Advertisement

ಪ್ರೀತಿಗೆ ಪೋಷಕರ ವಿರೋಧ: ಪ್ರೇಮಿಗಳಿಬ್ಬರ ಆತ್ಮಹತ್ಯೆ

11:50 AM Dec 05, 2018 | Team Udayavani |

ಬೆಂಗಳೂರು: ಪೋಷಕರು ತಮ್ಮ ಪ್ರೀತಿಗೆ ನಿರಾಕರಿಸಿದಕ್ಕೆ ನೊಂದ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಮಾರಸ್ವಾಮಿ ಲೇಔಟ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಕುಮಾರಸ್ವಾಮಿ ಲೇಔಟ್‌ನ ರಾಮಕೃಷ್ಣನಗರ ನಿವಾಸಿ ಶ್ರೀಹರಿ (25) ಹಾಗೂ ಮಲ್ಲೇಶ್ವರದ ನಿಸರ್ಗ (18) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಸ್ಥಳದಲ್ಲಿ ಡೆತ್‌ನೋಟ್‌ ಪತ್ತೆಯಾಗಿದ್ದು, ಪೋಷಕರು ಪ್ರೀತಿಗೆ ನಿರಾಕರಿಸಿದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಉಲ್ಲೇಖೀಸಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಶ್ರೀಹರಿ ಅವರ ತಂದೆ ಮೃತಪಟ್ಟಿದ್ದು, ತಾಯಿ ಜತೆ ಬೆಂಗಳೂರಿನ ರಾಮಕೃಷ್ಣನಗರದಲ್ಲಿ ವಾಸವಾಗಿದ್ದರು. ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದರು. ನಿಸರ್ಗ, ನಗರದ ಕಾಲೇಜೊಂದರಲ್ಲಿ ಪಿಯುಸಿ ವ್ಯಾಸಂಗ ಮಾಡುತಿದ್ದು, ಮಲ್ಲೇಶ್ವರದಲ್ಲಿ ವಾಸವಾಗಿದ್ದರು.
ಶ್ರೀಹರಿ ಮತ್ತು ನಿಸರ್ಗ ದೂರದ ಸಂಬಂಧಿಗಳಾಗಿದ್ದು, ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು.

ಆರು ತಿಂಗಳ ಹಿಂದೆ ಪ್ರೀತಿಯ ವಿಚಾರ ತಿಳಿದ ನಿಸರ್ಗ ಅವರ ಪೋಷಕರು ಪುತ್ರಿಗೆ ಬೈದು ಬುದ್ಧಿ ಹೇಳಿದ್ದರು. ಆದರೂ ಪ್ರೇಮಿಗಳು ಆಗಾಗ್ಗೆ ಭೇಟಿಯಾಗುತ್ತಿದ್ದರು. ಕೆಲ ದಿನಗಳ ಹಿಂದೆ ಶ್ರೀಹರಿಯ ತಾಯಿ ಕೋಲಾರಕ್ಕೆ ಹೋಗಿದ್ದರು. ಮನೆಯಲ್ಲಿ ಶ್ರೀಹರಿ ಒಬ್ಬರೇ ಇದ್ದರು. ಸೋಮವಾರ ನಿಸರ್ಗ ಅವರನ್ನು ಮನೆಗೆ ಕರೆಸಿಕೊಂಡಿದ್ದ ಶ್ರೀಹರಿ, ನಮ್ಮ ಪ್ರೀತಿಯನ್ನು ಪೋಷಕರು ಒಪ್ಪುತ್ತಿಲ್ಲ.

ಆತ್ಮಹತ್ಯೆಯೊಂದೆ ಮಾರ್ಗ ಎಂದು ನಿರ್ಧರಿಸಿ, ಮನೆಯಲ್ಲೇ ಇಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ತಡರಾತ್ರಿ 11.30ರ ಸುಮಾರಿಗೆ ಮನೆ ಮಾಲೀಕರು ಗಮನಿಸಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು. ಪ್ರಕರಣ ಕುಮಾರಸ್ವಾಮಿ ಲೇಔಟ್‌ ಠಾಣೆಯಲ್ಲಿ ದಾಖಲಾಗಿದೆ.

Advertisement

ಡೆತ್‌ನೋಟ್‌: ನಮ್ಮ ಸಾವಿಗೆ ಬೇರೆ ಯಾರು ಕಾರಣರಲ್ಲ. ನೀವು ನಮ್ಮ ಪ್ರೀತಿಯನ್ನು ಒಪ್ಪುತ್ತಿಲ್ಲ. ಹೀಗಾಗಿ ಒಬ್ಬರನೊಬ್ಬರು ಬಿಟ್ಟು ಬದುಕಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಪ್ರೇಮಿಗಳು ಡೆತ್‌ನೋಟ್‌ನಲ್ಲಿ ಬರೆದಿರುವುದಾಗಿ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next