Advertisement

ಅಕ್ಕಿ ಗಿರಣಿಗಳಲ್ಲೇ ಭತ್ತ ಖರೀದಿಸಿ, ವೆಚ್ಚ ತಗ್ಗಿಸಿ

01:29 PM Nov 23, 2022 | Team Udayavani |

ಸಾಲಿಗ್ರಾಮ: ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೂಲಕ ಭತ್ತ ಖರೀದಿಸುವುದನ್ನು ಬಿಟ್ಟು, ಹಿಂದಿನಂತೆ ನೋಂದಾಯಿತ ಅಕ್ಕಿ ಗಿರಣಿಗಳ ಮೂಲಕವೇ ಖರೀದಿಸಿ ರೈತರು ಹಾಗೂ ಸರ್ಕಾರಕ್ಕೆ ಆಗುತ್ತಿರುವ ಅನಗತ್ಯ ವೆಚ್ಚವನ್ನು ತಪ್ಪಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

Advertisement

ಸಾಲಿಗ್ರಾಮ, ಕೆ.ಆರ್‌.ನಗರ ತಾಲೂಕಿನ ಬಹುತೇಕ ರೈತರು ಹೊಸ ಆದೇಶದಿಂದ ಅಸಮಾಧಾನಗೊಂಡಿ ದ್ದಾರೆ. ಹಿಂದೆ ಸರ್ಕಾರ ಗ್ರಾಮ, ಹೋಬಳಿ ಕೇಂದ್ರಗಳಲ್ಲಿದ್ದ ನೋಂದಾಯಿತ ಅಕ್ಕಿ ಗಿರಣಿಗಳ ಮಾಲಿಕರ ಸಹಕಾರದಿಂದ ಭತ್ತ ಖರೀದಿಸಿ, ಸಂಗ್ರಹಿಸಿಟ್ಟುಕೊಳ್ಳುತ್ತಿತ್ತು. ಆದರೆ, ಈ ಹಿಂದಿನ ನಿಯಮಾವಳಿಗಳನ್ನು ಗಾಳಿಗೆ ತೂರಿ, ಪ್ರಸಕ್ತ ವರ್ಷದಿಂದ ಆಹಾರ ನಿಗಮದಿಂದ ಎಪಿಎಂಸಿ ಗೋದಾಮುಗಳಲ್ಲಿ ನೇರವಾಗಿ ಖರೀದಿಸಿ, ಸಂಗ್ರಹಿಸಿಡುತ್ತಿದೆ.

ವೆಚ್ಚ, ದಲ್ಲಾಳಿಗಳ ಹಾವಳಿ ತಪ್ಪಿಸಿ: ಹೀಗೆ, ಸಂಗ್ರಹಿಸಿದ ಭತ್ತವನ್ನು ಮತ್ತೆ ಅಕ್ಕಿಗಿರಣಿಗಳಿಗೆ ಸರಬರಾಜು ಮಾಡಿ, ಹಲ್ಲಿಂಗ್‌ ಮಾಡಿಸಿ ಅಕ್ಕಿ ಪಡೆಯುತ್ತದೆ. ಇದರಿಂದ ಸರ್ಕಾರಕ್ಕೆ ಪೂರೈಕೆ ವೆಚ್ಚ ಹೆಚ್ಚುತ್ತದೆ. ಇದರ ಬದಲು ಹಿಂದಿನಂತೆ ನೇರ ಅಕ್ಕಿಗಿರಣಿಯಲ್ಲೇ ರೈತರಿಂದ ಭತ್ತ ಖರೀದಿ ಮಾಡಿದ್ರೆ, ರೈತರಿಗೂ, ಸರ್ಕಾರಕ್ಕೂ ಪೂರೈಕೆ ವೆಚ್ಚ, ರೈತರು ಸರದಿಯಲ್ಲಿ ಕಾಯುವ ಗೋಳು ತಪ್ಪುತ್ತದೆ. ಮುಖ್ಯವಾಗಿ ದಲ್ಲಾಳಿಗಳ ಹಾವಳಿ ಇರುವುದಿಲ್ಲ. ತಾಲೂಕು ಕೇಂದ್ರಗಳಲ್ಲಿ ಮಾತ್ರ ಗೋದಾಮುಗಳಿರುವ ಎಪಿಎಂಸಿಗಳಿದ್ದು, ಅಲ್ಲಿ ಭತ್ತ ಖರೀದಿಸಲಾಗುತ್ತದೆ. ದೂರದ ರೈತರು ತಾಲೂಕು ಕೇಂದ್ರಗಳಿಗೆ ಭತ್ತ ತಂದು ಮಾರಾಟ ಮಾಡುವುದು ಕಷ್ಟ. ಸಾಗಾಣಿಕೆ ವೆಚ್ಚ, ಶ್ರಮ ಹೆಚ್ಚಾಗುತ್ತದೆ. ಸರ್ಕಾರ ಈ ರೀತಿ ಎರಡೆರಡು ಕೆಲಸ ಯಾವ ಸ್ವಾರ್ಥಕ್ಕೆ ಮಾಡುತ್ತಿದೆ ಎಂದು ರೈತರು ಪ್ರಶ್ನಿಸಿದ್ದಾರೆ.

ಹಿಂದೆ ಒಕ್ಕಣೆ ಮಾಡಿದ ತಕ್ಷಣ ರೈತರು ಅಕ್ಕಿಗಿರಣಿಗೆ ಭತ್ತ ಸಾಗಿಸುತ್ತಿದ್ದರು. ಈ ವರ್ಷ ಅಧಿಕಾರಿಗಳು ಹೇಳಿದ ದಿನಾಂಕದಂದು, ನಿಗದಿತ ಸ್ಥಳಕ್ಕೆ ತಂದು ಮಾರಾಟ ಮಾಡಬೇಕು. ಇದರಿಂದ ರೈತರು ದಾಸ್ತಾನು ಇಟ್ಟುಕೊಂಡು, ವಾರಗಟ್ಟಲೆ ಕಾಯಬೇಕು. ನಂತರ ಖರೀದಿ ಕೇಂದ್ರಗಳಿಗೆ ಸಾಗಿಸಬೇಕು. ಇದರಿಂದ ರೈತರಿಗೆ ತೀವ್ರ ನಷ್ಟವಾಗುತ್ತದೆ.

ರೈತರಿಗೆ ತಿಳಿಸದೇ ಆದೇಶ ರದ್ದು: ಸರ್ಕಾರ ಈ ರೀತಿ ನಿಯಮವನ್ನು ಬಿಟ್ಟು ಹಿಂದಿನಂತೆಯೇ ನೋಂದಾಯಿತ ಅಕ್ಕಿಗಿರಣಿ ಮಾಲಿಕರಿಗೆ ಖರೀದಿ ಕೇಂದ್ರ ಹೊಣೆ ನೀಡಿದರೆ, ದಾಸ್ತಾನು ಮಾಡಲು ಕೂಲಿ, ಸಾಗಾಟ ವೆಚ್ಚದ ಜೊತೆಗೆ ನೌಕರರ ಬಳಕೆಯೂ ಕಡಿಮೆಯಾಗಲಿದೆ. ಖರೀದಿ, ದಾಸ್ತಾನು ಮತ್ತು ಅಂತಿಮವಾಗಿ ಪ್ಯಾಕ್‌ ಮಾಡಿದ ಅಕ್ಕಿ ಚೀಲ ನೋಂದಣಿ ಆದ ರೈಸ್‌ಮಿಲ್‌ ಮಾಲಿಕರಿಂದ ಪಡೆಯುತ್ತಿದ್ದ ಸರ್ಕಾರ, ಈ ಹಿಂದೆ ಇದ್ದ ನಿಯಮದಲ್ಲಿನ ದೋಷಗಳನ್ನು ಸರಿಪಡಿಸದೇ, ಅದನ್ನು ರೈತರಿಗೆ ಮನವರಿಕೆ ಮಾಡದೇ ರದ್ದು ಮಾಡಿ, ಹೊಸ ನಿಯಮ ರೂಪಿಸಿರುವುದು ಸರಿಯಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಹೆಚ್ಚು ಇಳುವರಿ ನಿರೀಕ್ಷೆ: ಭತ್ತದ ಕಣಜವಾಗಿರುವ ಸಾಲಿಗ್ರಾಮ ತಾಲೂಕಿನಲ್ಲಿ ಈ ಬಾರಿ 14,580 ಹೆಕ್ಟೇರ್‌, ಕೆ.ಆರ್‌.ನಗರ ತಾಲೂಕಿನಲ್ಲಿ 11,920 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆದಿದ್ದು, ಅಂದಾಜು 15 ಲಕ್ಷ ಕ್ವಿಂಟಲ್‌ ಭತ್ತ ಇಳುವರಿ ನಿರೀಕ್ಷೆಯಲ್ಲಿದೆ. ಈ ಹಿಂದೆ ತಮ್ಮ ಗ್ರಾಮಗಳಲ್ಲೇ ಇರುವ ಅಕ್ಕಿ ಗಿರಣಿಗಳಿಗೆ ಕಟಾವು ಮಾಡಿ, ಒಕ್ಕಣೆ ಮಾಡಿದ ತಕ್ಷಣ ಮಾರಾಟ ಮಾಡಿ ರೈತರು ಕೈತೊಳೆದುಕೊಳ್ಳುತ್ತಿದ್ದರು. ಆದರೆ, ನೂತನ ಆದೇಶದಿಂದ ಭತ್ತ ಮಾರಾಟಕ್ಕೆ ವಿಳಂಬವಾದಲ್ಲಿ ದಲ್ಲಾಳಿಗಳು ನೀಡುವ ದರಕ್ಕೆ ಭತ್ತವನ್ನು ಮಾರಾಟ ಮಾಡಿ ನಷ್ಟ ಅನುಭಸುವ ಪರಿಸ್ಥಿತಿ ರೈತರದಾಗಲಿದೆ.

ಒಟ್ಟಾರೆ, ಹೊಸ ಆದೇಶದಿಂದ ರೈತರು ಸಂಕಷ್ಟಕ್ಕೆ ಸಿಲುಕಲಿದ್ದು, ತನ್ನ ಹಳೆಯ ಮಾದರಿಯಲ್ಲಿ ಅಕ್ಕಿ ಗಿರಣಿಗಳಿಗೆ ಭತ್ತ ಖರೀದಿಸುವಂತೆ ಆದೇಶಿಸಬೇಕೆಂಬುದು ರೈತರ ಒತ್ತಾಯವಾಗಿದೆ. ಕಳೆದ 2 ವರ್ಷಗಳಿಂದ ಯಾವುದೇ ಗೊಂದಲಗಳಿಲ್ಲದೇ, ರೈತ ತನ್ನ ಹತ್ತಿರದಲ್ಲಿರುವ ರೈಸ್‌ಮಿಲ್‌ಗೆ ಭತ್ತ ಸಾಗಾಟ ಮಾಡಿ, ಸರ್ಕಾರದಿಂದ ಹಣ ಪಡೆಯುತ್ತಿದ್ದ. ಆದರೆ, ಸರ್ಕಾರ ಅಧಿಕಾರಿಗಳ ಕೈಗೆ ಖರೀದಿಗೆ ಅವಕಾಶ ಕೊಟ್ಟು ನಮ್ಮನ್ನು ಸಂಕಷ್ಟಕ್ಕೆ ದೂಡುತ್ತಿದೆ. ಇದನ್ನು ರದ್ದು ಮಾಡಿ ಈ ಹಿಂದೆ ಇದ್ದ ನಿಯಮದಂತೆ ಭತ್ತ ಖರೀದಿ ಮಾಡಬೇಕು. ಅಂಕನಹಳ್ಳಿ ತಿಮ್ಮಪ್ಪ, ಜಿಲ್ಲಾಧ್ಯಕ್ಷ, ಕಬ್ಬು ಬೆಳೆಗಾರರ ಸಂಘ

ಸರ್ಕಾರದ ಖರೀದಿ ಕೇಂದ್ರಗಳಲ್ಲಿ ಅಕ್ರಮ ಜಾಸ್ತಿಯಾದ ಕಾರಣವೇ ರೈಸ್‌ಮಿಲ್‌ ಮಾಲಿಕರಿಗೆ ಖರೀದಿ ಮಾಡಲು ಆದೇಶ ಮಾಡಿತ್ತು. ಆದರೆ, ಮತ್ತೆ ಅಧಿಕಾರಿಗಳಿಗೆ ವಹಿಸಿದರೆ ರೈತರನ್ನು ಶೋಷಿಸುವುದು ಮಾತ್ರವಲ್ಲ, ದಾಸ್ತಾನು, ಸಾಗಾಟ ವೆಚ್ಚ ನಮಗೆ ಬರುತ್ತೆ. ಆದ್ದರಿಂದ ಸರ್ಕಾರ ತನ್ನ ಆದೇಶ ಬದಲಿಸಬೇಕು. ಸುದರ್ಶನ್‌, ರೈತ, ಹೊಸೂರು ಗ್ರಾಮ

ಆನಂದ್‌ ಹೊಸೂರು

Advertisement

Udayavani is now on Telegram. Click here to join our channel and stay updated with the latest news.

Next