Advertisement

ಪೇಪರ್‌ ಕೈಗಿಟ್ಟ, ಅದರಲ್ಲಿ ನನ್ನ ಭವಿಷ್ಯವಿತ್ತು..!

06:00 AM Oct 09, 2018 | |

ಚಿಕ್ಕಮಗಳೂರು ಸಮೀಪದ ಪುಟ್ಟ ಹಳ್ಳಿ ನನ್ನದು. ಎಂ.ಎ. ಮುಗಿಸಿದ್ದೆ. ಆದರೆ, ಹೊಟ್ಟೆ ಪಾಡಿಗೆ ಕೆಲಸ ಬೇಕಲ್ಲ? ಬೆಂಗಳೂರಿಗೆ ಹೋದ್ರೆ, ಕೆಲಸ ಸಿಗುತ್ತೆ ಅಂತ ಊರಿನವರೆಲ್ಲ ಹೇಳಿದ ಕಾರಣ, ರಾಜಧಾನಿಗೆ ಬಸ್ಸನ್ನೇರಿ ಬಂದೆ. ಪರಿಚಿತ ಸ್ನೇಹಿತರನ್ನೆಲ್ಲ ಭೇಟಿಯಾಗಿ, ಅವರು ಹೇಳಿದ ಕಂಪನಿಗಳಿಗೆಲ್ಲ ರೆಸ್ಯೂಮ್‌ ಕೊಟ್ಟು, ಕೆಲವು ಕಡೆ ಇಂಟರ್‌ವ್ಯೂ ಕೊಟ್ಟು ಕಾದಿದ್ದೇ ಬಂತು. ಕೆಲಸ ಮಾತ್ರ ಸಿಗಲಿಲ್ಲ. ಅಮ್ಮ ಸಾಲ ಮಾಡಿ ಕೊಟ್ಟಿದ್ದ 3 ಸಾವಿರ ರೂ., ಹೋಟೆಲ್ಲಿಗೆ ಊಟ- ತಿಂಡಿಗೇ ಖರ್ಚಾಗಿ ಹೋಗಿತ್ತು.

Advertisement

ಊರಿಗೆ ಹೋಗಿ ಮತ್ತೆ ಹಣ ಜೋಡಿಸಿಕೊಂಡು ಬೆಂಗಳೂರಿನ ನವರಂಗ್‌ನಲ್ಲಿ ಬಸ್ಸು ಇಳಿದಿದ್ದೆ. ರಾಜಾಜಿನಗರದ ರೂಮ್‌ಗೆ ನಡೆದು ಬರುತ್ತಿದ್ದಾಗ ಒಬ್ಬ ಪೇಪರ್‌ ಹಾಕುವವ, “ಯಾಕಣ್ಣಾ… ಇಷ್ಟು ಸಪ್ಪಕ್ಕಿದ್ದೀಯಾ?’ ಅಂತ ಕೇಳಿದ್ದ. ಬೆಂಗಳೂರಿನಲ್ಲಿ ಇದುವರೆಗೂ ಇಂಥ ಪ್ರಶ್ನೆಯನ್ನು ನನ್ನನಾéರೂ ಕೇಳಿರಲಿಲ್ಲ. “ಕೆಲಸ ಇಲ್ಲ ಮಾರಾಯ, ಇಷ್ಟು ಚಿಕ್ಕವನು. ನಿಂಗಾದ್ರೂ ಒಂದು ಕೆಲಸ ಇದೆ ನೋಡು’ ಎಂದೆ. ಅದಕ್ಕವನು, “ಹೋಗಣ್ಣೋ… ನನ್ನ ಕಷ್ಟ ನಿಂಗೆಂಗೆ ಅರ್ಥ ಆಯ್ತದೆ?’ ಅಂದ. “ಹೋಗ್ಲಿ ತಗೋ’ ಎನ್ನುತ್ತಾ ಇಂಗ್ಲಿಷ್‌ ಪತ್ರಿಕೆಯನ್ನು ಕೈಗಿಟ್ಟ. ಚಿಲ್ಲರೆ ಕೊಡಲು ಹೋದರೆ, ಬೇಡ ಎಂದು ನಿರಾಕರಿಸಿದ್ದ. 

ರೂಮ್‌ಗೆ ಬಂದೆ. ಗೆಳೆಯರೆಲ್ಲ ಮಲಗಿದ್ದರು. ಪೇಪರ್‌ನಲ್ಲಿ ಕಣ್ಣಾಡಿಸಿದೆ. “ವಾಂಟೆಡ್‌’ ಕಾಲಂನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಖಾಲಿ ಇರುವ ಬಗ್ಗೆ ಮಾಹಿತಿ ಇತ್ತು. ಆ ನಂಬರ್‌ ಅನ್ನು ನೋಟ್‌ ಮಾಡಿಕೊಂಡು, ಅವತ್ತೇ ಇಂಟರ್‌ವ್ಯೂ ಕೊಟ್ಟೆ. ಖಾಲಿ ಇದ್ದ 3 ಹುದ್ದೆಯ ಸಂದರ್ಶನಕ್ಕೆ 18 ಮಂದಿ ಬಂದಿದ್ದರು. ಪುಣ್ಯಕ್ಕೆ ನನಗೂ ಕೆಲಸ ಸಿಕ್ಕಿತು. ಇದೀಗ ಅದೇ ಕಂಪನಿಯಲ್ಲಿ 6 ವರ್ಷದ ಅನುಭವ ನನ್ನದು. ಈಗ ಅನ್ನಿಸುತ್ತಿದೆ, ಅವತ್ತು ಆ ಪೇಪರ್‌ ಹುಡುಗ ದೇವರ ರೂಪದಲ್ಲಿ ಬಂದು, ನನ್ನ ಕಷ್ಟ ಆಲಿಸಿದ್ದ ಅಂತ.

– ಮಂಜುನಾಥ ಬಿ.ಆರ್‌.

Advertisement

Udayavani is now on Telegram. Click here to join our channel and stay updated with the latest news.

Next