Advertisement

ಈಕ್ವೆಡಾರ್‌ನಲ್ಲಿ ನಿತ್ಯಾನಂದ ಪ್ರತ್ಯೇಕ ಕೈಲಾಸ ರಾಷ್ಟ್ರ ಸೃಷ್ಟಿ!

09:44 AM Dec 05, 2019 | Nagendra Trasi |

ಬೆಂಗಳೂರು: ಭಾರತದಿಂದ ಓಡಿಹೋಗಿರುವ ವಿವಾದಿತ ಸ್ವಾಮೀಜಿ ನಿತ್ಯಾನಂದ,  ಈಕ್ವೆಡಾರ್‌ನಲ್ಲಿ ತಾನೊಂದು ಹೊಸ ದೇಶ ಸ್ಥಾಪಿಸಿಕೊಂಡಿರುವುದಾಗಿ ಘೋಷಿಸಿಕೊಂಡಿದ್ದಾನೆ. ತನ್ನ ದೇಶಕ್ಕೆ “ಕೈಲಾಸ’ ಎಂದು ಹೆಸರಿಟ್ಟುಕೊಂಡಿರುವ ಆತ, ಆ ಸ್ವಯಂಘೋಷಿತ ರಾಷ್ಟ್ರದ ಕುರಿತಂತೆ ವೆಬ್‌ ಸೈಟೊಂದನ್ನು ಆರಂಭಿಸಿ, ಅದರಲ್ಲಿ ತನ್ನ ದೇಶದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

Advertisement

ವೆಬ್‌ಸೈಟ್‌ನಲ್ಲಿ, “ಇದೊಂದು ಗಡಿ ರಹಿತ ದೇಶವಾಗಿದೆ. ತಮ್ಮ ದೇಶಗಳಿಂದ ಪರಿತ್ಯಕ್ತರಾದ ವಿಶ್ವದ ಎಲ್ಲಾ ಹಿಂದೂಗಳಿಗೆ ಹಾಗೂ ಹಿಂದುತ್ವವನ್ನು ಪಾಲಿಸಲು ತೊಡಕಾಗಿರುವ ದೇಶಗಳಲ್ಲಿರುವ ಹಿಂದೂಗಳಿಗಾಗಿ ಈ ರಾಷ್ಟ್ರವನ್ನು ಸೃಷ್ಟಿಸಲಾಗಿದೆ.

ಈ ರಾಷ್ಟ್ರದ ನಾಗರಿಕರಾಗಲು ಬಯಸುವವರಿಗೆ ಮುಕ್ತ ಸ್ವಾಗತವಿದೆ’ ಎಂದು ಘೋಷಿಸಲಾಗಿದೆ.
ಎಲ್ಲಿದೆ ಈ ದೇಶ? ವರ್ಷಗಳ ಹಿಂದೆ ಈಕ್ವೆಡಾರ್‌ ನಲ್ಲಿ ದ್ವೀಪವೊಂದನ್ನು ಖರೀದಿಸಿದ್ದ ನಿತ್ಯಾನಂದ,
ಈಗ ಅದೇ ದ್ವೀಪವನ್ನು ತನ್ನ ಹೊಸ ರಾಷ್ಟ್ರವೆಂದು ಘೋಷಿಸಿಕೊಂಡಿದ್ದಾನೆ. ಅಲ್ಲದೆ, ಈ ರಾಷ್ಟ್ರಕ್ಕೆ
ತನ್ನದೇ ಆದ ಪ್ರತ್ಯೇಕ ಪಾಸ್‌ಪೋರ್ಟ್‌ ವ್ಯವಸ್ಥೆಯಿದೆ ಹೇಳಿದ್ದಾನೆ ನಿತ್ಯಾನಂದ.

ಗೃಹ, ರಕ್ಷಣೆ ಎಲ್ಲವೂ ಅವನದ್ದೇ!: ಕೈಲಾಸ ರಾಷ್ಟ್ರದ ಸರ್ಕಾರದಡಿ ಸದ್ಯಕ್ಕೆ 10 ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಅವುಗಳಲ್ಲಿ ಗೃಹ, ರಕ್ಷಣೆ, ವಾಣಿಜ್ಯ, ಶಿಕ್ಷಣ ಇಲಾಖೆ, ಅಂತಾರಾಷ್ಟ್ರೀಯ ಸಂಬಂಧಗಳು ಹಾಗೂ ಡಿಜಿಟಲ್‌ ಎಂಗೇಜ್‌ಮೆಂಟ್‌ ಆ್ಯಂಡ್‌ ಸೋಷಿಯಲ್‌ ಮೀಡಿಯಾ ಇಲಾಖೆಗಳು ಪ್ರಮುಖವಾದವು. ಎಲ್ಲಾ ಇಲಾಖೆಗಳಿಗೂ ಭಗವಾನ್‌ ನಿತ್ಯಾನಂದರೇ
ಮುಖ್ಯಸ್ಥರಾಗಿರಲಿದ್ದಾರೆ ಎಂದು ಕೈಲಾಸ ವೆಬ್‌ ಸೈಟ್‌ ಹೇಳುತ್ತದೆ. ಈ ರಾಷ್ಟ್ರದಲ್ಲಿ ನೀಡಲಾಗುವ ಪಾಸ್‌ಪೋರ್ಟ್‌ನಿಂದ 14 ಲೋಕಗಳಿಗೆ ಭೇಟಿ  ನೀಡಬಹುದಾಗಿದೆ ಎಂದು ಹೇಳಲಾಗಿದೆ.

ಪ್ರತ್ಯೇಕ ರಾಷ್ಟ್ರಧ್ವಜ
ಕೈಲಾಸ ರಾಷ್ಟ್ರಕ್ಕಾಗಿ ಪ್ರತ್ಯೇಕ ರಾಷ್ಟ್ರಧ್ವಜವನ್ನು ರೂಪಿಸಲಾಗಿದ್ದು, ಕಡುಕೆಂಪು ಬಣ್ಣದ ಹಿನ್ನೆಲೆಯಲ್ಲಿ ನಿತ್ಯಾನಂದ ದೈತ್ಯ ಶಿವನ ಆಕೃತಿಯ ಪಾದದಲ್ಲಿ ನಿತ್ಯಾನಂತ ಧ್ಯಾನಾಸಕ್ತನಾಗಿರುವುದು ಹಾಗೂ ಆತನ ಮುಂದೆ ನಂದಿ ವಿಗ್ರಹ ಇರುವ ಚಿತ್ರಗಳಿವೆ. ಕೈಲಾಸ ರಾಷ್ಟ್ರದ ರಾಷ್ಟ್ರೀಯ ಮರವನ್ನಾಗಿ ಆಲದ ಮರವನ್ನು ಆಯ್ಕೆ ಮಾಡಲಾಗಿದ್ದರೆ, ನಂದಿಯನ್ನು ಆ ರಾಷ್ಟ್ರದ ರಾಷ್ಟ್ರೀಯ ಪ್ರಾಣಿಯಾಗಿಸಲಾಗಿದೆ. ಪ್ರಾಣಿಯ ದೇಹದವನ್ನು ಹೊಂದಿ, ಕುತ್ತಿಗೆಯಿಂದ ಆಚೆಗೆ ಮನುಷ್ಯನ ಆಕಾರವನ್ನು ಹೊಂದಿರುವ ಶರಭವನ್ನು ರಾಷ್ಟ್ರ ಪಕ್ಷಿಯನ್ನಾಗಿಸಲಾಗಿದೆ.

Advertisement

ವಿಶೇಷತೆಯೇನು?
ಕೈಲಾಸ ರಾಷ್ಟ್ರದಲ್ಲಿ ಅನೇಕ ವಿಶೇಷತೆಗಳಿವೆ. ದೇಗುಲ-ಆಧಾರಿತ ಜೀವನ ವ್ಯವಸ್ಥೆಯಿದೆ. ಅಲ್ಲಿನ ನಾಗರಿಕರಿಗೆ ಶಿವನ ಮೂರನೇ ಕಣ್ಣಿನ ಹಿಂದಿರುವ ವಿಜ್ಞಾನ, ಯೋಗ, ಧ್ಯಾನಗಳನ್ನು ಹೇಳಿಕೊಡಲಾಗುತ್ತದೆ. ಇನ್ನು, ಮಕ್ಕಳಿಗೆ ಗುರುಕುಲ ಮಾದರಿಯ ಶಿಕ್ಷಣ ಪದ್ಧತಿ ಇರಲಿದೆ. ಇದಲ್ಲದೆ, ಅಲ್ಲಿನ ನಾಗರಿಕರಿಗೆ ಉಚಿತ ಆರೋಗ್ಯ ಸೇವೆಗಳು, ಉಚಿತ ಶಿಕ್ಷಣ, ಉಚಿತ ಆಹಾರ ಸೌಲಭ್ಯ ಇರಲಿವೆ. ನಿತ್ಯಾನಂದ ಟೈಮ್ಸ್‌ ಎಂಬ ವೆಬ್‌ಸೈಟ್‌ ಹಾಗೂ ಪತ್ರಿಕೆಯೂ ಇದೆ.

ವಿಶ್ವಸಂಸ್ಥೆಗೆ ಮೊರೆ!
ಎಲ್ಲಕ್ಕಿಂತ ವಿಶೇಷವೆಂದರೆ, ತನ್ನೀ ದೇಶಕ್ಕೆ ವಿಶ್ವಸಂಸ್ಥೆಯ ಸ್ಥಾನಮಾನ ದೊರಕಿಸಿಕೊಳ್ಳಲು
ನಿತ್ಯಾನಂದ ಪ್ರಯತ್ನಿಸುತ್ತಿರುವುದು! ಅಚ್ಚರಿಯೆನಿಸಿದರೂ, ಇದು ಸತ್ಯ. ತನ್ನ ಹೊಸ ಪರಿಕಲ್ಪನೆಯಂತೆ ಕೈಲಾಸ ರಾಷ್ಟ್ರ ಕಟ್ಟಿರುವುದಾಗಿ ಘೋಷಿಸಿಕೊಂಡಿರುವ ನಿತ್ಯಾನಂದ, ತನ್ನೀ
ರಾಷ್ಟ್ರಕ್ಕೆ ದೇಶದ ಸ್ಥಾನಮಾನ ನೀಡಬೇಕೆಂದು ವಿಶ್ವಸಂಸ್ಥೆಯನ್ನು ಕೋರಿದ್ದಾನೆ. ವಿಶ್ವಸಂಸ್ಥೆಯಲ್ಲಿ
ಆತನ ಕಾನೂನು ಸಲಹೆಗಾರರಿಂದ ಅರ್ಜಿಯೂ ಸಲ್ಲಿಕೆಯಾಗಿದೆ!

Advertisement

Udayavani is now on Telegram. Click here to join our channel and stay updated with the latest news.

Next