Advertisement

ನಗರದ ನೂರು ಕಡೆ “ಮಿಯಾವಾಕಿ’ಕಾಡು!

10:56 PM Dec 20, 2019 | mahesh |

ಮಹಾನಗರ: ನಗರದ ನೂರು ಕಡೆ “ಮಿಯಾವಾಕಿ’ ಮಾದರಿಯಲ್ಲಿ ನೈಸರ್ಗಿಕ ಕಾಡು ಸೃಷ್ಟಿಸಿ ನಗರವನ್ನು ಹಸುರಾಗಿಸುವ ಮಹತ್ವದ ಯೋಜನೆಗೆ ರಾಮಕೃಷ್ಣ ಮಿಷನ್‌ ಮುಂದಾಗಿದೆ. ಈ ಮೂಲಕ ನಗರದೊಳಗೆ “ಲಕ್ಷ ವೃಕ್ಷ’ ಬೆಳೆಸುವ ಮಹತ್ಕಾರ್ಯಕ್ಕೆ ರೂಪರೇಖೆ ಸಿದ್ಧಗೊಳ್ಳುತ್ತಿದೆ.

Advertisement

ಕೊಟ್ಟಾರದಲ್ಲಿ ಆರಂಭ
ಕಡಿಮೆ ಜಾಗದಲ್ಲಿ ದಟ್ಟವಾಗಿ ಕಾಡು ಬೆಳೆಸುವ ಜಪಾನ್‌ನ ಮಿಯಾ ವಾಕಿ ಮಾದರಿಯಲ್ಲಿ ಕೊಟ್ಟಾರ ಚೌಕಿಯ ಇನ್ಫೋ ಸಿಸ್‌ ಸಂಸ್ಥೆ ಸಮೀ ಪ ದಲ್ಲಿ ಆರಂಭಿಸಲಾದ ಕಾಡು ಬೆಳೆಯುತ್ತಿದೆ. ಇಲ್ಲಿ 4 ಸೆಂಟ್ಸ್‌ ಜಾಗದಲ್ಲಿ 103 ಜಾತಿಯ 238 ಗಿಡಗಳನ್ನು ಕಳೆದ ಅಕ್ಟೋಬರ್‌ನಲ್ಲಿ ನೆಡಲಾಗಿದ್ದು ಈಗ ಅವು ಸೊಂಪಾಗಿ ಬೆಳೆಯುತ್ತಿವೆ. ಸಾಮಾ ನ್ಯ ವಾಗಿ ಇಷ್ಟು ಜಾಗದಲ್ಲಿ 10-12 ಗಿಡ ಗಳನ್ನು ನೆಡಲಾಗುತ್ತದೆ.

ವಿವಿಧ ಜಾತಿಯ ಗಿಡ
ಮಿಯಾ ವಾಕಿ ಮಾದರಿಯಲ್ಲಿ 600 ಗಿಡಗಳನ್ನು ಬೆಳೆಸಬಹುದಾಗಿದೆ. ಸದ್ಯ ಇಲ್ಲಿ 238 ಗಿಡಗಳನ್ನು ಬೆಳೆಸಲಾಗಿದ್ದು ಎರಡು ಗಿಡಗಳನ್ನು ಹೊರತುಪಡಿಸಿದರೆ ಉಳಿದೆಲ್ಲವೂ ನಳನಳಿಸುತ್ತಿವೆ. ಇಲ್ಲಿ ಅರ್ತಿ, ಶ್ರೀಗಂಧ, ರಕ್ತಚಂದನ, ಪೇರಳೆ, ಮಾವು, ಹಲಸು, ಪುನರ್ಪುಳಿ, ನೇರಳೆ ಸಹಿತ ಹಣ್ಣು ಹಾಗೂ ಇತರ ಜಾತಿಯ ಮರಗಳಿವೆ. ಸಹಜವಾದ ಕಾಡಿನಲ್ಲಿ ಇರಬೇಕಾದ ವಿವಿಧ ಜಾತಿಯ ಗಿಡಗಳನ್ನು ಬೆಳೆಸಲಾಗಿದೆ.

ಅಂತರ ಕಡಿಮೆ ಇದ್ದರೂ ಉತ್ತಮ ಬೆಳವಣಿಗೆ
ಇಲ್ಲಿ ಒಂದು ಅಡಿಗಿಂತಲೂ ಕಡಿಮೆ ಅಂತರದಲ್ಲಿ ಗಿಡಗಳನ್ನು ನೆಡಲಾಗಿದೆ. ಹೆಚ್ಚು ಬಾಳಿಕೆಯ ಗಿಡಗಳ ಸಮೀಪ ಕಡಿಮೆ ಬಾಳಿಕೆಯ ಗಿಡಗಳನ್ನು ನೆಡಲಾಗಿದೆ. ಒಂದು ಮರದ ಆಯಸ್ಸು ಮುಗಿಯುವಾಗ ಅಲ್ಲಿ ಪಕ್ಕದಲ್ಲಿರುವ ಇನ್ನೊಂದು ಮರ ವಿಶಾಲವಾಗಿ ಬೆಳೆಯುತ್ತದೆ. ಕಾಡು ದಟ್ಟವಾಗಿಯೇ ಉಳಿಯುತ್ತದೆ. ಇದು ಮಿಯಾವಾಕಿಯ ಒಂದು ಸೂತ್ರ.”ಎರಡು ಬಾರಿ ಸ್ವಲ್ಪ ಪ್ರಮಾಣದಲ್ಲಿ ಸಾವಯವ ಗೊಬ್ಬರ ಹಾಕಿದ್ದೇವೆ. ಉತ್ತಮವಾಗಿ ಬೆಳೆಯುತ್ತಿದೆ’ ಎನ್ನುತ್ತಾರೆ ಮಿಯಾವಾಕಿ ಕೊಟ್ಟಾರಚೌಕಿಯಲ್ಲಿ ಕಾಡನ್ನು ನಿರ್ವಹಿಸುತ್ತಿರುವ ಶಿವು ಅವರು.

ನಗರದ 100 ಕಡೆಗಳಲ್ಲಿ 3ರಿಂದ 4 ಸೆಂಟ್ಸ್‌ ಜಾಗ ಅಥವಾ ಅದಕ್ಕಿಂತ ಕಡಿಮೆ/ ಹೆಚ್ಚು ಜಾಗ ಲಭ್ಯವಾದರೆ ಒಂದು ಲಕ್ಷದವರೆಗೆ ಗಿಡಗಳನ್ನು ನೆಡಬಹುದು ಎಂಬ ಅಂದಾಜಿದೆ. ದೇರಳಕಟ್ಟೆಯಲ್ಲಿ ನಿಟ್ಟೆ ವಿದ್ಯಾ ಸಂಸ್ಥೆಯವರು ಹಾಗೂ ನಗರದ ಕೆಲವೆಡೆ ಶಾಸಕರು ಜಾಗ ಒದಗಿಸಿಕೊಡುವ ಕುರಿತು ಆಸಕ್ತಿ ತೋರಿದ್ದಾರೆ.

Advertisement

ಇದೇ ರೀತಿ ಜಾಗ ದೊರೆತರೆ ಹಸುರಿನ ಕೊರತೆ ನೀಗಬಹುದು. ಮಾತ್ರವಲ್ಲದೆ ಕಟ್ಟಡಗಳನ್ನು ಕಟ್ಟುವವರು ಉದ್ಯಾನವನಕ್ಕೆ ಮೀಸಲಿಡುವ ಜಾಗದಲ್ಲಿಯೂ ಇಂತಹ ಕಾಡುಗಳನ್ನು ನಿರ್ಮಿಸಬಹುದಾಗಿದೆ. ಈ ರೀತಿ ಇಪ್ಪತ್ತು ವರ್ಷಗಳವರೆಗೆ ಕಾಡು ಬೆಳೆಸಿದರೆ ಅದರಿಂದ ಆದಾಯವನ್ನೂ ಗಳಿಸಬಹುದು ಜತೆಗೆ “ಫಾರೆಸ್ಟ್‌ ಅಗ್ರಿ ಕಲ್ಚರ್‌’ ಪರಿಕಲ್ಪನೆಗೂ ಇದು ಪೂರಕ ವಾಗಿದೆ ಎನ್ನುತ್ತಾರೆ ರಾಮಕೃಷ್ಣ ಮಠದ ಶ್ರೀ ಏಕಗಮ್ಯಾನಂದ ಸ್ವಾಮೀಜಿಯವರು.

ಸಕಾರಾತ್ಮಕ ಪ್ರತಿಕ್ರಿಯೆ
ವಿವಿಧ ಕಾರಣಗಳಿಂದ ಹಸುರು ಮಾಯವಾಗುತ್ತಿದೆ. ನಗರದಲ್ಲಿಯೂ ಶುದ್ಧ ಗಾಳಿಯ ಕೊರತೆ ಉದ್ಭವಿಸದಿರಲು ಹಸುರು ಅನಿವಾರ್ಯವಾಗಿದೆ. ಸದ್ಯದ ಸ್ಥಿತಿಯಲ್ಲಿ ಮಿಯಾವಾಕಿ ಕಾಡುಗಳೇ ಪರಿಹಾರ. ಕೊಟ್ಟಾರಚೌಕಿಯಲ್ಲಿ ಆರಂಭಿಸಿದ ಮಿಯಾವಾಕಿ ಕಾಡು ನಿರೀಕ್ಷಿತ ರೀತಿಯಲ್ಲಿ ಬೆಳೆಯುತ್ತಿದೆ. ಇದೇ ಮಾದರಿಯಲ್ಲಿ ನಗರದ 100 ಕಡೆ ಬೆಳೆಸುವ ಚಿಂತನೆ ನಮ್ಮದು. ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯುತ್ತಿದೆ. ಯೋಜನೆಗೆ ಅಂತಿಮ ರೂಪ ಇನ್ನಷ್ಟೇ ನೀಡಬೇಕಿದೆ. ಸ್ವತ್ಛತೆಯಂತೆ ಹಸುರಿಗೂ ಆದ್ಯತೆ ಈ ಸಮಯದ ಅಗತ್ಯವಾಗಿದೆ.
 - ಶ್ರೀ ಏಕಗಮ್ಯಾನಂದ ಸ್ವಾಮೀಜಿ, ಶ್ರೀ ರಾಮಕೃಷ್ಣ ಮಠ, ಮಂಗಳೂರು.

- ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next