Advertisement

ಪರಶುರಾಮ ಥೀಂ ಪಾರ್ಕ್‌: ಇದು ತುಳುನಾಡ ಹೆಮ್ಮೆ

02:09 PM Jan 26, 2023 | Team Udayavani |

ಕಾರ್ಕಳದ ಉಮ್ಮಿಕ್ಕಳ ಬೆಟ್ಟದ ತಪ್ಪಲಿನಲ್ಲಿ ನಿಂತು ತಲೆ ಎತ್ತಿ ನೋಡಿದಾಗ ಈಗ ಮೂಡುವುದು ಕೇವಲ ಸಂತಸ ಮಾತ್ರವಲ್ಲ, ಅದೊಂದು ಅವರ್ಣನೀಯ ಅನುಭೂತಿ. ನಿಸರ್ಗ ರಮಣೀಯ ಬೆಟ್ಟಕ್ಕೊಂದು ಈಗ ವಿಶೇಷ ಪಾವಿತ್ರ್ಯ ಬಂದಿದೆ. ಅಲ್ಲಿ ಈಗ ತುಳುನಾಡಿನ ಸೃಷ್ಟಿಕರ್ತ ಪರಶುರಾಮ ನೆಲೆಯಾಗಲಿದ್ದಾರೆ.

Advertisement

ಪರಶುರಾಮ ತುಳುನಾಡನ್ನೂ ಒಳಗೊಂಡ ಕರ್ನಾ ಟಕದ ಕರಾವಳಿ ತೀರದ ಸೃಷ್ಟಿಕರ್ತ. ದಂಡಕಾರಣ್ಯದ ಪಶ್ಚಿಮಕ್ಕೆ ಇರುವ ಈ ಕರಾವಳಿಯ ಭಾಗವನ್ನು ಮಹರ್ಷಿ ಪರಶುರಾಮರು ಸೃಷ್ಟಿಸಿದ್ದು ಎಂಬುದು ಪುರಾಣ ಪ್ರತೀತಿ. ಸುಮಾರು 5,000 ವರ್ಷಗಳಿ ಗಿಂತಲೂ ಹಿಂದೆ ಭಾರತದ ಪುಣ್ಯ ಭೂಮಿಯಲ್ಲಿ ಜೀವಿಸಿದ್ದ ಪರಶುರಾಮ, ಮಹರ್ಷಿ ಜಮದಗ್ನಿಯವರ ಪುತ್ರನಷ್ಟೇ ಅಲ್ಲ, ವಿಷ್ಣುವಿನ 6ನೇ ಅವತಾರ ಎಂದೇ ಪರಿಗಣಿಸಲಾಗಿದೆ.
ಕರಾವಳಿ ಪರಶುರಾಮನ ಸೃಷ್ಟಿ ಎಂದು ಹೆಸರಾಗಿ ದ್ದರೂ ಪರಶುರಾಮನಿಗೆ ಸಂಬಂಧಪಟ್ಟ ಯಾವುದೇ ಕುರುಹುಗಳು ಇರಲಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಕಳದಲ್ಲಿ ಒಂದು ಪರಶುರಾಮ ಥೀಂ ಪಾರ್ಕ್‌ ನಿರ್ಮಾಣ ಮಾಡಬೇಕೆಂಬ ಯೋಚನೆ 2017ರಲ್ಲಿ ಮೂಡಿತು. ಪುಣೆಯಲ್ಲಿ ನಡೆದ ಕರಾವಳಿ ಬಂಧುಗಳ “ಸ್ನೇಹ ಮಿಲನ’ ಕಾರ್ಯಕ್ರಮದಲ್ಲಿ ಈ ಸಂಗತಿಯನ್ನು ಪ್ರಸ್ತಾವಿಸಿದ್ದು ಮಾತ್ರವಲ್ಲ, ನಿರ್ಮಾಣ ಆರಂಭವಾದ ಎರಡು ವರ್ಷಗಳಲ್ಲಿ ಯೋಜನೆಯನ್ನು ಪೂರ್ಣಗೊಳಿ ಸುವುದಾಗಿಯೂ ಭರವಸೆ ಕೊಟ್ಟಿದ್ದೆನು. ಆ ವಾಗ್ಧಾನ ಈಗ ಸಾಕಾರಗೊಳ್ಳುತ್ತಿದೆ. ಇದೇ ಜ. 27,28,29ರಂದು ಪರಶುರಾಮ ಥೀಂ ಪಾರ್ಕ್‌ ಅನಾವರಣಗೊಳ್ಳುತ್ತಿದೆ.

ಕಾರ್ಕಳದಲ್ಲಿ ಸ್ಥಾಪನೆಗೊಂಡಿರುವ ಈ ಪ್ರತಿಮೆ ಇಡೀ ತುಳುನಾಡು ಹಾಗೂ ಕರಾವಳಿಯ ಪ್ರತೀಕ. ಪರಶುರಾಮ ಥೀಂ ಪಾರ್ಕ್‌ ಮೂರು ಹಂತಗಳಲ್ಲಿ ಅನುಷ್ಠಾನಗೊಳ್ಳುವ ಯೋಜನೆ. ಈಗ ಉದ್ಘಾಟನೆ ಯಾಗುತ್ತಿರುವುದು ಮೊದಲ ಹಂತದ ಕಾರ್ಯ. ಕಾರ್ಕಳ ಸಮೀಪದ ಉಮ್ಮಿಕಳ ಬೆಟ್ಟದಲ್ಲಿ ಸೃಷ್ಟಿಕರ್ತನ ಪ್ರತಿಮೆ ಅನಾವರಣವಾಗುತ್ತಿದೆ. ನೆಲದಿಂದ 57 ಅಡಿ ಎತ್ತರದಲ್ಲಿ 33 ಅಡಿಯ, 15 ಟನ್‌ ಭಾರದ ಸುಂದರ ಕಂಚಿನ ಮೂರ್ತಿ ಸ್ಥಾಪನೆಯಾಗಲಿದೆ. ಪರಶುರಾಮನ ಈ ಪ್ರತಿಮೆ ನಿರ್ಮಾಣಕ್ಕೆ 15 ಟನ್‌ ಕಂಚು ಮತ್ತು ಉಕ್ಕು ಬಳಸಲಾಗಿದೆ. 7 ತಿಂಗಳ ಹಿಂದೆ ಪ್ರತಿಮೆ ನಿರ್ಮಾಣ ಕಾರ್ಯ ಆರಂಭವಾಯಿತು. ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಕೃಷ್ಣ ನಾಯ್ಕ ಅವರು ಮೂರ್ತಿಗೆ ರೂಪ ಕೊಟ್ಟಿದ್ದಾರೆ.

ಹೇಳಿ ಕೇಳಿ ಕಾರ್ಕಳ ಪಶ್ಚಿಮಘಟ್ಟದ ತಪ್ಪಲಿನಲ್ಲಿ ಬೆಟ್ಟಗುಡ್ಡಗಳಿಂದ ಆವೃತವಾದ ಪ್ರದೇಶ. ಮಳೆಗಾಲ ದಲ್ಲಿ ಗುಡುಗು ಹಾಗೂ ಮಿಂಚಿನ ಸಮಸ್ಯೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಕಂಚು ಹಾಗೂ ಇನ್ನಿತರ ಲೋಹ ಮಿಶ್ರಣದ ಮೂಲಕ ಪರಶುರಾಮನ ಮೂರ್ತಿಯನ್ನು ಮಿಂಚು ಪ್ರತಿಬಂಧಕವಾಗಿ ರೂಪಿಸಲಾಗಿದೆ. ಪ್ರತಿಮೆ ನಿರ್ಮಾಣಕ್ಕೆ 70 ಕಾರ್ಮಿಕರು ಅಹರ್ನಿಶಿ ದುಡಿದಿದ್ದಾರೆ. ಮೊದಲ ಹಂತದ ಯೋಜನೆಗೆ ಒಟ್ಟು 15 ಕೋಟಿ ರೂ. ವೆಚ್ಚವಾಗುತ್ತಿದೆ. ಪ್ರತಿಮೆಗೆ 2 ಕೋಟಿ ರೂ. ವಿನಿಯೋಗಿಸಲಾಗಿದೆ.

ಪ್ರವಾಸೋದ್ಯಮ ತಾಣ
ಪರಶುರಾಮ ಥೀಂ ಪಾರ್ಕ್‌ನ ಉದ್ದೇಶಗಳ ಪೈಕಿ ಪ್ರವಾಸೋದ್ಯಮದ ಉತ್ತೇಜನವೂ ಸೇರಿದೆ. ಪ್ರವಾ ಸೋದ್ಯಮಕ್ಕೆ ಪೂರಕವಾಗಿಯೇ ನಾವು ಯೋಜನೆಯ ನೀಲನಕ್ಷೆ ರೂಪಿಸಿದ್ದೆವು. ಪ್ರತಿಮೆಯ ಜತೆಗೆ ಪಾರ್ಕ್‌ ನಲ್ಲಿ ಆಡಿಯೋ ವಿಶ್ಯುವಲ್‌ ಕೊಠಡಿ, ಸುಸಜ್ಜಿತ ಆರ್ಟ್‌ ಮ್ಯೂಸಿಯಂ, ನೇಯ್ಗೆ ಡೆಕ್‌ ಗ್ಯಾಲರಿ, ಸಾವಿರ ಮಂದಿ ಆಸನ ಸಾಮರ್ಥ್ಯದ ಬಯಲು ರಂಗ ಮಂದಿರ, ಭಜನ ಮಂದಿರ ಸಹಿತ ಹಲವು ವ್ಯವಸ್ಥೆ ಮಾಡಿದ್ದೇವೆ. ಉಮ್ಮಿಕ್ಕಳ ಬೆಟ್ಟದ ಮೇಲೆ ನಿಂತು ಸಂಜೆಯ ಸೂರ್ಯಾಸ್ತವನ್ನು ನೋಡುವುದೇ ಒಂದು ಸೊಬಗು. ತುಳುನಾಡಿನ ಕಡಲತಡಿಯ ರಮಣೀಯ ದೃಶ್ಯವನ್ನು ಈ ಬೆಟ್ಟದ ಮೇಲೆ ನಿಂತು ಕಣ್ತುಂಬಿಸಿ ಕೊಳ್ಳಬಹುದು. ಮುಂದಿನ ಹತ್ತು ವರ್ಷದ ಅವಧಿ ಯಲ್ಲಿ ಪರಶುರಾಮ ಥೀಂ ಪಾರ್ಕ್‌ನ್ನು ಕರ್ನಾಟಕದ ಮಾತ್ರವಲ್ಲ ದೇಶದ ನಂಬರ್‌ 1 ಪ್ರವಾಸಿ ತಾಣವಾಗಿ ರೂಪಿಸಬೇಕೆಂಬುದು ನಮ್ಮ ಕನಸು. ಇದಕ್ಕೆ ಬೇಕಾದ ಸ್ಪಷ್ಟ ಕಲ್ಪನೆ ಹಾಗೂ ಗುರಿಯನ್ನು ನಾವು ಸಿದ್ದಪಡಿಸಿ ಕೊಂಡಿದ್ದೇವೆ. ಅಂದ ಹಾಗೆ ಕಾರ್ಕಳದಲ್ಲಿ ಪ್ರವಾಸೋ ದ್ಯಮ ಅಭಿವೃದ್ಧಿಗೆ ಪೂರಕವಾದ ಅಂಶಗಳು ಈಗಾಗಲೇ ಇವೆ. ವಿಶ್ವವಿಖ್ಯಾತ ಗೊಮ್ಮಟೇಶ್ವರನ ಪ್ರತಿಮೆ, ಚತುರ್ಮುಖ ಬಸದಿ, ಪಡು ತಿರುಪತಿ ಎಂದೇ ಖ್ಯಾತವಾದ ವೆಂಕಟರಮಣ ದೇವಸ್ಥಾನ, ವರಂಗ ಕೆರೆ, ಕೋಟಿ- ಚೆನ್ನಯ್ಯ ಥೀಂ ಪಾರ್ಕ್‌, ಬಸಿಲಿಕಾ ಖ್ಯಾತಿಯ ಅತ್ತೂರು ಚರ್ಚ್‌ ಇವೆಲ್ಲವೂ ಕಾರ್ಕಳದ ಹೆಗ್ಗುರುತು. ಇವೆಲ್ಲದರ ಜತೆಗೆ ಈಗ ಪರಶುರಾಮ ಥೀಂ ಪಾರ್ಕ್‌ ಕೂಡ ಸೇರ್ಪಡೆ ಯಾಗುತ್ತಿದೆ.

Advertisement

ಪರಶುರಾಮ ಥೀಂ ಪಾರ್ಕ್‌ ಉದ್ಘಾಟನೆಗೆ ನೀವೆಲ್ಲರೂ ಆಗಮಿಸಬೇಕು. ನಮ್ಮೆಲ್ಲರಲ್ಲೂ ಬಂಧುತ್ವದ ಅಮೃತವಾಹಿನಿಯೊಂದು ಹರಿಯಬೇಕು. ನೋಡಬನ್ನಿ ಒಮ್ಮೆ, ಇದು ತುಳುನಾಡ ಹೆಮ್ಮೆ!

-ವಿ. ಸುನಿಲ್‌ ಕುಮಾರ್‌,
ಇಂಧನ, ಕನ್ನಡ ಮತ್ತು
ಸಂಸ್ಕೃತಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next