ಅಫಜಲಪುರ: ಅಬ್ಟಾ ಎರಡು ಕಿ.ಮೀ ಕ್ರಮಿಸಬೇಕಾದರೆ ಸುಸ್ತಾಗುತ್ತಲ್ಲಪ್ಪಾ.. ಇದು ತಾಲೂಕಿನ ಬಳೂರ್ಗಿಯಿಂದ ಬಡದಾಳ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯ ದುಸ್ಥಿತಿ. ಈ ರಸ್ತೆಯ ಮೇಲೆ ಸಂಚರಿಸುವುದೆಂದರೆ ನರಕ ಯಾತನೆ
ಅನುಭವಿಸಿದಂತೆ ಆಗುತ್ತದೆ.
ಸರ್ಕಾರ ಗ್ರಾಮೀಣ ಭಾಗಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವ ಸಲುವಾಗಿ ಕೋಟ್ಯಂತರ ರೂ. ಅನುದಾನ ಖರ್ಚು ಮಾಡುತ್ತದೆ. ಆದರೆ ಚುನಾಯಿತ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದ ಕಾಮಗಾರಿಗಳು ಕಳಪೆಯಾಗುತ್ತಿವೆ.
ತಾಲೂಕಿನ ಬಡದಾಳದಿಂದ ಬಳೂರ್ಗಿಯ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಸಂಪರ್ಕ ರಸ್ತೆ ಇದಾಗಿದ್ದು, ರಸ್ತೆ ಹದಗೆಟ್ಟು ವರ್ಷಗಳೆ ಗತಿಸಿವೆ. ಬಡದಾಳ ಗ್ರಾಮದಿಂದ ಬಳೂರ್ಗಿ ಮಾರ್ಗವಾಗಿ ಎರಡು ಕಿ.ಮೀ.ವರೆಗೆ ರಸ್ತೆ ನಿರ್ಮಿಸಲಾಗಿದೆ. ಮುಂದಿನ ಎರಡು ಕಿ.ಮೀ ರಸ್ತೆ ನಿರ್ಮಿಸದೆ ಹಾಗೆ ಬಿಡಲಾಗಿದೆ. ಇದರಿಂದ ವಾಹನ ಸವಾರರು ಪರದಾಡುವಂತೆ ಆಗಿದೆ.
ಸಂಬಂಧಪಟ್ಟ ಇಲಾಖೆ ಮತ್ತು ಜನಪ್ರತಿನಿಧಿಗಳು ಮುತುವರ್ಜಿ ವಹಿಸಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಸಂಪರ್ಕ ರಸ್ತೆಯನ್ನು ಗುಣಮಟ್ಟದಲ್ಲಿ ಮತ್ತು ಆದಷ್ಟು ಬೇಗನೆ ನಿರ್ಮಿಸಿದರೆ ಅನುಕೂಲವಾಗಲಿದೆ ಎಂದು ಬಡದಾಳ, ಬಳೂರ್ಗಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.