Advertisement

JDS: ಆಪರೇಷನ್‌ ಹಸ್ತ ಭೀತಿ- ಜೆಡಿಎಸ್‌ ರೆಸಾರ್ಟ್‌ ರಾಜಕಾರಣ?

11:52 PM Nov 17, 2023 | Team Udayavani |

 

Advertisement

ಚಿಕ್ಕಮಗಳೂರು, ನ. 17: ವಿಧಾನ ಪರಿಷತ್‌ ಸದಸ್ಯ ಹಾಗೂ ಜೆಡಿಎಸ್‌ ಮುಖಂಡ ಎಸ್‌.ಎಲ್‌.ಭೋಜೇಗೌಡರ ಮಗಳ ನಿಶ್ಚಿತಾರ್ಥ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೆಸರಿನಲ್ಲಿ ಕಾಫಿನಾಡಿನ ಎರಡು ರೆಸಾರ್ಟ್‌ಗಳಲ್ಲಿ ಹಲವು ರೂಮ್‌ಗಳನ್ನು ಕಾದಿರಿಸಲಾಗಿದ್ದು, ಇದು ಆಪರೇಷನ್‌ ಹಸ್ತದ ಭೀತಿಯಿಂದ ಜೆಡಿಎಸ್‌ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಇಟ್ಟಿರುವ ಹೆಜ್ಜೆ ಎಂದು ಹೇಳಲಾಗುತ್ತಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್‌ ಜೆಡಿಎಸ್‌ ಹಿರಿಯ ಶಾಸಕರೊಂದಿಗೆ ಸಭೆ ನಡೆಸಿರುವ ಬೆನ್ನಲ್ಲೇ ಎಚ್‌.ಡಿ. ಕುಮಾರಸ್ವಾಮಿ ಹೆಸರಿನಲ್ಲಿ ಚಿಕ್ಕಮಗಳೂರಿನ ಸಿಲ್ವರ್‌ಗೆàಟ್‌, ಹನಿಡ್ನೂವ್‌ ರೆಸಾರ್ಟ್‌ಗಳಲ್ಲಿ ಹಲವು ರೂಮ್‌ಗಳನ್ನು ಎರಡು ದಿನಗಳ ಕಾಲ ಕಾದಿರಿಸಲಾಗಿದೆ.
ನ.19ರಂದು ವಿಧಾನ ಪರಿಷತ್‌ ಸದಸ್ಯ ಭೋಜೇಗೌಡರ ಮಗಳ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದ್ದು, ಇದರ ನೆಪದಲ್ಲಿ ಎಚ್‌ಡಿಕೆ ತಮ್ಮ ಶಾಸಕರ ಜತೆ ರೆಸಾರ್ಟ್‌ನಲ್ಲಿ ಸಭೆ ನಡೆಸಲು ಉದ್ದೇಶಿಸಿದ್ದಾರೆ. ಇದಕ್ಕಾಗಿ ನ.18 ಮತ್ತು 19ರ ತಾರೀಕುಗಳಿಗೆ ರೆಸಾರ್ಟ್‌ ಕಾದಿರಿಸಲಾಗಿದೆ. ಎಚ್‌ಡಿಕೆ ನ.18ರಂದು ಇಲ್ಲಿಗೆ ಆಗಮಿಸಿ ಪಕ್ಷದ ಶಾಸಕರ ಸಭೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

ರೆಸಾರ್ಟ್‌ ರಾಜಕಾರಣ ಅಲ್ಲ: ಭೋಜೇಗೌಡ
ನ.19ರಂದು ನನ್ನ ಮಗಳ ನಿಶ್ಚಿತಾರ್ಥ ಕಾರ್ಯಕ್ರಮ ಇದೆ. ಈ ಕಾರ್ಯಕ್ರಮಕ್ಕೆ ಎಚ್‌.ಡಿ.ಕುಮಾರಸ್ವಾಮಿ ಸಹಿತ ಮಾಜಿ ಪ್ರಧಾನಿ ದೇವೇಗೌಡ ಕುಟುಂಬಸ್ಥರು ಬರಲಿದ್ದಾರೆ. ಜೆಡಿಎಸ್‌ ಶಾಸಕರೂ ಆಗಮಿಸಲಿದ್ದಾರೆ. ಈ ಕಾರಣಕ್ಕೆ ರೆಸಾರ್ಟ್‌ಗಳಲ್ಲಿ ಕೊಠಡಿಗಳನ್ನು ಕಾದಿರಿಸಲಾಗಿದೆ. ಇದರಲ್ಲೇನೂ ವಿಶೇಷವಿಲ್ಲ. ಇತ್ತೀಚೆಗೆ ಹಾಸನದಲ್ಲೂ ಪಕ್ಷದ ಶಾಸಕರು, ವರಿಷ್ಠರು ರೆಸಾರ್ಟ್‌ನಲ್ಲಿ ತಂಗಿದ್ದೆವು. ಡಿನ್ನರ್‌ ಮೀಟಿಂಗ್‌ ಕೂಡ ಮಾಡಿದ್ದೇವೆ. ಹಾಸನಾಂಬೆ ದರ್ಶನಕ್ಕೆ ಬಂದಿದ್ದ ಜೆಡಿಎಸ್‌ ಶಾಸಕರಿಗೆ ಹಾಸನ ಕ್ಷೇತ್ರದ ಶಾಸಕರು ಆತಿಥ್ಯ ನೀಡಿದ್ದರಷ್ಟೇ. ಈ ವಾಸ್ತವ್ಯದ ಹಿಂದೆ ಯಾವುದೇ ರಾಜಕಾರಣ ಇಲ್ಲ. ಇದು ರೆಸಾರ್ಟ್‌ ರಾಜಕಾರಣ ಅಲ್ಲ. ನಮ್ಮ ಮನೆಯ ಖಾಸಗಿ ಕಾರ್ಯಕ್ರಮ ಅಷ್ಟೇ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next