Advertisement

ಊಡ್ಜರೂ ನೂನುಕ್ಕಲ್‌ ಎಂಬ ಕಿರಣ

02:27 PM Apr 03, 2022 | Team Udayavani |

ಕ್ಯಾತ್‌ ರಾಸ್ಕ ಹುಟ್ಟಿದ್ದು 1920ರಲ್ಲಿ, ಸತ್ತದ್ದು 1993ರಲ್ಲಿ. ಆಕೆಯ ಬದುಕಿನ ಎಪ್ಪತ್ತೆರಡು ವರ್ಷಗಳಲ್ಲಿ ಸುಮಾರು ಅರವತ್ತು ವರ್ಷಗಳನ್ನು ತಮ್ಮ ಜನರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಲೇ ಕಳೆದ ಆಕೆ ನಿರಂತರ ಬರೆಯುತ್ತಲೇ ಹೋದರು. ಪ್ರಶಸ್ತಿಗಳನ್ನು ಪಡೆದರು. ಹೋರಾಟದ ಕ್ರಾಂತಿಯ ಹಾಡುಗಳನ್ನು ಜನಪ್ರಿಯಗೊಳಿಸಿದರು.

Advertisement

ಶಾಲೆಯಲ್ಲಿ ಆಕೆಗೆ ನೀನು ದಾಸ್ಯಕ್ಕೆ ಸೇರಿದವಳು, ಮನೆಕೆಲಸದವಳಾಗಿ ಕೆಲಸ ಮಾಡಲು ಎಷ್ಟು ಬೇಕೋ ಅಷ್ಟು ತಯಾರಾಗು ಸಾಕು ಎನ್ನುವುದನ್ನು ಮನದಟ್ಟು ಮಾಡಿಸಿದ್ದರಂತೆ. ಅದಕ್ಕೆ ವ್ಯತಿರಿಕ್ತವಾಗಿ ಆಕೆಯ ತಾಯಿ ತನ್ನ ಮಕ್ಕಳು ಶಾಲೆಗೆ ಹೋಗಿ ಕಲಿತು ಶಿಕ್ಷಣವಂತರಾಗಬೇಕು ಎಂದು ಶ್ರಮಪಟ್ಟರಂತೆ. ಬಾಲಕಿಯ ತಂದೆಯೂ ಕನಿಷ್ಠ ಓದು-ಬರಹವನ್ನು ಪಡೆದು, ಒಳ್ಳೆಯ ಕೆಲಸಗಾರರಾಗಿದ್ದರೂ ಅವರಿಗೆ ಗುಲಾಮರಿಗೆ ಕೊಡುವ ಒಂದೆರಡು ಕಾಸು ಸಿಗುತ್ತಿತ್ತಂತೆ. ಸರಕಾರ ತಮಗೆ ಬಳುವಳಿಯಾಗಿ ಬಡತನವನ್ನು ಕೊಟ್ಟಿದ್ದರೂ ಸ್ವಾಭಿಮಾನಿ ಕುಟುಂಬ ತಮ್ಮ ಹಸಿವನ್ನು ನಿಯಂತ್ರಿಸಿಕೊಂಡು ಬದುಕಿದರು. ಆ ತಂದೆ ತಾಯಿಯರು ಮಕ್ಕಳಲ್ಲಿ ಕನಸು, ಧೈರ್ಯವನ್ನು ತುಂಬಿದರು. ಆ ಹನಿಹನಿ ತುಂತುರು ಸೇರಿ ಅವರ ಮಗಳು ಕ್ಯಾತ್‌ ತಾನು ಹುಟ್ಟಿದ ಮಿಂಜೆರಿಬ (North Stradbroke ದ್ವೀಪ) ಸಮುದ್ರದ ಮೊರೆತವನ್ನು ಪ್ರತಿಧ್ವನಿಸುವಂತೆ ಆಯಿತು.

ಹದಿನಾರು ವರ್ಷದ ಹುಡುಗಿ ಕ್ಯಾತ್‌ ತಾನು ನರ್ಸಿಂಗ್‌ ಓದಬೇಕೆಂದು ಕೇಳಿಕೊಂಡರೂ ಜನಾಂಗೀಯ ಧೋರಣೆಯಿಂದ ಅದನ್ನು ನಿರಾಕರಿಸಲಾಯಿತು. ಎರಡನೇ ವಿಶ್ವ ಮಹಾಯುದ್ಧದ ಸಮಯದಲ್ಲಿ (1941-44) ಆಸ್ಟ್ರೇಲಿಯನ್‌ ವುಮೆನ್ಸ್‌ ಆರ್ಮಿ ಸರ್ವಿಸ್‌ ಸೇರಿ ಕ್ಯಾತ್‌ ಸ್ವಿಚ್‌ ಆಪರೇಟರ್‌ ಆದರು. ಅದೇ ವೇಳೆಯಲ್ಲೇ ಬ್ರೂಸ್‌ ವಾಕರ್‌ ಅವರನ್ನು ಮದುವೆಯಾದರು. ಇಬ್ಬರು ಮಕ್ಕಳಾದ ಅನಂತರ, 1960ರ ದಶಕದಲ್ಲಿ ರಾಜಕೀಯ ಪ್ರವೇಶಿಸಿ, ತಮ್ಮ ಜನರ ಹಕ್ಕುಗಳಿಗಾಗಿ ಹೋರಾಡುತ್ತಾ ಸಂವಿಧಾನದಲ್ಲಿ ಅವನ್ನೂ ಸೇರಿಸುವ ನಿಟ್ಟಿನಲ್ಲಿ ಗಟ್ಟಿದನಿಯಾದರು. 1967ರಲ್ಲಿ ಅಬೊರಿಜಿನಲ್‌ ಜನರನ್ನು ಕಾನೂನುಬದ್ಧವಾಗಿ ಸಂವಿಧಾನದಲ್ಲಿ ಸೇರಿಸಲಾಯ್ತು.

ಬದಲಾವಣೆಗಳನ್ನು ತರುವತ್ತ ಮಾಡಿದ ಅವರ ಶ್ರಮ ಪ್ರಸಿದ್ಧಿಯಾಗಿತ್ತು. ಅದಕ್ಕೆ ಕಾರಣ ಆಕೆಯ ಕವನಗಳು. 1964ರಲ್ಲಿ ಪ್ರಕಟವಾದ We are going ಕವನಸಂಕಲನ ಅವರ ಜನರ ಸ್ಥಿತಿಗೆ ಕನ್ನಡಿ ಹಿಡಿದು ತೋರಿದ್ದು ಅಲ್ಲದೆ ತಾವು ಇತರೇ ಜನಾಂಗವಲ್ಲ, ಆಸ್ಟ್ರೇಲಿಯನ್‌ ಮಣ್ಣಿನ ಮಕ್ಕಳು ಎಂದು ಜಗತ್ತಿಗೆ ಸಾರಿತು. ಓದುಗರಾದ ಬಿಳಿಯರು ಅವರ ಕವನಗಳನ್ನು ಮೆಚ್ಚಿಕೊಂಡರು. ಕವನಗಳನ್ನು ಬರೆದು ಪ್ರಕಟಿಸಿದ ಮೊಟ್ಟಮೊದಲ ಆಸ್ಟ್ರೇಲಿಯನ್‌ ಅಬೊರಿಜಿನಲ್‌ ಬರಹಗಾರ್ತಿ ಎಂಬ ಹೆಗ್ಗಳಿಕೆ ಅವರದ್ದು.

ಅವರ ಬರವಣಿಗೆಗಳು ದೂರದ ಇಂಗ್ಲೆಂಡ್‌, ಅಮೆರಿಕ ಮತ್ತು ಯೂರೋಪ್‌ ಗಳನ್ನು ತಲುಪಿತು. ಇಂಗ್ಲೆಂಡಿನಲ್ಲಿ ಆಕೆಯನ್ನು ಮೆಚ್ಚುವ ಓದುಗರು ಹೆಚ್ಚಾದರು. ಪ್ರಶಸ್ತಿಗಳು ಹುಡುಕಿಕೊಂಡು ಬಂದವು. 1970ರಲ್ಲಿ ಅವರಿಗೆ Member of the Order of the British Empire (MBE) ಅತ್ಯುನ್ನತ ಗೌರವ ಲಭಿಸಿತು. ಅದೇ ವರ್ಷ ತಮ್ಮ ಹುಟ್ಟಿದ ಊರಿಗೆ ((North Stradbroke) ಬಂದು, ಅಲ್ಲಿ ಭೂಮಿ ಖರೀದಿಸಿ, ಅಲ್ಲಿ ಮೂನ್ಗಾಲ್ಬ ಎಂಬ ಹೆಸರಿನ ಸಾಂಸ್ಕೃತಿಕ ಕೇಂದ್ರವನ್ನು ಆರಂಭಿಸಿದರು. ಸಾವಿರಾರು ಜನರು ಬಂದು ಆಕೆಯ ಬಾಯಿಂದ ಅವರ ಜನರ ಕಥೆಗಳನ್ನು, ಡ್ರೀಮ್‌ಟೈಮ್‌ ಕಥೆಗಳನ್ನು ಕೇಳಿದರು. ಅವರ ಜನರ ಸಂಸ್ಕೃತಿಯ ಆಳ ಅಗಲಗಳನ್ನು ತಿಳಿದರು. ಇನ್ನೂ ಹೆಚ್ಚು ಬರೆಯುತ್ತಲೇ, ಪ್ರಶಸ್ತಿಗಳು ಬರುತ್ತಿದ್ಧಾಗಲೇ ಅವರು ಫ‌ುಲ್‌ ಬ್ರೈಟ್‌ ಫೆಲೋಶಿಪ್‌ ಪಡೆದು ಅಮೆರಿಕ ಪ್ರವಾಸವನ್ನು ಕೈಗೊಂಡು (1978-79) ಆ ದೇಶದ ಉದ್ದಗಲಕ್ಕೂ ಸಂಚರಿಸುತ್ತಾ ತಮ್ಮ ಜನರ ಕಥೆಗಳನ್ನು, ವ್ಯಥೆಯನ್ನೂ, ಹೋರಾಟವನ್ನು, ಸ್ವಾಭಿಮಾನವನ್ನು ಹೇಳಿದರು.

Advertisement

ಮಧ್ಯದಲ್ಲಿ ತಮ್ಮ ಕುಲದ ಚಿತ್ರಕಲೆಯನ್ನು ಅಭ್ಯಸಿಸಿ, ಪ್ರಕಟಿಸಿದರು. ಅನೇಕ ಸಂಸ್ಥೆಗಳಿಗೆ ಜೀವಕೊಟ್ಟು, ಅವರ ದನಿಯನ್ನು ದೊಡ್ಡದಾಗಿಸಿದರು. ಶಾಲೆಗಳನ್ನು ಮುನ್ನಡೆಸಿದರು; ಯೂನಿವರ್ಸಿಟಿಗಳಲ್ಲಿ ಪಾಠ ಹೇಳಿದರು. ಹಲವಾರು ಗೌರವ ಡಾಕ್ಟರೆಟ್‌ಗಳನ್ನು ಪಡೆದರು.

ಎಲ್ಲರಿಗೂ ಆಶ್ಚರ್ಯವಾಗುವಂತೆ 1988ರಲ್ಲಿ ರಾಣಿ ಎರಡನೇ ಎಲಿಜಬೆತ್‌ ನೀಡಿದ್ದ ಗೌರವವನ್ನು ವಾಪಸ್‌ ಮಾಡಿದರು. ಆಗ ಅವರು ಹೇಳಿದ್ದು “ಎರಡು ಶತಮಾನಗಳ ಕಾಲದ ನಮ್ಮ ಜನರ ನೋವನ್ನು, ಸಾವನ್ನು, ಎಲ್ಲದರಿಂದ ವಂಚಿತರಾಗಿ ನಮ್ಮದೇ ನೆಲದಲ್ಲಿ ನಾವು ಪರದೇಶಿಗಳು, ಅನಾಥರೂ ಆದದ್ದನ್ನು ಈ ವರ್ಷ ನೆನಪಿಸುತ್ತದೆ. ಆಸ್ಟ್ರೇಲಿಯನ್‌ ಮತ್ತು ಬ್ರಿಟಿಷ್‌ ಸರಕಾರಗಳು ನಮ್ಮ ಅಬೊರಿಜನಲ್‌ ಜನರ ಎಲ್ಲ ಹಕ್ಕುಗಳನ್ನು ಅವರಿಗೆ ಕೊಟ್ಟು, ನಮ್ಮ ಪೂರ್ವಜರಿಂದ ಪಡೆದ ನೆಲವನ್ನು, ಅದರ ಹಕ್ಕನ್ನೂ ವಾಪಸ್‌ ಕೊಡಬೇಕು. ಅವರು ನಡೆಸಿದ ನರಮೇಧ, ಕೊಲೆಗಳು, ಸುಲಿಗೆ, ನಮ್ಮ ಭಾಷೆಗಳನ್ನು ಸಂಸ್ಕೃತಿಯನ್ನು ನಾಶಮಾಡಿದ್ದು ಎಲ್ಲವನ್ನೂ ಅವರು ಒಪ್ಪಿಕೊಳ್ಳಬೇಕು. ಹಿಂದೆ ನಾನು ಈ ಗೌರವವನ್ನು ಸ್ವೀಕರಿಸಿದಾಗ ಅದರಿಂದ ನಮ್ಮ ಜನರಿಗೆ ಮತ್ತಷ್ಟು ಧೈರ್ಯ, ಗುರುತಿಸುವಿಕೆ, ಪ್ರೋತ್ಸಾಹ ಸಿಗುತ್ತದೆ, ಅದರಿಂದ ಹಲವಾರು ಬಾಗಿಲುಗಳು ತೆರೆಯುತ್ತವೆ ಎಂದು ಭಾವಿಸಿದ್ದೆ. ಪರಿಸ್ಥಿತಿ ನಾನಂದುಕೊಂಡಂತೆ ಸುಧಾರಿಸಲಿಲ್ಲ, ಅವರು ಕ್ಷಮಾಪಣೆ ಕೇಳಿಲ್ಲ, ನಮ್ಮ ನೆಲವನ್ನು ಇನ್ನೂ ಕೊಟ್ಟಿಲ್ಲ. ಎಷ್ಟೋ ಸುಧಾರಣೆಗಳು ಇನ್ನೂ ಆಗಬೇಕಿವೆ’.

ಅದೇ ವರ್ಷ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡು ಊಡ್ಜರೂ ನೂನುಕ್ಕಲ್‌ ಆದರು. ತಮ್ಮ ಕುಲದ (ನೂನುಕ್ಕಲ್) ಹೆಸರನ್ನು ತಮ್ಮ ಕವನಗಳಂತೆಯೇ ಅಜರಾಮರಗೊಳಿಸಿದರು.‌

ಡಾ| ವಿನತೆ ಶರ್ಮಾ, ಬ್ರಿಸ್ಬೇನ್‌

Advertisement

Udayavani is now on Telegram. Click here to join our channel and stay updated with the latest news.

Next