Advertisement

ಅಂತಿಮ ಗಡುವು:ಅಪಾರ ಬೆಂಬಲಿಗರೊಂದಿಗೆ ಇಸ್ಲಾಮಾಬಾದ್ ಗೆ ಲಗ್ಗೆ ಇಟ್ಟ ಇಮ್ರಾನ್, ಸೇನೆ ನಿಯೋಜನೆ

11:50 AM May 26, 2022 | Team Udayavani |

ಇಸ್ಲಾಮಾಬಾದ್: ಆರು ದಿನದೊಳಗೆ ಚುನಾವಣೆ ಘೋಷಿಸಿ, ಇಲ್ಲದಿದ್ದಲ್ಲಿ ಇಡೀ ದೇಶದ ಜನರೊಂದಿಗೆ ಇಸ್ಲಾಮಾಬಾದ್ ಗೆ ಲಗ್ಗೆ ಇಡುವುದಾಗಿ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಗುರುವಾರ (ಮೇ 26) ಮಿಲಿಟರಿಯನ್ನು ನಿಯೋಜಿಸಲಾಗಿದೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ರಾಜ್ಯಸಭಾ ಅಭ್ಯರ್ಥಿ ಆಯ್ಕೆ ಕಸರತ್ತು ಶುರು; ನಾಲ್ಕನೇ ಅಭ್ಯರ್ಥಿ ಆಯ್ಕೆಗೆ ಜೆಡಿಎಸ್ ಬಲ ಅಗತ್ಯ

ಇಮ್ರಾನ್ ಖಾನ್ ತನ್ನ ಅಪಾರ ಬೆಂಬಲಿಗರು, ಪಕ್ಷದ ಕಾರ್ಯಕರ್ತರ ಜತೆ ಇಸ್ಲಾಮಾಬಾದ್ ಗೆ ಮುತ್ತಿಗೆ ಹಾಕಲು ಬೃಹತ್ ಜಾಥಾದೊಂದಿಗೆ ಆಗಮಿಸುತ್ತಿರುವುದು ಪಾಕ್ ಪ್ರಧಾನಿ ಶೆಹ್ಬಾಜ್ ಶರೀಫ್ ನೇತೃತ್ವದ ಸರ್ಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಇಸ್ಲಾಮಾಬಾದ್ ಗೆ ಆಗಮಿಸಿದ್ದು, ರೆಡ್ ಝೋನ್ ರಕ್ಷಣೆಗಾಗಿ ಪಾಕಿಸ್ತಾನ ಸೇನೆ ಬೀಡು ಬಿಟ್ಟಿರುವುದಾಗಿ ವರದಿ ವಿವರಿಸಿದೆ.

ರಾಜಧಾನಿ ಇಸ್ಲಾಮಾಬಾದ್ ನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪಾಕಿಸ್ತಾನ ಸೇನೆಯನ್ನು ನಿಯೋಜಿಸಲಾಗಿದೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ರಾಣಾ ಸನಾವುಲ್ಲಾ ಸರ್ಕಾರ ಹೊರಡಿಸಿರುವ ಆದೇಶವನ್ನು ಟ್ವೀಟ್ ಮಾಡಿರುವುದಾಗಿ ವರದಿ ತಿಳಿಸಿದೆ.

Advertisement

ಕೆಂಪು ವಲಯ(ರೆಡ್ ಝೋನ್)ದಲ್ಲಿರುವ ಪ್ರಮುಖ ಸರ್ಕಾರಿ ಕಟ್ಟಡಗಳ ರಕ್ಷಣೆಗಾಗಿ ಪಾಕಿಸ್ತಾನ ಸರ್ಕಾರ ಸೇನೆಯನ್ನು ರವಾನಿಸಿರುವುದಾಗಿ ಸನಾವುಲ್ಲಾ ತಿಳಿಸಿದ್ದಾರೆ. ಇಮ್ರಾನ್ ಖಾನ್ ಬೆಂಬಲಿಗರು ರಾಜಧಾನಿ ಒಳಕ್ಕೆ ಪ್ರವೇಶಿಸದಂತೆ ತಡೆಯಲು ಪ್ರಯತ್ನಿಸಿದ್ದು, ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪಿಟಿಐ ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿರುವುದಾಗಿ ವರದಿ ಹೇಳಿದೆ.

ಶೆಹ್ಬಾಜ್ ಶರೀಫ್ ನೇತೃತ್ವದ ಸರ್ಕಾರ ನೂತನ ಚುನಾವಣಾ ದಿನಾಂಕ ಘೋಷಿಸುವವರೆಗೂ ಇಸ್ಲಾಮಾಬಾದ್ ನ ಡಿ-ಚೌಕ್ ದಿಂದ ಬೆಂಬಲಿಗರು ಕದಲಬಾರದು ಎಂದು ಇಮ್ರಾನ್ ಖಾನ್ ಬುಧವಾರ ಎಚ್ಚರಿಕೆ ನೀಡಿರುವುದಾಗಿ ವರದಿ ವಿವರಿಸಿದೆ.

ನಿಜವಾದ ಸ್ವಾತಂತ್ರ್ಯಕ್ಕಾಗಿ ಪಾಕಿಸ್ತಾನದ ಪ್ರತಿಯೊಬ್ಬ ಮಹಿಳೆಯರು, ಮಕ್ಕಳು ಮನೆಯಿಂದ ಹೊರಬಂದು ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಇಮ್ರಾನ್ ಖಾನ್ ಮನವಿ ಮಾಡಿಕೊಂಡಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.

ಪಾಕಿಸ್ತಾನದ ಸುಪ್ರೀಂಕೋರ್ಟ್ ಕೂಡಾ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸದಂತೆ ಪಾಕ್ ಸರ್ಕಾರಕ್ಕೆ ನಿರ್ಬಂಧ ವಿಧಿಸಿದೆ. ಅಲ್ಲದೇ ಇಸ್ಲಾಮಾಬಾದ್ ನ ಎಚ್-9 ಮೈದಾನದಲ್ಲಿ ಪಿಟಿಐ ಪಕ್ಷ ಶಾಂತಿಯುತ ಪ್ರತಿಭಟನೆ ನಡೆಸಲು ಅನುಮತಿ ನೀಡಿದೆ ಎಂದು ವರದಿ ತಿಳಿಸಿದೆ.

ಇಮ್ರಾನ್ ಖಾನ್ ನ ಸಾವಿರಾರು ಬೆಂಬಲಿಗರು, ವಿಪಕ್ಷಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಪಾಕಿಸ್ತಾನದಲ್ಲಿ ಗಲಭೆ, ಹಿಂಸಾಚಾರ ನಡೆಯುವ ಸಾಧ್ಯತೆ ಇದ್ದು, ಮತ್ತೆ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗುವ ಸನ್ನಿವೇಶ ಎದುರಾಗಿರುವುದಾಗಿ ವರದಿ ವಿಶ್ಲೇಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next