Advertisement

Cyber Crime: ವಂಚಕರಿಂದ 150 ಕೋಟಿ ಲೂಟಿ: ಉತ್ತರ ಭಾರತದಲ್ಲೇ ಕುಳಿತು ಬೆಂಗಳೂರಿಗರಿಗೆ ವಂಚನೆ

10:55 AM Aug 11, 2023 | Team Udayavani |

ಬೆಂಗಳೂರು: ಸೈಬರ್‌ ಕಳ್ಳರ ಹಾಟ್‌ಸ್ಪಾಟ್‌ ಎಂದೇ ಬಿಂಬಿತವಾಗಿರುವ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ 7 ವರ್ಷದಲ್ಲಿ ದಾಖಲಾದ 50,027 ಸೈಬರ್‌ ಕ್ರೈಂ ಪ್ರಕರಣಗಳಲ್ಲಿ ಕೇವಲ 26 ಮಂದಿಗಷ್ಟೆ ಶಿಕ್ಷೆಯಾಗಿದೆ!

Advertisement

ಸಿಲಿಕಾನ್‌ ಸಿಟಿಯಲ್ಲಿ ಸಂಚಾರ ದಟ್ಟಣೆ, ವಾಯು ಮಾಲಿನ್ಯ ಸಮಸ್ಯೆಗಿಂತ ಸೈಬರ್‌ ಕ್ರೈಂ ನಿಯಂತ್ರಿಸುವುದೇ ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. 7 ವರ್ಷಗಳಲ್ಲಿ ದಾಖಲಾದ 38,132 ಕೇಸಲ್ಲಿ ಸೈಬರ್‌ ವಂಚಕರ ಸಣ್ಣ ಸುಳಿವೂ ಸಿಗದೇ ತನಿಖೆ ಹಳ್ಳ ಹಿಡಿದಿದೆ.

ಇತ್ತ ಲಕ್ಷಾಂತರ ರೂ. ಕಳೆದುಕೊಂಡವರು ಠಾಣೆಗೆ ಅಲೆದು ಸುಸ್ತಾಗಿದ್ದಾರೆ. ರಾಜ್ಯ ಸರ್ಕಾರವು ಸೈಬರ್‌ ಪೊಲೀಸ್‌ ವಿಭಾಗಕ್ಕೆ ಸಿಬ್ಬಂದಿ ಬಲ, ಆಧುನಿಕ ಉಪಕರಣ ಒದಗಿಸಿದರೂ ಸೈಬರ್‌ ಕಳ್ಳರು ದಿನಕ್ಕೊಂದು ಹೊಸ ವಂಚನೆ ಮಾರ್ಗ ಕಂಡುಕೊಂಡು ಅಮಾಯಕರಿಂದ ಕೋಟ್ಯಂತರ ರೂ. ವಂಚಿಸುವುದು ಮುಂದುವರಿಸಿದ್ದಾರೆ.

ಬೆಂಗಳೂರಿನಲ್ಲಿ 2017ರಲ್ಲಿ 2, 2018 ಹಾಗೂ 2019ರಲ್ಲಿ ತಲಾ 7, 2020ರಲ್ಲಿ 2, 2021ರಲ್ಲಿ 3, 2022ರಲ್ಲಿ 5 ಸೈಬರ್‌ ಕಳ್ಳರಿಗೆ ಶಿಕ್ಷೆಯಾಗಿದೆ. 2023ರಲ್ಲಿ ಇದುವರೆಗೂ ಒಬ್ಬ ವಂಚಕನಿಗೂ ಶಿಕ್ಷೆ ಯಾಗಿಲ್ಲ. 6 ತಿಂಗಳಲ್ಲಿ ದಾಖಲಾದ 6,226 ಕೇಸ್‌ಗಳ ಪೈಕಿ ಕೇವಲ 16 ಕೇಸ್‌ ಪತ್ತೆಹಚ್ಚಲಾಗಿದೆ.

150 ಕೋಟಿ ರೂ. ಸಂಪಾದನೆ: ಟೆಕಿಗಳು, ಬ್ಯಾಂಕ್‌ ಉದ್ಯೋಗಿಗಳು, ಬೃಹತ್‌ ಖಾಸಗಿ ಕಂಪನಿಗಳ ನೌಕರರು ಬೆಂಗಳೂರಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ನೆಲೆಸಿದ್ದಾರೆ. ಈ ಪೈಕಿ ಶೇ.70 ಮಂದಿ ಆನ್‌ಲೈನ್‌ನಲ್ಲೇ ವ್ಯವಹಾರ ನಡೆಸುತ್ತಾರೆ. ಹೀಗಾಗಿ ಸೈಬರ್‌ ಕಳ್ಳರು ಉತ್ತರ ಭಾರತದ ಮೂಲೆಯಲ್ಲಿ ಕುಳಿತುಕೊಂಡು ಬೆಂಗಳೂರಿಗರನ್ನೇ ಟಾರ್ಗೆಟ್‌ ಮಾಡಿ ವಾರ್ಷಿಕವಾಗಿ 150 ಕೋಟಿ ರೂ.ಗೂ ಅಧಿಕ ದುಡ್ಡು ಲಪಟಾಯಿಸುತ್ತಿದ್ದಾರೆ.

Advertisement

ಸೈಬರ್‌ ಕ್ರೈಂ ನಿಯಂತ್ರಣಕ್ಕೆ ನೂತನ ಕ್ರಮಗಳು: ಸಿಇಎನ್‌ ಠಾಣೆಗಳಲ್ಲಿ ಸೈಬರ್‌ ಫಾರೆನ್ಸಿಕ್‌ ಉಪಕರಣ ಉಪಯೋಗಿಸಿ, ಎಲೆಕ್ಟ್ರಾನಿಕ್‌ ವಿದ್ಯುನ್ಮಾನ ಉಪಕರಣಗಳ ಮಿರರ್‌ ಇಮೇಜ್‌ ಪಡೆದು ಸಾಕ್ಷ್ಯ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ತರಬೇತಿ ಹೊಂದಿರುವ ಸಿಬ್ಬಂದಿ ನಿಯೋಜಿಸಿ ಇವರಿಗೆ ಕಾನೂನು, ಸೈಬರ್‌ ಅಪರಾಧ, ತನಿಖಾ ಕ್ರಮ, ಸಂಹವನ ಕೌಶಲ್ಯಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ. ವಂಚನೆಗೊಳಗಾದ 1 ಗಂಟೆಯೊಳಗೆ 1930 ಅಥವಾ 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದರೆ ಕೂಡಲೇ ಸಿಐಆರ್‌ ಪ್ರಕರಣ ದಾಖಲಿಸಿ ಆರೋಪಿತರ ಬ್ಯಾಂಕ್‌ ಖಾತೆ ಫ್ರೀಜ್‌ ಮಾಡುವ ವ್ಯವಸ್ಥೆ ಇದೆ. 2023ರಲ್ಲಿ ಜುಲೈವರೆಗೆ ಸಹಾಯವಾಣಿಗೆ ಕರೆ ಮಾಡಿದ 4,090 ಕೇಸ್‌ನಲ್ಲಿ 17 ಕೋಟಿ ರೂ. ಜಪ್ತಿ ಮಾಡಲಾಗಿದೆ.

ವಹಿಸಬೇಕಾದ ಮುನ್ನೆಚ್ಚರಿಕೆ
– ಅಪರಿಚಿತರಿಗೆ ಓಟಿಪಿ ಪಾಸ್‌ವರ್ಡ್‌ ನೀಡಬೇಡಿ.
– ನೌಕರಿಗಾಗಿ ಅಪರಿಚಿತರಿಗೆ ದುಡ್ಡು ವರ್ಗಾಯಿಸಬೇಡಿ.
– ಸೇವಾ ಸೋಗಲ್ಲಿ ಬಾಡಿಗೆಗೆ ಮನೆ ಕೇಳಿದರೆ ಮುಂಗಡ ದುಡ್ಡು ಹಾಕಬೇಡಿ.
– ಸಾಮಾಜಿಕ ಜಾಲತಾಣಗಳಲ್ಲಿರುವ ಆಕರ್ಷಕ ಜಾಹೀರಾತಿಗೆ ಮರುಳಾಗಬೇಡಿ.
– ಲಿಂಕ್‌, ನಕಲಿ ವೆಬ್‌ಸೈಟ್‌ ಬಗ್ಗೆ ಎಚ್ಚರಿಕೆ ವಹಿಸಿ.

ಸೈಬರ್‌ ಕಳ್ಳರ ಪತ್ತೆ ಹಚ್ಚುವಲ್ಲಿ ವಿಫ‌ಲ ಏಕೆ ?
ಪಶ್ಚಿಮ ಬಂಗಾಳದಂತಹ ವಿವಿಧ ರಾಜ್ಯಗಳಿಂದ ಸಿಮ್‌ ಖರೀದಿಸಿ ಮತ್ತೂಂದು ರಾಜ್ಯದಲ್ಲಿ ಕುಳಿತು ಕೃತ್ಯ ಎಸಗುತ್ತಾರೆ. ಇತ್ತ ಪೊಲೀಸರು ಎಸ್‌ಡಿಆರ್‌ ತಂತ್ರಜ್ಞಾನದ ಮೂಲಕ ಪತ್ತೆ ಹಚ್ಚಿದಾಗ ಸಿಮ್‌ ಖರೀದಿಸಿದ ಲೊಕೇಶನ್‌ ತೋರಿಸುತ್ತದೆ. ಇನ್ನು ಡಾಟಾ ಅನಲೀಸಿಸ್‌ ಮೂಲಕ ಬೆಂಗಳೂರಿಗರ ಮೊಬೈಲ್‌ ನಂಬರ್‌ ಪತ್ತೆ ಹಚ್ಚಲು, ಟ್ರ್ಯಾಪ್‌ ಮಾಡಲು, ಬ್ಯಾಂಕ್‌ ವಹಿವಾಟು ನಡೆಸಲು ಆರೋಪಿಗಳಲ್ಲೇ ಪ್ರತ್ಯೇಕ ತಂಡವಿದೆ. ಬೆಂಗಳೂರು ಪೊಲೀಸರು ಜಿಯೋ ಲೊಕೇಶನ್‌ ಮೂಲಕ ಉತ್ತರ ಭಾರತದ ರಾಜ್ಯಗಳಿಗೆ ಹೋದರೂ ಅಲ್ಲಿನ ಪೊಲೀಸರು ಸ್ಪಂದಿಸುವುದಿಲ್ಲ. ಪರಿಣಿತ ಎಂಜಿನಿಯರಿಂಗ್‌, ಎಂ.ಟೆಕ್‌ ಪದವೀಧರರೇ ಈ ಸೈಬರ್‌ ಗ್ಯಾಂಗ್‌ನ ಸೂತ್ರದಾರರಾಗಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರವು ಹಲವು ಕಠಿಣ ಕ್ರಮ ಜಾರಿಗೆ ತಂದರೂ ಸೈಬರ್‌ ವಂಚಕರನ್ನು ಹೆಡೆಮುರಿ ಕಟ್ಟಲು ವಿಫ‌ಲವಾಗಿದೆ.

ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಪೊಲೀಸ್‌ ಠಾಣೆಗಳಲ್ಲೂ ಸೈಬರ್‌ ಕ್ರೈಂ ಅಪರಾಧಗಳ ಕುರಿತು ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ. ಸೈಬರ್‌ ಕ್ರೈಂ ಹತ್ತಿಕ್ಕಲು ಪೊಲೀಸರು ಪ್ರಯತ್ನಿಸುತ್ತಿದ್ದು, ಸಾರ್ವಜನಿಕರು ಈ ವಂಚನೆ ಬಗ್ಗೆ ಎಚ್ಚರ ವಹಿಸಬೇಕು.
– ಬಿ.ದಯಾನಂದ್‌, ಬೆಂಗಳೂರು ಪೊಲೀಸ್‌ ಆಯುಕ್ತ.

– ಅವಿನಾಶ ಮೂಡಂಬಿಕಾನ

ಇದನ್ನೂ ಓದಿ: Crime: ಮನೆಯಲ್ಲಿ ನೇಣುಬಿಗಿದುಕೊಂಡು ಮಾಜಿ ಕಾರ್ಪೊರೇಟರ್‌ ಪುತ್ರ ಗೌತಮ್‌ ಆತ್ಮಹತ್ಯೆ

Advertisement

Udayavani is now on Telegram. Click here to join our channel and stay updated with the latest news.

Next