Advertisement

ಗಡಿ ಪಾಠ ಕಲಿತ ಮೇಲೂ ಬಾಲ ಬಿಚ್ಚಿದ ಪಾಕಿಸ್ಥಾನ

11:24 AM Jul 11, 2017 | |

ಜಮ್ಮು/ಇಸ್ಲಾಮಾಬಾದ್‌: ಇಬ್ಬರು ಸೈನಿಕರ ಹತ್ಯೆ, ಮೂರು ಬಂಕರ್‌ಗಳ ನಾಶದ ಬಳಿಕವೂ ಪಾಕಿಸ್ಥಾನ ಸೇನೆಯು ಕದನ ವಿರಾಮ ಉಲ್ಲಂಘನೆಯನ್ನು ಮುಂದುವರಿಸಿದೆ.

Advertisement

ರವಿವಾರ ರಾತ್ರೋರಾತ್ರಿ ಪಾಕ್‌ ಪಡೆಯು ಪೂಂಛ… ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಗ್ರಾಮಗಳು ಹಾಗೂ ಸೇನಾ ಮುಂಚೂಣಿ ನೆಲೆಗಳನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದೆ. ಪರಿಣಾಮ ಗಡಿಯಲ್ಲಿನ ಪೊಲೀಸ್‌ ಬ್ಯಾರಕ್‌ಗಳು ಹಾಗೂ ವ್ಯಾಪಾರ ಕೇಂದ್ರವೊಂದಕ್ಕೆ ಹಾನಿಯಾಗಿದೆ. ಪಾಕ್‌ ದಾಳಿ ಹಿನ್ನೆಲೆಯಲ್ಲಿ ಪೂಂಛ… ಮತ್ತು ಪಾಕಿಸ್ಥಾನದ ರಾವಲ್‌ಕೋಟ್‌ ನಡುವೆ ಸಂಚರಿಸುವ ಬಸ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಇದೇ ವೇಳೆ, ರವಿವಾರದ ಗುಂಡಿನ ದಾಳಿಯಲ್ಲಿ ನಾವು ನಾಲ್ವರು ಭಾರತೀಯ ಯೋಧರನ್ನು ಹತ್ಯೆಗೈದಿದ್ದೇವೆ ಎನ್ನುವ ಮೂಲಕ ಪಾಕಿಸ್ಥಾನ  ತನ್ನ ಸುಳ್ಳಿನಾಟವನ್ನು ಮುಂದುವರಿಸಿದೆ. ಇದಕ್ಕೆ ಸೋಮವಾರ ಪ್ರತಿಕ್ರಿಯಿಸಿರುವ ಸೇನಾ ವಕ್ತಾರರು, “ಅಂಥದ್ದೇನಾದರೂ ಆದರೆ ಸೇನೆಯು ಹುತಾತ್ಮ ಯೋಧರಿಗೆ ಟ್ವಿಟರ್‌ ಹಾಗೂ ಫೇಸ್‌ಬುಕ್‌ ಮೂಲಕ ಶ್ರದ್ಧಾಂಜಲಿ ಸಲ್ಲಿಸುತ್ತದೆ. ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸುತ್ತದೆ. ಆದರೆ, ಪಾಕ್‌ ದಾಳಿಯಿಂದ ಭಾರತದ ಯೋಧರು ರವಿವಾರ ಮೃತಪಟ್ಟಿಲ್ಲ. ಪಾಕಿಸ್ಥಾನ ಹೇಳುತ್ತಿರು ವುದೆಲ್ಲ ಸುಳ್ಳು,’ ಎಂದು ಸ್ಪಷ್ಟಪಡಿಸಿದ್ದಾರೆ. 

ಮೂವರು ಉಗ್ರರ ಹತ್ಯೆ: ಉತ್ತರ ಕಾಶ್ಮೀರದ ನೌಗಾಮ್‌ ವಲಯದಲ್ಲಿ ಭಾರತದೊಳಕ್ಕೆ ನುಸುಳಲು ಯತ್ನಿಸಿದ ಮೂವರು ಉಗ್ರರನ್ನು ಸೇನೆ ಸದೆಬಡಿದಿದೆ. ರವಿವಾರ ರಾತ್ರಿಯೇ ಅನುಮಾನಾಸ್ಪದ ಚಲನೆ ಕಂಡುಬಂದಿದ್ದು, ಬೆಳಗ್ಗೆ ನುಸುಳುಕೋರ ಉಗ್ರರನ್ನು ಪತ್ತೆಹಚ್ಚುವಲ್ಲಿ ಸೇನೆ ಯಶಸ್ವಿಯಾಯಿತು.

ಜಾಧವ್‌ ತಾಯಿಗೆ ವೀಸಾ ವಿಳಂಬ: ಸುಷ್ಮಾ ತರಾಟೆ
ಪಾಕ್‌ನಲ್ಲಿ ಗಲ್ಲುಶಿಕ್ಷೆಗೆ ಒಳಗಾಗಿರುವ ಭಾರತೀಯ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರ ತಾಯಿಗೆ ಪಾಕ್‌ ವೀಸಾ ನೀಡದ್ದಕ್ಕೆ ಪಾಕ್‌ ಪ್ರಧಾನಿ ಅವರ ವಿದೇಶಾಂಗ ಸಲಹೆಗಾರ ಸರ್ತಾಜ್‌ ಅಜೀಜ್‌ ಅವರನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್‌ಗಳನ್ನು ಅವರು ಮಾಡಿದ್ದು, ಭಾರತದಲ್ಲಿ ವೈದ್ಯಕೀಯ ನೆರವು ಪಡೆಯಲು ಇಚ್ಛಿಸುವ ಎಲ್ಲಾ ಪಾಕಿಸ್ಥಾನೀಯರಿಗೆ ತಾವು ವೀಸಾ ನೀಡುವ ವ್ಯವಸ್ಥೆ ಮಾಡುತ್ತೇವೆ. ಆದರೆ ಕುಲಭೂಷಣ್‌ ಭೇಟಿ ಸಂಬಂಧ ಅವರ ತಾಯಿಗೆ ಇನ್ನೂ ವೀಸಾ ನೀಡಿಲ್ಲ. ಈ ಬಗ್ಗೆ ತಾವೇ ಖುದ್ದು ಪತ್ರ ಬರೆದಿದ್ದರೂ ಪ್ರತಿಕ್ರಿಯೆ ಇಲ್ಲ ಎಂದು ಹೇಳಿದ್ದಾರೆ. ಪಾಕ್‌ ಈ ವರ್ತನೆ ತೋರಿದ್ದರೂ, ಭಾರತಕ್ಕೆ ಚಿಕಿತ್ಸೆಗೆ ಆಗಮಿಸುವ, ಸರ್ತಾಜ್‌ ಅವರ ಶಿಫಾರಸು ಪತ್ರ ಹೊಂದಿದ ರೋಗಿಗಳಿಗೆ ನೆರವಾಗುವುದಾಗಿ ಸುಷ್ಮಾ ಹೇಳಿದ್ದಾರೆ. 

Advertisement

ಸೇನೆ ಮೇಲೆ ದಾಳಿಗೆ ಸಂಚು: ಇಬ್ಬರು ಲಷ್ಕರ್‌ ಉಗ್ರರ ಸೆರೆ
ಜಮ್ಮು-ಕಾಶ್ಮೀರ ಪೊಲೀಸರು ಮತ್ತು ಭಾರತೀಯ ಸೇನೆಯ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಲಷ್ಕರ್‌ ಉಗ್ರರಿಬ್ಬರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ವಿಶೇಷವೆಂದರೆ, ಇಬ್ಬರು ಉಗ್ರರ ಪೈಕಿ ಒಬ್ಟಾತ ಉತ್ತರಪ್ರದೇಶದ ಮುಜಾಫ‌ರ್‌ನಗರದವನು. ಈತನ ಹೆಸರು ಸಂದೀಪ್‌ ಕುಮಾರ್‌ ಶರ್ಮಾ. ಕಣಿವೆ ರಾಜ್ಯದ ಹೊರಗಿನ ವ್ಯಕ್ತಿಯೊಬ್ಬನನ್ನು ಲಷ್ಕರ್‌ ನಂಟಿನ ಹಿನ್ನೆಲೆ ಬಂಧಿಸಿರುವುದು ಇದೇ ಮೊದಲು ಎಂದು ಪೊಲೀಸರು ತಿಳಿಸಿದ್ದಾರೆ. ಸಂದೀಪ್‌ ಕುಮಾರ್‌ 2012ರಲ್ಲಿ ಕಾಶ್ಮೀರಕ್ಕೆ ಕೆಲಸಕ್ಕೆಂದು ತೆರಳಿದ್ದು, ಚಳಿಗಾಲದ ಸಮಯದಲ್ಲಿ ಪಂಜಾಬ್‌ನಲ್ಲಿ ಬೇರೊಂದು ಕೆಲಸ ಮಾಡಿಕೊಂಡಿದ್ದ. ಜನವರಿಯಲ್ಲಿ ಕಣಿವೆ ರಾಜ್ಯಕ್ಕೆ ವಾಪಸಾದ ಈತ ಲಷ್ಕರ್‌ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಸ್ಥಳೀಯರನ್ನು ಭೇಟಿಯಾಗಿದ್ದ. ಅಲ್ಲಿಂದೀಚೆಗೆ ಲಷ್ಕರ್‌ ಉಗ್ರ ಬಶೀರ್‌ ಲಷ್ಕರಿಯ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಸಂದೀಪ್‌ ಶರ್ಮಾ ಎಟಿಎಂಗಳನ್ನು ಲೂಟಿ ಮಾಡುವುದು, ಸೇನಾ ಗಸ್ತು ವಾಹನಗಳ ಮೇಲೆ ದಾಳಿ, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವುದು ಮತ್ತು ಲಕ್ಷಾಂತರ ರೂ.ಗಳನ್ನು ಕೊಳ್ಳೆ ಹೊಡೆಯುವುದು ಮತ್ತಿತರ ರೀತಿಯಲ್ಲಿ ಲಷ್ಕರ್‌ಗೆ ನೆರವಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ಜೊತೆಗೆ ಕುಲ್ಗಾಂನ ಮುನೀಬ್‌ ಶಾ ಎಂಬಾತನನ್ನೂ ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next