Advertisement

ಪಾಕ್‌ ಮಾನಭಂಗ; ಗಾಜಾ ಫೋಟೋ ತೋರಿಸಿ ಕಾಶ್ಮೀರದ್ದೆಂದ ರಾಯಭಾರಿ

06:00 AM Sep 25, 2017 | Team Udayavani |

ವಿಶ್ವಸಂಸ್ಥೆ: ಊಹಿಸಲೂ ಆಗದ ರೀತಿಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ರಿಂದ ಟೀಕೆಗೊಳಗಾದ ಪಾಕಿಸ್ತಾನವು, ಭಾನುವಾರ ಭಾರತದ ವಿರುದ್ಧ ಗೂಬೆ ಕೂರಿಸುವ ಭರದಲ್ಲಿ ವಿಶ್ವ ಸಮುದಾಯದ ಮುಂದೆ ನಗೆಪಾಟಲಿಗೀಡಾಗಿದೆ. “ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಪೆಲೆಟ್‌ ಗನ್‌ನಿಂದ ಗಾಯಗೊಂಡ ಮಹಿಳೆ’ ಎಂದು 2014ರಲ್ಲಿ ಇಸ್ರೇಲ್‌ ವಾಯುಪಡೆ ದಾಳಿಯಿಂದ ಗಾಯಗೊಂಡ ರಾವಾ ಅಬು ಜೋಮಾ ಎಂಬ 17ರ ಯುವತಿಯ ಫೋಟೋ ತೋರಿಸುವ ಮೂಲಕ ಪಾಕಿಸ್ತಾನವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೀಡಾಗಿದೆ.

Advertisement

ಇಂಥದ್ದೊಂದು ಎಡವಟ್ಟು ಮಾಡಿರುವುದು ವಿಶ್ವಸಂಸ್ಥೆಯಲ್ಲಿನ ಪಾಕಿಸ್ತಾನದ ರಾಯಭಾರಿ ಮಲೀಹಾ ಲೋಧಿ. ಗಾಜಾದ ಫೋಟೋವನ್ನು ಕಾಶ್ಮೀರದ್ದು ಎಂದು ಹೇಳುತ್ತಾ, “ಭಾರತದ ಪ್ರಜಾಪ್ರಭುತ್ವ ನೈಜ ಮುಖ ಇದು’ ಎಂದು ವ್ಯಂಗ್ಯವಾಡಲು ಹೋಗಿ, ಅವರೇ ಮುಖಭಂಗ ಅನುಭವಿಸಿದ್ದಾರೆ. ಲೋಧಿ ಅವರ ಮಾತು ಮುಗಿಯುತ್ತಿದ್ದಂತೆ ಪಾಕಿಸ್ತಾನದ ವಿದೇಶಾಂಗ ಇಲಾಖೆ, ವಿಶ್ವಸಂಸ್ಥೆಯಲ್ಲಿ ಲೋಧಿ ಅವರು ಫೋಟೋ ತೋರಿಸುತ್ತಿರುವುದನ್ನು ಫೇಸ್‌ಬುಕ್‌, ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿ ಬೆನ್ನು ತಟ್ಟಿಕೊಳ್ಳಲು ಹೊರಟಿತ್ತು. ಆದರೆ, ಆಗಿದ್ದೇ ಬೇರೆ. ಕೆಲ ಹೊತ್ತಿನಲ್ಲಿಯೇ ಫೋಟೋದ ಅಸಲಿಯತ್ತು ಬಹಿರಂಗವಾದ ಬಳಿಕ ಅಂತಾರಾಷ್ಟ್ರೀಯ ಸಮುದಾಯದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನ ನಗೆಪಾಟಲಿಗೀಡಾಯಿತು.

ಪ್ರಶಸ್ತಿ ವಿಜೇತನ ಫೋಟೋ: ಜೆರುಸಲೇಮ್‌ ಮೂಲದ ಛಾಯಾಚಿತ್ರ ಪತ್ರಕರ್ತ ಡಾ.ಹೇದಿ ಲೆವಿನ್‌ ಅವರು 2014ರ ಜು.22ರಂದು ತೆಗೆದಿದ್ದ ಫೋಟೋ ಅದಾಗಿತ್ತು. 2017ರ ಮಾ.27ರಂದು ಲೆವಿನ್‌ ಆ ಫೋಟೋವನ್ನು ಟ್ವೀಟ್‌ ಮಾಡಿದ್ದರು.

ಭಾರತದ ವಿರುದ್ಧ ವ್ಯರ್ಥಾಲಾಪ:
ಇದೇ ವೇಳೆ, ವಿಶ್ವಸಂಸ್ಥೆಯಲ್ಲಿನ ಪಾಕಿಸ್ತಾನದ ಕಾಯಂ ರಾಯಭಾರಿ ಮಲೀಹಾ ಲೋಧಿ ಅವರು ದಕ್ಷಿಣ ಏಷ್ಯಾದಲ್ಲಿ ಭಾರತವೇ ಭಯೋತ್ಪಾದನೆಯ ತಾಯಿ ಎಂದು ಪ್ರಬಲ ಆರೋಪ ಮಾಡಿದ್ದಾರೆ. ಇಷ್ಟು ಮಾತ್ರವಲ್ಲ 2002ರ ಗುಜರಾತ್‌ ಗಲಭೆಯಲ್ಲಿ ನೆತ್ತರ ಹೊಳೆ ಹರಿಸಿದವರೇ ಭಾರತದ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ ಎಂದು ವ್ಯರ್ಥಾಲಾಪ ಮಾಡಿದೆ. ದೇಶದ ಚುನಾವಣಾ ವ್ಯವಸ್ಥೆಯನ್ನು ಪ್ರಶ್ನಿಸಿದ ಪಾಕಿಸ್ತಾನದ ರಾಯಭಾರಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರನ್ನು ಮತಾಂಧ ಎಂದು ಜರೆದಿದ್ದಾರೆ.

ಪರಭಕ್ಷಕ ಭಾರತ: ಭಾರತ ಮಾಡಿರುವ ಆರೋಪಗಳಿಗೆ ಭಾನುವಾರ ವಿಶ್ವಸಂಸ್ಥೆಯಲ್ಲಿ ಪ್ರತ್ಯುತ್ತರ ನೀಡಿದ ಪಾಕಿಸ್ತಾನದ ರಾಯಭಾರಿ ಮಲೀಹಾ ಲೋಧಿ, ನೆರೆಯ ರಾಷ್ಟ್ರ ತಮ್ಮ ದೇಶದ ವಿವಿಧ ಭಾಗಗಳಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸುತ್ತಿದೆ. ಈ ಮೂಲಕ ಅದು ಪರಭಕ್ಷಕನ ರೂಪ ತಾಳಿದೆ ಎಂದು ಆರೋಪಿಸಿದ್ದಾರೆ. ಪಾಕಿಸ್ತಾನ ಮಾತ್ರವಲ್ಲ ನೆರೆಯ ಎಲ್ಲಾ ರಾಷ್ಟ್ರಗಳಲ್ಲಿಯೂ ಅದು ಉಗ್ರ ಕೃತ್ಯಗಳನ್ನು ನಡೆಸುತ್ತದೆ ಎಂದು ದೂರಿದ್ದಾರೆ. ನೆರೆಯ ರಾಷ್ಟ್ರಗಳನ್ನು ತಳಮಳಗೊಳಿಸುವ ನಿಟ್ಟಿನಲ್ಲಿ ಅದು ಉಗ್ರ ಸಂಘಟನೆಗಳನ್ನು ರೂಪಿಸುತ್ತದೆ. 

Advertisement

ಪಾಕಿಸ್ತಾನ ಮತ್ತು ಇತರ ದಕ್ಷಿಣ ಏಷ್ಯಾ ರಾಷ್ಟ್ರಗಳ ವಿರುದ್ಧ ಸಂಚು ರೂಪಿಸುತ್ತದೆ ಎಂದು ಟೀಕಿಸಿದ್ದಾರೆ.”ಭಾರತ ಮತ್ತು ಪಾಕಿಸ್ತಾನ ನಡುವೆ ಪ್ರಕ್ಷುಬ್ಧ ವಾತಾವರಣ ಸಂಪೂರ್ಣವಾಗಿ ನಿಲ್ಲಬೇಕಾದರೆ ಭಾರತವು ಗಡಿ ಪ್ರದೇಶದಲ್ಲಿ ಆಕ್ರಮಣಕಾರಿ ಮತ್ತು ಪ್ರಚೋದನಾತ್ಮಕ ಪರಿಸ್ಥಿತಿಗೆ ಕುಮ್ಮಕ್ಕು ನೀಡುವುದನ್ನು ನಿಲ್ಲಿಸಲು ಅಂತಾರಾಷ್ಟ್ರೀಯ ಸಮುದಾಯ ಒತ್ತಡ ಹೇರಬೇಕು. ಪಾಕಿಸ್ತಾನದ ವಿರುದ್ಧ ಭಾರತ ಪ್ರಾಯೋಜಿಸುತ್ತಿರುವ ಭಯೋತ್ಪಾದನೆಯನ್ನು ನಿಲ್ಲಿಸಲಿ’ ಎಂದಿದ್ದಾರೆ ಲೋಧಿ.

ಕಾಶ್ಮೀರವೇ ಪ್ರಧಾನ: ಪಾಕಿಸ್ತಾನಕ್ಕೆ ಕಾಶ್ಮೀರವೇ ಪ್ರಧಾನ ವಿಚಾರ ಎಂದು ಹೇಳಿದ ನೆರೆಯ ರಾಷ್ಟ್ರದ ರಾಯಭಾರಿ, “ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಸಮುದಾಯಕ್ಕೆ ಮಧ್ಯಪ್ರವೇಶಿಸಿ ಅದನ್ನು ಬಗೆಹರಿಸುವ ಹೊಣೆಗಾರಿಕೆ ಇದೆ. ಈ ನಿಟ್ಟಿನಲ್ಲಿ ಮುಕ್ತ ಮನಸ್ಸು ಮಾಡಬೇಕು’ ಎಂದರು. ಭಾರತದ ವಿದೇಶಾಂಗ ಸಚಿವರು ಹೇಳಿದಂತೆ ವಿಶ್ವಸಂಸ್ಥೆಯ ನಿರ್ಣಯ ಕಾಲ ಸರಿದಂತೆ ಮಾನ್ಯತೆ ಕಳೆದುಕೊಳ್ಳುವುದಿಲ್ಲ. ಏಕೆಂದರೆ ಕಾನೂನಿಗೆ ಅವಧಿಯ ಮುಕ್ತಾಯ ಎಂಬುದಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ರನ್ನು ತರಾಟೆಗೆ ತೆಗೆದುಕೊಂಡರು.

ಆರ್‌ಎಸ್‌ಎಸ್‌, ಪ್ರಧಾನಿ ಮೋದಿ ವಿರುದ್ಧ ಟೀಕೆ:
ಸ್ವರಾಜ್‌ ಭಾಷಣದಿಂದ ವಸ್ತುಶಃ ಕೆರಳಿ ಕಂಗಾಲಾಗಿರುವ ಪಾಕಿಸ್ತಾನ, ಪರೋಕ್ಷವಾಗಿ ಬಿಜೆಪಿ, ಪ್ರಧಾನಿ ಮೋದಿ ಮತ್ತು 2002ರ ಗುಜರಾತ್‌ ಗಲಭೆಯನ್ನು ಪ್ರಸ್ತಾಪ ಮಾಡಿದೆ. “ಗುಜರಾತ್‌ನಲ್ಲಿ ಸಾವಿರಾರು ಮುಸ್ಲಿಮರ ರಕ್ತರ ಹೀರಿದವರ ಕೈಯ್ಯಲ್ಲಿ ಭಾರತದ ಆಡಳಿತದ ಚುಕ್ಕಾಣಿ ಇದೆ’ ಎಂದಿದೆ. “ಅಂಥ ರಾಷ್ಟ್ರ ವಿಶ್ವದ ಅತ್ಯಂತ ದೊಡ್ಡ ಪ್ರಜಾಸತ್ತಾತ್ಮಕ ರಾಷ್ಟ್ರ. ಇದೊಂದು ಪ್ರಹಸನ’  ಎಂದು ಕಟಕಿಯಾಡಿದೆ.

ಯೋಗಿ ಆಯ್ಕೆಗೆ ಟೀಕೆ: “ಭಾರತದ ರಾಷ್ಟ್ರಪಿತನೆಂದು ಕರೆಯಿಸಿಕೊಳ್ಳುವ ಮಹಾತ್ಮ ಗಾಂಧೀಜಿಯನ್ನು ಕೊಂದ ಆರ್‌ಎಸ್‌ಎಸ್‌ ಭಾರತದ ನಾಯಕತ್ವಕ್ಕೆ ಸಲಹೆ ನೀಡುತ್ತಿದೆ. ಇದರ ಜತೆಗೆ ಆ ದೇಶದ ಅತ್ಯಂತ ದೊಡ್ಡ ರಾಜ್ಯ (ಉತ್ತರ ಪ್ರದೇಶಕ್ಕೆ)ದ ಮುಖ್ಯಮಂತ್ರಿಯನ್ನಾಗಿ ಒಬ್ಬ ಮತಾಂಧನನ್ನು (ಯೋಗಿ ಆದಿತ್ಯನಾಥ್‌)ನೇಮಿಸಿದೆ.’ ಈ ಮೂಲಕ ದೇಶದ ಚುನಾವಣಾ ವ್ಯವಸ್ಥೆಯನ್ನು ಪ್ರಶ್ನಿಸುವ ಭಂಡ ಧೈರ್ಯವನ್ನು ಪಾಕಿಸ್ತಾನ ಮಾಡಿದೆ.

ದೋವಲ್‌ ವಿರುದ್ಧ ಟೀಕೆ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ವಿರುದ್ಧ ಹರಿಹಾಯ್ದ ಲೋಧಿ, ನೆರೆಯ ರಾಷ್ಟ್ರದ ಭದ್ರತಾ ಸಲಹೆಗಾರರೇ ಬಲೂಚಿಸ್ತಾನದಲ್ಲಿ ಉಗ್ರ  ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ಎಂದು ನಮ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಆದರೆ, ಅವರೇ ನಮ್ಮ ದೇಶದಲ್ಲಿ ಉಗ್ರ ಕೃತ್ಯ ನಡೆಸುತ್ತಿದ್ದಾರೆ. ಈ ಮೂಲಕ ಅವರು ದ್ವಿಪದ್ಧತಿಯ ಒತ್ತಡ ತಂತ್ರ (ಡಬಲ್‌ ಸ್ವೀಜ್‌ ಸ್ಟ್ರಾಟಜಿ) ಅನುಸರಿಸುತ್ತಿದ್ದಾರೆ. ಅದು ಯಶಸ್ವಿಯಾಗದು ಎಂದು ತಿರುಗೇಟು ನೀಡಿದ್ದಾರೆ.

ಅರುಂಧತಿ ರಾಯ್‌ ಹೇಳಿಕೆ ಉಲ್ಲೇಖ:
ಒಂದು ದೇಶದ ಭಾಷಣಕ್ಕೆ ಉತ್ತರ ನೀಡುವ (ರೈಟ್‌ ಟು ರಿಪ್ಲೆ„) ಪ್ರಕ್ರಿಯೆಗೆ ಸಾಮಾನ್ಯವಾಗಿ ಶಾಶ್ವತ ರಾಯಭಾರ ಕಚೇರಿಯ ಕಿರಿಯ ಅಧಿಕಾರಿಯನ್ನು ನಿಯೋಜಿಸಲಾಗುತ್ತದೆ. ಶನಿವಾರ ಭಾಷಣದ ಆಘಾತದಿಂದ ಚೇತರಿಸಿಕೊಳ್ಳದ ಪಾಕಿಸ್ತಾನ ಸರ್ಕಾರ ಶಾಶ್ವತ ರಾಯಭಾರಿ ಮಲೀಹಾ ಲೋಧಿ ಅವರನ್ನೇ ಕಣಕ್ಕೆ ಇಳಿಸಿತ್ತು. ಬೂಕರ್‌ ಪ್ರಶಸ್ತಿ ಪುರಸ್ಕೃತ ಲೇಖಕಿ ಅರುಧಂತಿ ರಾಯ್‌ 2015ರ ನವೆಂಬರ್‌ನಲ್ಲಿ ನೀಡಿದ್ದ ಹೇಳಿಕೆಯನ್ನು  ಪಾಕ್‌ ರಾಯಭಾರಿ ಉಲ್ಲೇಖೀಸಿದ್ದು ಕಂಡುಬಂತು. “ದಲಿತರು, ಆದಿವಾಸಿಗಳು, ಮುಸ್ಲಿಮರು, ಕ್ರಿಶ್ಚಿಯನ್ನರು ಭೀತಿಯ ವಾತಾವರಣದಲ್ಲಿ ಬದುಕುವಂತಾಗಿದೆ. ಯಾರಿಗೆ ಯಾವ ಕಡೆಯಿಂದ ದಾಳಿಯಾಗುತ್ತದೆ ಎಂದು ಊಹಿಸಿಕೊಳ್ಳಲೂ ಸಾಧ್ಯವಿಲ್ಲದಂಥ ಪರಿಸ್ಥಿತಿ ಇದೆ. ಇಂಥ ಭಯಾನಕ (ಗುಜರಾತ್‌ ಗಲಭೆ) ಕೇವಲ ಒಂದು ಮಾದರಿ ಮಾತ್ರ. ಜೀವನವೆಂದರೆ ನರಕ ಸದೃಶವಾಗಿದೆ’ ಎಂದು ರಾಯ್‌ ಹೇಳಿದ್ದ ಮಾತನ್ನೇ ಪಾಕ್‌ ಪ್ರಸ್ತಾಪಿಸಿತು.

ಸ್ವರಾಜ್‌ಗೆ ಥ್ಯಾಂಕ್ಸ್‌ ಹೇಳಿದ ರಾಹುಲ್‌ ಗಾಂಧಿ
ಭಾರತ ಐಐಎಂ, ಐಐಟಿಗಳನ್ನು ಆರಂಭಿಸಿದೆ. ಪಾಕಿಸ್ತಾನ ತಮ್ಮವರಿಗಾಗಿ ಏನು ಮಾಡಿದೆ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ಗೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಧನ್ಯವಾದ ಅರ್ಪಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, “ಐಐಟಿ, ಐಐಎಂಗಳನ್ನು ಆರಂಭ ಮಾಡಿ ಕಾಂಗ್ರೆಸ್‌ ನೇತೃತ್ವದ ಸರ್ಕಾರಕ್ಕೂ ದೂರದರ್ಶಿತ್ವ ಇತ್ತು ಎನ್ನುವುದನ್ನು ಒಪ್ಪಿಕೊಂಡಿದ್ದೀರಿ ಸುಷ್ಮಾ ಜಿ. ಕೊನೆಗೂ ನಮ್ಮ ಕೊಡುಗೆಯನ್ನು ಪರಿಗಣಿಸಿದ್ದಕ್ಕೆ ಧನ್ಯವಾದ’ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ. 60 ವರ್ಷಗಳಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿಲ್ಲ ಎಂದು ಬಿಜೆಪಿ ನಾಯಕರು ಪದೇ ಪದೆ ಆಕ್ಷೇಪಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಈ ರೀತಿ ಬರೆದುಕೊಂಡಿದ್ದಾರೆ. ಶುಕ್ರವಾರ ರಾತ್ರಿಯೇ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುಜೇìವಾಲಾ, ಭಾರತದ ಬಗೆಗಿನ ನೈಜ ವಿಚಾರ ಪ್ರಸ್ತಾಪ ಮಾಡಿದ್ದಕ್ಕೆ ಧನ್ಯವಾದಗಳು ಎಂದು ಟ್ವೀಟ್‌ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next