ಬೆಂಗಳೂರು: ವೇದಗಳ ಅಧ್ಯಯನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದ, ಪದ್ಮಶ್ರೀ ಪುರಸ್ಕೃತ ಗಣಿತ ತಜ್ಞ ಡಾ.ಆರ್.ಎಲ್. ಕಶ್ಯಪ್ (ರಂಗಸ್ವಾಮಿ ಲಕ್ಷ್ಮೀನಾರಾಯಣ ಕಶ್ಯಪ್) ಅವರು ಶುಕ್ರವಾರ ಬಾರದ ಲೋಕಕ್ಕೆ ಪಯಣಿಸಿದರು.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಆರ್.ಎಲ್.ಕಶ್ಯಪ್ (85) ಅವರು ಉತ್ತರಹಳ್ಳಿ ಸಮೀಪದ ಗುಬ್ಬಲಾಳದ ತಮ್ಮ ಸ್ವಗೃಹದಲ್ಲಿ ಬೆಳಗ್ಗೆ 10.30ಕ್ಕೆ ನಿಧನರಾದರು.
ನ.12ರಂದು (ಶನಿವಾರ) ಜಯನಗರದ ಸಾಕ್ಷಿ ಕಚೇರಿಯಲ್ಲಿ ಬೆಳಗ್ಗೆ 8 ರಿಂದ 10ರ ವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಬೆಳಗ್ಗೆ 11.30ಕ್ಕೆ ಚಾಮರಾಜಪೇಟೆಯ ಟಿ.ಆರ್.ಮಿಲ್ ರುದ್ರಭೂಮಿಯಲ್ಲಿ ಪಾರ್ಥಿವ ಶರೀರದ ಅಂತಿಮ ಕ್ರಿಯೆಗಳು ನಡೆಯಲಿವೆ ಎಂದು ಕುಟುಂಬದ ಆಪ್ತರು ತಿಳಿಸಿದ್ದಾರೆ.
ಕಶ್ಯಪ್ ಅವರು 1938ರ ಮಾರ್ಚ್ 28ರಂದು ಮೈಸೂರಿನಲ್ಲಿ ಜನಿಸಿದರು. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಬಿ.ಎಸ್ಸಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಎಂ.ಎಸ್.ಸಿ, ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ವಿಷಯದಲ್ಲಿ ಪಿ.ಎಚ್.ಡಿ. ಪಡೆದಿದ್ದರು. ಅಮೇರಿಕದ ಪರ್ಡ್ಯೂ ವಿ.ವಿ.ಯಲ್ಲಿ ಮೂರು ದಶಕಗಳ ಕಾಲ ಎಲೆಕ್ಟ್ರಿಕಲ್ ಹಾಗೂ ಕಂಪ್ಯೂಟರ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
ಸಂಶೋಧನಾ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿದ್ದ ಇವರು 350ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳನ್ನು ಬರೆದಿದ್ದಾರೆ. ಐವತ್ತು ಸಂಶೋಧನಾ ವಿದ್ಯಾರ್ಥಿಗಳಿಗೂ ಮಾರ್ಗದರ್ಶಿ ಆಗಿದ್ದರು.
Related Articles
ವೇದಗಳ ಸಂಶೋಧನ ಕ್ಷೇತ್ರಕ್ಕೂ ಇವರು ಅಪಾರ ಕೊಡುಗೆ ನೀಡಿದ್ದಾರೆ. ವೇದಗಳಲ್ಲಿ 25 ಸಾವಿರದಷ್ಟು ಮಂತ್ರಗಳಿಗೂ ಅರ್ಥ ಬರೆದು ಪ್ರಕಟಿಸಿದ್ದಾರೆ. ಋಗ್ವೇದದ 12 ಸಂಪುಟಗಳು, ಕೃಷ್ಣಯಜುರ್ವೇದದ 4 ಸಂಪುಟಗಳು, ಅಥರ್ವವೇದದ 6 ಸಂಪುಟಗಳು, ಸಾಮವೇದದ 2 ಸಂಪುಟಗಳು ಹಾಗೂ ಶುಕ್ಲ ಯಜುರ್ ವೇದದ 2 ಸಂಪುಟಗಳು ವೇದಾಸಕ್ತರ ಅಪಾರ ಜನಮನ ಸೆಳೆದಿವೆ.
ಕಶ್ಯಪ್ ಅವರ “ಋಗ್ವೇದವನ್ನು ಯಾಕೆ ಓದಬೇಕು” ಎಂಬ ಕೃತಿ ಸಾಹಿತ್ಯ ಲೋಕದಲ್ಲಿ ಬಹಳಷ್ಟು ಮೆಚ್ಚುಗೆ ಪಡೆದಿದೆ. ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ ಭಾಷೆಗಳಲ್ಲಿ ಪ್ರಕಟವಾಗಿದೆ. ಇವರು ರಚಿಸಿರುವ “ಋಗ್ವೇದದ ಅರ್ಥಾನುಸಂಧಾನ, “ಸೃಷ್ಟಿ ಹಾಗೂ ಮೃತ್ಯು ಸೂಕ್ತಗಳು, “ಸಂಕಲ್ಪದ ಅಧಿದೇವತೆ-ಅಗ್ನಿ, “ಆಧುನಿಕರಿಗಾಗಿ ವೇದ ಜ್ಞಾನ’ ಸೇರಿ ಹಲವು ಮಧ್ಯಮ ಗಾತ್ರದ ಪುಸ್ತಕಗಳು ವೇದಾಧ್ಯಯನಕ್ಕೆ ದಿಕ್ಸೂಚಿಯಂತಿವೆ. ಈಗಾಗಲೇ ಕನ್ನಡ, ತಮಿಳು, ತೆಲುಗು, ಮರಾಠಿ, ಮಲೆಯಾಳಂ ಭಾಷೆಗಳಲ್ಲಿ ಪ್ರಕಟಗೊಂಡಿವೆ.
ವೇದ ಜ್ಞಾನ ಸಂರಕ್ಷಣೆ, ಸಂಶೋಧನೆ ಹಾಗೂ ಪ್ರಸಾರಕ್ಕಾಗಿ ಡಾ.ಕಶ್ಯಪ್ ಅವರಿಗೆ “ಶ್ರೀ ಅರೋಬಿಂದೊ ಕಪಾಲಿ ಶಾಸ್ತ್ರಿ ವೇದಸಂಸ್ಕೃತ ಸಂಸ್ಥೆ’ ಯನ್ನು ಸ್ಥಾಪಿಸಿದ್ದಾರೆ. ಒಂದು ದಶಮಾನದಲ್ಲಿ 2 ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ವೇದಾಸಕ್ತರ ಕೈಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಈ ಎಲ್ಲ ಕೆಲಸಗಳಿಗೆ ತಮ್ಮದೇ ಆದ ಕೋಟ್ಯಂತರ ರೂ.ವಿನಿಯೋಗಿಸಿದ್ದರು. ವೇದ ಮತ್ತು ತಂತ್ರಜ್ಞಾನ ಕ್ಷೇತ್ರಗಳೆರಡರಲ್ಲೂ ಅಪಾರ ಒಳನೋಟದಿಂದ ಕೂಡಿರುವ ಗ್ರಂಥರಾಶಿಯನ್ನು ರಚಿಸಿ ಜಗತ್ತಿನ ಜ್ಞಾನ ಕ್ಷೇತ್ರವನ್ನು ವಿಸ್ತರಿಸಿದ್ದಾರೆ.
ವೇದ ಜ್ಞಾನ ಸಂರಕ್ಷಣೆ, ಸಂಶೋಧನೆ, ಪ್ರಸಾರ ಕಾರ್ಯಕ್ಕೆ ಇವರು ನೀಡಿದ ಕೊಡುಗೆಯನ್ನ ಸ್ಮರಿಸಿ ಕೇಂದ್ರ ಸರ್ಕಾರ 2003ರಲ್ಲಿ “ವೇದಾಂಗ ವಿದ್ವಾನ್’ ಪ್ರಶಸ್ತಿ ನೀಡಿ ಗೌರವಿಸಿದೆ. ಜತೆಗೆ ರಾಜ್ಯ ಸರ್ಕಾರ 2012ರಲ್ಲಿ ” ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಸನ್ಮಾನಿಸಿವೆ. ಭಾರತೀಯ ವಿದ್ಯಾಭವನ, ಬೆಂಗಳೂರು “ವೇದ ಬ್ರಹ್ಮ’ ಪುರಸ್ಕಾರದೊಂದಿಗೆ ಸತ್ಕರಿಸಿದೆ. ಜತೆಗೆ 2021ರಲ್ಲಿ “ಪದ್ಮಶ್ರೀ’ ಪ್ರಶಸ್ತಿಗೂ ಕಶ್ಯಪ್ ಭಾಜನರಾಗಿದ್ದರು.