ಚನ್ನಪಟ್ಟಣ: ಸ್ಮಶಾನಕ್ಕೆ ತೆರಳುವ ರಸ್ತೆಗೆ ಅಡ್ಡಲಾಗಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವುದನ್ನು ವಿರೋಧಿಸಿ ತಾಲೂಕಿನ ಕುಂತೂರುದೊಡ್ಡಿ ಗ್ರಾಮಸ್ಥರು ಕಾಮಗಾರಿಗೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದರು.
ರಾಂಪುರ ಹಾಗೂ ಪೂಜಾರಿದೊಡ್ಡಿಗೆ ತೆರಳುವ ಮಾರ್ಗದಲ್ಲಿ ಸ್ಮಶಾನವಿದ್ದು, ಹಿಂದಿನಿಂದಲೂ ಅಂತ್ಯ ಸಂಸ್ಕಾರಕ್ಕೆ ತೆರಳಲು ರಸ್ತೆ ಬಳಸುತ್ತಿದ್ದರು. ಸ್ಮಶಾನಕ್ಕೆ ತೆರಳಲು ಇದೊಂದೇ ರಸ್ತೆಯಾಗಿದ್ದು, ಬೆಂಗಳೂರು- ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸ್ಮಶಾನದ ರಸ್ತೆಗೆ ಅಡ್ಡಲಾಗಿ ನಡೆಯುತ್ತಿದೆ. ಹೀಗಾಗಿ ರಸ್ತೆಗೆ ಜಾಗ ಬಿಟ್ಟು ಕಾಮಗಾರಿ ನಡೆಸಬೇಕು ಎಂದು ಗ್ರಾಮಸ್ಥರು ಪ್ರತಿಭಟನೆಯ ಮೂಲಕ ಪಟ್ಟು ಹಿಡಿದರು.
ಕೆಲಸ ಸ್ಥಗಿತಗೊಳಿಸಿದ ಗ್ರಾಮಸ್ಥರು: ಕೆಲಸವನ್ನು ಸ್ಥಗಿತಗೊಳಿಸಿದ ಗ್ರಾಮಸ್ಥರು, ಸ್ಥಳದಲ್ಲೇ ಕುಳಿತು ಅರ್ಧತಾಸು ಪ್ರತಿಭಟನೆ ನಡೆಸಿದರು. ಗ್ರಾಮದ ದಲಿತರ ಸ್ಮಶಾನದ ರಸ್ತೆಯಲ್ಲಿ ರಾಷ್ಟ್ರಿಯ ಹೆದ್ದಾರಿ ನಿರ್ಮಾಣವಾದರೆ, ಸ್ಮಶಾನಕ್ಕೆ ಹೋಗಲು ದಾರಿ ಇಲ್ಲದೇ ಸಾವನಪ್ಪಿದ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಲು ತೊಂದರೆಯಾಗುತ್ತದೆ ಎಂದು ಅಸಹಾಯಕತೆಯನ್ನು ವ್ಯಕ್ತಪಡಿಸಿದರು.
ಅಧಿಕಾರಿಗಳು ಸಮಸ್ಯೆ ಬಗೆಹರಿಸಿ: ಗ್ರಾಮದಲ್ಲಿನ ದಲಿತ ಸಮುದಾಯಕ್ಕೆ ಇರುವ ಒಂದು ಎಕರೆ ಸ್ಮಶಾನದಲ್ಲಿಸದ್ಯದ ಪರಿಸ್ಥಿತಿಯಲ್ಲಿ ಐದುಗುಂಟೆ ಮಾತ್ರ ಉಳಿದಿದೆ. ಇರುವ ಅಲ್ಪ ಸ್ಮಶಾನಕ್ಕೆ ಹೋಗುವ ರಸ್ತೆಗೂ ಸಂಚಕಾರ ಬಂದಿದೆ. ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಬೇಕು. ಅಲ್ಲಿಯವರೆಗೂ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು.
ಕಾಲವಕಾಶ ನೀಡಲು ಮನವಿ: ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಸುದರ್ಶನ್, ಪ್ರತಿಭಟನಾಕಾರರ ಮನವಿಯನ್ನು ಸ್ವೀಕಾರಿಸಿದರು. ದಲಿತರ ಸ್ಮಶಾನ ರಸ್ತೆಯನ್ನು ವಶಪಡಿಸಿಕೊಂಡು ರಸ್ತೆ ನಿರ್ಮಾಣಕ್ಕೆ ಮುಂದಾಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ರಸ್ತೆಯನ್ನು ಮಾಡುವುದಿದ್ದರೆ ಮೊದಲು ಸ್ಮಶಾನಕ್ಕೆ ತೆರಳಲು ಅಂಡರ್ಪಾಸ್ ನಿರ್ಮಾಣ ಮಾಡಿ, ನಂತರ ರಸ್ತೆಯನ್ನು ನಿರ್ಮಾಣ ಮಾಡಬೇಕು.
ರಾಷ್ಟ್ರೀಯ ಪ್ರಾಧಿಕಾರದ ಅಧಿಕಾರಿಗಳು ಒಂದು ತಿಂಗಳು ಕಾಲವಕಾಶ ನೀಡುವಂತೆ ತಹಶೀಲ್ದಾರ್ ಅವರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗ ಮಂಜು, ಗ್ರಾಮ ಪಂಚಾಯ್ತಿ ಸದಸ್ಯ ಕೇಶವಮೂರ್ತಿ, ಗ್ರಾಮದ ದಲಿತ ಸಮುದಾಯದ ಮುಖಂಡರಾದ ಪುಟ್ಟರಾಜು, ಸಂಜೀವಯ್ಯ, ಮಯೂರ, ಶ್ರೀಕಾಂತ, ಚಂದ್ರಶೇಖರ್, ಸಣ್ಣಪ್ಪ, ಪ್ರಸನ್ನ, ಹನುಮಂತಯ್ಯ, ಕೆಂಗಲ, ಪ್ರಕಾಶ್, ಸಿದ್ದರಾಮು, ಶಿವಯ್ಯ ಉಪಸ್ಥಿತರಿದ್ದರು.