Advertisement

ಸಾಂಘಿಕ ಪ್ರಯತ್ನದಲ್ಲಿ ರಂಜಿಸಿದ ಪಂಚವಟಿ

06:57 PM Jan 10, 2020 | mahesh |

ಸಾಮಾನ್ಯ ವಾಗಿ ತಾಳಮದ್ದಳೆ ಕೂಟಗಳಿಗೆ ಸೀಮಿತವಾದ ಪಂಚವಟಿ ಪ್ರಸಂಗವು ಬಡಗುತಿಟ್ಟಲ್ಲಿ ರಂಗದಲ್ಲಿ ಸಪ್ಪೆಯಾಗುತ್ತದೆ ಎನ್ನುವ ಕಾರಣಕ್ಕೆ ಪ್ರದರ್ಶನ ಕಾಣುವುದು ಅಪರೂಪವಾಗಿದೆ. ಆದರೆ ಪ್ರಬುದ್ಧ ಕಲಾವಿದರ ಸಾಂಘಿಕವಾದ ತೊಡಗಿಸಿಕೊಳ್ಳುವಿಕೆಯಿಂದ ಪ್ರಸಂಗವನ್ನು ಯಶಸ್ವಿಗೊಳಿಸಬಹುದೆಂಬುದು ಅದಮಾರಿನಲ್ಲಿ ಎರ್ಮಾಳು ವಾಸುದೇವರಾವ್‌ ಅವರ 90ರ ಸಂಭ್ರಮದಲ್ಲಿ ಸಾಲಿಗ್ರಾಮ ಮೇಳದವರಿಂದ ಪ್ರದರ್ಶನಗೊಂಡ ಪಂಚವಟಿ ಪ್ರಸಂಗದ ಶೂರ್ಪನಖಿ ಮಾನಭಂಗ ಪ್ರಕರಣದಲ್ಲಿ ಸಾಬೀತುಗೊಂಡಿತು.

Advertisement

ಶೂರ್ಪನಖೀ ರಾವಣನ ಸಹೋದರಿ. ವಿದ್ಯುಜ್ಜಿಹ್ವನೆಂಬಾತ ಈಕೆಯ ಗಂಡ. ಕಾಲಕೇಯರೊಂದಿಗಿನ ಯುದ್ಧ ಸಂದರ್ಭದಲ್ಲಿ ರಾವಣನಿಂದ ಅಚಾತುರ್ಯದಿಂದ ಆತ ಕೊಲ್ಲಲ್ಪಟ್ಟನು. ದುಃಖೀತಳಾದ ಶೂರ್ಪನಖೀಯನ್ನು ದಂಡಕಾರಣ್ಯದಲ್ಲಿ ಅಣ್ಣಂದಿರಾದ ಖರ-ದೂಷಣರ ಜತೆ ಹದಿನಾಲ್ಕು ಸಾವಿರ ರಾಕ್ಷಸರೊಂದಿಗೆ ವಾಸಿಸುವಂತೆ ರಾವಣ ವ್ಯವಸ್ಥೆ ಮಾಡುತ್ತಾನೆ.

ಶೂರ್ಪನಖೀಯು ಆಹಾರಕ್ಕಾಗಿ ತಿರುಗಾಡುತ್ತಿದ್ದ ಸಮಯದಲ್ಲಿ ವನದಲ್ಲಿದ್ದ ಶ್ರೀ ರಾಮನಲ್ಲಿ ಕಾಮಮೋಹಿತಳಾಗಿ ಮದುವೆಯಾಗಲು ಪೀಡಿಸುತ್ತಾಳೆ. ಏಕಪತ್ನಿವ್ರತದ ನೆಪ ಹೇಳಿ ಮದುವೆಯಾಗಲೊಪ್ಪದ ರಾಮನು ಲಕ್ಷ್ಮಣನಲ್ಲಿಗೆ ಆಕೆಯ ನಿಗ್ರಹವನ್ನು ಗುರಿಯಾಗಿಸಿ ಕಳುಹಿಸುತ್ತಾನೆ. ಲಕ್ಷ್ಮಣನು ತಾನು ಬ್ರಹ್ಮಚಾರಿಯಾಗಿದ್ದು, ರಾಮನನ್ನು ಒಪ್ಪಿಸಿ ಗುರುತು ತಂದಲ್ಲಿ ವರಿಸುವೆನೆಂದು ನೆಪವೊಡ್ಡಿ ಹಿಂದೆ ಕಳುಹಿಸಿದಾಗ, ರಾಮನಿಂದ ಗುರುತು ಪಡೆದ ಶೂರ್ಪನಖೀಯು ಲಕ್ಷ್ಮಣನೆಡೆ ಪುನಃ ಬರಲು, ಲಕ್ಷ್ಮಣನು ರಾಮನ ಆದೇಶದಂತೆ ಆಕೆಯ ಕಿವಿ, ಮೂಗು, ಸ್ತನವನ್ನು ಕತ್ತರಿಸುತ್ತಾನೆ. ಇದೇ ಆಪಮಾನದಿಂದ ಅಣ್ಣ ರಾವಣನಲ್ಲಿ ತನಗಾದ ಬವಣೆಯನ್ನು ದೂರಿಕೊಳ್ಳುವುದರ ಜತೆಗೆ ಸೀತೆಯ ಗುಣ ಹಾಗೂ ಸೌಂದರ್ಯವನ್ನು ಉತ್ಪ್ರೇಕ್ಷೆ ಮಾಡಿ ಹೇಳಿ ಸೀತೆಯನ್ನು ಅಪಹರಿಸುವಂತೆ ಮಾಡುತ್ತಾಳೆ. ಮುಂದೆ ರಾಮ ರಾವಣರ ಯುದ್ಧ ನಡೆದು ರಾವಣನ ಅಂತ್ಯದೊಂದಿಗೆ ಸಾಮಾಪ್ತಿಯಾಗುತ್ತದೆ (ಕಾರ್ಕಳ ಶಶಿಕಾಂತ ಶೆಟ್ಟಿ )ಮಾಯಾ ಶೂರ್ಪನಖೀ “ಎನುತ ನಿಜಮನದೊಳಗೆ…’ ಎನ್ನುವ ಪದದ ಮೂಲಕ ರಾಮನನ್ನು ನೋಡಿ, ಕೂಡಿ ಸುಖಿಸುವ ಏಕಮಾತ್ರ ಉದ್ದೇಶ ಹೊಂದಿ ತನ್ನ ದೈತ್ಯ ರೂಪವನ್ನು ಮರೆಸಿ “ಮಾಯಕದ ರೂಪಿನಲಿ…’, “ಹದಿನಾರು ವತ್ಸರದ ಹೆಣ್ಣಾಗಿ…’, “ರಾಘವನೆಡೆ ನಡೆತಂದು ,ರಾಘವ ನರಪತೇ…’ ಮಾತಿನಿಂದ ಕಾಮವಾಂಛಿತ ಪ್ರೇಮ ನಿವೇದನೆಯನ್ನು ಮಾಡುತ್ತಾಳೆ .

ಇದಕ್ಕೆ ಉತ್ತರಿಸುತ್ತಾ (ಮಂಕಿ ಈಶ್ವರ ನಾಯ್ಕ )ರಾಮ, “ಕಿಂ ತವ ವಚನಂ..’ ಅನ್ನುವ ಮೂಲಕ ಸಂಸ್ಕೃತ ಭಾಷೆಯಲ್ಲಿ ಸಂವಾದ ಆರಂಭಿಸಿದಾಗ ಶೂರ್ಪನಖಿಯು ಅದು ತನಗೆ ತನ್ನ ಮಾತಾಪಿತರಾದ ಕೈಕಸೆ, ವಿಶ್ವಾವಸುರಿಂದ ದೊರೆತ ಸಂಸ್ಕೃತ ಭಾಷೆಯ ಸಂಸ್ಕಾರವೆಂದುದು ಪಾತ್ರ ವಿವೇಚನೆ.

ಹೆಣ್ಣಿಗೆ ಸಹಜವಾಗಿ ಇರಬೇಕಾದ ಲಜ್ಜೆ , ನಾಚಿಕೆ, ಸಂಕೋಚವನ್ನು ಬದಿಗಿರಿಸಿ ತಾನು ನಿನ್ನಿಂದ ಸುಖ ಬಯಸಿ ಬಂದಿದ್ದೇನೆ ಅನ್ನುವುದನ್ನು ನೇರವಾಗಿ ಹೇಳಿರುವುದು ಕವಿಯಾಶಯವಾಗಿದ್ದು ಅದನ್ನು ಶಶಿಕಾಂತ ಶೆಟ್ಟರು ಪ್ರೇಕ್ಷಕರಿಗೆ ಯಾವುದೇ ರೀತಿಯಲ್ಲಿ ಮುಜುಗರವಾಗದಂತೆ ಪರಿಣಾಮಕಾರಿಯಾಗಿ ಶಿಷ್ಟ ಭಾಷೆಯಲ್ಲಿಯೇ ಸಂವಾದಿಸಿದ್ದು ಉಲ್ಲೇಖನೀಯ.

Advertisement

ಇದಕ್ಕೆ ಉತ್ತರವಾಗಿ ಶ್ರೀರಾಮನು “ಮದನನ ಪಟ್ಟದ ರಾಣಿ…’ ಪದದ ಮೂಲಕ ತನಗೆ ಏಕಪತ್ನಿವ್ರತವಿದ್ದ ಕಾರಣ ನನಗಿಂತ ನೂರು ಪಟ್ಟು ಚೆಲುವ ಅನುಜನಾಗಿಹ ಲಕ್ಷ್ಮಣ ಇದ್ದಾನೆ ಎಂದು ಆತನಲ್ಲಿಗೆ ಕಳಿಸಿಕೊಡುವ ಮೂಲಕ ತನ್ನದಾದ ಪೂರ್ವ ಯೋಜನೆಗೆ ಭೂಮಿಕೆ ಒದಗಿಸಿದರು.

ಇಲ್ಲಿಂದ ಪುನಃ ಶೂರ್ಪನಖೀಯು “ಚಂದದಿಂದ ಬಂದಳಬಲೋಚನೆ..’ ಎನ್ನುವ ಪದದ ಮೂಲಕ ತಾನು ಇನ್ನಷ್ಟು ಚಂದವಾಗಿ ಲಕ್ಷ್ಮಣನ ಇದಿರು ಪ್ರಕಟಗೊಳ್ಳಬೇಕು ಎನ್ನುವ ಆಶಯವನ್ನು ಅತ್ಯಂತ ಅಚ್ಚುಕಟ್ಟಾಗಿ ಅಭಿನಯಿಸಿ ಮುಂದೆ ಲಕ್ಷ್ಮಣನಲ್ಲಿ “ಕಾಮಸನ್ನಿಭ ಮಾತ ಕೇಳು..’ ಎನ್ನುವ ಪದ್ಯದ ಮೂಲಕ ತನ್ನ ಕಾಮವಾಂಛೆಯನ್ನು ಪ್ರಸ್ತುತ ಪಡಿಸುವಲ್ಲಿ ಎಲ್ಲಿಯೂ ರಂಗ ಭಾಷೆಯನ್ನು ಮೀರದಿರುವುದು ಶ್ಲಾಘನೀಯ. ಒಂದೆರಡು ಕಡೆ ವಿನಾಕಾರಣವಾಗಿ ಚೆಲ್ಲುತನ, ಲೌಕಿಕ ವಿಚಾರಗಳು ಇಣುಕಿದರೂ, ಸಂಕೀರ್ಣವಾದ ಶೂರ್ಪನಖೀಯ ಪಾತ್ರದಲ್ಲಿ ಶಶಿಕಾಂತರು ಹಾಗೂ ಆದರ್ಶ ಪುರುಷ ಶ್ರೀ ರಾಮನ ಪಾತ್ರದಲ್ಲಿ ಮಂಕಿಯವರ ಒಟ್ಟಂದದ ನಿರ್ವಹಣೆ ಅತ್ಯುತ್ತಮವಾಗಿ ಮೂಡಿ ಬಂದಿದೆ.

ಶೂರ್ಪನಖೀಯು ರಕ್ಕಸಿಯ ಆಹಾರ್ಯದಲ್ಲಿ ಸಂಪ್ರದಾಯಬದ್ಧ ಬಣ್ಣದ ವೇಷವಾಗಿ ಮೂಡಿಬಾರದುದು ಕೊರತೆಯಾದರೂ ರಂಗದಲ್ಲಿ ಯಾವುದೇ ಪಾತ್ರವನ್ನಾದರೂ ಅಚ್ಚುಕಟ್ಟಾಗಿ ನಿರ್ವಹಿಸುವ ಕಲಾವಿದ ನರಸಿಂಹ ಗಾಂವ್ಕರ್‌ ರಾಕ್ಷಸಿ ಪಾತ್ರವನ್ನು ನಾಟಕೀಯ ವೇಷವಾಗಿಸಿ ಸಮರ್ಥವಾಗಿ ನಿರ್ವಹಿಸಿದರು.ಇಡೀ ಪ್ರಸಂಗ ಪರಿಪೂರ್ಣವಾಗಿ ಕಳೆಗಟ್ಟಲು ಸಮರ್ಥ ಹಿಮ್ಮೇಳದ ಸಾಥಿಯೂ ಕಾರಣವಾಯ್ತು .

ಪೌರಾಣಿಕ ಪ್ರಸಂಗಗಳನ್ನು ಆಸ್ವಾದಿಸಲು ಪ್ರೇಕ್ಷಕನಾದವನಿಗೆ ಒಂದಷ್ಟು ಮೂಲ ವಿಚಾರಗಳ ಅರಿವಿನ ಅಗತ್ಯವಿದೆ . ಆತನಿಗೆ ಆಯಾಯ ಪ್ರಸಂಗಗಳ ಪುರಾಣೇತಿಹಾಸದ ಜ್ಞಾನ, ಪದ್ಯ ಬಳಕೆಗಳ ಅರಿವಿದ್ದಲ್ಲಿ ತಾನೂ ರಂಗಕ್ರಿಯೆಯನ್ನು ಅನುಭವಿಸುತ್ತಾನೆ. ಗತಕಾಲದ ಹಿರಿಯ ಕಲಾವಿದರಿಂದ ಸಂಪನ್ನಗೊಂಡ ಯಕ್ಷಗಾನ ಪ್ರದರ್ಶನವನ್ನು ಕಂಡ ಅನುಭವದೊಂದಿಗೆ ವರ್ತಮಾನದ ಕಲಾವಿದರ ಪ್ರದರ್ಶನವನ್ನು ಸಮೀಕರಿಸಿಕೊಂಡು ಅನುಭವಿಸಬೇಕು.ಅದಿಲ್ಲವಾದಲ್ಲಿ ಕೇವಲ ಅನ್ಯರಂಗದ ಗಿಮಿಕ್‌ಗಳಲ್ಲಿ ಸಿಗುವ ಕ್ಷಣಿಕ ಸುಖವನ್ನು ಯಕ್ಷಗಾನದಲ್ಲೂ ಅಪೇಕ್ಷಿಸುವ ಯುವ ಪೀಳಿಗೆಯು, ಅದನ್ನೇ ಯಕ್ಷಗಾನವೆಂಬ ಭ್ರಮೆಯಿಂದ ಪುರಾಣ ಪ್ರಸಂಗದಿಂದ ವಿಮುಖರಾಗುವುದು ನಿಶ್ಚಯ.

ಇಂತಹ ಕಾಲಘಟ್ಟದಲ್ಲಿ ಯಕ್ಷಗಾನರಂಗವು ಈ ರೀತಿಯ ಪ್ರಬುದ್ಧ ಕಲಾವಿದರ ನಿರ್ವಹಣೆಯಲ್ಲಿ ಪೌರಾಣಿಕ ಪ್ರಸಂಗಗಳು ರಂಗದಲ್ಲಿ ಕಳೆಗಟ್ಟಿ ಯುವ ಪೀಳಿಗೆಯನ್ನು ಕಲಾತ್ಮಕವಾಗಿ ಪ್ರಬುದ್ಧವಾಗಿಸುವಲ್ಲಿ ಸಫಲಗೊಂಡು ಕಳೆದುಹೋದ ತನ್ನ ಸುವರ್ಣ ಕಾಲವನ್ನು ಪುನರ್‌ ಪ್ರತಿಷ್ಠಾಪಿಸುವಲ್ಲಿ ಅನುಮಾನವಿಲ್ಲ.

ಸುರೇಂದ್ರ ಪಣಿಯೂರ್‌

Advertisement

Udayavani is now on Telegram. Click here to join our channel and stay updated with the latest news.

Next