Advertisement

ರೋಹಿತ್‌ ಶರ್ಮಾಗೆ ಕಾದಿದೆ ಓಪನಿಂಗ್‌ ಟೆಸ್ಟ್‌

11:19 PM Sep 25, 2019 | Team Udayavani |

ವಿಜಯನಗರಂ (ಆಂಧ್ರಪ್ರದೇಶ): ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ರೋಹಿತ್‌ ಶರ್ಮ ಅವರನ್ನು ಆರಂಭಿಕನನ್ನಾಗಿ ಇಳಿಸುವ ಟೀಮ್‌ ಇಂಡಿಯಾ ಯೋಜನೆಗೆ ತ್ರಿದಿನ ಅಭ್ಯಾಸ ಪಂದ್ಯವೊಂದು ವೇದಿಕೆಯಾಗಿ ಪರಿಣಮಿಸಿದೆ. ಗುರುವಾರದಿಂದ ಇಲ್ಲಿ ಮಂಡಳಿ ಅಧ್ಯಕ್ಷರ ಬಳಗ ಮತ್ತು ದಕ್ಷಿಣ ಆಫ್ರಿಕಾ ನಡುವೆ ಈ ಪಂದ್ಯ ಆರಂಭವಾಗಲಿದ್ದು, ನಾಯಕನೂ ಆಗಿರುವ ರೋಹಿತ್‌ ಓಪನರ್‌ ಆಗಿ ಕಣಕ್ಕಿಳಿಯಲು ಅಣಿಯಾಗಿದ್ದಾರೆ.

Advertisement

ರೋಹಿತ್‌ ಶರ್ಮ ಅವರಿಗೆ ಜತೆಯಾಗಿ ಕರ್ನಾಟಕದ ಮಾಯಾಂಕ್‌ ಅಗರ್ವಾಲ್‌ ಆಡುವ ಸಾಧ್ಯತೆ ಇದ್ದು, ಮುಂಬರುವ ಟೆಸ್ಟ್‌ ಸರಣಿಯಲ್ಲಿ ಇವರಿಬ್ಬರೇ ಭಾರತ ತಂಡದ ಪ್ರಮುಖ ಆರಂಭಿಕರಾ ಗಿರುತ್ತಾರೆ. ಸರಣಿಯ ಮೊದಲ ಟೆಸ್ಟ್‌ ಅ. 2ರಿಂದ ವಿಶಾಖಪಟ್ಟಣದಲ್ಲಿ ಮೊದಲ್ಗೊಳ್ಳಲಿದೆ.

ಆತಿಥೇಯ ತಂಡದಲ್ಲಿ ಇವರನ್ನು ಹೊರತುಪಡಿಸಿ ಇನ್ನೂ ಇಬ್ಬರು ಆರಂಭಿಕರಾಗಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಪ್ರಿಯಾಂಕ್‌ ಪಾಂಚಾಲ್‌ ಮತ್ತು ಅಭಿಮನ್ಯು ಈಶ್ವರನ್‌ ರೇಸ್‌ನಲ್ಲಿದ್ದು, ಇವರಲ್ಲೊಬ್ಬರು ವನ್‌ಡೌನ್‌ನಲ್ಲಿ ಆಡಬಹುದು.

ಟೆಸ್ಟ್‌ನಲ್ಲಿ ಮಿಂಚದ ರೋಹಿತ್‌
ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅಮೋಘ ಆಟವಾಡುವ ರೋಹಿತ್‌ ಶರ್ಮ ಟೆಸ್ಟ್‌ ಕ್ರಿಕೆಟ್‌ನಲ್ಲಿ ಇದೇ ಸಾಮರ್ಥ್ಯ ತೋರ್ಪಡಿಸುವಲ್ಲಿ ಈವರೆಗೆ ಯಶಸ್ವಿಯಾಗಿಲ್ಲ. 27 ಟೆಸ್ಟ್‌ಗಳಿಂದ 39.62ರ ಸರಾಸರಿಯಲ್ಲಿ 3 ಶತಕ ಸಹಿತ 1,585 ರನ್‌ ಗಳಿಸಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಮೆಲ್ಬರ್ನ್ ನಲ್ಲಿ ಕೊನೆಯ ಸಲ ಟೆಸ್ಟ್‌ ಆಡಲಿಳಿದಿದ್ದರು.

ಉಮೇಶ್‌, ಭರತ್‌ ಮೇಲೂ ಕಣ್ಣು
ರೋಹಿತ್‌ ಹೊರತುಪಡಿಸಿದರೆ ಈ ಪಂದ್ಯ ಮುಖ್ಯವಾಗಿರುವುದು ಉಮೇಶ್‌ ಯಾದವ್‌ಗೆ. ಟೆಸ್ಟ್‌ ಸರಣಿಯಿಂದ ಹೊರಬಿದ್ದಿರುವ ಬುಮ್ರಾ ಜಾಗಕ್ಕೆ ಬಂದಿರುವ ಯಾದವ್‌, ಇಲ್ಲಿ ಆಯ್ಕೆಯನ್ನು ಸಮರ್ಥಿಸಬೇಕಿದೆ. ಕೀಪರ್‌ ಕೆ.ಎಸ್‌. ಭರತ್‌ ಮೇಲೂ ಒಂದು ಕಣ್ಣಿಡಲಾಗಿದೆ. ಕರುಣ್‌ ನಾಯರ್‌, ಸಿದ್ದೇಶ್‌ ಲಾಡ್‌ ಮಧ್ಯಮ ಕ್ರಮಾಂಕದ ಭರವಸೆಯಾಗಿದ್ದಾರೆ.

Advertisement

ಹೆಚ್ಚಿದೆ ಹರಿಣಗಳ ಆತ್ಮವಿಶ್ವಾಸ
ಟಿ20 ಸರಣಿಯನ್ನು ಸಮಬಲಗೊಳಿ ಸಿರುವ ಹರಿಣಗಳ ಪಡೆ ಘಾತಕ ಬೌಲಿಂಗ್‌ ವಿಭಾಗ ಹೊಂದಿದೆ. ರಬಾಡ, ಫಿಲಾಂಡರ್‌, ಎನ್‌ಗಿಡಿ ಅವರೆಲ್ಲ ಫ‌ುಲ್‌ ಚಾರ್ಜ್‌ ಆಗಿ ಈ ಹಣಾಹಣಿಗೆ ತಯಾರಾಗಿದ್ದಾರೆ. ಡು ಪ್ಲೆಸಿಸ್‌ ತಂಡವನ್ನು ಕೂಡಿಕೊಂಡಿರುವುದರಿಂದ ಹರಿಣಗಳ ಆತ್ಮವಿಶ್ವಾಸ ಸಹಜವಾಗಿಯೇ ಹೆಚ್ಚಿದೆ.

ತಂಡಗಳು
ಮಂಡಳಿ ಅಧ್ಯಕ್ಷರ ಬಳಗ
ರೋಹಿತ್‌ ಶರ್ಮ (ನಾಯಕ), ಮಾಯಾಂಕ್‌ ಅಗರ್ವಾಲ್‌, ಪ್ರಿಯಾಂಕ್‌ ಪಾಂಚಾಲ್‌, ಎ.ಆರ್‌. ಈಶ್ವರನ್‌, ಕರುಣ್‌ ನಾಯರ್‌, ಸಿದ್ದೇಶ್‌ ಲಾಡ್‌, ಕೆ.ಎಸ್‌. ಭರತ್‌ (ವಿ.ಕೀ.), ಜಲಜ್‌ ಸಕ್ಸೇನಾ, ಧರ್ಮೇಂದ್ರಸಿನ್ಹ ಜಡೇಜ, ಆವೇಶ್‌ ಖಾನ್‌, ಇಶಾನ್‌ ಪೊರೆಲ್‌, ಶಾದೂìಲ್‌ ಠಾಕೂರ್‌, ಉಮೇಶ್‌ ಯಾದವ್‌.

ದಕ್ಷಿಣ ಆಫ್ರಿಕಾ
ಫಾ ಡು ಪ್ಲೆಸಿಸ್‌ (ನಾಯಕ), ಟೆಂಬ ಬವುಮ, ಥಿಯುನಿಸ್‌ ಡಿ ಬ್ರುಯಿನ್‌, ಕ್ವಿಂಟನ್‌ ಡಿ ಕಾಕ್‌, ಡೀನ್‌ ಎಲ್ಗರ್‌, ಜುಬೇರ್‌ ಹಮ್ಜಾ, ಕೇಶವ್‌ ಮಹಾರಾಜ್‌, ಐಡನ್‌ ಮಾರ್ಕ್‌ರಮ್‌, ಸೇನುರಣ್‌ ಮುತ್ತುಸ್ವಾಮಿ, ಲುಂಗಿ ಎನ್‌ಗಿಡಿ, ಅನ್ರಿಚ್‌ ನೋರ್ಜೆ, ವೆರ್ನನ್‌ ಫಿಲಾಂಡರ್‌, ಡೇನ್‌ ಪೀಟ್‌, ಕಾಗಿಸೊ ರಬಾಡ, ರುಡಿ ಸೆಕೆಂಡ್‌.

Advertisement

Udayavani is now on Telegram. Click here to join our channel and stay updated with the latest news.

Next