Advertisement

ಶೇ.50ರಷ್ಟು ಪಾರ್ಕ್‌ಗಳು ಒಣಗುಣ ಭೀತಿ!

11:58 AM Jan 23, 2017 | Team Udayavani |

ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನ ಉದ್ಯಾನಗಳಿಗೆ ಬೇಸಿಗೆಯಲ್ಲಿ ನೀರಿನ ಕೊರತೆ ತೀವ್ರಗೊಳ್ಳಲಿದ್ದು, ಬಿಬಿಎಂಪಿ ನಿರ್ವಹಣೆಯಲ್ಲಿ ರುವ ಶೇ. 50ರಷ್ಟು ಉದ್ಯಾನಗಳು ಒಣಗುವ ಭೀತಿ ಶುರುವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾಲಿಕೆ ನಿರ್ವಹಣೆ ಯಡಿ ಒಟ್ಟು 1,326 ಉದ್ಯಾನಗಳಿವೆ. ಬಹು ತೇಕ ಕಡೆ ನೀರಿನ ಕೊರತೆ ಉಂಟಾದರೆ ತಡೆದು ಕೊಳ್ಳಬಲ್ಲ ಮರಗಳ ಬದಲು ಅಲಂಕಾರಿಕ ಸಸ್ಯಗಳನ್ನೇ ನೆಡಲಾಗಿದೆ.

Advertisement

ಇವುಗಳಿಗೆ ನಿತ್ಯ ನೀರು ಣಿಸುವುದು ಅನಿವಾರ್ಯವಾಗಿದ್ದು, ಬೇಸಿಗೆ ವೇಳೆ ನೀರುಣಿಸಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಹೀಗಾಗಿ ಬಹುತೇಕ ಉದ್ಯಾನಗಳಿಗೆ ಸಮಸ್ಯೆ ಉಂಟಾಗಲಿದೆ ಎಂದು ಸ್ವತಃ ಪಾಲಿಕೆಯ ತೋಟಗಾರಿಕೆ ಇಲಾಖೆಯ ಅಧಿಕಾರಿಗಳೇ ಹೇಳುತ್ತಿದ್ದಾರೆ. 

ಒಣಗುವ ಭೀತಿ ಏಕೆ?: 1,326 ಉದ್ಯಾನಗಳಲ್ಲಿ 898 ಉದ್ಯಾನಗಳಲ್ಲಿ ಬೋರ್‌ವೆಲ್‌ಗ‌ಳಿವೆ. ಜೆ.ಪಿ.ಪಾರ್ಕ್‌ನಂತಹ ಬೆರಳೆಣಿಕೆಯಷ್ಟು ಉದ್ಯಾನಗಳಲ್ಲಿ ಹೊರತುಪಡಿಸಿ ಉಳಿದೆಲ್ಲಾ ಕಡೆಗಳಲ್ಲಿ ಉದ್ಯಾನಕ್ಕೆ ಒಂದು ಬೋರ್‌ವೆಲ್‌ ಮಾತ್ರ ಇವೆ. ಇನ್ನು ಸುಮಾರು 410 ಉದ್ಯಾ ನಗಳಲ್ಲಿ ಬೋರ್‌ವೆಲ್‌ಗ‌ಳೇ ಇಲ್ಲ. ಇರುವ 898 ಬೋರ್‌ವೆಲ್‌ ಪೈಕಿ ಈಗಾಗಲೇ 298 ಬೋರ್‌ವೆಲ್‌ಗ‌ಳು ಅಂತರ್ಜಲ ಕುಸಿತದಿಂದ ಖಾಲಿಯಾಗಿವೆ.

ಉಳಿದಂತೆ ಸುಮಾರು 200 ಬೋರ್‌ವೆಲ್‌ಗ‌ಳು ನಿರ್ವಹಣೆ ಕೊರತೆಯಿಂದ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಈಗಾಗಲೇ ಬಹುತೇಕ ಕಡೆ ಉದ್ಯಾನಗಳು ದುಸ್ಥಿತಿಗೆ ಜಾರುತ್ತಿವೆ. ಬೇಸಿಗೆಯಲ್ಲೂ ಇದೇ ಸ್ಥಿತಿ ಮುಂದುವರೆದರೆ ಶೇ.50 ರಷ್ಟು ಉದ್ಯಾನಗಳು ಒಣಗುವ ಆತಂಕ ಎದುರಾಗಿದೆ. ಬೇಸಿಗೆಯಲ್ಲಿ ನಗರಕ್ಕೆ ಕಾವೇರಿ ನೀರಿನ ಕೊರತೆ ಉಂಟಾಗಲಿದ್ದು, ಟ್ಯಾಂಕರ್‌ ನೀರಿಗೆ ಬೇಡಿಕೆ ಹೆಚ್ಚಾಗಲಿದೆ.

ಇದರಿಂದ ಟ್ಯಾಂಕರ್‌ಗಳಲ್ಲಿ ಗಿಡ ಹಾಗೂ ಹುಲ್ಲು ಹಾಸಿಗೆ ನೀರು ಪೂರೈಸಲು ಕಷ್ಟವಾಗಬಹುದು. ಅದರಲ್ಲೂ 600ಕ್ಕೂ ಹೆಚ್ಚು ಉದ್ಯಾನಗಳಿಗೆ ನಿತ್ಯ ಟ್ಯಾಂಕರ್‌ ಮೂಲಕ ಸಮರ್ಪಕವಾಗಿ ನೀರು ಪೂರೈಸು ವುದು ಅಸಾಧ್ಯವಾದ ವಿಚಾರ. ಹೀಗಾಗಿ ಬಿಬಿಎಂಪಿ ಕೂಡಲೇ ಎಚ್ಚೆತ್ತುಕೊಂಡು ಬೋರ್‌ವೆಲ್‌ ನಿರ್ವಹಣೆ ಮಾಡಬೇಕು. ದೀರ್ಘಾವದಿ ಯಲ್ಲಿ ಸಮಸ್ಯೆ ಮರುಕಳಿಸದಂತೆ ಮಳೆ ನೀರಿನ ಕೊಯ್ಲು ಮತ್ತಿತರ ಪದ್ಧತಿಗಳಿಗೆ ಗಮನ ನೀಡಬೇಕು ಎಂದು ಪರಿಸರವಾದಿ ಯಲ್ಲಪ್ಪ ರೆಡ್ಡಿ ಹೇಳಿದ್ದಾರೆ.

Advertisement

290 ಕಡೆ ಮಳೆ ನೀರು ಕೊಯ್ಲು: ಪ್ರತಿ ವರ್ಷವೂ ಬೇಸಿಗೆಯಲ್ಲಿ ಉದ್ಯಾನವನಗಳ ನಿರ್ವಹಣೆ ಕಷ್ಟವಾಗುತ್ತಿದೆ. ಇದಕ್ಕಾಗಿಯೇ ಡಿ.ವೆಂಕಟೇಶಮೂರ್ತಿ ಮೇಯರ್‌ ಆಗಿದ್ದ ಅವಧಿಯಲ್ಲಿ ಪಾಲಿಕೆಯ ಬಹುತೇಕ ಉದ್ಯಾನಗಳಲ್ಲಿ ಮಳೆ ನೀರಿನ ಇಂಗುಗುಂಡಿ ನಿರ್ಮಾಣ ಮಾಡಲಾಯಿತು. ಆದರೆ, ಕಾಲಕ್ರಮೇಣ ನಿರ್ವಹಣೆ ಲೋಪದಿಂದಾಗಿ ಬಹುತೇಕ ಕಡೆ ಗುಂಡಿಗಳು ಮುಚ್ಚಿಹೋಗಿವೆ.

ಇದರ ಬದಲು ಎಲ್ಲಾ ಉದ್ಯಾನವನಗಳಲ್ಲಿ ಮಳೆ ನೀರಿನ ಕೊಯ್ಲು ಪದ್ಧತಿ ಅಳವಡಿಸಿ ಮಳೆ ನೀರು ಸಂರಕ್ಷಿಸಲಾಗುವುದು. ಬಳಿಕ ನೀರಿನಿಂದ ಅಂತರ್ಜಲ ಮಟ್ಟ ವೃದ್ಧಿಸುವ ಜತೆಗೆ ಅಭಾವವಿರುವಾಗ ನೀರಿನ ಬಳಕೆ ಮಾಡಿಕೊಳ್ಳಲಾಗುವುದು. ಈಗಾಗಲೇ 290 ಉದ್ಯಾನಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಕೆ ಕಾರ್ಯ ಪ್ರಗತಿಯಲ್ಲಿದ್ದು, ಉಳಿದ ಕಡೆಗಳಲ್ಲೂ ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು. 

ಪ್ರತಿ ಉದ್ಯಾನಗಳಲ್ಲೂ ಮಳೆ ನೀರು ಶೇಖರಣೆಗೆ ಬೃಹತ್‌ ತೊಟ್ಟಿಯನ್ನು ನಿರ್ಮಿಸ ಲಾಗುತ್ತಿದ್ದು, ಪ್ರತಿ ತೊಟ್ಟಿಯೂ 8 ಸಾವಿರದಿಂದ 15 ಸಾವಿರ ಲೀ. ನೀರು ಶೇಖರಣೆಯ ಸಾಮರ್ಥ್ಯ ಹೊಂದಿರಲಿದೆ. ಆಮೂಲಕ ಉದ್ಯಾನಗಳಿಗೆ ನೀರು ಹಾಯಿಸುವುದರ ಜತೆಗೆ ಅಂತರ್ಜಲ ಮಟ್ಟ ಹೆಚ್ಚಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

ಶುದ್ಧೀಕರಿಸಿದ ತ್ಯಾಜ್ಯ ನೀರು ಪೂರೈಕೆ
ಈಗಾಗಲೇ ನೀರಿನ ಅಭಾವ ಗಮನಕ್ಕೆ ಬಂದಿದೆ. ಹೀಗಾಗಿ ಬೇಸಿಗೆಯಲ್ಲಿ ನೀರಿನ ಅಭಾವ ನೀಗಿಸಲು ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುವುದು. ಪ್ರತಿ ವಲಯದಲ್ಲಿ ಆಯಾ ಭಾಗದ ಜಲಮಂಡಳಿ ತ್ಯಾಜ್ಯ ನೀರು ಶುದ್ಧೀಕರಣ ಕೇಂದ್ರದಿಂದ ಶುದ್ಧೀಕರಿಸಿದ ತ್ಯಾಜ್ಯ ನೀರು ಪಡೆದು ಉದ್ಯಾನದಲ್ಲಿನ ಮರ, ಗಿಡ, ಹುಲ್ಲು ಹಾಸಿಗೆ ಉಣಿಸಲು ಸೂಚಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಅನುದಾನ ಮೀಸಲಿಡಲು ಆಯುಕ್ತರಿಗೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದು ತೋಟಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮೀನಾಕ್ಷಿ ಹೇಳಿದ್ದಾರೆ.

* ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next