Advertisement

ಶೇ.21 ಮಂದಿಗೆ ಕೋವಿಡ್ ಸೋಂಕು ಬಂದು ಹೋಗಿರುವ ಸಾಧ್ಯತೆ : ICMR ಸೀರೋ ಸರ್ವೆಯಲ್ಲಿ ಉಲ್ಲೇಖ

09:41 PM Feb 04, 2021 | Team Udayavani |

ನವದೆಹಲಿ: ದೇಶದ ಶೇ.21ರಷ್ಟು ಮಂದಿಗೆ ಕೊರೊನಾ ಸೋಂಕು ಬಂದು ಗುಣವಾಗಿರುವ ಸಾಧ್ಯತೆ ಇದೆ. ಹತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯೋಮಿತಿಯವರ ಮೇಲೆ ನಡೆಸಲಾಗಿರುವ ಅಧ್ಯಯದಲ್ಲಿ ಈ ಅಂಶ ಕಂಡುಕೊಳ್ಳಲಾಗಿದೆ ಎಂದು ಐಸಿಎಂಆರ್‌ ಮಹಾನಿರ್ದೇಶಕ ಬಲರಾಮ್‌ ಭಾರ್ಗವ ಹೇಳಿದ್ದಾರೆ. ಡಿ.18- ಜ.8ರ ನಡುವೆ ದೇಶದ 70 ಜಿಲ್ಲೆಗಳ 700 ಗ್ರಾಮಗಳಲ್ಲಿ ನಡೆಸಲಾಗಿರುವ ಸೀರೋ ಸರ್ವೆಯಲ್ಲಿ ಈ ಅಂಶ ದೃಢಪಟ್ಟಿದೆ.

Advertisement

25,598 ಮಂದಿಯ ಪೈಕಿ 18 ವರ್ಷಕ್ಕಿಂತ ಮೇಲ್ಪಟ್ಟ ಶೇ.21.4 ಮಂದಿ ವೈರಸ್‌ಗೆ ತುತ್ತಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. 10-17 ವರ್ಷ ವಯೋಮಿತಿ ಒಳಗಿನ ಶೇ.25.3 ಮಂದಿಗೆ ಕೂಡ ಸೋಂಕು ಬಂದು ಹೋಗಿರಬಹುದೆಂದು ಅಭಿಪ್ರಾಯಪಡಲಾಗಿದೆ. ನಗರ ಪ್ರದೇಶಗಳ ಕೊಳೆಗೇರಿಗಳ ಪೈಕಿ ಶೇ.31.7 ಮಂದಿ ಕೂಡ ಇದೇ ಅನುಭವ ವ್ಯಕ್ತಪಡಿಸಿದ್ದಾರೆ ಎಂದು ಬಲರಾಮ್‌ ಭಾರ್ಗವ.

ಇದನ್ನೂ ಓದಿ:ಪರಿಷತ್ ಸಭಾಪತಿ ಸ್ಥಾನಕ್ಕೆ ಕೆ. ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ

ಸುಧಾರಿಸಿದೆ: ದೇಶದಲ್ಲಿ ಸೋಂಕಿನ ಪರಿಸ್ಥಿತಿ ಸುಧಾರಿಸಿದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್‌ ತಿಳಿಸಿದ್ದಾರೆ. ಒಟ್ಟಾರೆ ಪ್ರಕರಣದ ಕ್ಯುಮ್ಯುಲೇಟಿವ್‌ (ಸಂಚಿತ) ಪಾಸಿಟಿವಿಟಿ ಪ್ರಕರಣ ಶೇ.5.42 ಆಗಿದೆ. 47 ಜಿಲ್ಲೆಗಳಲ್ಲಿ ಹೊಸ ಪ್ರಕರಣ ಪತ್ತೆಯಾಗಿಲ್ಲ. 251 ಜಿಲ್ಲೆಗಳಲ್ಲಿ 3 ವಾರಗಳಲ್ಲಿ ಹೊಸ ಸಾವು ವರದಿಯಾಗಿಲ್ಲ ಎಂದಿದ್ದಾರೆ. ಇದುವರೆಗೆ 49,93,427 ಮಂದಿಗೆ ಲಸಿಕೆ ಹಾಕಲಾಗಿದೆ ಎಂದರು.

ಕೇರಳ ದ್ವಿತೀಯ: ದೇಶದ ಸೋಂಕು ಪೀಡಿತ ರಾಜ್ಯಗಳ ಪಟ್ಟಿಯಲ್ಲಿ ಕೇರಳ ದ್ವಿತೀಯ ಸ್ಥಾನಕ್ಕೆ ತಲುಪಿದೆ. ಇದುವರೆಗೆ ಆ ಸ್ಥಾನದಲ್ಲಿದ್ದ ಕರ್ನಾಟಕ ತೃತೀಯ ಸ್ಥಾನಕ್ಕೆ ಇಳಿದಿದೆ. ಕೇರಳದಲ್ಲಿ 9.44 ಲಕ್ಷ ಕೇಸುಗಳಿದ್ದರೆ, ಕರ್ನಾಟಕದಲ್ಲಿ 9.40 ಲಕ್ಷ ಕೇಸುಗಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next