Advertisement

ಸತ್ಯಕಥೆಯ ನದಿಯಾ, ಚಿತ್ರಕಥೆಯ ಒಸಾಮಾ ಹೇಳುವುದು ತಾಲಿಬಾನಿಯ ಕ್ರೌರ್ಯ ಜಗತ್ತನ್ನೇ

09:24 PM Aug 19, 2021 | Team Udayavani |

ಒಸಾಮಾ [2003] ಆಫ್ಘಾನಿಸ್ಥಾನದ ಚಿತ್ರ ಜಗತ್ತನ್ನು ಇಡೀ ಜಗತ್ತಿಗೆ ಪರಿಚಯಿಸಿದ ಚಿತ್ರ. ಈ ಕಥೆಯ ಆಧಾರ ನದಿಯಾ. ಹುಡುಗಿಯೊಬ್ಬಳು ಹುಡುಗನ ವೇಷಧರಿಸಿ ತಾಲಿಬಾನಿಗಳ ಹಿಂಸೆಯಿಂದ ಪಾರಾಗಲು ಪಟ್ಟ ಪಡಿಪಾಟಲನ್ನು ಹೇಳುತ್ತಲೇ ಮೂಲಭೂತವಾದಿಗಳ ಮನಸ್ಥಿತಿಯನ್ನು ಹೇಳುತ್ತದೆ.

Advertisement

ನದಿಯಾ ಗುಲಾಮ್ ! ಸ್ಪೇನ್ ನ ಕೆಟಲೋನಿಯಾದಲ್ಲಿ ಸೇವಾ ಸಂಸ್ಥೆಯೊಂದನ್ನು ಮುನ್ನಡೆಸುತ್ತಿರುವ ಆಫ್ಘನ್ ನಿರಾಶ್ರಿತೆ.

ಆಫ್ಘಾನಿಸ್ಥಾನದಲ್ಲಿ ತಾಲಿಬಾನ್ ಗಳು ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಮಹಿಳೆ ಮತ್ತುಮಕ್ಕಳ ಮೇಲೆ ಹೆಚ್ಚಬಹುದಾದ ಹಿಂಸೆಯ ಆತಂಕದಲ್ಲಿ ನದಿಯಾ ಹೆಸರು ಚರ್ಚೆಯ ಮುನ್ನಲೆಗೆ ಬರುತ್ತಿದೆ.

ನದಿಯಾ 1985 ರಲ್ಲಿ ಆಫ್ಘಾನಿಸ್ಥಾನದಲ್ಲಿಯೆ ಹುಟ್ಟಿದವರು. ಬೆಳೆಯುತ್ತಾ ಕುಟುಂಬದ ಹೊಣೆಯೂ ಹೊರುವ ಪರಿಸ್ಥಿತಿ ಬಂದಿತು. ತಾಲಿಬಾನರ ಆಡಳಿತವಿದ್ದ ಕಾಲ. ಎರಡು ದಶಕಗಳ ಹಿಂದಿನ ಬದುಕಿನ ಕಥೆ.

1993 ರಲ್ಲಿ ನಾಗರಿಕ ಯುದ್ಧದ ಸಂದರ್ಭದಲ್ಲಿ ನದಿಯಾರ ಮನೆಯ ಒಂದು ಭಾಗ ಬಾಂಬ್‌ ದಾಳಿಗೆ ತುತ್ತಾಗಿತ್ತು. ನದಿಯಾ ಸಹ ಗಾಯಗೊಂಡಿದ್ದರು. ಎರಡು ವರ್ಷಗಳ ಕಾಲ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆ ಬಳಿಕ ತಾಲಿಬಾನರು ದೇಶವನ್ನು ವಶಪಡಿಸಿಕೊಂಡು ಆಡಳಿತ ಮಾಡತೊಡಗಿದಾಗ (1996) ಮಹಿಳೆಯರು ಮತ್ತು ಮಕ್ಕಳು ತತ್ತರಿಸಿಹೋದರು. ಆದರೆ ನದಿಯಾರಿಗೆ ಆಗ ಹನ್ನೊಂದು ವರ್ಷ. ಅಪ್ಪ ಆಘಾತದಿಂದ ಆಸ್ಪತ್ರೆಗೆ ಸೇರಿದ್ದರು. ಸೋದರ ಹೆಣವಾಗಿದ್ದ. ಬಡತನ, ಹಸಿವು ಕಿತ್ತು ತಿನ್ನುತ್ತಿತ್ತು. ಆಗ ಟರ್ಬಾನ್ [ತಾಲಿಬಾನರ ಜಗತ್ತಿನಲ್ಲಿ ಪುರುಷರು ತಲೆಗೆ ಕಟ್ಟಿಕೊಳ್ಳುವ ಪೇಟ] ಧರಿಸಿ ಸತ್ತುಹೋದ ತನ್ನ ಸೋದರನ ರೂಪದಲ್ಲಿ ಹೊರಜಗತ್ತಿಗೆ ಬಂದರು. ದುಡಿಯತೊಡಗಿದರು. ಅದರ ಮಧ್ಯೆ ತಾಲಿಬಾನಿಗಳ ಪ್ರಕಾರ, ಎಲ್ಲ ಮಕ್ಕಳಿಗೂ ಧಾರ್ಮಿಕ ಶಿಕ್ಷಣ ಕಡ್ಡಾಯವಿತ್ತು. ಅದರಂತೆ ಹುಡುಗನಾಗಿಯೇ ಸೇರಿ, ಮಸೀದಿಯ ಸಹಾಯಕನಾಗಿಯೂ ದುಡಿದರು. ಬದುಕನ್ನು ಗೆದ್ದು ಬಂದರು. ಆ ಬಳಿಕ 2006 ರಲ್ಲಿ ಆಫ್ಘಾನಿಸ್ಥಾನದ ಮಾನವೀಯ ಹಕ್ಕುಗಳ ಆಯೋಗ ನದಿಯಾರಿಗೆ ಸ್ಪೇನ್ ನಲ್ಲಿ ಪುನರ್ವಸತಿ ಒದಗಿಸಿತು. ಪ್ಲಾಸ್ಟಿಕ್‌ ಸರ್ಜರಿಯೂ ಆಯಿತು.

Advertisement

ನದಿಯಾ ಅವರು ತಮ್ಮ ಬದುಕಿನ ಹತ್ತು ವರ್ಷಗಳ ಬಗ್ಗೆ 2010 ರಲ್ಲಿ ಆಗ್ನೆಸ್ ರೊಟರ್ ಜತೆ ಸೇರಿ ‘ದಿ ಸೀಕ್ರೆಟ್‌ ಆಫ್ ಮಐ ಟರ್ಬಾನ್’  ಪುಸ್ತಕ ಬರೆದರು. ಅದಕ್ಕೆ ವಿವಿಧ ಪ್ರಶಸ್ತಿಗಳೂ ಬಂದವು. ಪದವಿ ಮತ್ತು ಸ್ನಾತಕ ಪದವಿಯನ್ನೂ ಪೂರೈಸಿದರು. ಪ್ರಸ್ತುತ ಸ್ಪೇನ್ ನ ಕ್ಯಾಟಲಿನೊದಲ್ಲಿ ಬ್ರಿಡ್ಜಸ್ ಫಾರ್ ಪೀಸ್ ಸಂಸ್ಥೆ ನಡೆಸುತ್ತಿದ್ದಾರೆ. ಇದು ಸತ್ಯಕಥೆಯ ಭಾಗ

ಸಿನಿಮಾ ಕಥೆಯ ಭಾಗವಾಗಿ ಒಸಾಮಾ :

ನದಿಯಾರ ಕಥೆಯೆ ಸಿನಿಮಾವಾಗಿ 2003 ರಲ್ಲಿ ಬಂದದ್ದು ಒಸಾಮಾ ಹೆಸರಿನಲ್ಲಿ. ಆಫ್ಘಾನಿಸ್ಥಾನದ ಚಿತ್ರ ನಿರ್ದೇಶಕ ಸಿದ್ಧಿಖ್ ಬರ್ಮಾರ್ಕ್‌ ನಿರ್ದೇಶಿಸಿದ ಚಿತ್ರವಿದು. ಚಿತ್ರದಲ್ಲಿ ನದಿಯಾ ಪಾತ್ರ ನಿರ್ವಹಿಸಿದ್ದು ನದಿಯಾರ ಧಾರ್ಮಿಕ ಶಾಲೆಗೆ ಹೋಗುವರೆಗಿನ ಕಥೆಯನ್ನೇ ಹಾಗೆಯೇ ತೆಗೆದುಕೊಳ್ಳಲಾಗಿದೆ. ಮನೆಯ ಸಂಕಷ್ಟಗಳು, ಅಸಹಾಯಕತೆ ಹಾಗು ಅನಿವಾರ್ಯತೆ ಎಲ್ಲವೂ ಅನಾವರಣಗೊಂಡಿದೆ. ಚಿತ್ರದ ಕಥೆಯಲ್ಲಿ ಕಥೆ ಮುಂದುವರಿಯುವುದು ಹುಡುಗಿ ಎಂಬ ರಹಸ್ಯ ಪತ್ತೆಯಾಗುತ್ತದೆ. ನದಿಯಾ ಋತುಮತಿಯಾದಾಗ ಅವರ ನಿಜದ ಗುರುತು ತಿಳಿದುಬಿಡುತ್ತದೆ.

ಆ ಸನ್ನಿವೇಶ ಭೀಕರವಾಗಿದೆ. ಗುಂಪೊಂದರಲ್ಲಿದ್ದಾಗ ಕೆಲವರು ಹುಡುಗರು ಒಸಾಮಾಳ ಕಾಲು ಬೆರಳು, ಕೈಗಳನ್ನು ಕಂಡು ಇವಳು ಹುಡುಗಿ ಎಂದು ಅಣಕಿಸತೊಡಗುತ್ತಾರೆ. ಸದಾ ಅವಳನ್ನು ಕಾಯುತ್ತಿದ್ದ ಗೆಳೆಯ ಎಸ್ಪಾಂದಿ ಈ ಬಾರಿಯೂ ನೆರವಿಗೆ ಬರುತ್ತಾನೆ. ಮುತ್ತಿಕೊಂಡ ಹುಡುಗರನ್ನೆಲ್ಲ ಹೆದರಿಸುತ್ತಾನೆ. ಆ ಬಳಿಕ ಮರ ಹತ್ತುತ್ತಾನೆ ನೋಡುವ ಅವನು, ಹಾಗಾಗಿ ಅವಳಲ್ಲ ಎಂದು ವಾದಿಸುತ್ತಾನೆ. ಆಗ ಒಸಾಮಾ ಮರ ಏರಿ ಕುಳಿತು ಬಳಿಕ ಇಳಿಯುವಾಗ ಕಸಿವಿಸಿಗೊಳಗಾಗುತ್ತಾಳೆ. ಆ ಬಳಿಕ ಶಿಕ್ಷೆಯಾಗಿ ರಾಟೆಯಲ್ಲಿ ಕಟ್ಟಿ ಕೆಳಗಿಳಿಸುತ್ತಾರೆ. ಸ್ವಲ್ಪ ಹೊತ್ತಿನ ಬಳಿಕ ಅವಳನ್ನು ರಾಟೆಯಿಂದ ಮುಕ್ತಿಗೊಳಿಸಿದಾಗ ಒಸಾಮಾಳ ಪಾದದವರೆಗೂ ರಕ್ತ ಹರಿದಿರುತ್ತದೆ. ಅದನ್ನು ಕಂಡು ಹಿರಿಯ ತಾಲಿಬಾನನೊಬ್ಬ ಗಮನಿಸಿ, ’ಇವಳು ಹುಡುಗಿ’ ಎಂದು ಘೋಷಿಸುತ್ತಾನೆ. ಕೂಡಲೇ ಒಸಾಮಾ ಓಡತೊಡಗುತ್ತಾಳೆ. ಮರುಕ್ಷಣದಲ್ಲಿ ಅಲ್ಲಿದ್ದ ಪುರುಷರೆಲ್ಲಾ ಅವಳನ್ನು ಹಿಡಿಯಲು ಬೆನ್ನತ್ತಿಕೊಂಡು ಹೋಗುತ್ತಾರೆ. ವಿಚಿತ್ರವೆಂದರೆ ಅದನ್ನು ತಡೆಯುವವರು ಒಬ್ಬರೂ ಇಲ್ಲ.

ಅವಳನ್ನು ಬಂಧಿಸಿ ಜೈಲಿಗೆ ಹಾಕಲಾಗುತ್ತದೆ. ಒಂದು ದಿನ ತಾಲಿಬಾನರ ನ್ಯಾಯಾಧೀಶ ಬಂದು, ಇಬ್ಬರು ಕೈದಿಗಳಿಗೆ ಶಿಕ್ಷೆ [ಒಬ್ಬನಿಗೆ ಗುಂಡಿನ ಮರಣ ದಂಡನೆ, ಇನ್ನೊಬ್ಬರಿಗೆ ಕಲ್ಲು ಹೊಡೆದು ಸಾಯಿಸುವ ಶಿಕ್ಷೆ] ವಿಧಿಸುತ್ತಾನೆ. ಒಸಾಮಾಳಿಗೂ ಶಿಕ್ಷೆ ಘೋಷಿಸುವ ಸಂದರ್ಭ ಒಬ್ಬ ವೃದ್ಧ ಮುಲ್ಲಾ ಬಂದು, ಅವಳನ್ನು ಕ್ಷಮಿಸುವಂತೆಯೂ, ಅವಳನ್ನು ತಾನು ಮದುವೆಯಾಗುವಂತೆಯೂ ತಿಳಿಸುತ್ತಾನೆ. ನ್ಯಾಯಾಧೀಶ ಒಪ್ಪುತ್ತಾನೆ. ವಾಸ್ತವವಾಗಿ ಒಸಾಮಾಳಿಗೆ ಅದೂ ಶಿಕ್ಷೆಯೇ.

ಈ ಚಿತ್ರವನ್ನು ಆಫ್ಘಾನಿಸ್ಥಾನ, ನೆದರ್ ಲ್ಯಾಂಡ್ಸ್, ಜಪಾನ್ ಐರ್ಲ್ಯಾಂಡ್ ಹಾಗು ಇರಾನ್ ದೇಶಗಳ ಕಂಪೆನಿಗಳ ಸಹಯೋಗದಲ್ಲಿ ನಿರ್ಮಿಸಲಾಗಿತ್ತು.

ಚಲನಚಿತ್ರ ಅಗಾಧವಾಗಿ ಕಾಡುತ್ತದೆ. ಕಥೆ ಹೇಳುವ ಕ್ರಮದಲ್ಲೂ ನಿರ್ದೇಶಕ ಬಯಸಿದಂತೆಯೇ ಒಸಾಮಾಳಾಗಿ ನಟಿ ಮರೀನಾ ಗೊಲ್ಬಹರಿ ನಟಿಸಿದ್ದರು.

ಮೂಲಭೂತವಾದಿಗಳ ಜಗತ್ತಿನ ಗೋಡೆಗಳಿಗೆ ಕ್ರೌರ್ಯದ [ರಕ್ತದ ಕೆಂಪು] ಬಣ್ಣ ಹೊರತು ಪಡಿಸಿದರೆ ಬೇರಾವ ಬಣ್ಣವೂ ಇರುವುದಿಲ್ಲ. ಅದೇ ಪಂಥದ ತಾಲಿಬಾನರಿಗೂ ಸ್ವಾತಂತ್ರ್ಯದಂಥ ಪದಗಳ ಅರ್ಥವೇ ತಿಳಿದಿರದು. ಇಂಥವರ ಜಗತ್ತಿನಲ್ಲಿ ಪ್ರತಿಯೊಬ್ಬರೂ ತಮ್ಮ ಉಸಿರನ್ನೂ ತಾಲಿಬಾನಿಗಳಿಗೆ ಒಪ್ಪಿಸಿ ಬದುಕುತ್ತಿರುತ್ತಾರೆ. ಬಹುತೇಕ ಜೀವಚ್ಛವಗಳಾಗಿ. ಉಸಿರಾಡಬೇಕೆಂದರೂ ತಾಲಿಬಾನಿಗಳ ಅಪ್ಪಣೆ ಕಡ್ಡಾಯ !

ಈ ಮಾತು ಕೊಂಚ ವೈಭವೀಕರಣ ಎನಿಸಿದರೂ, ಒಸಾಮಾ ಚಿತ್ರದಲ್ಲಿನ ದೃಶ್ಯಗಳನ್ನು ಮತ್ತು ನದಿಯಾರ ಬದುಕಿನ ಘಟನೆಗಳನ್ನು ತಾಳೆ ಹಾಕಿದರೆ ನಿಜಕ್ಕೂ ವೈಭವೀಕರಣ ಎನಿಸದು. ಭಯಗ್ರಸ್ಥ ವಾತಾವರಣದಲ್ಲಿ ಪ್ರತಿ ಕ್ಷಣವೂ ಸಾವಿನ ಎದುರು ಕುಳಿತು ದಿನವನ್ನು ನೂಕುವ ನೋವನ್ನು ನಿರ್ದೇಶಕ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಒಟ್ಟೂ ತಾಲಿಬಾನಿಗಳ, ಮೂಲಭೂತವಾದಿಗಳ ಪ್ರಪಂಚದಲ್ಲಿರುವ ಗುಲಾಮಗಿರಿಯನ್ನು ನಿರ್ದೇಶಕ ಸಿದ್ಧಿಖ್ ಎರಡು ದೃಶ್ಯಗಳ ಮೂಲಕ ಹೇಳಿ ಮುಗಿಸುತ್ತಾನೆ.

ಸಿನಿಮಾದ ಮೊದಲ ಸನ್ನಿವೇಶ ’ತಮಗೆ ದುಡಿಯುವ ಹಕ್ಕುಗಳು ಕೊಡಿ’ ಎಂದು ಘೋಷಣಾ ಫಲಕಗಳನ್ನುಹಿಡಿದುಕೊಂಡು ಪ್ರತಿಭಟನೆ ನಡೆಸುವ ಮಹಿಳೆಯರು ಹಾಗೂ ಅವರ ಮೇಲೆರಗುವ ತಾಲಿಬಾನಿಗಳು, ಗುಂಡಿನ ಮೊರೆತ-ಎಲ್ಲವೂ ಹೇಗಿದೆ ಎಂದರೆ, ‘ನಿಮಗೆ ಕೇಳುವ ಹಕ್ಕುಗಳೇ ಇಲ್ಲ’ ಎಂಬುದನ್ನು ಸಂಕೇತಿಸುವಂತಿದೆ. ಬಂದೂಕುಗಳ ಮೂಲಕ ದನಿಯನ್ನು ಅಡಗಿಸಲಾಗುತ್ತದೆ.

ಕೊನೆಯ ದೃಶ್ಯವೆಂದರೆ ಒಸಾಮಾ ತನ್ನ ಮತ್ತೊಂದು ಅನಿವಾರ್ಯತೆಯನ್ನು ಒಪ್ಪಿಕೊಂಡು ವೃದ್ಧ ಗಂಡನ ಶಯ್ಯಾಗೃಹದಲ್ಲಿ ಬಂಧಿಯಾಗುತ್ತಾಳೆ. ಒಟ್ಟೂ ಇದರರ್ಥ ಮಹಿಳೆಗೆ ತಾಲಿಬಾನಿಗಳ ಜಗತ್ತಿನಲ್ಲಿ ಬಂಧನವೇ ಹೊರತು ಮುಕ್ತಿಯಲ್ಲ ಎಂಬುದನ್ನು ಸಂಕೇತಿಸುತ್ತಾರೆ. ಈ ಬಂಧನ ಗುಲಾಮಗಿರಿಯ ತೆರನಾದದ್ದೇ ಹೊರತು ಬೇರೇನೂ ಅಲ್ಲ.

ಸಿದ್ಧಿಖ್‌ ಅವರ ಈ ಚಿತ್ರಕ್ಕೆ ಅತ್ಯುತ್ತಮ ವಿದೇಶಿ ಚಿತ್ರ ವಿಭಾಗದಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಲಭಿಸಿತು. ಕಾನ್‌ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು, ವಿಶೇಷ ಪ್ರಶಸ್ತಿಯನ್ನು ಪಡೆಯಿತು. ಅದಲ್ಲದೇ ಲಂಡನ್ ಚಿತ್ರೋತ್ಸವವೂ ಸೇರಿದಂತೆ ಹಲವಾರು ಚಿತ್ರೋತ್ಸವಗಳಲ್ಲಿ ಭಾಗವಹಿಸಿ ಯಶಸ್ವಿಯಾಯಿತು. ಹಣಗಳಿಕೆಯ ನೆಲೆಯಲ್ಲೂ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿತು.

ತಾಲಿಬಾನ್‌ ಜಗತ್ತನ್ನು ನೈಜ ಜಗತ್ತಿಗೆ ಪರಿಚಯಿಸಿದ ಚಿತ್ರಗಳ ಪೈಕಿ ಇದೂ ಒಂದು. ಇದಕ್ಕಿಂತ ಮೊದಲು 2011 ರಲ್ಲಿ ಕಂದಹಾರ್ [ಮೊಹ್ಸಿನ್‌ ಮಖ್ಮಲ್ಬಫ್‌] ಸಿನಿಮಾ ಇದನ್ನೇ ಪ್ರಯತ್ನ ಮಾಡಿತ್ತು.

 

– ಅರವಿಂದ ನಾವಡ

Advertisement

Udayavani is now on Telegram. Click here to join our channel and stay updated with the latest news.

Next