯ ನಡೆದಿದೆ. ಶುಲ್ಕ ಪಾವತಿಸಿ, ಪಾರ್ಕಿಂಗ್‌ ಮಾಡುವ ಸಂಸ್ಕೃತಿ ನಮ್ಮಲ್ಲಿ ಇನ್ನೂ ಬೆಳೆಯದಿರುವುದು ಕೂಡ ಇದಕ್ಕೆ ಕಾರಣ. ಈ ನಿಟ್ಟಿನಲ್ಲಿ ಜನರಲ್ಲೂ ಜಾಗೃತಿಯ ಅವಶ್ಯಕತೆ ಇದೆ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್‌ (ಮುಖ್ಯ ರಸ್ತೆಗಳು) ಎಸ್‌. ಸೋಮಶೇಖರ ತಿಳಿಸುತ್ತಾರೆ.

ಬಿಎಂಟಿಸಿ ವ್ಯಾಪ್ತಿಯ ಬಹುತೇಕ ಎಲ್ಲ ಟಿಟಿಎಂಸಿ ಪಾರ್ಕಿಂಗ್‌ ತಾಣಗಳು ವಾಹನಗಳ ನಿಲುಗಡೆಯಿಂದ ಭರ್ತಿಯಾಗಿವೆ. ಶಾಂತಿನಗರ, ಮೈಸೂರು ರಸ್ತೆಯಂತಹ ಕೆಲವು ಕಡೆಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ವಾಹನಗಳ ಪಾರ್ಕಿಂಗ್‌ ಆಗುತ್ತಿದೆ. ಯಶವಂತಪುರ ಸೇರಿದಂತೆ ಅಲ್ಲೊಂದು ಇಲ್ಲೊಂದು ಸ್ವಲ್ಪ ಕಡಿಮೆ ಇರುವುದು ಕಾಣಬಹುದು ಎಂದು ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ (ವಾಣಿಜ್ಯ) ಶ್ರೀರಾಮ್‌ ಮುಲ್ಕಾವನ್‌ ಸ್ಪಷ್ಟಪಡಿಸಿದ್ದಾರೆ.

ಬೇಕಿದೆ ಅಟೋಮೆಟೆಡ್‌ ಕಾರು ಪಾರ್ಕಿಂಗ್‌ ವ್ಯವಸ್ಥೆ : ನಗರದಲ್ಲಿ ಅಟೋಮೆಟೆಡ್‌ ಕಾರು ಪಾರ್ಕಿಂಗ್‌ ವ್ಯವಸ್ಥೆ ಪರಿಚಯಿಸುವ ಅವಶ್ಯಕತೆ ಇದೆ. ಇದರಿಂದ ಜಾಗದ ಸದ್ಬಳಕೆ ಜತೆಗೆ ಖಾಲಿ ಜಾಗ ಮತ್ತು ವಾಹನ ನಿಲ್ಲಿಸಿದ ಜಾಗದ ಹುಡುಕಾಟದ ಸಮಯ ಉಳಿತಾಯ ಆಗುತ್ತದೆ. ದೆಹಲಿ, ಕೊಲ್ಕತ್ತದಲ್ಲಿ ಈ ರೀತಿಯ ವ್ಯವಸ್ಥೆ ಇದೆ

 

-ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next