Advertisement

ಕಾಶ್ಮೀರ ರಾಣಿ ಕಲ್ಯಾಣದಲ್ಲಿ ಶರಣೆಯಾಗಿದ್ದೇ ಪವಾಡ

06:04 PM Aug 14, 2021 | Team Udayavani |

ಹೊಸದುರ್ಗ: 12ನೇ ಶತಮಾನದ ಶರಣರು ಬಹುತೇಕ ನಡೆ-ನುಡಿ ಕುರಿತೇ ಮಾತನಾಡಿದ್ದಾರೆ. ನಡೆಯೇ ಒಂದು ನುಡಿಯೇ ಮತ್ತೊಂದು ಆಗಿರುವವರು ಪುರಾತನರ ವಚನಗಳನ್ನು ಓದಿದರೆ, ಅರ್ಥ ವಿವರಿಸಿದರೆ, ಅನುಭಾವವನ್ನು ಮಾಡಿದರೆ ದೇವರು ಮೆಚ್ಚ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ತಿಳಿಸಿದರು.

Advertisement

ಸಾಣೇಹಳ್ಳಿಯ ಶ್ರೀ ತರಳಬಾಳು ಜಗದ್ಗುರು ಶಾಖಾಮಠ ಆಯೋಜಿಸಿರುವ “ಮತ್ತೆ ಕಲ್ಯಾಣ ಅಂತರ್ಜಾಲ ಉಪನ್ಯಾಸ ಮಾಲಿಕೆ’ಯ ಸಾನ್ನಿಧ್ಯ ವಹಿಸಿ 13ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಡೆ-ನುಡಿಗಳಲ್ಲಿ ಅಂತರವಿರುವ ಜನರು ಆ ಕಾಲದಲ್ಲಿ ಇರುವಂತೆ
ಈ ಕಾಲದಲ್ಲೂ ಇರುವರು. ಕೆಲವರ ಬದುಕಿನ ವಿಧಾನವನ್ನು ಹತ್ತಿರದಿಂದ ಗಮನಿಸಿದರೆ “ಹೇಳ್ಳೋದು ಆಚಾರ, ಮಾಡೋದು ಅನಾಚರ’
ಎನ್ನುವಂತಾಗಿದೆ. ವಚನಕಾರರು ಇಂತವರ ಬದುಕನ್ನು ಹಂದಿಗಿಂತ ಕೀಳೆಂದು ತುಚ್ಛಿಕರಿಸುವರು. ಶರಣರು ಪಲಾಯನವಾದಿಗಳಲ್ಲ;
ಇದ್ದದ್ದನ್ನು ಇದ್ದ ಹಾಗೆ ಹೇಳುವ ನ್ಯಾಯ ನಿಷ್ಠುರಿಗಳು.

ಗಂಡಂದಿರು ತಪ್ಪು ಮಾಡಿದಾಗ ನಿಷ್ಠುರವಾಗಿ ಹೇಳುವ, ಧಾರ್ಮಿಕವಾಗಿ ಮಾರ್ಗದರ್ಶನ ಮಾಡುವ ಎತ್ತರಕ್ಕೆ ಬೆಳೆಸಿದವರು ಹನ್ನೆರಡನೆಯ ಸತಮಾನದ ಶರಣೆಯರು.ಅವರಲ್ಲಿ ಮಹದೇವಮ್ಮನವರೂ ಒಬ್ಬರು. ಇವರ ವಚನಗಳಿಂದ ಸಂದರ್ಭಾನುಸರ ಗಂಡನಿಗೆ ವಿವೇಕ ಹೇಳಿದ ನಿದರ್ಶನ ತಿಳಿಯುವವು. ಕಲ್ಯಾಣದಲ್ಲಿ ಕೋಲಾಹಲವುಂಟಾಗಿ ಕ್ರಾಂತಿಯಾದಾಗ ಕೆಲ ಶರಣರು ವಚನದ ಕಟ್ಟುಗಳನ್ನು ತಮ್ಮ ಬೆನ್ನಿಗೆ ಕಟ್ಟಿಕೊಂಡು ಕಲ್ಯಾಣದಿಂದ ನಿರ್ಗಮಿಸುವರು. ಇದನ್ನು ಕಂಡ ಮಾರಯ್ಯ ನೊಂದು ಭಗವಂತನಲ್ಲಿ “ನನಗೊಂದು ಬಟ್ಟೆಯ ಹೇಳಾ’ ಎಂದು ಪ್ರಾರ್ಥಿಸುವರು. ಆಗ ಮಹಾದೇವಮ್ಮ ದೇವರು ಕೈಲಾಸದಲ್ಲಿಲ್ಲ; ತನ್ನ ತಾನರಿವುದೇ ದೇವರು. ಭಕ್ತರಾದವರಿಗೆ ಅಹಂಕಾರ ಸಲ್ಲದು
ಎನ್ನುವ ತಿಳಿವಳಿಕೆ ಹೇಳುವಳು.

ಇದನ್ನೂ ಓದಿ:ಪೊಲೀಸ್ ಮೇಲೆಯೇ ಕಾರು ಚಲಾಯಿಸಿದ ಕಿರಾತಕ : ಭಯಾನಕ ವಿಡಿಯೋ ಇಲ್ಲಿದೆ ನೋಡಿ

ದೇವರನ್ನು ಒಲಿಸಲು ಕೆಲವರು ಭೂದಾನ, ವಸ್ತ್ರದಾನ, ಚಿನ್ನದಾನ, ಅನ್ನದಾನ, ಮಾಡುವರು. ಇದರಿಂದ ದೇವರು ಒಲಿಯುವನೆನ್ನುವುದು ಸುಳ್ಳು. ಇವೆಲ್ಲವೂ ದೇವರ ದಾನವೇ ಆಗಿರುವಾಗ, ಅವುಗಳನ್ನು ಆತನಿಗೆ ಹಿಂತಿರುಗಿಸಿದರೆ ದೇವರು ಹೇಗೆ ಒಲಿಯಲು ಸಾಧ್ಯ? ದೇವರನ್ನು ಒಲಿಸಿಕೊಳ್ಳಲು ಇರುವುದೊಂದೇ ದಾರಿ; ಸತ್ಯ ಶುದ್ಧ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು, ಸದ್ಭಾವನೆಯನ್ನು
ಮೈಗೂಡಿಸಿಕೊಳ್ಳುವುದು ಮತ್ತು ದಾಸೋಹ ಮನೋಭಾವನೆ ಹೊಂದುವುದು. ಮಹಾದೇವಮ್ಮ ಕಾಶ್ಮೀರದಲ್ಲಿ ರಾಣಿಯಾಗಿದ್ದು ನಂತರ ಕಲ್ಯಾಣಕ್ಕೆ ಬಂದು ನಿಜ ಶರಣೆಯಾಗಿ ಬದುಕಿದ್ದೇ ಒಂದು ಪವಾಡ ಎಂದರು.

Advertisement

ಉಪನ್ಯಾಸ ಮಾಲಿಕೆಯಲ್ಲಿ “ಮೋಳಿಗೆ ಮಹಾದೇವಿ’ ವಿಷಯ ಕುರಿತಂತೆ ಹುಬ್ಬಳ್ಳಿಯ ಲೇಖಕಿ ಸುನಂದಾ ಕಡಮೆ ಮಾತನಾಡಿ, ಮೋಳಿಗೆ
ಮಹಾದೇವಿ ಕಾಶ್ಮೀರದ ಮಾಂಡವ್ಯಪುರದ ರಾಜ ಮಹದೇವ ಭೂಪಲನ ಪತ್ನಿ. ಹೆಸರು ಗಂಗಾದೇವಿ. ಈ ದಂಪತಿಗಳೇ ಕಲ್ಯಾಣಕ್ಕೆ ಬಂದು ಮೋಳಿಗೆ ಮಾರಯ್ಯ ಮತ್ತು ಮೋಳಿಗೆ ಮಹಾದೇವಮ್ಮ ಎಂದು ಹೆಸರಾಗಿದ್ದಾರೆ.

ಶರಣರ ಮಾನವೀಯ ಮೌಲ್ಯಗಳು, ಅಧ್ಯಾತ್ಮಿಕ ಹಂಬಲ, ಮೃದುವಚನಗಳನ್ನು ಆಡುವ ಸಾತ್ವಿಕ ನಡವಳಿಕೆಗಳನ್ನು ಕಂಡು ಶರಣ ಚಳುವಳಿಗೆ ಮಾರು ಹೋಗಿದ್ದರು. ಹೀಗಾಗಿ ಕಲ್ಯಾಣಕ್ಕೆ ಬಂದು ಗುಡಿಸಿಲು ನಿರ್ಮಿಸಿಕೊಂಡು ಕಟ್ಟಿಗೆ ಮಾರುವ ಕಾಯಕ ಕೈಗೊಳ್ಳುವರು. ಶರಣ ಚಿಂತನೆಯ
ತೀವ್ರತೆ ಅವರ ಮೇಲೆ ಗಾಢಪರಿಣಾಮ ಬೀರಿತ್ತು. ಸತ್ಯ ಶುದ್ಧ ಕಾಯಕದಿಂದ ಸಂಪಾದಿಸಿದ್ದನ್ನು ದಾಸೋಹಕ್ಕೆ ಉಪಯೋಗಿಸಬೇಕು ಎನ್ನುವ ಶರಣರ ತತ್ವ ಸಿದ್ಧಾಂತಕ್ಕನುಗುಣವಾಗಿ ಅಂಬಲಿ ದಾಸೋಹವನ್ನು ಕೈಗೊಳ್ಳುವರು.ಇಷ್ಟಲಿಂಗವನ್ನು ಸಾಕ್ಷಾತ್ಕಾರ ಮಾಡಿಕೊಂಡರೆ, ನಮ್ಮನ್ನು ನಾವರಿತರೆ, ದೇವರನ್ನು ಇಲ್ಲಿಯೇ ಕಾಣುಬಹುದು ಎಂದು ಪತಿ ಮಾರಯ್ಯನವರಿಗೇ ಮುಕ್ತಿ ಪಥದ ದಾರಿತೋರಿದ ಧೀಮಂತೆ ಎಂದರು.

ಅರಕಲಗೂಡು ವಿ ಮಧುಸೂದನ್‌ ಸ್ವಾಗತಿಸಿದರು. ಶಿವಸಂಚಾರದ ಕೆ.ಜ್ಯೋತಿ, ಕೆ.ದಾಕ್ಷಾಯಣಿ, ಎಚ್‌.ಎಸ್‌. ನಾಗರಾಜ್‌ ಮತ್ತು ತಬಲಸಾಥಿ ಶರಣ್‌ ತಂಡ ವಚನಗೀತೆ ಹಾಡಿದರು. ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದರು ಹಾಗೂ ಸಾಣೇಹಳ್ಳಿಯ ಭರತ ನಾಟ್ಯ ಶಾಲೆಯ ಸುಪ್ರಭೆ ಡಿಎಸ್‌ ಹಾಗೂ ಮುಕ್ತ ಡಿಜೆ ವಚನ ನೃತ್ಯ ಪ್ರದರ್ಶಿಸಿದರು. ಬೇಲೂರು ತಾಲೂಕಿನ ಕಲ್ಲನಾಗ್ತಿಹಳ್ಳಿಯ ದಿ. ನರೇಂದ್ರಪ್ಪ
ಸ್ಮರಣಾರ್ಥ ಶಿವಮ್ಮ ಮತ್ತು ಮಕ್ಕಳು ಈ ದಿನದ ದಾಸೋಹಿಗಳಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next