Advertisement

Paris ಟಿಟಿ: ವನಿತಾ ತಂಡದ ಆಟ ಅಂತ್ಯ; ಗೆದ್ದದ್ದು ಅರ್ಚನಾ ಕಾಮತ್‌ ಮಾತ್ರ

01:37 AM Aug 08, 2024 | Team Udayavani |

ಪ್ಯಾರಿಸ್‌: ವನಿತಾ ಟೇಬಲ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಭಾರತದ ಆಟ ಕ್ವಾರ್ಟರ್‌ ಫೈನಲ್‌ನಲ್ಲಿ ಕೊನೆಗೊಂಡಿದೆ. ಬುಧವಾರದ ಮುಖಾಮುಖೀಯಲ್ಲಿ ಜರ್ಮನಿ 3-1 ಅಂತರದಿಂದ ಭಾರತವನ್ನು ಪರಾಭವಗೊಳಿಸಿತು. ಭಾರತಕ್ಕೆ ಏಕೈಕ ಗೆಲುವು ತಂದಿತ್ತವರು ಕರಾವಳಿ ಮೂಲದ ಕನ್ನಡತಿ ಅರ್ಚನಾ ಕಾಮತ್‌ ಎಂಬುದಷ್ಟೇ ಸಮಾಧಾನದ ಸಂಗತಿ.

Advertisement

ಆರಂಭದ ಡಬಲ್ಸ್‌ನಲ್ಲಿ ಶ್ರೀಜಾ ಅಕುಲಾ-ಅರ್ಚನಾ ಕಾಮತ್‌ ಅವರನ್ನು ತುವಾನ್‌ ವಾನ್‌-ಕ್ಸಿಯೋನಾ ಶಾನ್‌ 11-5, 8-11, 12-10, 11-6ರಿಂದ ಪರಾಭವಗೊಳಿಸಿದರು. ಮೊದಲ ಸಿಂಗಲ್ಸ್‌ನಲ್ಲಿ ಅನುಭವಿ ಆಟಗಾರ್ತಿ ಮಣಿಕಾ ಬಾತ್ರಾ ಯಶಸ್ಸು ಕಾಣಲಿಲ್ಲ. ಅವರು ಆ್ಯನೆಟ್‌ ಕೌಫ್ಮ್ಯಾನ್‌ ವಿರುದ್ಧ 11-8, 5-11, 7-11, 5-11ರಿಂದ ಸೋಲನು ಭವಿಸಿದರು. ಜರ್ಮನಿ 2-0 ಮುನ್ನಡೆ ಸಾಧಿಸಿತು.

ಅರ್ಚನಾ ಕಾಮತ್‌ ಜಯ
ಭಾರತ ಉಳಿದ ಮೂರೂ ಪಂದ್ಯಗಳನ್ನು ಗೆಲ್ಲಬೇಕಾದ ಹಂತದಲ್ಲಿ ಅರ್ಚನಾ ಕಾಮತ್‌ ಭರವಸೆ ಮೂಡಿಸಿದರು. ಅವರು ಕ್ಸಿಯೋನಾ ಶಾನ್‌ಗೆ 11-6, 11-7, 11-7ರಿಂದ ಆಘಾತವಿಕ್ಕಿ ಭಾರತದ ಖಾತೆ ತೆರೆದರು.

ಆದರೆ ಮುಂದಿನ ಸಿಂಗಲ್ಸ್‌ನಲ್ಲಿ ಶ್ರೀಜಾ ಅಕುಲಾ ಎಡವಿದರು. ಆ್ಯನೆಟ್‌ ಕೌಫ್ಮ್ಯಾನ್‌ 11-6, 11-7, 11-7ರಿಂದ ಶ್ರೀಜಾಗೆ ಸೋಲುಣಿಸಿದರು. ಅಲ್ಲಿಗೆ ಭಾರತ ಒಲಿಂಪಿಕ್ಸ್‌ ಟಿಟಿ ಆಟ ಅಂತ್ಯಗೊಂಡಿತು.ಸೋಮವಾರ ವನಿತಾ ತಂಡ ತನಗಿಂತ ಉನ್ನತ ರ್‍ಯಾಂಕ್‌ನ ರೊಮೇನಿಯಾವನ್ನು 3-2ರಿಂದ ಹಿಮ್ಮೆಟ್ಟಿಸಿ ಕ್ವಾರ್ಟರ್‌ ಫೈನಲ್‌ಗೆ ಏರಿತ್ತು.

ಮಂಗಳೂರು ಮೂಲ
ಇಂದು ಜಯ ಸಾಧಿಸಿದ ಅರ್ಚನಾ ಕಾಮತ್‌ ಅವರು ಮಂಗಳೂರು ಕೊಂಚಾಡಿ ನಿವಾಸಿ ಡಾ| ಗಿರೀಶ್‌ ಕಾಮತ್‌ ಹಾಗೂ ಡಾ| ಅನುರಾಧ ಕಾಮತ್‌ ದಂಪತಿಯ ಪುತ್ರಿ.

Advertisement

ಮುಂದೆ ದೇಶಕ್ಕಾಗಿ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲೇ ಬೇಕು ಎನ್ನುವ ಛಲವಿದೆ. ಇದಕ್ಕಾಗಿ ಸತತ ಅಭ್ಯಾಸ ಮಾಡುತ್ತೇನೆ, ಇನ್ನಷ್ಟು ಉತ್ತಮ ಪ್ರದರ್ಶನ ನೀಡುತ್ತೇನೆ.
-ಅರ್ಚನಾ ಕಾಮತ್‌

ಚಿಕ್ಕ ವಯಸ್ಸಿಂದಲೂ ಒಲಿಂಪಿಕ್ಸ್‌ ಪದಕ ಗೆಲ್ಲುವ ಆಸೆ ಇತ್ತು. ಪಾಲ್ಗೊಳ್ಳುವ ಕನಸು ಈ ಬಾರಿ ನನಸಾಗಿದೆ. ಆ ಕ್ಷೇತ್ರದ ದಿಗ್ಗಜರೊಂದಿಗೆ ಆಟವಾಡಿದ ಅನುಭವ ಪಡೆದಿದ್ದಾಳೆ. ಮುಂದೆ ದೇಶಕ್ಕಾಗಿ ಪದಕ ಗೆಲ್ಲುವ ನಿರೀಕ್ಷೆ ಇದೆ, ಈಗಿನ ಸಾಧನೆ ಬಗ್ಗೆ ಹೆಮ್ಮೆಯಿದೆ.
-ಡಾ| ಗಿರೀಶ್‌ ಕಾಮತ್‌, ತಂದೆ

Advertisement

Udayavani is now on Telegram. Click here to join our channel and stay updated with the latest news.

Next