ಚಂದಾಗೆ ಇರುತೈತಿ…
ತೋಟಕ್ಕೆ ಹೋದಾವ
ಹೂವಾ ಕೊಯ್ನಾ ಬೇಡ…
ಕೊಯ್ದ ಹೂವಾ ಮತ್ತೆ ಜೋಡಿಸಾಕೆ
ಆಗದಾ ಮ್ಯಾಲೆ ನೀ
ತೋಟದ ಚಂದಾ ಕೆಡಿಸಬ್ಯಾಡ
ಹುಡುಗಿಯರ ಬದುಕಿನಲ್ಲಿ ಚಕ್ಕಂದವಾಡಿ, ಕೈಬಿಟ್ಟು, ಅವರ ಬಾಳನ್ನು ಕೆಡಿಸುವ ವಿಕೃತ ಹುಡುಗರ ಬಗ್ಗೆ ಹೂವನ್ನು ಸಾಂಕೇತಿಕವಾಗಿ ಬಳಸಿಕೊಂಡು ಈ ಹಾಡು ರಚಿಸಿದವರು ಹಾಲಕ್ಕಿ ಬುಡಕಟ್ಟು ಸಮುದಾಯದ ನಾಯಕಿ, ಜಾನಪದ ಹಾಡು ಗಾರ್ತಿ ಪದ್ಮಶ್ರೀ ಪುರಸ್ಕೃತರಾದ ಸುಕ್ರಿ ಬೊಮ್ಮ ಗೌಡ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಡಿಗೇರ ಖೇಣಿಯ ಹಾಲಕ್ಕಿ ಹಾಡುಹಕ್ಕಿ ಸುಕ್ರಜ್ಜಿಯವರ ವಯಸ್ಸು ಈಗ 84 ದಾಟಿದ್ದರೂ ಅವರ ಬದುಕಿನ ಉತ್ಸಾಹ, ಲವಲವಿಕೆ, ಹಾಡು ಮತ್ತು ಪದಗಳ ಸ್ಮರಣಶಕ್ತಿ ಅದಕ್ಕಿಂತಲೂ ಹೆಚ್ಚಾಗಿ ಅವರ ಮಾನವೀಯ ಪ್ರೀತಿ ಆಕಾಶದೆತ್ತರ. ಸುಕ್ರಜ್ಜಿಯವರು ಪರಿಸರ ಪರ, ಮಾನವೀಯತೆಯ ಪರ ಹೋರಾಟ ಮಾಡುತ್ತಲೇ ಬಂದವರು. ಶಾಲೆಯ ಮೆಟ್ಟಿಲನ್ನೇ ಏರದ ಹಳ್ಳಿಯ ಈ ಬಡ ಮಹಿಳೆ ಕರ್ನಾಟಕ ವಿಶ್ವವಿದ್ಯಾನಿಲಯದ ಜಾನಪದ ವಿಭಾಗಕ್ಕೆ ವಿಶೇಷ ಉಪನ್ಯಾಸಕಿಯಾಗಿದ್ದಾರೆ. ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸುಕ್ರಿ ಅಜ್ಜಿಯವರ ತಂದೆ ಸುಬ್ಬಣ್ಣ, ತಾಯಿ ದೇವಮ್ಮ, ಗಂಡ ಬೊಮ್ಮ ಗೌಡರಿಂದ ಕಲಿತ ಶ್ರಮ ಜೀವನವೇ ಇಂದು ಇವರು ಹಾಲಕ್ಕಿ ಸಮುದಾಯಕ್ಕೆ ನೀಡಿದ ಕೊಡುಗೆ. ಹಾಲಕ್ಕಿ ಜನಾಂಗವೆಂದರೆ ಇದ್ದುದರಲ್ಲೇ ತೃಪ್ತಿ ಪಡುವ, ನಾಳೆಯ ಬಗ್ಗೆ ಯೋಚಿಸದ ಹಳೆಯ ಸಂಪ್ರದಾಯಗಳನ್ನು ಬಿಡದ, ಬದಲಾವಣೆಗೂ ಒಪ್ಪದ, ಹಣ, ಆಸ್ತಿ, ಪ್ರಚಾರಗಳ ಯಾವುದೇ ವ್ಯಾಮೋಹವೂ ಇಲ್ಲದವರಾಗಿದ್ದರೂ ಸಾಂಸ್ಕೃತಿಕ ಶ್ರೀಮಂತಿಕೆ ಸಾಹಿತ್ಯ ಸಿರಿ ಇರುವ ವಿಶಿಷ್ಟ ಸಮುದಾಯದವರು.
Advertisement
ಹಾಲು+ಅಕ್ಕಿ = ಹಾಲಕ್ಕಿ !ಸರ್ವರಿಗೂ ಸಮಪಾಲು, ಸಮಬಾಳು ಎಂದು ಬದುಕುವ ಹಾಲಕ್ಕಿ ಜನಾಂಗ ಉತ್ತರಕನ್ನಡದ ಕಾಳೀನದಿಯಿಂದ ಶರಾವತಿ ವ್ಯಾಪ್ತಿಯವರೆಗೆ ಕಡವಾಡ, ಅಂಕೋಲಾ, ನುಸಿಕೋಟೆ, ಕುಂಬಾರಗದ್ದೆ, ಗೋಕರ್ಣ, ಹರೀಟ, ಚಂದಾವರ ಎಂಬ 7 ಸೀಮೆಗಳಲ್ಲಿ ಕೇರಿ, ಕೊಪ್ಪ, ಓಣಿ, ಊರು, ಸೀಮೆಗಳಿಗೆ ಬುದವಂತ, ಅರಸುಗೌಡ, ಗುರುಗೌಡ, ಪರ್ಧಾನಿಗೌಡ, ಮಾನಾಡಗೌಡ, ಕೋಲಕಾರ, ಗಾಂವಕಾರ ಎಂದು ಪ್ರಾದೇಶಿಕ ವಿಂಗಡಣೆ ಇರುತ್ತದೆ. ಅಮದಳ್ಳಿ, ಮಚ°ಳ್ಳಿ , ಬಿಣಗ, ಕಿನ್ನರ, ಸಿದ್ದರ, ಶಿರ್ವೆ ಮುಂತಾದ ಸಿದ್ದರಾಮೇಶ್ವರ ಗದ್ದುಗೆಗಳಲ್ಲಿ ಹಾಲಕ್ಕಿ ಒಕ್ಕಲಿಗರ ಇನ್ನೊಂದು ಪಂಗಡವಾದ ಗೊಂಡರೊಂದಿಗೆ ವಾಸಿಸುತ್ತಿದ್ದಾರೆ. ಹಾಲಕ್ಕಿ ಜನರ ಜೀವನಶೈಲಿ, ಉಡುಗೆ, ಸಂಸ್ಕೃತಿ, ಪದ್ಧತಿ, ಆಚಾರ-ವಿಚಾರಗಳು ಕಾಡು, ಸದಿ, ಪರಿಸರಕ್ಕೆ ಪೂರಕವಾದಂತಿದ್ದು ಹಾಡು, ಕುಣಿತ, ಸಂಭ್ರಮವೆಂಬ ಗ್ರಾಮೀಣ ಸೊಗಡು ವಿಶಿಷ್ಟವಾಗಿರುತ್ತದೆ. ಗುಮಟೆ, ತಾರ್ಲೆ, ನಾಟಿ, ಪುಗುಡಿ, ಮದುವೆ ಹಾಡುಗಳನ್ನು ಹಾಡುತ್ತಾ ಜಾನಪದ ಕ್ಷೇತ್ರದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡ ಹಾಲಕ್ಕಿಗಳ ಉಡುಗೆ-ತೊಡುಗೆಯೂ ವಿಭಿನ್ನ. ರವಿಕೆ ಉಡದೆ ಸೀರೆಯನ್ನು ಜಟಿಕೆ ಕಟ್ಟುವುದು (ಮಂಡಿಯವರೆಗೆ ಸೀರೆ ಉಟ್ಟು, ಕುತ್ತಿಗೆಯ ಎರಡೂ ಭಾಗಕ್ಕೆ ಸೀರೆಯನ್ನು ಹಾಯಿಸಿ ಹಿಂದಿನಿಂದ ಅದನ್ನು ಗಂಟು ಹಾಕಿ ಕಟ್ಟುವುದು) ಬಣ್ಣಗಳ ಮಣಿಸರವನ್ನು ಹಾಕಿಕೊಳ್ಳುವುದು ಇವರ ಸಾಂಪ್ರದಾಯಿಕ ಉಡುಗೆ. ನಾರೇಣಸ್ವಾಮಿ ಗದ್ದೆಗೆ ಹೊರಟಾಗ ಅವನ ಹೆಂಡತಿ ಲಚುಮೀದೇವಿ ಹಾಲು ಮತ್ತು ಅನ್ನದ ಬುತ್ತಿಯನ್ನು ಹಿಡ್ಕೊಂಡು ಹೊಲಕ್ಕೆ ಹೋಗುತ್ತಿದ್ದಾಗ, ಕಲ್ಲಿಗೆ ಕಾಲು ಎಡವಿ ಬಿದ್ದು ಹಾಲು-ಅನ್ನ ನೆಲಕ್ಕೆ ಬಿದ್ದಾಗ, ಆ ಹಾಲು-ಅನ್ನವನ್ನು ಎರಡು ಮುದ್ದೆ ಮಾಡಿ ನೆಲದ ಮೇಲೆ ಇಟ್ಟಾಗ, ಅದು ಒಂದು ಗಂಡು ಇನ್ನೊಂದು ಹೆಣ್ಣು ಆಗಿ ಜೀವ ಪಡೆಯಿತೆಂದೂ ಹಾಲು ಮತ್ತು ಅಕ್ಕಿ ಜೀವವಾದುದರಿಂದ ಹಾಲಕ್ಕಿ ಎಂದು ಕರೆಯುತ್ತಾರೆ. ಆದರೆ, ಇದರಲ್ಲಿ ಪಾಠಾಂತರಗಳಿವೆ. ಹಾಲಿನಂತೆ ಬಿಳಿಯಾದ ಮೇಲ್ತರದ ಅಕ್ಕಿಯನ್ನು ಇವರು ಬೆಳೆಸುವುದರಿಂದ, ಹಾಲು ಮತ್ತು ಅಕ್ಕಿ ಇವರ ಕುಲಕಸುಬು ಆದುದರಿಂದ, ಹಾಳಾದ ಅಕ್ಕಿಯನ್ನು ಇವರಿಗೆ ಕೊಟ್ಟು ಹಾಳಕ್ಕಿ (ಹಲಾಕ್, ಹಾಲಿಕ…) ಅದುವೇ ಹಾಲಕ್ಕಿ ಆಯಿತಂತೆೆ. ಹಾಲಕ್ಕಿಯವರ ಸಾಮಾಜಿಕ ಉಪಭಾಷೆಗಳಲ್ಲಿ ಣ, ನ, ಳ, ಲ, ಸ, ಚ- ತೆಲುಗು ಶಬ್ದಗಳಿರುವುದರಿಂದ ಆಂಧ್ರಪ್ರದೇಶದ ಹಾಲಿಕರೇ ಇಲ್ಲಿಗೆ ವಲಸೆ ಬಂದವರೆಂದೂ, ಮಹಾರಾಷ್ಟ್ರ, ಗೋವಾದಿಂದ ಕಾರವಾರದ ಬೈತಕೋಲು, ಕಡವಾಳುಗೆ ಬಂದವರೆಂದೂ ಹೇಳುತ್ತಾರೆ.
ಸಾಮಾಜಿಕ ಹೋರಾಟ, ಪರಿಸರ ಹೋರಾಟ, ಮದ್ಯಪಾನ ವಿರುದ್ಧ ಹೋರಾಟ, ಸ್ತ್ರೀಶೋಷಣೆ ವಿರುದ್ಧ ಹೋರಾಟ, ಅಸಮಾನತೆಯ ವಿರುದ್ಧ ಹೋರಾಟಗಳಲ್ಲೇ ಬದುಕು ಸಾಗಿಸಿದ ಅಜ್ಜಿಗೆ ಆರ್ಥಿಕವಾಗಿ ಹಿಂದುಳಿದಿದ್ದೇನೆ ಎಂಬ ಯಾವ ಬೇಸರವೂ ಇಲ್ಲ. “ನಾನು ಸಂತಸದಿಂದ ಇದ್ದೇನೆ, ಊಟತಿಂಡಿಗೇನೂ ಕಮ್ಮಿ ಆಗಿಲ್ಲ. ಹಣ ಯಾಕೆ ಬೇಕು? ಹಣದ ಅಭಿಲಾಷೆ ಇದ್ದವರ ಹತ್ತಿರ ಹೆಣದ ವಾಸನೆ ಬರುತ್ತದೆ’ ಎಂಬುದು ಸುಕ್ರಿ ಅಜ್ಜಿಯ ಸುಖದ ಗುಟ್ಟು. ಒಂದಷ್ಟು ಪ್ರಶಸ್ತಿ, ಒಂದಷ್ಟು ಸನ್ಮಾನಗಳು ಆದರೂ, ಕಾಡಿಗೆ ಹೋದರೂ, ನಾಡಿಗೆ ಹಾಡಲು ಹೋದರೂ, ಚಳುವಳಿಗೆ ಹೋದರೂ, ಪ್ರಶಸ್ತಿ ಸ್ವೀಕರಿಸಲು ಬೆಂಗಳೂರು, ದೆಹಲಿಗೆ ಹೋದರೂ ಅದೇ ಮೊಣಕಾಲಿನವರೆಗಿನ ಸೀರೆ, ಮಣಿಸರ, ಸಾಂಸ್ಕೃತಿಕ ಶುದ್ಧ ಹಾಲಕ್ಕಿ ಒಕ್ಕಲು ಮಹಿಳೆಯ ಪ್ರತಿರೂಪವಾಗಿರುವ ಸುಕ್ರಿ ಅಜ್ಜಿ ಯಾವತ್ತಿಗೂ ತಮ್ಮ ಸಮುದಾಯದ ಸಂಸ್ಕೃತಿ, ಸಂಪ್ರದಾಯವನ್ನು ಬದಲಿಸಿದವರಲ್ಲ.
Related Articles
Advertisement
ದಿನೇಶ ಹೊಳ್ಳ