Advertisement

ಕಣಿವೆ ನಾಡಿನ ಕಥೆ ಬದಲಿಸಿದ ದಿನ; 370 ರದ್ದತಿಗೆ 1ವರ್ಷ

09:33 AM Aug 05, 2020 | mahesh |

ಸರಿಯಾಗಿ ಒಂದು ವರ್ಷದ ಹಿಂದೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಐತಿಹಾಸಿಕ ಕ್ರಮಕ್ಕೆ ಮುಂದಾಯಿತು. ಇದಷ್ಟೇ ಅಲ್ಲದೇ, ಕಣಿವೆ ನಾಡನ್ನು ಕೇಂದ್ರಾಡಳಿತ ಪ್ರದೇಶಗಳಾಗಿಸುವ ಮೂಲಕ ದೇಶಕ್ಕೆ ಅಚ್ಚರಿಯ ಕೊಡುಗೆ ನೀಡಿತು ಕೇಂದ್ರ ಸರಕಾರ. ಈ ದಿಟ್ಟ ಹೆಜ್ಜೆಯು ಜಮ್ಮು-ಕಾಶ್ಮೀರ ಹಾಗೂ ಲಡಾಖ್‌ನ ಸರ್ವತೋಮುಖ ಅಭಿವೃದ್ಧಿಗೆ, ಅಪಾರ ಬದಲಾವಣೆಗೆ ಮುನ್ನುಡಿ ಬರೆದಿದೆ ಎಂದು ಪರಿಣತರು ಹೇಳುತ್ತಾರೆ.

Advertisement

ಹೀಗಿತ್ತು ತಯಾರಿ
ಆರ್ಟಿಕಲ್‌ 370 ರದ್ದುಗೊಳಿಸುವ ನಿರ್ಧಾರ ಹೊರಬೀಳುವ ಸುಮಾರು ಹತ್ತು ದಿನಗಳ ಹಿಂದಿನಿಂದ ಜಮ್ಮು ಮತ್ತು ಕಾಶ್ಮೀರ ಅಕ್ಷರಶಃ ಗೊಂದಲದ ಗೂಡಾಗಿತ್ತು. ನರೇಂದ್ರ ಮೋದಿ ನೇತೃತ್ವದ ಸರಕಾರ ಹಠಾತ್ತನೇ ಕಾಶ್ಮೀರ ಕಣಿವೆಗೆ ಸಾಗರೋಪಾದಿಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹೆಚ್ಚುವರಿ ಸೈನಿಕರನ್ನು ಕಳುಹಿಸಿದಾಗ ಇದಕ್ಕೆ ಏನು ಕಾರಣ ಎನ್ನುವ ಬಗ್ಗೆ ದೇಶಾದ್ಯಂತ ಹಾಗೂ ಮುಖ್ಯವಾಗಿ ಕಾಶ್ಮೀರದಲ್ಲಿ ಜೋರು ಚರ್ಚೆ ಆರಂಭವಾಗಿಬಿಟ್ಟಿತು. ಕಾಶ್ಮೀರಿ ರಾಜಕಾರಣಿಗಳಂತೂ ಕಂಗೆಟ್ಟುಬಿಟ್ಟರು. ಒಟ್ಟಲ್ಲಿ ಕೇಂದ್ರ ಸರಕಾರ ಎರಡು ಬ್ಯಾಚ್‌ಗಳಲ್ಲಿ 38,000 ಹೆಚ್ಚುವರಿ ಸೈನಿಕರನ್ನು ಕಳುಹಿಸಿದ್ದೇಕೆ ಎನ್ನುವ ಪ್ರಶ್ನೆಗೆ ತರಹೇವಾರಿ ಉತ್ತರಗಳು, ಊಹಾಪೋಹಗಳು ಎದುರಾಗಲಾರಂಭಿಸಿದ್ದವು. ಇದರ ಮಧ್ಯೆಯೇ ಉಗ್ರದಾಳಿಯ ಸಂಭಾವ್ಯತೆಯ ಹಿನ್ನೆಲೆಯ ಕಾರಣಕ್ಕಾಗಿ ಅಮರನಾಥ ಯಾತ್ರೆಯನ್ನೂ ನಿಲ್ಲಿಸುತ್ತಿದ್ದೇವೆಂದು ಘೋಷಿಸಿದ ಕೇಂದ್ರ ಸರಕಾರ, ಯಾತ್ರಾರ್ಥಿಗಳಿಗೆ ಮತ್ತು ಪ್ರವಾಸಿಗರಿಗೆ ಜಮ್ಮು-ಕಾಶ್ಮೀರದಿಂದ ತೆರಳಲು ಆದೇಶಿಸಿತ್ತು. ಆದರೆ, ಇದನ್ನು ರಕ್ಷಣಾ ಪರಿಣತರು ಆರ್ಟಿಕಲ್‌ 370 ರದ್ದತಿಗಾಗಿ ತೆಗೆದುಕೊಳ್ಳಲಾದ ಮುನ್ನೆಚ್ಚರಿಕೆ ಕ್ರಮ ಎಂದೇ ಹೇಳುತ್ತಾರೆ. ಅಂದರೆ ಆರ್ಟಿಕಲ್‌ 35ಎ ಮತ್ತು ಆರ್ಟಿಕಲ್‌ 370 ಅನ್ನು ಹಿಂಪಡೆಯಲು ಸಿದ್ಧತೆ ನಡೆಸುತ್ತಿದ್ದ ಕೇಂದ್ರ, ಇದರಿಂದಾಗಿ ಕಾಶ್ಮೀರದಲ್ಲಿ ಹಿಂಸಾಚಾರ ಉಂಟಾದರೆ ಅದನ್ನು ತಡೆಯುವುದಕ್ಕಾಗಿ ಸೇನೆಯನ್ನು ಕಳುಹಿಸಿತ್ತು ಎನ್ನಲಾಗುತ್ತದೆ. ನೆನಪಿಸಿಕೊಳ್ಳಬೇಕಾದ ಸಂಗತಿಯೆಂದರೆ, ಈ ಐತಿಹಾಸಿಕ ನಿರ್ಧಾರ ಜಾರಿಯಾಗುವುದಕ್ಕೂ ಕೆಲವು ದಿನಗಳ ಹಿಂದೆ ಗೃಹ ಸಚಿವ ಅಮಿತ್‌ ಶಾ ಅವರು ಲೋಕಸಭೆಯಲ್ಲಿ ಮಾತನಾಡುತ್ತಾ “ಆರ್ಟಿಕಲ್‌ 370 ತಾತ್ಕಾಲಿಕ’ ಎಂದು ಹೇಳಿದ್ದರು!


ಆರ್ಟಿಕಲ್‌ 35 ಎ ಮತ್ತು 370 ಬೆನ್ನ ಹಿಂದೆ…
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ನಿಯಮವನ್ನು ಒದಗಿಸುತ್ತಿದ್ದ ಸಂವಿಧಾನದ ಪರಿಚ್ಛೇದ 35ಎ, ಮುಖ್ಯವಾಗಿ ಹೊರ ರಾಜ್ಯದವರು ಜಮ್ಮು ಕಾಶ್ಮೀರದಲ್ಲಿ ಖಾಯಂ ಆಗಿ ನೆಲೆಸುವುದನ್ನು  ತಡೆಯುತ್ತಿತ್ತು ಅಲ್ಲದೇ ಹೊರ ರಾಜ್ಯದವರಿಗೆ ಕಾಶ್ಮೀರದಲ್ಲಿ ಸ್ಥಿರಾಸ್ತಿ ಖರೀದಿ,  ಸರಕಾರಿ ಉದ್ಯೋಗ, ಸ್ಕಾಲರ್‌ಶಿಪ್‌ ಮತ್ತು ಇತರೆ ನೆರವುಗಳು ಸಿಗದಂತೆ  ನೋಡಿಕೊಳ್ಳುತ್ತಿತ್ತು. ಇನ್ನು ಆರ್ಟಿಕಲ್‌ 370 ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿತ್ತು. ಭಾರತೀಯ ಸಂವಿಧಾನದ ಎಲ್ಲ ವಿಚಾರಗಳು ಇತರ ರಾಜ್ಯಗಳಿಗೆ ಅನ್ವಯವಾದರೂ, ಜಮ್ಮು ಮತ್ತು ಕಾಶ್ಮೀರದ ಮಟ್ಟಿಗೆ ಆಗುತ್ತಿರಲಿಲ್ಲ. ಆ ರಾಜ್ಯವು ಭಾರತದ ಅವಿಭಾಜ್ಯ ಅಂಗವಾಗಿದ್ದರೂ, ಹಣಕಾಸು, ರಕ್ಷಣೆ, ವಿದೇಶಾಂಗ, ಸಂವಹನ ಹೊರತುಪಡಿಸಿ, ಉಳಿದೆಲ್ಲ ತೀರ್ಮಾನಗಳನ್ನೂ ಕಾಶ್ಮೀರ ಸರಕಾರ ಸ್ವತಂತ್ರವಾಗಿಗೊಳ್ಳುತ್ತಾ ಬರುತ್ತಿತ್ತು. ಇದರಿಂದಾಗಿ ಕಾಶ್ಮೀರಿ ನಾಯಕರು ಆಡಿದ್ದೇ ಆಟ ಎನ್ನುವಂತಾಗಿತ್ತು.

ಕಾಶ್ಮೀರಿ ನಾಯಕರ ಗೃಹ ಬಂಧನ
ಆರ್ಟಿಕಲ್‌ 370 ಹಾಗೂ 37ಎ ತೆರವು ಮಾಡುವಾಗ ಕೇಂದ್ರವು, ಮುನ್ನೆಚ್ಚರಿಕೆಯ ದೃಷ್ಟಿಯಿಂದ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ, ನ್ಯಾಶನಲ್‌ ಕಾನ್ಫರೆನ್ಸ್‌ನ ಫಾರೂಕ್‌ ಹಾಗೂ ಓಮರ್‌ ಅಬ್ದುಲ್ಲಾ ಸೇರಿದಂತೆ ಅನೇಕ ರಾಜಕಾರಣಿಗಳನ್ನು ಗೃಹ ಬಂಧನದಲ್ಲಿ ಇರಿಸಿತು. ಕೆಲವು ಪ್ರತ್ಯೇಕತಾವಾದಿ ನಾಯಕರಿಗೆ ಕೊಡಲಾಗಿದ್ದ ಭದ್ರತೆಯನ್ನು ಹಿಂಪಡೆದು, ಅವರ ಚಲನವಲನಗಳನ್ನೂ ಸಂಪೂರ್ಣ ಹತ್ತಿಕ್ಕಿತು. ಈಗ ಕೆಲ ತಿಂಗಳಿಂದ ಒಬ್ಬೊಬ್ಬರಾಗಿ ಕಾಶ್ಮೀರಿ ರಾಜಕಾರಣಿಗಳು ಗೃಹ ಬಂಧನದಿಂದ ಹೊರಬರಲಾರಂಭಿಸಿದ್ದಾರೆ.


ಏಕಾಂಗಿಯಾದ ಪಾಕಿಸ್ಥಾನ

ದಶಕಗಳಿಂದ ಜಮ್ಮು-ಕಾಶ್ಮೀರದಲ್ಲಿ ಅಶಾಂತಿಗೆ ಕಾರಣವಾಗುತ್ತಾ ಬಂದ ಪಾಕಿಸ್ಥಾನಕ್ಕೆ ಭಾರತದ ಈ ದಿಟ್ಟ ನಡೆ ಕಂಗೆಡುವಂತೆ ಮಾಡಿದ್ದು ಸುಳ್ಳಲ್ಲ. ಈಗಲೂ ಈ ಸತ್ಯವನ್ನು ಅರಗಿಸಿಕೊಳ್ಳಲು ಪಾಕಿಸ್ಥಾನಕ್ಕೆ ಸಾಧ್ಯವಾಗುತ್ತಿಲ್ಲ. ವಿಶೇಷ ಸ್ಥಾನಮಾನ ರದ್ದಾಗುತ್ತಿದ್ದಂತೆಯೇ, ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ವಿವಾದದ ಕೇಂದ್ರವಾಗಿಸಬೇಕೆಂದು, ಪಾಕ್‌ ಪ್ರಧಾನಿ ಇಮ್ರಾನ್‌ ಬಹಳ ಪ್ರಯತ್ನಿಸಿದರು. ಆದರೆ ಅವರ ಪ್ರಯತ್ನಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಸಿಗಲಿಲ್ಲ. ಚೀನ ಕೂಡ ಈ ವಿಚಾರದಲ್ಲಿ ಹೆಚ್ಚು ಗದ್ದಲ ಮಾಡಲಿಲ್ಲ. ಇನ್ನೊಂದೆಡೆ ಭಾರತದ ಈ ನಿರ್ಧಾರಕ್ಕೆ ಜಗತ್ತಿನ ಪ್ರಮುಖ ರಾಷ್ಟ್ರಗಳೆಲ್ಲ ಮಾನ್ಯತೆ ನೀಡಿದವು. ಯುಎಇ, ಅಮೆರಿಕ, ಬ್ರಿಟನ್‌, ಜಪಾನ್‌, ರಷ್ಯಾ ಸೇರಿದಂತೆ ಅನೇಕ ರಾಷ್ಟ್ರಗಳು “ಇದು ಭಾರತದ ಆಂತರಿಕ ವಿಷಯ’ ಎಂದು ಸ್ಪಷ್ಟವಾಗಿ ಹೇಳಿದವು. ತನ್ನ ಪ್ರಯತ್ನಗಳೆಲ್ಲ ವಿಫ‌ಲವಾದ ನಂತರದಿಂದ ಪಾಕಿಸ್ತಾನ ಗಡಿ ಭಾಗದಲ್ಲಿ ತೊಂದರೆ ಉಂಟುಮಾಡುವ ಪ್ರಯತ್ನವನ್ನು ಹೆಚ್ಚಿಸಿಬಿಟ್ಟಿದೆಯಾದರೂ, ಕಾಶ್ಮೀರದ ಪ್ರತ್ಯೇಕತಾವಾದಿಗಳು ಹಾಗೂ ಸ್ಥಳೀಯ ಉಗ್ರರ ಜಾಲವೀಗ ಛಿದ್ರವಾಗುತ್ತಿರುವುದರಿಂದ, ಅದರ ಸಂಚುಗಳೆಲ್ಲ ವಿಫ‌ಲವಾಗುತ್ತಿವೆ. ಭಾರತವು ಪಾಕ್‌ ಆಕ್ರಮಿತ ಕಾಶ್ಮೀರವನ್ನೂ ಮರುವಶಕ್ಕೆ ತೆಗೆದುಕೊಳ್ಳುವುದಾಗಿ ಹೇಳಿರುವುದೂ ಸಹ ಪಾಕಿಸ್ಥಾನವನ್ನು ಕೆರಳಿಸಿತ್ತು!

Advertisement


ಕಾಶ್ಮೀರಿ ನಾಯಕರಿಂದ ಬೇಸತ್ತಿದ್ದ ಜಮ್ಮು-ಲಡಾಖ್‌

ಕೇಂದ್ರಾಡಳಿತವಾಗುವುದಕ್ಕೂ ಮುನ್ನ ಜಮ್ಮು ಕಾಶ್ಮೀರ ರಾಜ್ಯವು ಮುಸ್ಲಿಂ ಬಾಹುಳ್ಯದ “ಕಾಶ್ಮೀರ’, ಹಿಂದೂ ಬಾಹುಳ್ಯದ “ಜಮ್ಮು’ ಹಾಗೂ ಬೌದ್ಧ ಬಾಹುಳ್ಯದ “ಲಡಾಖ್‌’ನಿಂದ ಕೂಡಿತ್ತು. ಭಾರತ ವಿರೋಧಿ ಶಕ್ತಿಗಳು ಅಧಿಕವಾಗಿ ಇದ್ದದ್ದು ಕಾಶ್ಮೀರದಲ್ಲೇ ಹೊರತು ಜಮ್ಮು ಹಾಗೂ ಲಡಾಖ್‌ನಲ್ಲಿ ಅಲ್ಲ. ಸತ್ಯವೇನೆಂದರೆ, ಜಮ್ಮು ಹಾಗೂ ಲಡಾಖ್‌ ಜನರು ಮೊದಲಿನಿಂದಲೂ ಭಾರತದ ಪರವೇ ಧ್ವನಿಯೆತ್ತುತ್ತಾ ಬಂದಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ, ಕಾಶ್ಮೀರಿ ನಾಯಕರ ಮೇಲೆ (ಮೆಹಬೂಬಾ, ಅಬ್ದುಲ್ಲಾ…) ಅವರಿಗೆ ಅಸಮಾಧಾನ ವಿತ್ತು. ಏಕೆಂದರೆ, ಈ ರಾಜಕಾರಣಿಗಳೆಲ್ಲ ಜಮ್ಮು ಮತ್ತು ಲಡಾಖ್‌ನ ಮೇಲೆ ಆರಂಭದಿಂದಲೂ ಮಲತಾಯಿ ಧೋರಣೆ ತೋರಿಸುತ್ತಾ ಬರುತ್ತಿದ್ದರು. ಈ ಕಾರಣಕ್ಕಾಗಿಯೇ, ಲಡಾಖ್‌ ಅನ್ನು ಕೇಂದ್ರಾಡಳಿತ ಪ್ರದೇಶವಾಗಿಸಿ ಎಂದು ಆ ಲಡಾಖೀಗರು ಆರಂಭದಿಂದಲೇ ಹೇಳುತ್ತಿದ್ದರು. ಜಮ್ಮು ನಿವಾಸಿಗಳು ಕೇಂದ್ರದ ನಿರ್ಧಾರವನ್ನು ಸಂತಸದಿಂದ ಸ್ವಾಗತಿಸಿದರು. ಈಗ ಲಡಾಖ್‌ ಹಾಗೂ ಜಮ್ಮು ನಿಟ್ಟುಸಿರು ಬಿಟ್ಟಿವೆ, ಕಾಶ್ಮೀರಿ ಕೇಂದ್ರಿತ ರಾಜಕಾರಣದಿಂದಾಗಿ ಅಭಿವೃದ್ಧಿ ವಂಚಿತವಾಗಿದ್ದ ಈ ಪ್ರದೇಶಗಳಲ್ಲೀಗ ಅಭಿವೃದ್ಧಿಯ ಹೊಸ ಅಲೆ ಆರಂಭವಾಗಿದೆ.


ವಿರೋಧಿಸಿದ್ದ ರಾಹುಲ್‌, ಕಮ್ಯುನಿಸ್ಟ್‌ ಪಕ್ಷಗಳು

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆದು, ಕೇಂದ್ರಾಡಳಿತ ಪ್ರದೇಶಗಳಾಗಿ ರೂಪಾಂತರಿಸಿದ ವಿಷಯವನ್ನು ಒಂದೆಡೆ ಇಡೀ ದೇಶವೇ ಸ್ವಾಗತಿಸಿತಾದರೂ, ಭಾರತದಲ್ಲೇ ಕೆಲ ರಾಜಕೀಯ ನಾಯಕರಿಂದ ಇದಕ್ಕೆ ವಿರೋಧ ವ್ಯಕ್ತವಾಯಿತು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅಂದು ಕೇಂದ್ರದ ಮೇಲೆ ಹರಿಹಾಯುತ್ತಾ, “”ಜನರು ನೀಡಿರುವ ಅಧಿಕಾರವನ್ನು ದುರುಪಯೋಗ ಮಾಡಿದ್ದೀರಿ. ಈ ಏಕಪಕ್ಷೀಯ ನಿರ್ಧಾರ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಇದರಿಂದ, ಏಕತೆ ವೃದ್ಧಿಯಾಗದು. ಈ ದೇಶವು ಜನರಿಂದ ರೂಪುಗೊಂಡಿದ್ದೇ ಹೊರತು, ಭೂಮಿಯ ತುಂಡುಗಳಿಂದಲ್ಲ” ಎಂದು ಹರಿಹಾಯ್ದರು. ಆದರೆ, ಈ ವಿಷಯದಲ್ಲೇ ಕಾಂಗ್ರೆಸ್‌ನಲ್ಲೇ ಒಮ್ಮತ ಮೂಡಲಿಲ್ಲ. ಒಂದೆಡೆ ಗುಲಾಂ ನಬಿ ಆಜಾದ್‌ರಂಥವರು ಇದನ್ನು ಸಂವಿಧಾನದ ಕಗ್ಗೊಲೆ ಎಂದು ಕರೆದರಾದರೂ, ಇನ್ನೊಂದೆಡೆ ದೀಪೇಂದರ್‌ ಹೂಡಾರಂಥವರು, ಕೇಂದ್ರ ಸರಕಾರವನ್ನು ಬೆಂಬಲಿಸಿ ಹೇಳಿಕೆ ನೀಡಿದ್ದರು. ಕೊನೆಗೆ, ಸಾರ್ವಜನಿಕ ಅಭಿಪ್ರಾಯಕ್ಕೆ ವಿರುದ್ಧವಾಗಿ ಹೋದರೆ ತೊಂದರೆಯಾದೀತೆಂಬ ಕಾರಣಕೆ, ಕಾಂಗ್ರೆಸ್‌ ನಾಯಕರೆಲ್ಲ ಈ ವಿಷಯದಲ್ಲಿ ಹೆಚ್ಚು ಮಾತನಾಡಲಿಲ್ಲ. ಇನ್ನೊಂದೆಡೆ, ಕಮ್ಯುನಿಸ್ಟ್‌ ಪಕ್ಷದ ನಾಯಕರೂ ಕಾಶ್ಮೀರವನ್ನು ಕೇಂದ್ರಾಡಳಿತ ಮಾಡಿದ್ದನ್ನು ವಿರೋಧಿಸಿದ್ದರು. ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜ, “”ಸರಕಾರ ಕಾಶ್ಮೀರಕ್ಕೆ ಮಾಡಿದ್ದು ಪ್ರತಿಗಾಮಿ ಕ್ರಮ. ಇದು ಜಮ್ಮು ಕಾಶ್ಮೀರದ ಜನತೆಯನ್ನು ಭಾರತದಿಂದ ಇನ್ನಷ್ಟು ದೂರ ಮಾಡುತ್ತದೆ. ಕೇಂದ್ರಾಡಳಿತ ಹೇರುವ ಮೂಲಕ ಜಮ್ಮು ಕಾಶ್ಮೀರಕ್ಕಿದ್ದ ಸ್ವಾಯತ್ತ ಸ್ಥಾನಮಾನ ಹೊಸಕಿ ಹಾಕಲಾಗಿದೆ” ಎಂದು ಆರೋಪಿಸಿದ್ದರು.

ತಗ್ಗಿದ ಉಗ್ರ ಕೃತ್ಯಗಳು, ಕಲ್ಲು ತೂರಾಟ
ಕಣಿವೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ರದ್ದುಗೊಳಿಸಿದ ನಂತರ ಭದ್ರತಾ ಪಡೆಗಳಿಗೆ, ಕಾಶ್ಮೀರದ ಪೊಲೀಸ್‌ ವ್ಯವಸ್ಥೆಗೆ ಭಾರೀ ಬಲ ದೊರೆತ ಕಾರಣ, ಕೇವಲ ಈ ಒಂದು ವರ್ಷದಲ್ಲಿ ಉಗ್ರವಾದಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಶೇ. 36ರಷ್ಟು ಇಳಿಕೆ ಕಂಡು ಬಂದಿದೆ ಎಂದು ಕೇಂದ್ರ ಗೃಹ ಸಚಿವಾಲಯದ ವರದಿ ಹೇಳುತ್ತಿದೆ. ಆದರೆ, ಗಮನಿಸಬೇಕಾದ ಅಂಶವೆಂದರೆ, ಕಳೆದೊಂದು ವರ್ಷದಿಂದ ಪಾಕಿಸ್ಥಾನದ ಐಎಸ್‌ಐ, ಸೇನೆ ಹಾಗೂ ಸರಕಾರ ತೀವ್ರ ಹತಾಶೆ ಯಿಂದಾಗಿ ಭಾರತದ ವಿರುದ್ಧ ನಿರಂತರ ಸಂಚು ರೂಪಿಸುತ್ತಲೇ ಇದೆ. ಹೀಗಾಗಿ, ಮುಂದಿನ ದಿನಗಳಲ್ಲೂ ಉಗ್ರ ಸವಾಲುಗಳು ಎದು ರಾಗಬಹುದು. ಆದರೆ, ಎಲ್ಲಾ ಸವಾಲುಗಳನ್ನೂ ಭಾರತೀಯ ಸೇನೆ ಸಕ್ಷಮವಾಗಿ ಮೆಟ್ಟಿನಿಲ್ಲುತ್ತಿರುವುದು ವಿಶೇಷ. “”ಇದಕ್ಕೆ ಮುಖ್ಯ ಕಾರಣ, ಪ್ರತ್ಯೇಕತಾವಾದಿಗಳ ಕುತಂತ್ರಗಳನ್ನು ಹತ್ತಿಕ್ಕುವಲ್ಲಿ ಭಾರತ ಸಫ‌ಲ ವಾಗಿರುವುದು ಹಾಗೂ ಉಗ್ರರ ಜಾಲಗಳನ್ನು ಬೇರು ಮಟ್ಟದಲ್ಲೇ ತುಂಡರಿಸುತ್ತಿರುವುದು. ಇದರ ಪರಿಣಾಮವಾಗಿ ಕಲ್ಲು ತೂರಾಟಘಟನೆಗಳೂ ನಿಂತಿವೆ. ಇದು ಆರಂಭವಷ್ಟೇ, ಇನ್ನೈದು ವರ್ಷಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಪಾಕ್‌ ಪ್ರೇರಿತ ಉಗ್ರವಾದವು ಸಂಪೂರ್ಣ ಇಲ್ಲವಾಗಲಿದೆ” ಎನ್ನುತ್ತಾರೆ ಖ್ಯಾತ ರಕ್ಷಣಾ ಪರಿಣತ ಡಾ. ಆನಂದ್‌ ಸರ್ವಾಲ್ಕರ್‌.

ಭರತ ಭೂಮಿಯ ಪ್ರಮುಖ ಅಂಗ
ಕಾಶ್ಮೀರದ ಇತಿಹಾಸವನ್ನು ಮುಸ್ಲಿಂ ಆಕ್ರಮಣಕಾರರ ಇತಿಹಾಸಕ್ಕೆ ಸೀಮಿತಗೊಳಿಸಲಾಗುತ್ತಿದೆ ಎಂಬ ಆರೋಪ ಮೊದಲಿಂದಲೂ ಇದೆ. ಆದರೆ, ಕಾಶ್ಮೀರವೆನ್ನುವುದು ಹಿಂದೂ ಧರ್ಮ, ಇತಿಹಾಸದ ಪ್ರಮುಖ ಭಾಗ ಎನ್ನುವುದನ್ನು, ಇತಿಹಾಸ ಪುರಾಣದ ಪುಟಗಳು ಸ್ಪಷ್ಟವಾಗಿ ಸಾರುತ್ತವೆ. ಕಾಶ್ಮೀರವನ್ನು ಸರಸ್ವತಿಯ ಆವಾಸಸ್ಥಾನವೆಂದೇ ಇತಿಹಾಸದುದ್ದಕ್ಕೂ ಕರೆಯುತ್ತಾ ಬರಲಾಗಿತ್ತು.ಕಶ್ಯಪ ಋಷಿಗಳಿಂದಲೇ ಆ ಭಾಗಕ್ಕೆ ಕಾಶ್ಮೀರವೆಂಬ ಹೆಸರು ಬಂದಿತು. ವೇದಗಳಲ್ಲಿ ವರ್ಣಿಸಿರುವ ವಿತಸ್ತಾ ನದಿಯು ಕಶ್ಯಪ ಋಷಿಗಳಿಂದ ಸೃಷ್ಟಿಯಾಯಿತು ಎನ್ನುವ ಐತಿಹ್ಯವಿದೆ. ವಿತಸ್ತಾ ನದಿಯ ಈಗಿನ ಹೆಸರು ಝೀಲಂ. ಕಾಶ್ಮೀರದಲ್ಲಿ ಭಾರತದ ಐತಿಹ್ಯ, ಇತಿಹಾಸಕ್ಕೆ ಸಂಬಂಧಿಸಿದಂತಹ ದೇವಾಲಯಗಳಿವೆ. ಇವುಗಳಲ್ಲಿ ಶಾರದಾಪೀಠವೂ ಒಂದು. ಶಾರದಾದೇವಿಯನ್ನು “ಕಾಶ್ಮೀರ ಪುರವಾಸಿನಿ’ ಎಂದೇ ಸ್ತುತಿಸಲಾಗುತ್ತದೆ. ಭಾರತದಾದ್ಯಂತ ವಿವಿಧ ಪಂಥಗಳ ವಿದ್ವಾಂಸರನ್ನು ವಾದದಲ್ಲಿ ಮಣಿಸಿದ ಶ್ರೀ ಶಂಕರಾಚಾರ್ಯರು ಕಾಶ್ಮೀರದಲ್ಲಿ ಸರ್ವಜ್ಞ ಪೀಠದ ಪ್ರವೇಶ ಮಾಡಿ ಅಲ್ಲಿಯ ಎಲ್ಲಾ ದರ್ಶನಗಳ ಪಂಡಿತರನ್ನೂ ವಾದ ದಲ್ಲಿ ಮಣಿಸಿ ಸರ್ವಜ್ಞ ಪೀಠವನ್ನು ಆರೋಹಣ ಮಾಡಿದ ದೇವಾಲಯವೇ ಶಾರದಾ ಪೀಠ. ಅಂದಿನ ಶಾರದಾ ಪೀಠ ಈಗ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಭಾಗದಲ್ಲಿದ್ದು, ಅದೀಗ ಶಿಥಿಲಗೊಂಡು ದಿನೇ ದಿನೇ ಕುಸಿಯುತ್ತಿದೆ. ಕಾಶ್ಮೀರದಲ್ಲಿ ಅನೇಕ ರಾಜರ ಹೆಜ್ಜೆ ಗುರುತುಗಳೂ ಮೂಡಿಹೋಗಿವೆ. ಗೋನಂದ, ಹಷೇìಶ್ವರ, ಆರನೇ ಖಗೇಂದ್ರ, ಜಯಪೀಡ, ಭುವನೇಶ, ಪ್ರತಾಪಾದಿತ್ಯ, ದುರ್ಲಭವರ್ಧನ, ಪ್ರತಾಪರುದ್ರ, ಲಲಿತಾದಿತ, ಭೋಜ, ಗೋಪಾದಿತ್ಯ, ಮಹೇಂದ್ರಪಾಲ, ತೋರಮಾಣ, ಕ್ಷಿತಿನಂದ, ವಸುನಂದ, ಎರಡನೇ ನರ, ಅಕ್ಷ, ತುಂಜಿನ ವಿಜಯೇಶ್ವರ, ರಾಣಾದಿತ್ಯ, ತೋರಮಾಣ, ನರೇಂದ್ರಾದಿತ್ಯ, ರುದ್ರಪಾಲ, ಅನಂತ, ವಿಕ್ರಮಾದಿತ್ಯ ಮೊದಲಾದ ಅರಸರು ಕಾಶ್ಮೀರವನ್ನು ಆಳಿದ್ದರೆ, ಕಲ್ಹಣ, ಬಿಲ್ಹಣ, ಶಂಭು, ಮಂಖಕವಿ, ವಿಜ್ಞಾನೇಶ್ವರ, ಅಭಿನವಗುಪ್ತ, ಕ್ಷೇಮೇಂದ್ರ, ಜಲ್ಹಣ, ಭರತ, ಆನಂದ, ಕಲ್ಯಾಣ, ಗರ್ಬ, ಪದ್ಮರಾಜ, ಲೋಷದೇವ, ಕಾಲಧ, ಮುಂತಾಗಿ ಅನೇಕ ಕವಿಗಳ ಕಾಶ್ಮೀರದ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದರು. ಇದಷ್ಟೇ ಅಲ್ಲದೇ ಅಶೋಕನ ಅವಧಿಯಲ್ಲಿ ಕಾಶ್ಮೀರದಲ್ಲಿ ಬೌದ್ಧ ಧರ್ಮವು ಬೆಳೆಯಿತು. ಕಲ್ಹಣನ ರಾಜತರಂಗಿಣಿ, ಶ್ರೀನಗರಿಯನ್ನು ಅಶೋಕನೇ ಕಟ್ಟಿಸಿದ ಎನ್ನುತ್ತದೆ. ಇನ್ನು ಕವಿ ಬಿಲ್ಹಣ ತನ್ನ ವಿಕ್ರಮಾಂಕದೇವಚರಿತದ ಶ್ಲೋಕಗಳಲ್ಲಿ ಕಾಶ್ಮೀರದ ವರ್ಣನೆ, ನದಿಗಳ ಸೌಂದರ್ಯದ ಕುರಿತು ಬರೆದಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next