Advertisement

Panambur: ಬಟ್ಟೆಯಿಂದ ಕುತ್ತಿಗೆ ಬಿಗಿದು ಬಾಲಕಿಯ ಹತ್ಯೆ

09:50 PM Aug 06, 2024 | Team Udayavani |

ಪಣಂಬೂರು: ಇಲ್ಲಿನ ಠಾಣಾ ವ್ಯಾಪ್ತಿಯ ಜೋಕಟ್ಟೆಯ ಜಂಕ್ಷನ್‌ನ ಭಜನ ಮಂದಿರದ ಬಳಿಯ ಬಾಡಿಗೆ ಮನೆಯೊಂದರಲ್ಲಿ ಬೆಳಗಾವಿ ಮೂಲದ ಬಾಲಕಿಯೊಬ್ಬಳನ್ನು ಬಟ್ಟೆಯಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ಆ. 6 ಮಂಗಳವಾರ ಬೆಳಗ್ಗೆ ನಡೆದಿದೆ.

Advertisement

ಬೆಳಗಾವಿ ಮೂಲದ ಬಾಲಕಿ ಜೋಕಟ್ಟೆಯ ಚಿಕ್ಕಪ್ಪ ಹನುಮಂತ ಅವರ ಮನೆಗೆ ಬಂದಿದ್ದಳು. ಕೂಲಿ ಕೆಲಸ ಮಾಡಿಕೊಂಡಿರುವ ಹನುಮಂತ ಮಂಗಳವಾರ ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ಹನುಮಂತನ ಕೊನೆಯ ಮಗ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಾಲೆಗೆ ತೆರಳಿದ್ದ. ಹನುಮಂತನ ಪತ್ನಿ ಊರಿಗೆ ಹೋಗಿದ್ದರಿಂದ ಬಾಲಕಿ ಒಬ್ಬಳೇ ಮನೆಯಲ್ಲಿದ್ದಳು. ಬಾಲಕಿ ಕೈ ನೋವಿಗೆ ಚಿಕಿತ್ಸೆ ಪಡೆದು ನಾಲ್ಕು ದಿನಗಳ ಹಿಂದೆಯಷ್ಟೇ ಚಿಕ್ಕಪ್ಪನ ಮನೆಗೆ ಬಂದಿದ್ದಳು.

ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್ವಾಲ್‌, ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ದಿನೇಶ್‌ ಕುಮಾರ್‌ ಘಟನ ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಮಾರ್ಗದರ್ಶನ ನೀಡಿದರು. ಪಣಂಬೂರು ಉಪವಿಭಾಗ ಎಸಿಪಿ, ಪಣಂಬೂರು ಪೊಲೀಸ್‌ ಠಾಣೆಯ ಆಧಿಕಾರಿಗಳು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ತಾಯಿ ಕರೆ ಮಾಡಿದಾಗ ಕೃತ್ಯ ಬೆಳಕಿಗೆ

ಮಂಗಳವಾರ ಮಗಳನ್ನು ವಿಚಾರಿಸಲು ತಾಯಿ ಪಕ್ಕದ ಮನೆಮಂದಿಗೆ ಕರೆ ಮಾಡಿ ಮಾತನಾಡಲು ಫೋನ್‌ ಕೊಡುವಂತೆ ವಿನಂತಿಸಿದ ಮೇರೆಗೆ ಕೊಡಲು ಹೋದಾಗ ಈ ದುರ್ಘ‌ಟನೆ ಬೆಳಕಿಗೆ ಬಂದಿದೆ. ತತ್‌ಕ್ಷಣ ಪೊಲೀಸರಿಗೆ ಹನುಮಂತ ಕರೆ ಮಾಡಿ ಮಾಹಿತಿ ನೀಡಿದ ಮೇರೆಗೆ ಪಣಂಬೂರು ಪೊಲೀಸರು, ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

Advertisement

ಪರಿಚಯಸ್ಥರದ್ದೇ ಕೃತ್ಯ?

ಅಷ್ಟೇನು ಸಿರಿವಂತರಲ್ಲದ ಹನುಮಂತನ ಮನೆಯಲ್ಲಿ ಚಿನ್ನಾಭರಣ ಕಳ್ಳತನಕ್ಕೆ ಸಾಧ್ಯತೆ ಕಡಿಮೆ ಇದೆ. ಯಾವುದೇ ಕಪಾಟು, ಪೆಟ್ಟಿಗೆಯ ವಸ್ತುಗಳನ್ನು ಮುಟ್ಟಿಲ್ಲ. ಕೊಲೆಗಾರ ಲೈಂಗಿಕ ದೌರ್ಜನ್ಯ ಎಸಗಿರಬಹುದು ಅಥವಾ ದೌರ್ಜನ್ಯಕ್ಕೆ ಯತ್ನಿಸಿದಾಗ ಬಾಲಕಿ ಬೇರೆಯವರಿಗೆ ಹೇಳಬಹುದು ಎಂಬ ಭಯದಿಂದ ಕೊಲೆ ಮಾಡಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಘಟನೆ ನಡೆದ ಸ್ಥಳಕ್ಕೆ ಹತ್ತಿರದಲ್ಲೇ ಮೂರ್‍ನಾಲ್ಕು ಮನೆಗಳಿದ್ದು, ಕಿರುಚಾಟ, ಬಡಿದಾಟದ ಯಾವುದೇ ಶಬ್ದ ಕೇಳಿಸಿಲ್ಲ ಎಂದವರು ಹೇಳುತ್ತಾರೆ. ಪರಿಚಯಸ್ಥರೇ ಈ ಕೃತ್ಯ ಎಸಗಿರಬಹುದು ಎನ್ನುವ ಶಂಕೆ ಬಲವಾಗಿ ಇದೆ. ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸಲು ಕಾರ್ಯಪ್ರವೃತ್ತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next