Advertisement

ಕಾಂಗ್ರೆಸ್‌, ಬಿಜೆಪಿ ಬೆಂಬಲಿತರ ಮಧ್ಯೆ ನೇರ ಹಣಾಹಣಿ

01:40 AM Dec 26, 2018 | Karthik A |

ವಿಶೇಷ ವರದಿ : ಬೈಂದೂರು: ಬೈಂದೂರು ಕ್ಷೇತ್ರದ ರಾಜಕೀಯ ಚಟುವಟಿಕೆಯ ಪ್ರಮುಖ ಪ್ರದೇಶಗಳಾದ ಯಡ್ತರೆ, ಬೈಂದೂರು ಗ್ರಾಮ ಪಂಚಾಯತ್‌ ಚುನಾವಣಾ ಅಖಾಡ ಸಿದ್ದಗೊಂಡಿದೆ. ಎರಡು ಪಕ್ಷದವರಿಗೂ ಕೂಡ ಕೇಂದ್ರ ಸ್ಥಾನದ ಗ್ರಾ.ಪಂ ಚುನಾವಣೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಬೆಂಬಲಿತರ ಮದ್ಯೆ ನೇರ ಹಣಾಹಣೆ ನಡೆಯಲಿದೆ. ಕಾಂಗ್ರೆಸ್‌ ಪಕ್ಷ ಪ್ರಾಬಲ್ಯ ಉಳಿಸಿಕೊಳ್ಳುವ ತವಕವಾದರೆ ಬಿಜೆಪಿಯವರಿಗೆ ಅಧಿಕಾರ ಪಡೆಯುವ ಕಸರತ್ತು. ಹೀಗಾಗಿ ಇವೆರಡು ಗ್ರಾ.ಪಂ ಚುನಾವಣೆ ಬೈಂದೂರು ರಾಜಕೀಯ ವಲಯದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಉಳಿಸಿಕೊಂಡಿದೆ.

Advertisement

ಗ್ರಾಮ ಪಂಚಾಯತ್‌ ನಡೆದು ಬಂದ ದಾರಿ: ಆರಂಭದಲ್ಲೆ ಪುರಸಭೆ ವ್ಯಾಪ್ತಿ ಹೊಂದಿದ್ದು 1997ರಲ್ಲಿ ಗ್ರಾ.ಪಂ ಆಗಿ ವಿಭಜನೆಗೊಂಡಿತ್ತು. 9627 ಜನಸಂಖ್ಯೆ ಇರುವ ಯಡ್ತರೆ ಗ್ರಾಮ 8650 ಚದರ ಹೆಕ್ಟೇರ್‌ ವಿಸ್ತಿರ್ಣ ಹೊಂದಿದೆ. 8 ಕ್ಷೇತ್ರಗಳಲ್ಲಿ 25 ಸ್ಥಾನಗಳನ್ನು ಹೊಂದಿದೆ.ಬೈಂದೂರಿನ ಪ್ರಮುಖ ಪಟ್ಟಣ ಪ್ರದೇಶದ ವ್ಯಾಪ್ತಿ ಹೊಂದಿರುವುದರಿಂದ ವಾಣಿಜ್ಯ ಸಂಕೀರ್ಣ ಬಾಡಿಗೆ ಸಹಿತ ವಾರ್ಷಿಕ 40ಲಕ್ಷ ರೂ. ಆದಾಯ ಹೊಂದಿದೆ.ಬೈಂದೂರು ಗ್ರಾ.ಪಂ ವ್ಯಾಪ್ತಿಯಲ್ಲಿ 9000 ಜನಸಂಖ್ಯೆ ಹೊಂದಿದ್ದು 21 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು 15 ಕಿ.ಮೀ ಸುತ್ತಳತೆಯ ವ್ಯಾಪ್ತಿ ಹೊಂದಿದೆ.

ಗ್ರಾ.ಪಂ ಮೊದಲ ಚುನಾವಣೆ 2000ನೇ ಇಸವಿಯಲ್ಲಿ ಬಿಜೆಪಿ ಬೆಂಬಲಿತರು ಬಹುಮತ ಪಡೆದು ಎರಡುವರೆ ವರ್ಷ ಅಧಿಕಾರ ನಡೆಸಿದ್ದರು ಬಳಿಕ ನಡೆದ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್‌ ಬೆಂಬಲಿತರು ಹೆಚ್ಚಿನ ಸ್ಥಾನ ಪಡೆದಿದ್ದರು. ಬೈಂದೂರು ಪಂಚಾಯತ್‌ನಲ್ಲಿ 11 ಕಾಂಗ್ರೆಸ್‌ ಬೆಂಬಲಿತ ಹಾಗೂ 10 ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ಮೀಸಲಾತಿ ಸಮಸ್ಯೆ ಕೋರ್ಟ್‌ಗೆ ಹೋದ ಪರಿಣಾಮ ಆಡಳಿತಾಧಿಕಾರಿ ನೇಮಿಸಲಾಗಿದೆ. ಯಡ್ತರೆ 1ನೇ ಕ್ಷೇತ್ರ ಆಲಂದೂರು, ತೂದಳ್ಳಿ, ಹೊಸೂರು, 2ನೇ ಕ್ಷೇತ್ರ ಮಧ್ದೋಡಿ,ನಾಗರಮಕ್ಕಿ,ಕಡೆR,ಕೊಸಳ್ಳಿ, ಅಂಬಿಕಾನ, ಕಲ್ಲಣ್ಕಿ, 3ನೇ ಕ್ಷೇತ್ರ ಹೊಸಾಡು, ಬೈಂದೂರು ಪೇಟೆ ವಠಾರ, 4ನೇ ಕ್ಷೇತ್ರ ಯೋಜನಾನಗರ, ಮಾಸ್ತಿಕಟ್ಟೆ, 5ನೇ ಕ್ಷೇತ್ರ ಬಂಕೇಶ್ವರ ವಠಾರ,ಸೋಮೇಶ್ವರ ರಸ್ತೆ, 6ನೇ ಕ್ಷೇತ್ರ ನಾಕಟ್ಟೆ ವಠಾರ,7ನೇ ಕ್ಷೇತ್ರ ವೆಂಕಟರಮಣ ದೇವಸ್ಥಾನ ವಠಾರ,8ನೇ ಕ್ಷೇತ್ರ ಯಡ್ತರೆ ವಠಾರ ವ್ಯಾಪ್ತಿ ಹೊಂದಿದೆ.

ಪ್ರಮುಖ ಸಮಸ್ಯೆಗಳು: ಯಡ್ತರೆ ಹಾಗೂ ಬೈಂದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರಮುಖ ಸಮಸ್ಯೆಯಾಗಿದೆ.ಪ್ರತಿ ಬೇಸಿಗೆಯಲ್ಲೂ ಟ್ಯಾಂಕರ್‌ ಮೂಲಕ ನೀರು ನೀಡಬೇಕಾದ ಅನಿವಾರ್ಯವಿದೆ.ಗ್ರಾಮೀಣ ಪ್ರದೇಶದಲ್ಲಿ ಕೃಷಿಕರಿಗೆ ಪೂರಕವಾದ ಯೋಜನೆಗಳ ಅನುಷ್ಟಾನವಾಗಬೇಕಿದೆ. ತಾಲೂಕು ಕೇಂದ್ರದಲ್ಲಿ ಕಸ ವಿಲೇವಾರಿ ಸಮಸ್ಯೆ ದಿನದಿಂದ ದಿನಕ್ಕೆ ಸಮಸ್ಯೆಯಾಗಿ ಕಾಡುತ್ತಿದೆ. ಪಟ್ಟಣ ವ್ಯಾಪ್ತಿಯಲ್ಲಿ ಸಂಚಾರ ಸಮಸ್ಯೆ, ಸೇರಿದಂತೆ ಬಹುತೇಕ ಯೋಜನೆಗಳ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಬೇಕಾಗಿದೆ.ತಾಲೂಕು ಕೇಂದ್ರವಾದ ಕಾರಣ ಅಭಿವ್ರದ್ದಿ ಮುತುವರ್ಜಿ ಇರುವ ಸದಸ್ಯರ ಆಯ್ಕೆಯಾಗಬೇಕಿದೆ.

ಗ್ರಾಮ ಪಂಚಾಯತ್‌ ಅಂತಿಮ ಹಣಾಹಣೆ:
ಯಡ್ತರೆ ಗ್ರಾಮ ಪಂಚಾಯತ್‌ನಲ್ಲಿ ಒಟ್ಟು 68 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. 2 ಅರ್ಜಿ ತಿರಸ್ಕೃತಗೊಂಡಿವೆ. 8 ಅಭ್ಯರ್ಥಿಗಳ ನಾಮಪತ್ರ ಹಿಂದೆಗೆದುಕೊಂಡಿದ್ದಾರೆ. 58 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೈಂದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 64 ನಾಮಪತ್ರ ಸಲ್ಲಿಕೆಯಾಗಿದೆ. ಮೂರು ನಾಮಪತ್ರ ತಿರಸðತಗೊಂಡಿದೆ.7 ಅಭ್ಯರ್ಥಿಗಳು ಹಿಂಪಡೆದಿದ್ದಾರೆ. 54 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Advertisement

ಭವಿಷ್ಯದ ಕನಸಿಗೆ ವೇದಿಕೆ
ಯಡ್ತರೆ ಮತ್ತು ಬೈಂದೂರು ವ್ಯಾಪ್ತಿಯಲ್ಲಿ ಈ ಬಾರಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪ್ರಚಂಡ ಜಯಭೇರಿ ಗಳಿಸಲಿದ್ದಾರೆ.ಎರಡು ಅವಧಿಗಳಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳಿಗೆ ಅಧಿಕಾರದಿಂದ ಮತದಾರರು ರೋಸಿಹೋಗಿದ್ದಾರೆ.ಕ್ಷೇತ್ರದ ನೂತನ ಶಾಸಕರ ಅಭಿವೃದ್ದಿ ಯೋಜನೆ ಹಾಗೂ ಭವಿಷ್ಯದ ಕನಸುಗಳಿಗೆ ಈ ಚುನಾವಣೆ ಪ್ರಮುಖ ವೇದಿಕೆಯಾಗಿದೆ.ಗ್ರಾಮೀಣ ಭಾಗ ಹಾಗೂ ಬೈಂದೂರು ಪರಿಸರದಲ್ಲಿ ಉತ್ತಮ ಜನಬೆಂಬಲ ಇರುವ ಅಭ್ಯರ್ಥಿಗಳು ಬಿಜೆಪಿ ವತಿಯಿಂದ ಸ್ಪರ್ಧಿಸಿದ್ದಾರೆ. ಸಂಘಟಿತ ಹೋರಾಟದಿಂದ ಅಧಿಕಾರ ಹಿಡಿಯುತ್ತಿದ್ದೇವೆ.
– ದೀಪಕ್‌ ಕುಮಾರ್‌ ಶೆಟ್ಟಿ., ಬಿಜೆಪಿ ಉಸ್ತುವಾರಿ

ಸಂದೇಹವಿಲ್ಲ
ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ನಡೆಸಲಾಗಿದೆ.ಜನಪರ ಕಾಳಜಿ ಹೊಂದಿರುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಈ ಬಾರಿಯೂ ಕೂಡ ಎರಡು ಗ್ರಾ.ಪಂ ನಲ್ಲಿ ಅಧಿಕಾರ ಹಿಡಿಯಲಿದ್ದೇವೆ. ಅತ್ಯಧಿಕ ಸ್ಥಾನಗಳಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಗೋಪಾಲ ಪೂಜಾರಿಯವರ ಮಾರ್ಗದರ್ಶನದಲ್ಲಿ ಕಾರ್ಯಕರ್ತರ ಪರಿಶ್ರಮಕ್ಕೆ ಮತದಾರರಿಂದ ಸಕಾರಾತ್ಮಕ ಸ್ಪಂದನೆ ದೊರೆಯುವುದರಲ್ಲಿ ಸಂದೇಹವಿಲ್ಲ. 
– ಎಸ್‌.ರಾಜು ಪೂಜಾರಿ, ಕಾಂಗ್ರೆಸ್‌ ಮುಂದಾಳು

Advertisement

Udayavani is now on Telegram. Click here to join our channel and stay updated with the latest news.

Next