Advertisement

ಪೆನ್‌ಡ್ರೈವ್‌ ಪ್ರಕರಣ: ಕುತೂಹಲ ಕೆರಳಿಸಿದ ಪ್ರೀತಮ್‌ ಗೌಡ ಮೌನ

11:24 PM May 02, 2024 | Team Udayavani |

ಬೆಂಗಳೂರು: ಹಾಸನ ರಾಜಕಾರಣಕ್ಕೆ ಸಂಬಂಧಪಟ್ಟಂತೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಕುಟುಂಬದ ವಿರುದ್ಧ ತೊಡೆತಟ್ಟಿದ್ದ ಹಾಸನ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ಪ್ರೀತಮ್‌ ಗೌಡ ಅವರು, ಪ್ರಜ್ವಲ್‌ ರೇವಣ್ಣ ಪ್ರಕರಣ ದೇಶಾದ್ಯಂತ ತೀವ್ರ ಬಿರುಗಾಳಿ ಎಬ್ಬಿಸಿದರೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದು ಚರ್ಚೆಗೆ ಗ್ರಾಸವಾಗಿದೆ.

Advertisement

ತಮ್ಮ ವಾಟ್ಸಾಪ್‌ ನಂಬರ್‌ನಲ್ಲಿ ಆಗಾಗ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸ್ಟೇಟಸ್‌ ಅಪ್‌ಡೇಟ್‌ ಮಾಡುತ್ತಿರುವುದನ್ನು ಬಿಟ್ಟರೆ, ಮಾಧ್ಯಮಗಳಿಗೆ ಹೇಳಿಕೆಯನ್ನೂ ಕೊಟ್ಟಿಲ್ಲ. ಪ್ರೀತಮ್‌ ಇದ್ದಕ್ಕಿದ್ದಂತೆ ತಟಸ್ಥರಾದಂತೆ ವರ್ತಿಸುತ್ತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಆದರೆ ಬಿಜೆಪಿಯಲ್ಲಿರುವ ಪ್ರೀತಮ್‌ ಆಪ್ತರು ಬೇರೆಯದೇ ಸಮರ್ಥನೆ ನೀಡುತ್ತಿದ್ದಾರೆ. ಮೈತ್ರಿ ಅಭ್ಯರ್ಥಿ ಗೆಲುವಿಗೆ ಏನು ಬೇಕೋ ಆ ಎಲ್ಲ ಕೆಲಸ ಪ್ರೀತಮ್‌ ಗೌಡ ಮಾಡಿದ್ದಾರೆ. ಈಗ ಅವರಿಗೆ ಕಲಬುರಗಿ, ಬಳ್ಳಾರಿ ಕ್ಷೇತ್ರದ ಜವಾಬ್ದಾರಿ ನೀಡಲಾಗಿದ್ದು, ಅಲ್ಲಿ ಸಕ್ರಿಯರಾಗಿದ್ದಾರೆ ಎಂದು ಸ್ಪಷ್ಟನೆ ನೀಡುತ್ತಿದ್ದಾರೆ.

ಎಚ್‌ಡಿಕೆ ಕಿಡಿ:

ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮಾತ್ರ ಈ ವಿಷಯದಲ್ಲಿ ಪ್ರೀತಮ್‌ ಗೌಡ ವಿರುದ್ಧ ಆಪ್ತರ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದು, ಇಡೀ ಪ್ರಹಸನದ ಮೂಲ ಹಾಸನ ನಗರದಲ್ಲೇ ಇದೆ ಎಂದು ಕಿಡಿಕಾರಿದ್ದಾರೆ. ಸದ್ಯದಲ್ಲೇ ಎಲ್ಲದಕ್ಕೂ ಉತ್ತರ ನೀಡುತ್ತೇವೆಂಬ ಸಂದೇಶವನ್ನು ಬಿಜೆಪಿಯ ಕೆಲವು ಹಿರಿಯ ನಾಯಕರಿಗೆ ಕುಮಾರಸ್ವಾಮಿ ರವಾನಿಸಿದ್ದಾರೆಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next