Advertisement

ಆಧಾರ್‌ ಮಾಹಿತಿಯಿದ್ದರೆ ಪ್ಯಾನ್‌ಗೂ ಅನುಕೂಲ

10:03 AM Feb 03, 2020 | mahesh |

ಇಲ್ಲಿಯವರೆಗೆ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್‌) ಪಡೆಯಲು ವಿಸ್ತೃತವಾದ ಫಾರಂ ಅನ್ನು ತುಂಬಲಾಗುತ್ತಿತ್ತು. ಆದರೆ, ಇನ್ನು ಮುಂದೆ ಪ್ಯಾನ್‌ ಕಾರ್ಡ್‌ ಪಡೆಯಲು ಪ್ರಯಾಸ ಪಡುವ ಅಗತ್ಯವಿಲ್ಲ. ಆಧಾರ್‌ ಇದ್ದರೆ ಸಾಕು. ಅದರ ಆಧಾರದ ಮೇಲೆ ಪ್ಯಾನ್‌ ಪಡೆಯಬಹುದು.

Advertisement

ಕೇಂದ್ರ ಬಜೆಟ್‌ನಲ್ಲಿ ಇದರ ಮಾಹಿತಿ ನೀಡಿದ್ದು, ಆಧಾರ್‌ ಆಧಾರದ ಮೇಲೆ ಪ್ಯಾನ್‌ ಪಡೆಯಲು ಅವಕಾಶ ನೀಡುವ ಜತೆಗೆ ಶಾಶ್ವತ ಖಾತೆ ಸಂಖ್ಯೆ(ಪ್ಯಾನ್‌) ಪಡೆಯುವ ಅಪ್ಲಿಕೇ ಶನ್‌ ಫಾರಂ ಅನ್ನು ಸರಳಗೊಳಿಸುವ ಕುರಿತು ಪ್ರಸ್ತಾಪಿಸಲಾಗಿದೆ.

ಈ ವ್ಯವಸ್ಥೆಯನ್ನು ಮುಂಬರುವ ದಿನಗಳಲ್ಲಿ ಜಾರಿಗೆ ತರಲಿದ್ದು, ಈ ಕುರಿತು ಸರಳವಾದ ತಂತ್ರಾಂಶವನ್ನು ಸಿದ್ಧಪಡಿಸಲು ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆಗೆ ಸೂಚಿಸಿದೆ. ಈ ವ್ಯವಸ್ಥೆಯಲ್ಲಿ ಆಧಾರ್‌ ಕಾರ್ಡ್‌ಗೆ ಈಗಾಗಲೇ ನೀಡಿರುವ ಮನೆ ವಿಳಾಸ ಭಾವಚಿತ್ರಗಳನ್ನೂ ಬಳಸಿಕೊಳ್ಳಲು ಚಿಂತಿಸಲಾಗಿದೆ.

ಪ್ಯಾನ್‌ ಇಲ್ಲದೆ ದೇಶದಲ್ಲಿ ಯಾವುದೇ ಆರ್ಥಿಕ ವ್ಯವಹಾರ ಅಸಾಧ್ಯ. ಬ್ಯಾಂಕ್‌ ಖಾತೆ ತೆರೆಯುವುದರಿಂದ ಹಿಡಿದು, ತೆರಿಗೆ, ಟಿಡಿಎಸ್‌, ದೊಡ್ಡ ಮಟ್ಟದ ಆರ್ಥಿಕ ವ್ಯವಹಾರದವರೆಗೂ ಪ್ಯಾನ್‌ ಅನಿವಾರ್ಯ. ಹೀಗಾಗಿ ಪ್ಯಾನ್‌ ಕಾರ್ಡ್‌ ಪಡೆವ ವ್ಯವಸ್ಥೆಯನ್ನು ಸರಳಗೊಳಿಸಿ ಎಂಬು ಕೂಗು ಹಿಂದಿನಿಂದಲೂ ಇತ್ತು. ಅದು ಈಗ ಈಡೇರಿದಂತಾಗಿದೆ.

ಹಿಂದಿನ ವರ್ಷದಲ್ಲಿ ಪ್ಯಾನ್‌ ಮತ್ತು ಆಧಾರ್‌ ಸೀಡಿಂಗ್‌ ಕಡ್ಡಾಯಗೊಳಿಸಲಾಗಿತ್ತು. ಜತೆಗೆ ಆಧಾರ್‌/ಪ್ಯಾನ್‌ ಜತೆ ಸೇರಿಸಿದ್ದರೆ ಮಾತ್ರ ತೆರಿಗೆ ಪಾವತಿಗೆ ಅನುಕೂಲ ಮಾಡಿಕೊಡಲಾಗಿತ್ತು. ಸದ್ಯಕ್ಕೆ ಆದಾಯ ತೆರಿಗೆ ಇಲಾಖೆಯಿಂದ ಕೊಡಮಾಡುವ ಪ್ಯಾನ್‌ ಕಾರ್ಡ್‌ ಅನ್ನು ಎನ್‌ಎಸ್‌ಡಿಎಲ್‌ ಮತ್ತು ಯುಟಿಐ- ಐಟಿಎಸ್‌ಎಲ್‌ ಎಂಬ ಎರಡು ಏಜೆನ್ಸಿಗಳ ಮೂಲಕ ನೀಡಲಾಗುತ್ತಿದೆ.

Advertisement

ಮುದ್ರಣ ಕಾಗದದ ಆಮದು ಸುಂಕ ಶೇ.5 ಇಳಿಕೆ
ಕೇಂದ್ರ ಸರ್ಕಾರವು ಈ ಬಾರಿ ಬಜೆಟ್‌ನಲ್ಲಿ ಮುದ್ರಣ ಕಾಗದದ ಮೇಲೆ ವಿಧಿಸಿದ್ದ ಶೇ.10 ಇದ್ದ ಆಮದು ಸುಂಕವನ್ನು ಶೇ.5ಕ್ಕೆ ಇಳಿಸಿದೆ. ಹಿಂದಿನ ಆಯವ್ಯಯದಲ್ಲಿ ಮುದ್ರಣಕ್ಕೆ ಸಂಬಂಧಿಸಿದ ಹಗುರವಾದ ಲೇಪಿತ ಕಾಗದದ ಮೇಲೆ ಶೇ.10ರ ಆಮದು ಸುಂಕವನ್ನು ವಿಧಿಸಿತ್ತು. ಹಲವು ಕಾರಣದಿಂದ ಬಳಲುತ್ತಿರುವ ಮುದ್ರಣ ಮಾಧ್ಯಮದ ಮೇಲೆ ಪೇಪರ್‌ ಸುಂಕದ ಹೊರೆ ಒಂದು ವರ್ಷದಿಂದ ಪರಿತಪಿಸುವಂತೆ ಮಾಡಿತ್ತು. ಅಲ್ಲದೆ ಪ್ರಾದೇಶಿಕ ಮುದ್ರಣ ಮಾಧ್ಯಮದ ಮೇಲೆ ದೊಡ್ಡ ಪರಿಣಾಮವನ್ನೇ ಬೀರಿತ್ತು.

ಅಲ್ಲದೆ ಈ ಸಂಬಂಧವಾಗಿ ಪತ್ರಿಕೆಗಳಿಗೆ ಬಳಸಲಾಗುತ್ತಿರುವ ಅನ್‌ ಕೋಟೆಡ್‌ ಪೇಪರ್‌ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಬೇಕು ಎಂದು ಭಾರತೀಯ ಪತ್ರಿಕಾ ಸೊಸೈಟಿ ಹಲವು ದಿನಗಳಿಂದ ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ತೆಗೆದುಕೊಂಡಿರುವ ನಿರ್ಧಾರ ಮುದ್ರಣ ಮಾಧ್ಯಮದ ಶ್ಲಾಘನೆಗೆ ಕಾರಣವಾಗಿದೆ. ಭಾರತದ ಸ್ಟಾಂಡರ್ಡ್‌ ಸುದ್ದಿಮುದ್ರಣ ಕಾಗದದ ಸಾಮರ್ಥಯ 2.5 ದಶಲಕ್ಷ ಟನ್‌ ಆದರೆ, ಕಾಗದವನ್ನು ತಯಾರು ಮಾಡುವ ಗಿರಿಣಿಗಳ ಸಾಮರ್ಥ್ಯ ಮಾತ್ರ 1 ದಶಲಕ್ಷ ಟನ್‌ ಎಂದು ಐಎನ್‌ಎಸ್‌ ಹೇಳಿದೆ.

ಡಿವಿಡೆಂಡ್‌ ವಿತರಣೆ ತೆರಿಗೆ ರದ್ದು: ದೇಶದ ಈಕ್ವಿಟಿ ಮಾರುಕಟ್ಟೆಯಲ್ಲಿ ಹೂಡಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಹೂಡಿಕೆ ವೃದ್ಧಿಸುವ ನಿಟ್ಟಿನಲ್ಲಿ ಡಿವಿಡೆಂಡ್‌ ವಿತರಣೆ ತೆರಿಗೆ (ಡಿವಿಡೆಂಡ್‌ ಡಿಸ್ಟ್ರಿಬ್ಯೂಷನ್‌ ಟ್ಯಾಕ್ಸ್‌) ರದ್ದು ಮಾಡಲಾಗಿದೆ. ಇದೀಗ ಅದನ್ನು ಸ್ವೀಕರಿಸುವವರಿಗೆ ಸೂಕ್ತ ರೀತಿಯಲ್ಲಿ ಅನ್ವಯಾಗುವಂತೆ ಮಾಡಲಾಗುತ್ತದೆ. ಈ ಪ್ರಸ್ತಾಪದಿಂದ ಬೊಕ್ಕಸಕ್ಕೆ 25 ಸಾವಿರ ಕೋಟಿ ರೂ. ತೆರಿಗೆ ಕಡಿಮೆ ಜಮೆ ಆಗಲಿದೆ. ಸದ್ಯ ಇರುವ ನಿಯಮಗಳ ಪ್ರಕಾರ ಕಂಪನಿಗಳು ಷೇರುದಾರರಿಗೆ ನೀಡುವ ಡಿವಿಡೆಂಡ್‌ ಮೇಲೆ ತೆರಿಗೆ ಪಾವತಿ ಮಾಡಬೇಕು. ಅದರ ಪ್ರಮಾಣ ಶೇ.15ರಷ್ಟು ಇದೆ. ಇದರ ಜತೆಗೆ ನಿಗದಿ ಮಾಡಲಾಗಿರುವ ಸರ್ಚಾರ್ಜ್‌ ಮತ್ತು ಸೆಸ್‌ ಅನ್ವಯವಾಗುತ್ತದೆ.

ರೈತರು, ಬಡವರು, ಸಂಬಳ ಪಡೆಯುವ ಮಧ್ಯಮ ವರ್ಗದವರು ಮತ್ತು ವ್ಯಾಪಾರ ವರ್ಗದವರಿಗೆ ಅನುಕೂಲವಾಗುವಂತಹ ಬಜೆಟ್‌ ಮಂಡಿಸಿದ್ದಕ್ಕಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಮೋದಿಯವರನ್ನು ನಾನು ಅಭಿನಂದಿಸುತ್ತೇನೆ.
ಅಮಿತ್‌ ಶಾ, ಗೃಹ ಸಚಿವ

ಕೇಂದ್ರ ಸರ್ಕಾರದ ಬಜೆಟ್‌ ಬಹುಶಃ ಅತ್ಯಂತ ನಿರಾಶಾದಾಯಕವಾಗಿದ್ದು ದೇಶದ ಪ್ರಗತಿಯನ್ನು ಮುಂದಿನ ದಿನಗಳಲ್ಲಿ ಕಾಣ ಬಹುದು ಎಂದು ಆಸೆ ಇಟ್ಟುಕೊಳ್ಳಲು ಆಗಲ್ಲ. ಮತ್ತೆ ಘೋಷಣೆಗಳ ಮಹಾಪೂರ ಹರಿಸಲಾಗಿದೆ.
ಎಚ್‌.ಡಿ.ಕುಮಾರಸ್ವಾಮಿ ಮಾಜಿ ಸಿಎಂ

ವಿನೂತನ ಬಜೆಟ್‌. ರೈತರು, ಬಡವರು ಮತ್ತು ಗ್ರಾಮೀಣ ಭಾಗಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ರೈತರ ಸಮಗ್ರ ಅಭಿವೃದ್ಧಿಗೆ ಬಜೆಟ್‌ ಪೂರಕವಾಗಿದೆ. ದೇಶದ ಜಿಡಿಪಿ ಪ್ರಗತಿಗೆ ಬಜೆಟ್‌ ಕಾರಣವಾಗಲಿದೆ.
ಕೆ.ಎಸ್‌. ಈಶ್ವರಪ್ಪ, ಸಚಿವ

ಈ ದಶ ಕದ ಮೊದಲ ಬಜೆಟ್‌ನಲ್ಲಿ ಲಡಾಖ್‌ಗೆ ವಿಶೇಷ ಪ್ಯಾಕೇಜ್‌ ಘೋಷಿಸಿದ ವಿತ್ತ ಸಚಿವೆಗೆ ಹಾಗೂ ಪ್ರಧಾನಿಗೆ ಲಡಾಖ್‌ ಜನರು ಕೃತಜ್ಞರಾಗಿರುತ್ತಾರೆ. ಹೊಸ ಲಡಾಖ್‌ನ ಅಭಿವೃದ್ಧಿ ಯಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಲಿದೆ.
ಜಾಮ್ಯಾಂಗ್‌ ನಂಗ್ಯಾಲ್‌, ಲಡಾಖ್‌ ಸಂಸದ

Advertisement

Udayavani is now on Telegram. Click here to join our channel and stay updated with the latest news.

Next