Advertisement

ಐಟಿ ಉದ್ಯೋಗಿಗಳಿಗೂ ಸಂಘಟನೆ

11:31 AM Nov 10, 2017 | Team Udayavani |

ಮುಂಬೈ/ನವದೆಹಲಿ: ಕಾರ್ಮಿಕ ಸಂಘಟನೆಗಳು ಸಾಮಾನ್ಯವಾಗಿ ಕಾರ್ಖಾನೆಗಳಲ್ಲಿರುತ್ತವೆ. ಅದೇ ಮಾದರಿ ಮಾಹಿತಿ ತಂತ್ರಜ್ಞಾನ ಮತ್ತು ಅದನ್ನು ಆಧರಿತ ಕ್ಷೇತ್ರಗಳಲ್ಲಿ ಬಂದರೆ ಹೇಗಿರುತ್ತದೆ? ಇದೀಗ ಅಂಥ ಒಂದು ಪ್ರಯತ್ನ ಯಶಸ್ವಿಯಾಗಿದೆ.

Advertisement

ಕರ್ನಾಟಕ ರಾಜ್ಯ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧರಿತ ಸೇವೆಗಳ ಉದ್ಯೋಗಿಗಳ ಒಕ್ಕೂಟ (ಕೆಐಟಿಯು) ರಚನೆಯಾಗಿದೆ. ಕಾರ್ಮಿಕ ಸಂಘಟನೆಗಳ ಕಾಯ್ದೆ 1926 ಮತ್ತು ಕರ್ನಾಟಕ ಕಾರ್ಮಿಕ ಸಂಘಟನೆಗಳ ಒಕ್ಕೂಟ ನಿಯಂತ್ರಣ ಕಾಯ್ದೆ 1958ರ ಅನ್ವಯ ಅದನ್ನು ನೋಂದಣಿ ಮಾಡಲಾಗಿದೆ. ಈ ಬಗ್ಗೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿನೀತ್‌ ವಕೀಲ್‌ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ “ದ ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ. ದೇಶದ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳ ಕ್ಷೇತ್ರದ 9,741 ಕೋಟಿ ರೂ. (150 ಮಿಲಿಯನ್‌ ಡಾಲರ್‌) ಮೌಲ್ಯದ್ದಾಗಿದೆ. ಭಾರತದ ವಿವಿಧೆಡೆಗಳಲ್ಲಿ ಒಟ್ಟು 40 ಲಕ್ಷ ಮಂದಿ ಈ ಕ್ಷೇತ್ರದಲ್ಲಿ ದುಡಿಯುತ್ತಿದ್ದರೆ, ಬೆಂಗಳೂರು ಒಂದರಲ್ಲಿಯೇ 15 ಲಕ್ಷ ಮಂದಿ ವಿವಿಧ ಹಂತಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಬದಲಾಗಿರುವ ಸನ್ನಿವೇಶಗಳಲ್ಲಿ ವಿಶೇಷವಾಗಿ ಕಳೆದ ಒಂದು ವರ್ಷದ ಅವಧಿಯಲ್ಲಿ ಉದ್ಯೋಗಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವ ಪ್ರಕ್ರಿಯೆ, ವಾರ್ಷಿಕ ವೇತನ ಹೆಚ್ಚಳ, ಬಡ್ತಿಯ ಮೇಲೆ ತಡೆ ನೀಡಲಾಗಿದೆ. ಹೀಗಾಗಿ, ಉದ್ಯೋಗಿಗಳು ಆತಂಕಗೊಂಡಿದ್ದರು. 

250 ಮಂದಿ ಸದಸ್ಯರು: ಅದೆಲ್ಲದಕ್ಕೂ ಪೂರಕವಾಗಿ ಇಂಥ ಕ್ರಮ ಅನುಸರಿಸುವ ಕಂಪನಿಗಳ ವಿರುದ್ಧ ಕಾನೂನಿನ ಅಡಿ ಹೋರಾಟ ಮಾಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧರಿತ ಸೇವೆಗಳ ಉದ್ಯೋಗಿಗಳ ಒಕ್ಕೂಟ (ಕೆಐಟಿಯು) ರಚನೆಯಾಗಿದೆ. ಸದ್ಯ ಅದರಲ್ಲಿ ಒಟ್ಟು 250 ಮಂದಿ ಸದಸ್ಯರಿದ್ದಾರೆ.

Advertisement

ಅದರ ಮೂಲಕ ಹಲವು ಸಮಸ್ಯೆಗಳ ವಿರುದ್ಧ ಹೋರಾಟಕ್ಕೆ ತೀರ್ಮಾನಿಸಲಾಗಿದೆ ಎಂದು ವಕೀಲ್‌ ಹೇಳಿದ್ದಾರೆ. ಕರ್ನಾಟಕದಲ್ಲಿರುವ ಒಕ್ಕೂಟಕ್ಕೆ ಸಿಪಿಎಂ ಬೆಂಬಲಿತ ಸೆಂಟರ್‌ ಆಫ್ ಇಂಡಿಯನ್‌ ಟ್ರೇಡ್‌ ಯೂನಿಯನ್‌ (ಸಿಐಟಿಯು) ಎಲ್ಲ ರೀತಿಯ ಸಹಕಾರ ನೀಡುತ್ತಿದೆ ಎಂದಿದ್ದಾರೆ. 

ಐಟಿ ಕ್ಷೇತ್ರದಲ್ಲಿ ಸಮಸ್ಯೆಗೆ ಒಳಗಾದ ಉದ್ಯೋಗಿಗಳೆಲ್ಲ ಫೋರಂ ಫಾರ್‌ ಐಟಿ ಎಂಪ್ಲಾಯೀಸ್‌ (ಎಫ್ಐಟಿಇ), ನ್ಯಾಷನಲ್‌ ಡೆಮಾಕ್ರಾಟಿಕ್‌ ಲೇಬರ್‌ ಫ್ರಂಟ್‌- ಐಟಿ (ಎಲ್‌ಡಿಎಲ್‌ಎಫ್-ಐಟಿ), ಯೂನಿಯನ್‌ ಫಾರ್‌ ಐಟಿ/ಐಟಿಇಎಸ್‌ (ಯುಎನ್‌ಐಟಿಇಎಸ್‌) ಎಂಬ ಸಂಘಟನೆಗಳ ಮೊರೆ ಹೋಗುತ್ತಿದ್ದರು.

ಗಮನಾರ್ಹ ಅಂಶವೆಂದರೆ ಜೂನ್‌ನಲ್ಲಿ ನಾಸ್ಕಾಂ ನೀಡಿದ ಮಾಹಿತಿಯಂತೆ ಭಾರತದಲ್ಲಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ ವಿಶೇಷವಾಗಿ ರಪು¤ ಶೇ.7-8ರ ಪ್ರಮಾಣದಲ್ಲಿಯೇ ಇದ್ದೀತು ಎಂದು ಮುನ್ಸೂಚನೆ ನೀಡಿತ್ತು. ದೇಶದಲ್ಲಿನ ನಾಲ್ಕು ಪ್ರಮುಖ ಐಟಿ ಕಂಪನಿಗಳು ಮುಂದಿನ ದಿನಗಳಲ್ಲಿ 12 ರಿಂದ 15 ಸಾವಿರ ಮಂದಿಯನ್ನು ಕರ್ತವ್ಯದಿಂದ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

ನಾಸ್ಕಾಂನ ವರದಿ ಪ್ರಕಾರ ಕಳೆದ ಹಣಕಾಸಿನ ವರ್ಷದಲ್ಲಿ 1,70,000 ಮಂದಿಯನ್ನು ಉದ್ಯೋಗಕ್ಕೆ ಸೇರ್ಪಡೆ ಮಾಡಿಕೊಂಡಿವೆ. ಹಾಲಿ ಹಣಕಾಸು ವರ್ಷದಲ್ಲಿ 1,50,000 ಮಂದಿಯನ್ನು ಸೇರ್ಪಡೆಗೊಳಿಸಲಾಗುತ್ತದೆ. ಕರ್ನಾಟಕದಲ್ಲಿ ನೋಂದಣಿಯಾಗಿರುವ ಒಕ್ಕೂಟದ ಬಗ್ಗೆ ಮತ್ತು ಅದರಿಂದ ಉಂಟಾಗಬಹುದಾದ ಪ್ರಭಾವದ ಬಗ್ಗೆ ಇನ್ನಷ್ಟೇ ಅಧ್ಯಯನ ನಡೆಸಬೇಕಾಗಿದೆ ಎಂದು ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next