Advertisement

ಪೋಷಕತ್ವ ಯೋಜನೆ: ಉಡುಪಿಯಲ್ಲಿ ಶೂನ್ಯ ದತ್ತು

10:48 PM Sep 16, 2020 | mahesh |

ಉಡುಪಿ: ಪೋಷಕರ ಪ್ರೀತಿಯಿಂದ ವಂಚಿತರಾದ ಮಕ್ಕಳಿಗೆ ತಾತ್ಕಾಲಿಕ ಪರಿಹಾರ ನೀಡುವ ಸರಕಾರದ ಪೋಷಕತ್ವ ಯೋಜನೆಯಡಿ ಮಕ್ಕಳನ್ನು ದತ್ತು ಪಡೆಯಲು ಉಡುಪಿಯ ಯಾರೂ ಮುಂದೆ ಬಂದಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಉಡುಪಿಯಲ್ಲಿ ಶೂನ್ಯ ದತ್ತು ದಾಖಲಾಗಿದೆ.

Advertisement

ಬಾಲ ನ್ಯಾಯ ಕಾಯ್ದೆ ಅನ್ವಯ ಮಕ್ಕಳ ಪಾಲನೆ ಹಾಗೂ ಪೋಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ತಾತ್ಕಾಲಿಕವಾಗಿ ಒಂದು ವರ್ಷದ ಅವಧಿಗೆ ಮಗುವನ್ನು ಪೋಷಕತ್ವ ಯೋಜನೆಯಡಿ ದತ್ತು ನೀಡಲಾಗುತ್ತದೆ. ಈ ಯೋಜನೆಯಡಿ ಉಡುಪಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಕ್ಕಳನ್ನು ದತ್ತು ಪಡೆಯುವ ಸಂಖ್ಯೆ ತೀರಾ ಕಡಿಮೆ ಇದೆ.

ದತ್ತು ತೆಗೆದುಕೊಳ್ಳುವವರಿಲ್ಲ!
2016ರಿಂದ ಇಲ್ಲಿಯವರೆಗೆ ಉಡುಪಿ ಜಿಲ್ಲೆಯಲ್ಲಿ ಕೇವಲ 2 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ ಅವುಗಳು ವಿವಿಧ ಕಾರಣಗಳಿಂದ ತಿರಸ್ಕೃತಗೊಂಡಿದೆ. ಪ್ರಸ್ತುತ ಈ ಯೋಜನೆ ಅಡಿಯಲ್ಲಿ ಉಡುಪಿಯಲ್ಲಿ 7 ಅರ್ಹ ಮಕ್ಕಳನ್ನು ಗುರುತಿಸಲಾಗಿದೆ.

ಯಾಕೆ ಹಿನ್ನಡೆ?
ಈ ಯೋಜನೆಯಡಿ ಮಗುವನ್ನು ಪಡೆದುಕೊಂಡವರು ಪ್ರತಿವರ್ಷ ದತ್ತು ಪ್ರಕ್ರಿಯೆ ನವೀಕರಣ ಮಾಡಬೇಕು. 18 ವರ್ಷದ ವರೆಗೂ ಮಗುವಿನ ಪೋಷಕರ ಹೆಸರು
ತಂದೆ-ತಾಯಿ ಪಟ್ಟಿಯಲ್ಲಿ ಸೇರ್ಪಡೆಯಾಗುವುದಿಲ್ಲ. ಜತೆಗೆ ಹೊರ ಜಿಲ್ಲೆ, ರಾಜ್ಯ, ವಿದೇಶಗಳ‌ಲ್ಲಿ ವಾಸಿಸುವವರಿಗೆ ಪೋಷಕತ್ವದಡಿಯಲ್ಲಿ ದತ್ತು ನೀಡಲು ಅವಕಾಶವಿಲ್ಲದ ಕಾರಣದಿಂದ ಅಂತಹವರಿಗೆ ಮಕ್ಕಳ ಅಗತ್ಯವಿದ್ದರೂ ಪೋಷಕತ್ವದಡಿಯಲ್ಲಿ ಮಕ್ಕಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.

ಪೋಷಕತ್ವ ಹೇಗೆ?
ಯೋಜನೆ ಪ್ರಕಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಅರ್ಜಿ ಸಲ್ಲಿಸಿದವರ ಕೌಟುಂಬಿಕ ಹಿನ್ನೆಲೆಯನ್ನು ಪರಿಶೀಲಿಸಲಾಗುತ್ತದೆ. ಮಗುವಿನ ಬೆಳವಣಿಗೆಗೆ ಅಲ್ಲಿ ಪೂರಕ ವಾತಾವರಣವಿದ್ದರೆ ಮಗುವನ್ನು ವಶಕ್ಕೆ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ರಕ್ಷಣಾಧಿಕಾರಿ ಮಕ್ಕಳನ್ನು ಸ್ವೀಕರಿಸಿದವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಮಗು ಹಾಗೂ ಕುಟುಂಬದ ಹೊಂದಾಣಿಕೆಯ ಆಧಾರದ ಮೇರೆಗೆ ಮಕ್ಕಳ ಕಲ್ಯಾಣ ಸಮಿತಿ ಮಗುವಿಗೆ 18 ವರ್ಷ ಆಗುವವರೆಗೂ ಪೋಷಕತ್ವ ಮುಂದುವರಿಸಲು ಯೋಜನೆಯಡಿ ಅನುಕೂಲ ಕಲ್ಪಿಸಬಹುದಾಗಿದೆ. ಈ ಮಧ್ಯೆ ಮಗು ಇಲಾಖೆಗೆ ವಾಪಸ್‌ ಬರಲು ಇಚ್ಛೆ ವ್ಯಕ್ತಪಡಿಸಿದರೆ ಅದಕ್ಕೂ ಅವಕಾಶವಿದೆ.

Advertisement

ಆರು ತಿಂಗಳು ಅವಧಿ ಮುಂದುವರಿಕೆ
6ರಿಂದ 18 ವರ್ಷದೊಳಗಿನ ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಅರ್ಹ ಪೋಷಕರಿಗೆ ದತ್ತು ನೀಡಲಾಗುತ್ತದೆ. ಮೊದಲ ಆರು ತಿಂಗಳು ಪೋಷಕರು ಹಾಗೂ ಮಗುವಿನ ಹೊಂದಾಣಿಕೆ ಗಮನದಲ್ಲಿಟ್ಟುಕೊಂಡು ಮುಂದಿನ ಆರು ತಿಂಗಳು ಅವಧಿಯನ್ನು ಮುಂದುವರಿಸಲಾಗುತ್ತದೆ. ಆದರೆ ಜಿಲ್ಲೆಯಲ್ಲಿ ಈ ಯೋಜನೆಗೆ ಪೋಷಕರು ಹೆಚ್ಚು ಒಲವು ತೋರಿಸುತ್ತಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಮುಂದೆ ಬಂದು ಮಕ್ಕಳಿಗೆ ಪರಿವಾರದ ಪ್ರೀತಿ ನೀಡಬೇಕಿದೆ.
-ಸದಾನಂದ ನಾಯಕ್‌, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ, ಉಡುಪಿ.

6 10 ವರ್ಷದೊಳಗಿನ ಮಕ್ಕಳ ದತ್ತು ಸ್ವೀಕಾರ
2 ಸಲ್ಲಿಕೆಯಾಗಿರುವ ಅರ್ಜಿ

ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next