Advertisement

ಪಾಂಗಾಳ ಶರತ್‌ ಶೆಟ್ಟಿ ಕೊಲೆ ಪ್ರಕರಣಕ್ಕೆ ಭೂಗತ ಲೋಕದ ನಂಟು: ನಾಲ್ವರ ಬಂಧನ

09:24 PM Feb 14, 2023 | Team Udayavani |

ಉಡುಪಿ: ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಪಾಂಗಾಳ ಶರತ್‌ ಶೆಟ್ಟಿ ಕೊಲೆ ಪ್ರಕರಣದ ಹಿಂದೆ ಭೂಗತ ಪಾತಕಿಗಳ ನಂಟು ಇದ್ದು, ಈಗಾಗಲೇ ನಾಲ್ವರು ಆರೋಪಿಗಳಾದ ಸುರತ್ಕಲ್‌ನ ಕುಳಾಯಿ ನಿವಾಸಿಗಳಾದ ದಿವೇಶ್‌ ಶೆಟ್ಟಿ(20), ಲಿಖೀತ್‌ ಕುಲಾಲ್‌(21), ಮಂಗಳೂರು ನಿವಾಸಿ ಆಕಾಶ್‌(25), ಪಣಂಬೂರು ನಿವಾಸಿ ಪ್ರಸನ್ನ ಶೆಟ್ಟಿಯನ್ನು(40) ಬಂಧಿಸಲಾಗಿದೆ.

Advertisement

ಪ್ರಮುಖ ಆರೋಪಿ ಯೋಗೀಶ್‌ ಆಚಾರ್ಯ ಸಹಿತ ಕೆಲವರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಕೆ ಅಕ್ಷಯ್‌ ಮಚ್ಚೀಂದ್ರ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.

ಭೂಗತ ನಂಟು
ಭೂಗತ ಪಾತಕಿ ಕಲಿ ಯೋಗೀಶ್‌ ಆರೋಪಿ ದಿವೇಶ್‌ ಶೆಟ್ಟಿಗೆ ಜನವರಿ ಮೊದಲ ವಾರದಲ್ಲಿ ಕರೆ ಮಾಡಿ ಆಕಾಶ ಕರ್ಕೇರ ಮತ್ತು ಮುಖೇಶ್‌ ಎಲ್ಲವನ್ನೂ ಹೇಳಿದ್ದಾರೆ. ಒಬ್ಬನನ್ನು ಕೊಲೆ ಮಾಡಲಿಕ್ಕಿದ್ದು, ಕಾರ್ಯ ಮುಗಿಸಿದರೆ ತುಂಬಾ ಹಣ ನೀಡುವುದಾಗಿ ತಿಳಿಸಿ ಮುಂದಿನದೆಲ್ಲವನ್ನೂ ತಾನು ನೋಡಿಕೊಳ್ಳುವುದಾಗಿ ಹೇಳುತ್ತಾನೆ. ಇದಕ್ಕೆ ಒಪ್ಪಿದ ದಿವೇಶ್‌ ಶೆಟ್ಟಿ ತನ್ನ ಸ್ನೇಹಿತ ಲಿಖೀತ್‌ ಕುಲಾಲ್‌ ಹಾಗೂ ನಾಗರಾಜನ ಜತೆ ಮಾತನಾಡಿ ಕಲಿ ಯೋಗೀಶ ಹೇಳಿದ ವಿಚಾರವನ್ನು ಹೇಳುತ್ತಾನೆ. ಅನಂತರ ಒಂದು ದಿನ ಕಲಿಯೋಗೀಶನು ಆರೋಪಿ ದಿವೇಶ್‌ಗೆ ಫೋನ್‌ಕರೆ ಮಾಡಿ ಕಾಪುವಿಗೆ ಹೋಗುವಂತೆ ತಿಳಿಸಿ ಅಲ್ಲಿ ಯೋಗೀಶ್‌ ಆಚಾರ್ಯ ಎಂಬಾತನನ್ನು ಭೇಟಿ ಮಾಡಿ ಮಾಡುವಂತೆ ತಿಳಿಸುತ್ತಾನೆ. ಅದರಂತೆ ಆರೋಪಿ ಯೋಗೀಶ್‌ ಆಚಾರ್ಯ ಮೃತ ಶರತ್‌ ಶೆಟ್ಟಿಯ ಮನೆ, ಅವನು ಸಂಚರಿಸುವ ಸ್ಥಳಗಳನ್ನು ತೋರಿಸಿಕೊಟ್ಟಿದ್ದಾನೆ. ಅನಂತರ ಯೋಗೀಶ್‌ ಆಚಾರ್ಯ ಸುರತ್ಕಲ್‌ಗೆ ಹೋಗಿ ದಿವೇಶನಿಗೆ ಹಣ ನೀಡಿ ಕೊಲೆ ಮಾಡಲು ಸಿದ್ಧತೆ ಮಾಡುವಂತೆ ತಿಳಿಸುತ್ತಾನೆ.

ವಿಫ‌ಲ ಯತ್ನ
ದಿವೇಶ್‌, ಲಿಖೀತ್‌ ಮತ್ತು ನಾಗರಾಜ ಅವರು ಆಕಾಶ್‌ ಕರ್ಕೇರನಿಂದ ಪಡೆದ ಮಾರಕಾಯುಧಗಳನ್ನು ಹಾಗೂ ಮಂಕಿ ಕ್ಯಾಪ್‌ಗ್ಳನ್ನು ಸ್ಕೂಟರ್‌ನ ಢಿಕ್ಕಿಯಲ್ಲಿ ಇರಿಸಿಕೊಂಡು ಫೆ.3ರಂದು ಕಾಪುವಿಗೆ ಬಂದಿದ್ದು, ಯೋಗೀಶ್‌ ಆಚಾರ್ಯನನ್ನು ಭೇಟಿ ಮಾಡಿದ್ದರು. ಆದರೆ ಆ ದಿನ ಶರತ್‌ ಶೆಟ್ಟಿ ಸಿಗದಿರುವುದರಿಂದ ವಾಪಸು ಸುರತ್ಕಲ್‌ಗೆ ಹೋಗಿದ್ದಾರೆ.

ನೇಮದಂದು ಸಂಚು
ಫೆ.5ರಂದು ಪಾಂಗಾಳ ಪಡ್ಪು ಬಬ್ಬುಸ್ವಾಮಿ ದೈವಸ್ಥಾನದ ನೇಮ ನಡೆಯುವ ಬಗ್ಗೆ ಯೋಗೀಶ್‌ ಆಚಾರ್ಯ ಆರೋಪಿಗಳಿಗೆ ತಿಳಿಸಿದ್ದ. ಅದರಂತೆ ಅಂದು ಆಗಮಿಸಿದ ದಿವೇಶ್‌, ಲಿಖೀತ್‌ ಮತ್ತು ನಾಗರಾಜ ಕಾಪುವಿಗೆ ಬಂದು ಪ್ರಸನ್ನ ಶೆಟ್ಟಿಯ ಕಾರಿನಲ್ಲಿ ಮೊದಲೇ ಬಂದಿರುವ ಯೋಗೀಶ್‌ ಆಚಾರ್ಯನನ್ನು ಭೇಟಿ ಮಾಡಿದ್ದು, ನಾಲ್ವರು ಸಂಜೆ ವೇಳೆ ಪಾಂಗಾಳ ಗ್ರಾಮದ ವಿಶ್ವಕರ್ಮ ವುಡ್‌ ಕಾರ್ವಿಂಗ್‌ ಅಂಗಡಿಯ ಎದುರು ಕಾದು ನಿಂತಿದ್ದು, ಸ್ವಲ್ಲ ಹೊತ್ತಿನಲ್ಲಿಯೇ ನೇಮ ನಡೆಯುವ ಸ್ಥಳದ ಕಡೆಯಿಂದ ಬರುತ್ತಿದ್ದ ಶರತ್‌ ಶೆಟ್ಟಿಯನ್ನು ಯೋಗೀಶ್‌ ಆಚಾರ್ಯ ಹತ್ತಿರ ಕರೆದು ಜಗಳ ಮಾಡಲು ಆರಂಭಿಸಿದ್ದಾನೆ. ಅದೇ ಸಮಯದಲ್ಲಿ ಕಾದು ನಿಂತಿದ್ದ ದಿವೇಶ್‌, ಲಿಖೀತ್‌, ನಾಗರಾಜ ಹಾಗೂ ಯೋಗೀಶ್‌ ಆಚಾರ್ಯನ ಒಟ್ಟು 4 ಜನ ಸೇರಿಕೊಂಡು ಶರತ್‌ ಶೆಟ್ಟಿಯನ್ನು ಮಾರಕಾಯುಧಗಳಿಂದ ಕಡಿದು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದರು.

Advertisement

ಸ್ನೇಹಿತರಿಂದಲೇ ಸಂಚು
ಕಾಪು ಠಾಣಾ ವ್ಯಾಪ್ತಿಯಲ್ಲಿ ನಡೆದ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಯೋಗೀಶ್‌ ಆಚಾರ್ಯನಿಗೆ ಅವಮಾನವಾಗಿದ್ದು, ಅದಕ್ಕೆ ಶರತ್‌ ಶೆಟ್ಟಿಯೇ ಕಾರಣವಾಗಿದ್ದು, ಆತನನ್ನು ಕೊಲೆ ಮಾಡಲು ನಿರ್ಧರಿಸುತ್ತಾನೆ. ಅದಕ್ಕೆ ತನ್ನ ಹಳೆಯ ಕಲಿ ಯೋಗೀಶನ ಮೂಲಕ ಆಕಾಶ ಕರ್ಕೇರ ಎಂಬಾತನ ಸಹಾಯ ಪಡೆದುಕೊಂಡು ಕೊಲೆ ಮಾಡಿದ್ದಾನೆ ಎಂಬುವುದು ತಿಳಿದುಬಂದಿದೆ ಎಂದರು.

ಸುಳಿವು ನೀಡಿದ ಸ್ಕೂಟಿ!
ಘಟನಾ ಸ್ಥಳದಲ್ಲಿದ್ದ ಹತ್ಯೆಗೆ ಬಳಸಿದ್ದೆನ್ನಲಾಗಿರುವ ಚೂರಿ, ಶರತ್‌ಗೆ ಸೇರಿದ ಮೊಬೈಲ್‌, ನಂಬರ್‌ ಪ್ಲೇಟ್‌ ಇಲ್ಲದ ಸ್ಕೂಟಿ ಸಹಿತ ಕೆಲವು ಸೊತ್ತುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಸ್ಕೂಟಿಯ ಮಾಹಿತಿ ಮೂಲಕವೇ ಆರೋಪಿಗಳ ಜಾಡು ಹಿಡಿಯಲು ಸಾಧ್ಯವಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

5 ವಿಶೇಷ ತಂಡದ ಕಾರ್ಯಾಚರಣೆ
ಪ್ರಕರಣ ನಡೆದ ಘಟನ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಪ್ರಕರಣದ ತೀವ್ರತೆಯನ್ನು ಅರಿತು ಆರೋಪಿಗಳ ಪತ್ತೆಗೆ ಕಾರ್ಕಳ ಉಪ ವಿಭಾಗದ ಡಿವೈಎಸ್‌ಪಿ ಮತ್ತು ಕಾಪು ವೃತ್ತ ನಿರೀಕ್ಷಕರನ್ನೊಳಗೊಂಡ 5 ವಿಶೇಷ ತಂಡವನ್ನು ರಚಿಸಿದ್ದರು. ಮಹಾರಾಷ್ಟ್ರದ ಪುಣೆ, ಮುಂಬಯಿ, ಕರ್ನಾಟಕದ ಬೆಳಗಾವಿ, ಯಾದಗಿರಿ, ಮಹಾಲಿಂಗಪುರ, ಮುಧೋಳ, ವಿಜಯಪುರ, ಗದಗ, ಮಂಗಳೂರು ಮತ್ತು ಉಡುಪಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಆರೋಪಿಗಳಿಗೆ ಶೋಧ ಕಾರ್ಯ ನಡೆಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಮಂಗಳೂರು ನಗರದ ಉಳ್ಳಾಲದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

ಇದನ್ನೂ ಓದಿ: ಹುಲಿ ದಾಳಿಗೆ ಸಿಲುಕಿ ಮೃತಪಟ್ಟ ಕೊಳವಿಗೆಯ ರಾಜು, ಚೇತನ್ ಅಂತ್ಯಸಂಸ್ಕಾರ

Advertisement

Udayavani is now on Telegram. Click here to join our channel and stay updated with the latest news.

Next