Advertisement

ಕಾರ್ಮಿಕ ಕಾಯ್ದೆ ತಿದ್ದುಪಡಿಗೆ ವಿರೋಧ

07:01 AM May 12, 2020 | Suhan S |

ದಾವಣಗೆರೆ: ಕಾರ್ಮಿಕ ಕಾಯ್ದೆ ತಿದ್ದುಪಡಿ ವಿರೋಧಿಸಿ ಸೋಮವಾರ ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ ( ಎಐಟಿಯುಸಿ) ಕಾರ್ಯಕರ್ತರು ಬಳ್ಳಾರಿ ವಿಭಾಗ ಸಹಾಯಕ ಕಾರ್ಮಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

Advertisement

ಬಂಡವಾಳಶಾಹಿಗಳು, ಧನವಂತರಿಗೆ ಮಣಿದಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ 8 ಗಂಟೆಗಳ ಕೆಲಸವನ್ನು 12 ಗಂಟೆಗೆ ಹೆಚ್ಚಿಸಲು ಯತ್ನಿಸುತ್ತಿರುವುದು ಅತ್ಯಂತ ಖಂಡನೀಯ ಎಂದು ಸಂಘಟನೆ ಮುಖಂಡ ಎಚ್‌.ಕೆ. ರಾಮಚಂದ್ರಪ್ ಆಕ್ರೋಶ ವ್ಯಕ್ತಪಡಿಸಿದರು.

ದಿನದ 24 ಗಂಟೆಯಲ್ಲಿ 8 ಗಂಟೆ ಕೆಲಸ, 8 ಗಂಟೆ ಮನೋರಂಜನೆ, 8 ಗಂಟೆ ನಿದ್ದೆ… ಎಂದು ಬ್ರಿಟಿಷ್‌ ಕಾಲದಲ್ಲೇ ಹೋರಾಟ ನಡೆಸಿದರ ಪರಿಣಾಮ ಕಾರ್ಮಿಕರು ದಿನಕ್ಕೆ 8 ಗಂಟೆ ಕೆಲಸ ಮಾಡಬೇಕು ಎಂಬ ನಿಯಮ ಜಾರಿಗೆ ತರಲಾಯಿತು. ಯಾವುದೇ ವ್ಯಕ್ತಿ 8 ಗಂಟೆಗಳ ಕಾಲ ಕ್ರಿಯಾಶೀಲರಾಗಿ ಕೆಲಸ ಮಾಡಬಲ್ಲರು ಎಂಬ ವೈಜ್ಞಾನಿಕ ಆಧಾರದಲ್ಲಿ ಸಮಯ ನಿಗದಿಪಡಿಸಿದೆ ಎಂದು ತಿಳಿಸಿದರು.

ಬಿಜೆಪಿ ನೇತೃತ್ವದ ಕೇಂದ್ರ, ರಾಜ್ಯ ಸರ್ಕಾರ ಏಕಾಏಕಿ ಮತ್ತು ಅತ್ಯಂತ ತರಾತುರಿಯಲ್ಲಿ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಮಾಡಿ 8 ಗಂಟೆಯ ಕೆಲಸದ ಅವಧಿಯನ್ನ 12 ಗಂಟೆಗೆ ಹೆಚ್ಚಳಕ್ಕೆ ಮುಂದಾಗಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ತಕ್ಷಣಕ್ಕೆ ಕಾರ್ಮಿಕ ಕಾಯ್ದೆ ತಿದ್ದುಪಡಿ ಪ್ರಸ್ತಾಪವನ್ನೇ ಕೈ ಬಿಡಬೇಕು. ಯಾವುದೇ ಒತ್ತಡಕ್ಕು ಮಣಿಯಬಾರದು, ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವಂತೆ ದಿನಕ್ಕೆ 8 ಗಂಟೆಗಳ ಕೆಲಸಕ್ಕೆ ಮಾತ್ರ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯ ಆವರಗೆರೆ ಎಚ್‌.ಜಿ. ಉಮೇಶ್‌, ಆನಂದರಾಜ್‌, ಆವರಗೆರೆ ಚಂದ್ರು, ಆವರಗೆರೆ ವಾಸು, ರಂಗನಾಥ್‌, ಆರ್‌. ಸುರೇಶ್‌, ಎನ್‌.ಎಚ್‌. ರಾಮಪ್ಪ, ಎನ್‌.ಟಿ. ಬಸವರಾಜ್‌ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next